ಮಣಿಪಾಲ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರಕಾರ ಮತ್ತು ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್, ನವದೆಹಲಿ ಸಹಯೋಗದಲ್ಲಿ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ವತಿಯಿಂದ ಉದ್ಯಾವರದ ಡ್ರೀಮ್ ಹೋಂ ವೃದ್ಧಾಶ್ರಮದಲ್ಲಿ ಅಟಲ್ ವಯೋ ಅಭ್ಯುದಯ ಯೋಜನೆ ಕುರಿತಾಗಿ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉಡುಪಿ ಜಿಲ್ಲೆಯ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರತ್ನ ಅವರು ಸರಕಾರದ ವಿವಿಧ ಯೋಜನೆಗಳನ್ನು ಗುರುತಿನ ಚೀಟಿ ಇಲ್ಲದ ಮಂದಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆಯಿತ್ತರು.
ಅಟಲ್ ವಯೋ ಅಭ್ಯುದಯ ಯೋಜನೆಯ ಸರಣಿ ಕಾರ್ಯಕ್ರಮದ ಪರಿಶೀಲನೆಗಾಗಿ ಕೋಲಾರದ ನಮ್ಮ ಧ್ವನಿ ಸಮುದಾಯ ಬಾನುಲಿ ಮುಖ್ಯಸ್ಥರು ಮತ್ತು ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್ನ ದಕ್ಷಿಣ ವಲಯದ ಜಂಟಿ ಕಾರ್ಯದರ್ಶಿ ಶಿವಶಂಕರ್ ಅವರು ಭಾಗವಹಿಸಿ ಮಾಹಿತಿ ನೀಡಿದರು.
ಸಂಧ್ಯಾ ಕಾಲದಲ್ಲಿ ಹಿರಿಯರು ಆರೋಗ್ಯದ ಕಡೆ ಹೆಚ್ಚು ಗಮನ ಕೊಟ್ಟು ಸಂತೋಷದಿಂದ ಜೀವನ ನಿರ್ವಹಿಸುವುದರ ಜೊತೆಗೆ ಸಮುದಾಯ ಬಾನುಲಿ ಕೇಂದ್ರದಿಂದ ಮೂಡಿಬರುವ ಕಾರ್ಯಕ್ರಮಗಳನ್ನು ಆಲಿಸಲು ಕರೆಯಿತ್ತರು.
ರೇಡಿಯೊ ಕೇಳುವ ಸಂಸ್ಕೃತಿ ಹೆಚ್ಚಿಸಲು ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಶ್ರಮಕ್ಕೆ ರೇಡಿಯೊ ಸೆಟ್ ಒದಗಿಸುವ ವ್ಯವಸ್ಥೆ ಮಾಡುವುದಾಗಿ ರೇಡಿಯೊ ಮಣಿಪಾಲ್ನ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ.ರಶ್ಮಿ ಅಮ್ಮೆಂಬಳ ಭರವಸೆ ನೀಡಿದರು. ಸಿಬ್ಬಂದಿ ಮಂಜುನಾಥ್ ಜಿ.ಎಚ್ ಸಹಕರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ