ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು, ಹೋಬಳಿ ಮಟ್ಟದ ಸದಸ್ಯರು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ಜರಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಸಲು ಸಿದ್ಧತೆ ನಡೆಸಲಾಗಿದೆ ಎಂದು ದ.ಕ.ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥರವರು ತಿಳಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರಿನಲ್ಲಿ ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಪಟ್ಟ ಕನ್ನಡ ರಥವನ್ನು ಮಂಗಳೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಿದಕ್ಕೆ ಕೃತಜ್ಯತೆಯನ್ನು ಸಲ್ಲಿಸಿದ ಅವರು ಇತ್ತೀಚೆಗೆ ಸುಳ್ಯದಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಚಂದ್ರಶೇಖರ್ ಪೆರಾಲ್ ಮತ್ತು ತಂಡವನ್ನು ಅಭಿನಂದಿಸಿದರು. ಮುಂಬರುವ ನವೆಂಬರ್ 30 ರಂದು ಕಡಬದಲ್ಲೂ ಸಮ್ಮೇಳನ ನಡೆಯಲಿದೆ ಎಂದ ಅವರು ಕನ್ನಡ ಭವನಕ್ಕೆ ಶೀಘ್ರದಲ್ಲೇ ಸ್ಥಳ ನಿಗದಿಯಾಗಲಿದೆ ಎಂದರು. ಮಂಡ್ಯದಲ್ಲಿ ಜರಗಲಿರುವ ಅಖಿಲ ಭಾರತ ಮಟ್ಟದ ಸಮ್ಮೇಳನಕ್ಕೆ ಜಿಲ್ಲೆಯಿಂದ ಸದಸ್ಯರು ಮಾತ್ರವಲ್ಲದೇ ಹೊಸಬರು ಕೂಡ ಸದಸ್ಯತವನ್ನು ಪಡೆದು 600 ರೂಪಾಯಿ ಆನಲೈನ್ ನಲ್ಲಿ ಪಾವತಿಸುವ ಮುಖಾಂತರ ಸಮ್ಮೇಳನಕ್ಕೆ ಹಾಜರಾಗಬಹುದು ಎಂದು ಅವರು ಹೇಳಿದರು.
ಈ ಬೃಹತ್ ಸಮ್ಮೇಳನಕ್ಕೆ ಸನ್ಮಾನಕ್ಕೆ ಅರ್ಹರಾದ ಸಾಧಕರನ್ನು ಮತ್ತು ಕವಿಗೋಷ್ಠಿಗೂ ಕವಿಗಳನ್ನು ಆಯ್ಕೆಮಾಡಲಾಗಿದೆ. ಇದೇ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೋರೂರು ಚೆನ್ನಬಸಪ್ಪ ಅವರಿಗೆ ಅಭಿನಂದನೆ ಕೋರಲಾಯಿತು. 'ಸಾಹಿತಿ ಮಾಹಿತಿ ಕೋಶ'ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಹೊರತರುವಂತೆಯೂ ಮುಂದಿನ ಜಿಲ್ಲಾ ಸಮ್ಮೇಳನದಲ್ಲಿ ಈ ಕೋಶವನ್ನ ಬಿಡುಗಡೆ ಗೊಳಿಸುವುದಾಗಿಯೂ ತಿಳಿಸಲಾಯಿತು. ಸಾಹಿತ್ಯ ಚಟುವಟಿಕೆಗಳಿಗೆ ಸಹಕಾರಿ ಸಂಘದ ಸಭಾಭವನ ನೀಡಲು ಸಹಕಾರ ಸಂಘದ ಅಧ್ಯಕ್ಷರನ್ನು ವಿನಂತಿಸಲಾಯಿತು. ಉಜಿರೆ ಯಲ್ಲಿ ಜರಗಿದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ದತ್ತಿನಿಧಿ ಕಾರ್ಯಕ್ರಮಗಳು ನಿರಂತರವಾಗಿ ನಡೆಸುವಂತೆ ಅವರು ಸಲಹೆಯಿತ್ತರು.
ಈ ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಡಾ. ಎಂ. ಕೆ. ಮಾಧವ, ಸಹಕಾರ ಸಂಘದ ಅಧ್ಯಕ್ಷರಾದ ಗಣೇಶ್ ರಾವ್, ಕಸಾಪ. ಸಹ ಸಂಘಟನಾ ಕಾರ್ಯದರ್ಶಿ ಕಿರಣ್ ರೈ, ಕೋಶಾಧ್ಯಕ್ಷರಾದ ಬಿ ಐತಪ್ಪ ನಾಯ್ಕ್, ವಿವಿಧ ತಾಲೂಕು ಕ.ಸಾ.ಪ. ಅಧ್ಯಕ್ಷರುಗಳಾದ ಪುತ್ತೂರು ಉಮೇಶ್ ನಾಯಕ್, ವೇಣುಗೋಪಾಲ ಶೆಟ್ಟಿ, ಧನಂಜಯ ಕುಂಬ್ಳೆ, ಚಂದ್ರಶೇಖರ ಪೇರಾಲು, ಯದುಪತಿ ಗೌಡ, ಪದಾಧಿಕಾರಿಗಳಾದ ರಾಮಚಂದ್ರ ಪಲ್ಲತಡ್ಕ, ಪೂವಪ್ಪ ನೇರಳಕಟ್ಟೆ, ಕೆ ಸುಂದರ ನಾಯ್ಕ್, ಸನತ್ ಕುಮಾರ್ ಜೈನ್, ಅರುಣಾ ನಾಗರಾಜ್ ಉಪಸ್ಥಿತರಿದ್ದರು. ಜಿಲ್ಲಾ ಕ.ಸಾ.ಪ.ಸಂಘಟನಾ ಕಾರ್ಯದರ್ಶಿ ಯು. ಎಚ್. ಖಾಲಿದ್ ಉಜಿರೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಾಜೇಶ್ವರಿಯವರು ಧನ್ಯವಾದ ಸಮರ್ಪಣೆ ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ