ಹಾಸನ: ಹಾಸನಾಂಬ ದೇಗುಲದ ಹೊರಾಂಗಣದಲ್ಲಿ 'ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಪ್ರಥಮ ವರ್ಷದ ವಾರ್ಷಿಕೋತ್ಸವ ಕೃತಿಗಳ ಲೋಕಾರ್ಪಣೆ ಮುಖೇನ ಸರಳವಾಗಿ ನಡೆಯಿತು.
ಸಂಸ್ಥಾಪಕ ಅಧ್ಯಕ್ಷೆ ಹೆಚ್.ಎಸ್.ಪ್ರತಿಮಾ ಹಾಸನ್ ರವರ ಅಂತರಾಳದ ಪ್ರತಿರವ ಮತ್ತು 'ಪ್ರತಿಮಾವಲೋಕನ'ಕೃತಿಗಳ ಲೋಕಾರ್ಪಣೆಯು ಸಿನಿ ಪತ್ರಕರ್ತರು ಲೇಖಕರು ಗಣೇಶ ಕಾಸರಗೋಡು ಮತ್ತು ಸಾಹಿತಿ ಗೊರೂರು ಅನಂತರಾಜು ರವರಿಂದ ನೆರವೇರಿತು. ಅಂತರಾಳದ ಪ್ರತಿರವ' ಕೃತಿಯ ಮುನ್ನುಡಿಕಾರರು ಗಣೇಶ್ ಕಾಸರಗೋಡು ಮಾತನಾಡಿ, "ಸರ್ರನೆ ಆ ಕಡೆಯಿಂದ ಬಂದು ಅಷ್ಟೇ ಸರ್ರನೆ ಈ ಕಡೆಯಿಂದ ಮಾಯವಾಗುವುದನ್ನು ಮಿಂಚು ಅಂತಾರೆ. ಗುಪ್ತವಾಗಿ ಸುಪ್ತವಾಗಿ ಮುಟ್ಟಬೇಕಾದಲ್ಲಿ ಮುಟ್ಟಿಸುವುದನ್ನು ಗುಡುಗು ಅಂತಾರೆ. ಯಾರ ಮುಲಾಜಿಗೂ ಒಳಗಾಗದೆ ಯಾರ ಬೆದರಿಕೆಗೂ ಜಗ್ಗದೆ ಆರ್ಭಟಿಸುವುದು ಸಿಡಿಲು ಅಂತಾರೆ. ಈ ಮೂರರ ಸಮ್ಮಿಲನಕ್ಕೆ ಒಂದು ಹೆಸರು ಪ್ರತಿಮಾ ಹಾಸನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಮಾ ಬಹುಮುಖ ಪ್ರತಿಭೆ. ಇವರ ಕೃತಿಯಲ್ಲಿ ಬದುಕಿನ ಬವಣೆಯಲ್ಲಿ ಬೆಂದು ಹದವಾದ ಮಾತುಗಳ ಹೂರಣವಿದೆ. ಜೀವನದ ರಹಸ್ಯ ಅಡಕವಾಗಿವೆ. ಭಾವ ವೈವಿಧ್ಯತೆಯ ಮುಕ್ತಕ ಸಂಕಲನ ಮಾನವ ದಾರಿದೀಪದ ಲಾಟೀನು. ಇದು ಬರಿ ಒಣ ತತ್ವದ ಒಕ್ಕಣೆಯಲ್ಲ. ಬದುಕಿನ ನಿಗೂಢಗಳ ಅಚ್ಚರಿಯ ಅನಾವರಣ. ಇವರ ಪ್ರತಿಮಾವಲೋವಕನ ಕೃತಿಯಲ್ಲಿ ನನ್ನ ಒಂದು ಕೃತಿ ಚದುರಿದ ಚಿತ್ರಗಳು ಚಿಗುರಿದ ಕನಸುಗಳು ಪುಸ್ತಕ ಪರಿಚಯವಿದೆ ಎಂದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ವಿಚಾರ ವಿಮರ್ಶೆ ಮುಕ್ತಕಗಳಿಂದ ಪ್ರಾರಂಭವಾಗಿ 35 ವಿಮರ್ಶೆ ಬರಹ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಂತರಾಳದ ಪ್ರತಿರವ ಕೃತಿಯ ಮುಕ್ತಕಗಳು ಅರ್ಥಪೂರ್ಣವಾಗಿ ಭಾವಾರ್ಥದೊಂದಿಗೆ ಕೂಡಿವೆ. ಪ್ರಸ್ತುತ ದಿನಮಾನಗಳ ವಿಚಾರಗಳು ಸಮಾಜದ ಓರೆ ಕೋರೆ ತಿದ್ದುವ ಮುಕ್ತಕಗಳು ಓದುಗರ ಮನೆ ಮುಟ್ಟುತ್ತವೆ ಎಂದರು.
ಲೇಖಕಿ ಪ್ರತಿಮಾ ಹಾಸನ್ ಮುಂದಿನ ದಿನಗಳಲ್ಲಿ ಓದು ಅಧ್ಯಯನದಿಂದ ಕೃತಿಗಳನ್ನು ಹೊರತರಲು ಶ್ರಮಿಸುವುದಾಗಿ ತಿಳಿಸಿದರು.
ಗಣೇಶ್ ಕಾಸರಗೋಡು, ಗಾಯಿತ್ರಿ ಗಣೇಶ್ ಕಾಸರಗೋಡು, ಮಾಜಿ ನಗರ ಅಧ್ಯಕ್ಷ ಬಂಗಾರಿ ಮಂಜು ಇವರನ್ನು ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು. ನಟ ನಿರ್ದೇಶಕ ಗಿರಿ ಕೃಷ್ಣ, ಅಲೋಕ್, ಅನುಷಾ ಸಾವಿತ್ರಿ, ಯಾಕೂಬ್ ಇದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ