ಕಾಸರಗೋಡು: ಶ್ರೀಮದೆಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲಿನ ದುಷ್ಕರ್ಮಿಗಳ ದಾಳಿ ತುಂಬಾ ನೋವುಂಟು ಮಾಡಿದೆ. ಸ್ವಾಮೀಜಿಯ ಕಾರನ್ನೇ ಪ್ರತ್ಯೇಕವಾಗಿ ಗಮನಿಸಿ ಆಕ್ರಮಿಸಿದ್ದಾರೆಂದರೆ ಇದೊಂದು ಪೂರ್ವಯೋಜಿತ ಕೃತ್ಯ ಎಂಬುದು ನಿಸ್ಸಂಶಯ. ಸಮಾಜದ ಭಾವೈಕ್ಯತೆಗೆ ಸದಾ ನಿರತರಾಗಿರುವ ಪೂಜ್ಯರ ಮೇಲಿನ ದಾಳಿಯನ್ನು ಮಧೂರು ಕ್ಷೇತ್ರ ಪುನರ್ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯು ತೀವ್ರವಾಗಿ ಖಂಡಿಸಿದೆ. ದಾಳಿ ನಡೆಸಿದ ಸಮಾಜದ್ರೋಹಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಲ್ಲಿ ಒತ್ತಾಯಿಸಿದೆ.
ಘಟನೆಯನ್ನು ವಿರೋಧಿಸಿ ಮಂಗಳವಾರ 5/11/2024 ರಂದು ಸಂಜೆ 5 ಗಂಟೆಗೆ ಬೋವಿಕ್ಕಾನ ಪೇಟೆಯಲ್ಲಿ ಸಮಸ್ತ ಹಿಂದೂ ಸಂಘಟನೆಗಳು, ದೇವಾಲಯದ ಭಕ್ತರು ಮತ್ತು ಸಮುದಾಯದ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಮಸ್ತ ಹಿಂದೂ ಭಕ್ತರು ಈ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾಜ ದ್ರೋಹಿ ಕೃತ್ಯದ ವಿರುದ್ಧ ಪ್ರತಿಭಟನೆಯಲ್ಲಿ ಕೈಜೋಡಿಸುವಂತೆ ಹಿಂದೂ ಐಕ್ಯವೇದಿ ಕೋರಿದೆ.
ಅರುಣ್ ಪುತ್ತಿಲ ಖಂಡನೆ:
ಎಡನೀರು ಶ್ರೀಗಳ ಕಾರಿನ ಮೇಲೆ ದುಷ್ಕರ್ಮಿಗಳ ದಾಳಿ ಯತ್ನವನ್ನು ಪುತ್ತೂರಿನ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ತೀವ್ರವಾಗಿ ಖಂಡಿಸಿದ್ದಾರೆ. ಪೊಲೀಸರು ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಘಟನೆ ಏನು:
ಭಾನುವಾರ ಸಂಜೆ ಬೋವಿಕ್ಕಾನ-ಇರಿಯಣ್ಣಿ ಮಾರ್ಗ ಮಧ್ಯೆ ಎಡನೀರು ಶ್ರೀಗಳು ಕಾರು ತೆರಳುತ್ತಿದ್ದಾಗ ಪುಂಡರ ತಂಡವೊಂದು ಕಾರನ್ನು ತಡೆದು ಗಲಾಟೆ ಮಾಡಿತ್ತು. ನಂತರ ನಿಗದಿತ ಕಾರ್ಯಕ್ರಮ ಮುಗಿಸಿ ವಾಪಸ್ ತೆರಳುವಾಗ ಸ್ವಾಮೀಜಿಯವರಿದ್ದ ಕಾರನ್ನು ಇರಿಯಣ್ಣಿಯಿಂದಲೇ ಹಿಂಬಾಲಿಸಿ ಬಂದ ದುಷ್ಕರ್ಮಿಗಳ ತಂಡ ಬಾವಿಕೆರೆ ಸಮೀಪ ದೊಣ್ಣೆಯಿಂದ ಕಾರಿನ ಗಾಜಿಗೆ ಹೊಡೆದು ಹಾನಿ ಮಾಡಿದೆ.
ಈ ಸಂದರ್ಭ ಕಾರಿನೊಳಗಿದ್ದ ಸ್ವಾಮೀಜಿಯವರು ಶಾಂತಚಿತ್ತರಾಗಿ ಕಾರನ್ನು ನಿಲ್ಲಿಸದೇ ಮುಂದುವರಿದು ಸುರಕ್ಷಿತವಾಗಿ ಮಠಕ್ಕೆ ತಲುಪಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ