ಪಣಜಿ: ಗೋವಾದ ಪರ್ವರಿಯಲ್ಲಿ ನವೆಂಬರ್ 10 ರಂದು ಭಾನುವಾರ ಗೋವಾದ ಎಲ್ಲ ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಾಂದಿಯಾಯಿತು. ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಗ್ರಹಿಸುತ್ತಿದ್ದಂತೆಯೇ ಗೋವಾದ ವಿವಿಧ ಕನ್ನಡ ಸಂಘಟನೆಗಳ ಪ್ರಮುಖರು ಹಾಗೂ ಕನ್ನಡಿಗರಿಂದ ರಾಜ್ಯೋತ್ಸವ ವೇದಿಕೆಯಲ್ಲಿಯೇ ಕನ್ನಡ ಭವನ ನಿರ್ಮಾಣಕ್ಕೆ ಸುಮಾರು 30 ಲಕ್ಷ ರೂ ಹಣ ಸಂಗ್ರಹವಾಗಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಾಂದಿಯಾಗಿದೆ.
ಗೋವಾದ ಎಲ್ಲ ಕನ್ನಡಪರ ಸಂಘಟನೆಗಳ ಸಹಕಾರದಲ್ಲಿ ಗೋವಾದ ಪರ್ವರಿಯಲ್ಲಿ ಭಾನುವಾರ ಗೋವಾ ರಾಜ್ಯದಲ್ಲಿ ಕರ್ನಾಟಕ ರಾಜ್ಯೋತ್ಸವ 69 ರ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಮೂಲಕ ಮುಂದಿನ ವರ್ಷ ಗೋವಾದಲ್ಲಿ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಭವನದಲ್ಲಿಯೇ ಆಚರಣೆ ಮಾಡುವಂತಾಗಬೇಕು. ಗೋವಾದಲ್ಲಿ ಇಂದು ಎಲ್ಲ ಕನ್ನಡ ಸಂಘಟನೆಗಳು ಒಗ್ಗೂಡಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ. ಇದೇ ಕಾರ್ಯಕ್ರಮ ಆಯೋಜನೆಗೆ ನೀವು ಇಷ್ಟೊಂದು ಪ್ರಮಾಣದಲ್ಲಿ ಖರ್ಚು ಮಾಡುತ್ತಿದ್ದೀರಿ. ಕನ್ನಡ ಭವನ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡಿ ಹಣ ಸಂಗ್ರಹಿಸಿದರೆ ನಾವೇ ಕನ್ನಡ ಭವನ ನಿರ್ಮಿಸಲು ಸಾಧ್ಯ ಎಂದು ಹುಕ್ಕೇರಿ ಶ್ರೀಗಳು ಹೇಳುತ್ತಿದ್ದಂತೆಯೇ ಗೋವಾದ ಕನ್ನಡ ಸಂಘಟನೆಗಳ ನಾಯಕರು ಇದೇ ವೇದಿಕೆಯಲ್ಲಿ ಹಣ ದೇಣಿಗೆ ನೀಡುವ ಮೂಲಕ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಾಂದಿಯಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಬಾಗಲಕೋಟೆ ಸಿದ್ಧನಕೊಳ್ಳ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು, ಗೋವಾ ರಾಜ್ಯ ಗೋವಾ ಉಪಮುಖ್ಯಮಂತ್ರಿ ಚಂದ್ರಕಾಂತ ಕವಳೇಕರ್, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ನಿರ್ದೇಶಕ ರಾಜು ತಾಳಿಕೋಟಿ ಉಪಸ್ಥಿತರಿದ್ದರು. ವೇದಿಕೆಯ ಮೇಲೆ ಕರ್ನಾಟಕ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಮುರಳಿ ಮೋಹನ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಸಮಿತಿಯ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ, ಲೋಕಸೇವಾ ಆಯೋಗದ ಮಾಜಿ ಸದಸ್ಯ ಕೆ.ಮುಕಡಪ್ಪ, ಕರ್ನಾಟಕ ರಾಜ್ಯೋತ್ಸವ ಸಮಿತಿಯ ಉತ್ತರ ಗೋವಾ ಉಪಾಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ದಕ್ಷಿಣ ಗೋವಾ ಉಪಾಧ್ಯಕ್ಷ ಮಂಜುನಾಥ ನಾಟೀಕರ್, ಕಾರ್ಯದರ್ಶಿ ಸುರೇಶ್ ರಜಪೂತ್, ಅಖಿಲ ಗೋವಾ ಲಿಂಗಾಯತ ಸಮಾಜದ ಅಧ್ಯಕ್ಷೆ ಜಯಶ್ರೀ ಹೊಸ್ಮನಿ, ಕೋರ್ ಕಮಿಟಿಯ ಪ್ರಮುಖರಾದ ಪ್ರಶಾಂತ ಜೈನ್, ಶಿವಾನಂದ ಬಿಂಗಿ, ಅನೀಲ ಸನದಿ, ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯೋತ್ಸವ ಸಮಿತಿಯ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ ಸ್ವಾಗತ ಕೋರಿದರು, ಕೋರ್ ಕಮೀಟಿಯ ಶಿವಾನಂದ ಬಿಂಗಿ ಪ್ರಾಸ್ತಾವಿಕ ಮಾತನಾಡಿದರು. ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು. ಗೋವಾ ಹಾಗೂ ಕರ್ನಾಟಕದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಬೃಹತ್ ಪೆಂಡಾಲ್ ಹಾಕಿ ಅದ್ದೂರಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೋವಾದ ಮೂಲೆ ಮೂಲೆಗಳಿಂದ ಕನ್ನಡಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಬೃಹತ್ ಸ್ಕ್ರೀನ್ ಅಳವಡಿಕೆಯ ಮೂಲಕ ಕಾರ್ಯಕ್ರಮ ವೀಕ್ದಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ವ್ಯವಸ್ಥೆಗೆ ಗೋವಾದ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಶ್ರಮಿಸಿ ವ್ಯವಸ್ಥೆ ಮಾಡಿದ್ದರು. ಸಮಾರಂಭಕ್ಕೆ ಬಂದ ಎಲ್ಲ ಜನರಿಗೆ ಬೆಳಗ್ಗೆ ಉಪಹಾರ ಮತ್ತು ಮಧ್ಯಾನ್ಹದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಗೋವಾದಲ್ಲಿ ಈ ರಾಜ್ಯೋತ್ಸವ ಆಚರಣೆ ಎಲ್ಲೆಡೆ ಕನ್ನಡ ಕರ್ನಾಟಕ ವಾತಾವರಣವನ್ನು ಸೃಷ್ಠಿ ಮಾಡಿತ್ತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ