ಮಂಗಳೂರು: ಲೋಕ ಕಲ್ಯಾಣದ ಹಾಗೂ ಬ್ರಾಹ್ಮಣ ಸಮುದಾಯದ ಸಂಘಟನೆಯ ಉದ್ದೇಶದಿಂದ ಆಯೋಜಿಸಿದ್ದ ಕೋಟಿ ಗಾಯತ್ರಿ ಯಜ್ಞವು ಯಶಸ್ವಿಯಾಗಿದ್ದು, ಯಾಗವು ಮೂಲ ಉದ್ದೇಶವನ್ನು ಈಡೇರಿಸಿದೆ ಎಂದು ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಚಿತ್ರಾಪುರ ಮಠದಲ್ಲಿ ನಡೆದ ಯಾಗದ ಭಸ್ಮ ವಿತರಣಾ ಹಾಗೂ ಸರ್ವ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಯಾಗದ ಯಶಸ್ಸಿಗೆ ದುಡಿದ ಕಾರ್ಯಕರ್ತರಿಗೆ ಕೃತಜ್ಞತೆ, ಯಾಗದ ಲೆಕ್ಕಪತ್ರ ಮಂಡನೆಯನ್ನು ಇದೇ ಸಂದರ್ಭದಲ್ಲಿ ಮಾಡಲಾಯಿತು.
ಮೊದಲ ಬಾರಿಗೆ ಎಲ್ಲ ಬ್ರಾಹ್ಮಣ ಸಮುದಾಯವು ಒಟ್ಟಾಗಿ ಒಂದೇ ಮನಸ್ಸಿನಿಂದ ಯಾಗವನ್ನು ಮಾಡುವ ಮೂಲಕ ಒಗ್ಗಟ್ಟನ್ನು ಸಾರಿದೆ. ಮುಂದಿನ ದಿನಗಳಲ್ಲಿ ಬ್ರಾಹ್ಮಣ ಸಂಘಟನೆ, ಬಲವರ್ಧನೆ ಹಾಗೂ ಕಲ್ಯಾಣದ ಉದ್ದೇಶದಿಂದ ಇದೇ ಮಾದರಿಯಲ್ಲಿ ಯಾಗದ ಆತಿಥ್ಯವನ್ನು ತೆಗೆದುಕೊಳ್ಳಲು ಕರಾವಳಿಯ ಹಲವು ಬ್ರಾಹ್ಮಣ ಸಮುದಾಯದ ಸಂಘಟನೆಗಳು, ಮಠಗಳು, ದೇವಸ್ಥಾನಗಳು ಪ್ರಸ್ತಾಪ ಮುಂದಿಟ್ಟಿದ್ದಾರೆ. ಇದು ಯಾಗದ ಫಲ. ಯಶಸ್ವಿಯಾಗಿರುವುದರ ಸಂಕೇತ ಎಂದು ಗಾಯತ್ರಿ ಸಂಗಮದ ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಮಹೇಶ್ ಕಜೆ ಹೇಳಿದರು.
ಗಾಯತ್ರಿ ಯಾಗವು ಇಡೀ ಬ್ರಾಹ್ಮಣ ಸಮುದಾಯದಲ್ಲಿ ಮಂತ್ರದ ಅನುಷ್ಠಾನದ ಮಹತ್ವದ ಕುರಿತು ಜಾಗೃತಿಯನ್ನು ಮೂಡಿಸಿದೆ. ಹಲವು ಮಂದಿ ಅನುಷ್ಠಾನದಿಂದ ವಿಮುಖರಾದವರು ಮತ್ತೆ ಅನುಷ್ಠಾನಿಗಳಾಗಿದ್ದಾರೆ. ಸಮಾಜದ ಏಳಿಗೆಗಾಗಿ ಇಂತಹ ವಿಪ್ರ ಸಂಗಮ ನಿರಂತರವಾಗಿ ಮುಂದುವರಿಸುವ ಗುರಿಯು ಬ್ರಾಹ್ಮಣ ಮಹಾಸಭಾದ ಮುಂದೆ ಇದೆ. ಜನವರಿ ತಿಂಗಳಿನಲ್ಲಿ ನಡೆಯುವ 24 ಕೋಟಿ ಗಾಯತ್ರಿ ಜಪಯಜ್ಞಕ್ಕೆ ಈ ಭಾಗದ ಜನರು ಜಪ ಅನುಷ್ಠಾನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಎಲ್ಲರೂ ಸಂಕಲ್ಪ ಮಾಡಬೇಕಿದೆ ಎಂದು ಪ್ರಧಾನ ಸಂಚಾಲಕ ವಿದ್ವಾನ್ ಶ್ರೀಧರ ಹೊಳ್ಳ ಹೇಳಿದರು.
ಗಾಯತ್ರಿ ಸಂಗಮದ ಯಶಸ್ವಿಗೆ ಕರಾವಳಿಯ ಎಲ್ಲ ಬ್ರಾಹ್ಮಣರು ಮಹತ್ವದ ಕೊಡುಗೆ ನೀಡಿದ್ದಾರೆ. ಎಲ್ಲರೂ ಮುಕ್ತ ಕಂಠದಿAದ ಶ್ಲಾಘಿಸಿದ್ದಾರೆ. ಇದಕ್ಕಾಗಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಹೇಳಿದರು.
ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪಡೆದ ಶ್ರೀಶ ಸೌಹಾರ್ದ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರ ಗುರುರಾಜ್ ಅವರನ್ನು "ನಮ್ಮವರು ನಮ್ಮ ಹೆಮ್ಮೆ" ಎಂಬ ಪುರಸ್ಕಾರ ನೀಡಿ ಗೌರವಿಸಲಾಯಿತು.
ಯಜ್ಞದ ಉಳಿಕೆ ಮೊತ್ತದಿಂದ ಒಂದು ಲಕ್ಷ ರೂ. ಮೊತ್ತದ ಚೆಕ್ ಅನ್ನು ಚಿತ್ರಾಪುರ ಮಠದ ಅಭಿವೃದ್ಧಿಗಾಗಿ ಸ್ವಾಮೀಜಿ ಅವರಿಗೆ ಹಸ್ತಾಂತರಿಸಲಾಯಿತು. ಯಾಗದ ವೇಳೆ ಉಳಿದ ಸುಮಾರು ಒಂದು ಲಕ್ಷ ರೂ. ಮೊತ್ತದ ಅಕ್ಕಿ, ಬೇಳೆ, ತರಕಾರಿಯನ್ನು ಮಠದಲ್ಲಿ ನಡೆಯುವ ಅನ್ನದಾನಕ್ಕೂ ನೀಡಲಾಯಿತು. ಸುಬ್ರಹ್ಮಣ್ಯ ಕೊರಿಯಾರ್ ಧನ್ಯವಾದ ಸಮರ್ಪಿಸಿದರು.
ರಾಜ್ಯ ಯುವ ಸಹ ಸಂಚಾಲಕ ಸುಬ್ರಹ್ಮಣ್ಯ ಕೊರಿಯಾರ್, ಕಾರ್ಯದರ್ಶಿ ಕೃಷ್ಣ ಭಟ್ ಕದ್ರಿ, ವಿಶ್ವೇಶ್ವರ ಬದೆವಿದೆ, ವಿಶ್ವೇಶ್ವರ ಕಾರಂತ್, ಪಿ.ಪುರುಷೋತ್ತಮ ರಾವ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಕರ ದಾಮ್ಲೆ, ಪೊಳಲಿ ಗಿರಿಪ್ರಕಾಶ್ ತಂತ್ರಿ, ಕಾತ್ಯಾಯಿನಿ ಸೀತಾರಾಮ್, ಚೇತನ ದತ್ತಾತ್ರೇಯ, ಕಲಾವತಿ ಟೀಚರ್, ಸಾವಿತ್ರಿ, ರಮಾ ವಿ.ರಾವ್, ಶ್ರೀಪತಿ ಭಟ್, ಸುರೇಶ್ ರಾವ್, ಕಗ್ಗಿ ಶ್ರೀನಿವಾಸ್ ಆಚಾರ್, ಎಂ.ಟಿ. ಭಟ್, ಪ್ರಕಾಶ್ ಕೋಟೆಕಾರ್, ರವೀಶ್ ನಾರ್ಷ, ಗೋಪಾಲಕೃಷ್ಣ ಮಯ್ಯ, ಕೋಶಾಧಿಕಾರಿ ಉದಯಕುಮಾರ್ ಲೆಕ್ಕಪತ್ರ ಮಂಡಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ