ಗುರುವಾಯನಕೆರೆ: ಯಶಸ್ಸಿನ ಹಿಂದೆ ಓಡಬೇಕೆಂಬ ಛಲವಿರುವ ಈಗಿನ ಪಿಯು ವಿದ್ಯಾರ್ಥಿಗಳಿಗೆ ಸರಿಯಾದ ಹಂತದಲ್ಲಿ ಸಮರ್ಥವಾದ ಆಪ್ತ-ಸಮಾಲೋಚನಾ ಮಾರ್ಗದರ್ಶನ ಬೇಕೇ-ಬೇಕು ಎಂದು ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯ ಮಾಜಿ ಹಿರಿಯ ಮನೋವೈದ್ಯ, ಪದ್ಮಶ್ರೀ ಡಾ. ಸಿಆರ್ ಚಂದ್ರಶೇಖರ್ರವರು ಹೇಳಿದರು.
ಅವರು ಗುರುವಾಯನ ಕೆರೆಯ ವಿದ್ವತ್ ಪಿಯು ಕಾಲೇಜು ಏರ್ಪಡಿಸಿದ್ದ “ಮಾನಸ ಮಾರ್ಗದರ್ಶನ ಹಾಗೂ ಸಂವಾದ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅತೀ ಕಿರಿಯ ವಯಸ್ಸಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಯಶಸ್ಸು ಗಳಿಸಬೇಕೆಂಬ ಛಲವಿರುವ ಹದಿಹರೆಯದ ವಿದ್ಯಾರ್ಥಿಗಳಿಗೆ “ಆಪ್ತ-ಸಮಾಲೋಚನೆ” ಅತ್ಯಂತ ಉತ್ತೇಜನಕಾರಿ ಎಂದು ತಿಳಿಸಿದ ಶ್ರೀಯುತರು ವಿದ್ವತ್ ಪಿಯು ಕಾಲೇಜು ದಿನನಿತ್ಯದ ಕಾರ್ಯಸೂಚಿಯಾಗಿ ಆಪ್ತ-ಸಮಾಲೋಚನೆಯನ್ನು ಜಾರಿಗೊಳಿಸಿರುವುದು ರಾಜ್ಯದ ಪಿಯು ಶಿಕ್ಷಣ ವ್ಯವಸ್ಥೆಯಲ್ಲಿಯೇ ಪ್ರಥಮ ಎಂದು ಬಣ್ಣಿಸಿದರು.
ಆಪ್ತ-ಸಮಾಲೋಚನೆ [ಕೌನ್ಸಲಿಂಗ್ ]ಒತ್ತಡರಹಿತ ಗ್ರಹಿಕೆ ಹಾಗೂ ಕಲಿಕೆಗೆ ರಾಮಬಾಣ ಎಂದ ಡಾ. ಸಿಆರ್ ಚಂದ್ರಶೇಖರ್ ವಿದ್ಯಾಭ್ಯಾಸವನ್ನು ಹಿತಾಸಕ್ತಿಯ ಚಟುವಟಿಕೆಯನ್ನಾಗಿ ಪರಿವರ್ತಿಸುವ ಆಲೋಚನೆ ರೂಪಿಸಿಕೊಳ್ಳಲು ವಿದ್ಯಾರ್ಥಿ ಸಮೂಹಕ್ಕೆ ತಿಳಿಹೇಳಿದರು.
ಬೆಂಗಳೂರಿನಂತಹ ನಗರಗಳಲ್ಲಿ ವಿದ್ಯಾಸಂಸ್ಥೆಗಳು ಆಪ್ತ-ಸಮಾಲೋಚನೆಯ ಅಗತ್ಯತೆಯ ಬಗ್ಗೆ ಇನ್ನೂ ಚರ್ಚೆ ನಡೆಸುತ್ತಿರುವ ಈ ಸಂದರ್ಭದಲ್ಲಿ, ಗುರುವಾಯನ ಕೆರೆಯಂತಹ ಪಟ್ಟಣದಲ್ಲಿ ಪಿಯು ಕಾಲೇಜೊಂದು “ಆಪ್ತ-ಸಮಾಲೋಚನಾ ವಿಭಾಗ” ವನ್ನು ಹೊಂದಿರುವುದು ವಿದ್ವತ್ ಚಿಂತಕರ ಛಾವಡಿ ಎಷ್ಟು ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದರು.
ವಿದ್ವತ್ನ ಪಿಯು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಜ್ಞಾಪಕಶಕ್ತಿ ವೃದ್ಧಿ, ಒತ್ತಡ ನಿವಾರಣೆ, ಪರೀಕ್ಷಾ ತಯಾರಿಯ ವಿಧಾನ ಹಾಗೂ ಮನಸ್ಸಿನ ಜಾಡ್ಯ ನಿವಾರಣೆ, ಇತ್ಯಾದಿ ವಿಷಯಗಳ ಬಗ್ಗೆ ಸಂದೇಹ ಪರಿಹಾರಕ್ಕಾಗಿ ಎರಡು ತಾಸಿಗೂ ಹೆಚ್ಚಿನ ಕಾಲ ಸಂವಾದ ನಡೆಸಿ ಯುವ ವಿದ್ಯಾರ್ಥಿಗಳಲ್ಲಿ ಹೊಸಚೈತನ್ಯ ತುಂಬಿದರು. ವಿದ್ವತ್ ಪಿಯು ಕಾಲೇಜಿನ ಕೌನ್ಸಲಿಂಗ್ ಮುಖ್ಯಸ್ಥರಾದ ಗಂಗಾಧರ ಇಮಂಡಗಳಲೆ, ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಪ್ರಗತಿ ಆಪಲ್ ಎಜುಕೇಶನ್ನ ಮುಖ್ಯಸ್ಥ ವಿಜಯಕುಮಾರ್, ಟ್ರಸ್ಟಿ ಎಂ.ಕೆ. ಕಾಶಿನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ