ಬಂಟ್ವಾಳ: ಅನಂತಾಡಿ ಗ್ರಾಮದ ಬಾಕಿಲ ಮಂಜೊಟ್ಟಿ ಕೊಡ್ಡೆಮಾರು ಭಾಗದ ಜನರ ಬಹು ವರ್ಷಗಳ ಹಿಂದಿನ ಬೇಡಿಕೆಯನ್ನು ಪೂರೈಸುವತ್ತ ದಿಟ್ಟ ಮನಸ್ಸು ಮಾಡಿದ್ದಾರೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು.
ಅನಂತಾಡಿಯ ರಾಜರಸ್ತೆಯ ಅಂಚಿನಲ್ಲಿ ಪಶ್ಚಿಮದ ಕಡೆ ಹಾದು ಹೋಗುವ ಕಿರಿದಾದ ರಸ್ತೆಯನ್ನು ಅಗಲಗೊಳಿಸಿ ಸುಸಜ್ಜಿತವಾದ ಸರ್ವಋತು ರಸ್ತೆಯನ್ನು ನಿರ್ಮಿಸುವ ಬಗ್ಗೆ ಬೇಡಿಕೆ ಮತ್ತು ಅಗತ್ಯತೆಗಳನ್ನು ಮನಗಂಡ ಭಾರತೀಯ ಜನತಾ ಪಕ್ಷದ ಪ್ರಮುಖರು, ಕ್ಷೇತ್ರದ ಶಾಸಕರ ಮೂಲಕ ಮನವಿ ಮತ್ತು ಒತ್ತಡ ತಂದಿದ್ದರ ಪರಿಣಾಮವಾಗಿ ಹಾಗೂ ಇಲಾಖೆಯ ಅಧಿಕಾರಿಗಳ ತ್ವರಿತ ಸ್ಪಂದನೆಯ ಪರಿಣಾಮವಾಗಿ ಈ ಭಾಗಕ್ಕೆ ಸರ್ವ ಋತು ರಸ್ತೆಯ ಕಾಮಗಾರಿಯು ಆರಂಭವಾಗುವ ಹಂತದಲ್ಲಿದ್ದು ಈ ಕಾರಣದಿಂದ ಗುದ್ದಲಿ ಪೂಜೆಯನ್ನು (ಭೂಮಿ ಪೂಜಾ) ಮಾಡಲಾಯಿತು.
ಪಂಚಾಯತ್ ಅಧ್ಯಕ್ಷೇ ಶ್ರೀಮತಿ ಸುಜಾತ ಸುರೇಶ್, ಮಂಡಲದ ರೈತ ಮೋರ್ಚಾ ಅಧ್ಯಕ್ಷ ಸನತ್ ಕುಮಾರ್ ರೈ ಸಮ್ಮುಖದಲ್ಲಿ ಹಿರಿಯರೂ, ಬಾಕಿಲ ದೇವಸ್ಥಾನದ ಪ್ರಮುಖರೂ ಆಗಿರುವ ಜನಾರ್ದನ ಪೂಜಾರಿಯವರ ದಿವ್ಯ ಹಸ್ತದಿಂದ ಭೂಮಿ ಪೂಜೆ ಇಂದು ನೆರವೇರಿತು.
ಗ್ರಾಮದ ಬಾಕಿಲ ಮಂಜೊಟ್ಟಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅನಂತಾಡಿ ಶಕ್ತಿ ಕೇಂದ್ರದ ಪ್ರಮುಖ್ ಮಹಾಬಲ ಪೂಜಾರಿ, ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಗಣೇಶ ಪೂಜಾರಿ, ನಿಕಟಪೂರ್ವ ಉಪಾಧ್ಯಕ್ಷ ಕುಸುಮಾಧರ, ಸಿಎ ಬ್ಯಾಂಕ್ ಉಪಾಧ್ಯಕ್ಷ ತನಿಯಪ್ಪ ಗೌಡ, ನೆಟ್ಲಮುಡ್ನೂರು ಶಕ್ತಿಕೇಂದ್ರ ಪ್ರಮುಖ್ ಧನಂಜಯ ಗೌಡ, ನೆಟ್ಲಮುಡ್ನೂರು ಪಂಚಾಯತ್ ಸದಸ್ಯರಾದ ಅಶೋಕ್ ರೈ ಮತ್ತು ಶ್ರೀಮತಿ ಸುಜಾತ ಜಗದೀಶ್, ಮಂಡಲ ಮಹಿಳಾ ಮೋರ್ಚ ಉಪಾಧ್ಯಕ್ಷೆ ಶಕಿಲಾ ಕೃಷ್ಣಪ್ಪ, ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಕಲಾ ಭಂಡಾರಿ ಉಪಸ್ಥಿತರಿದ್ದರು.
ಅನಂತಾಡಿ ಬಿಜೆಪಿ ಪ್ರಮುಖರು, ಬೂತ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕರ್ತರು, ಸಾರ್ವಜನಿಕರು ಮತ್ತು ಸ್ಥಳೀಯರು ಈ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಗಳಾದರು. ಮಾಣಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ ಸ್ವಾಗತಿಸಿ ಬೂತ್ ಸಮಿತಿ ಅಧ್ಯಕ್ಷ ನವೀನ ಆಚಾರ್ಯ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ