ಪೊಳಲಿ, ಉಳಾಯಿಬೆಟ್ಟುವಿನಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸಮಾಲೋಚನೆ

Upayuktha
0

ಡೀಸಿ ಜೊತೆ ಶಾಸಕ ಡಾ. ಭರತ್ ಶೆಟ್ಟಿ-ರಾಜೇಶ್ ನಾಯ್ಕ್ ಮಾತುಕತೆ




ಗುರುಪುರ: ಅಡ್ಡೂರು-ಪೊಳಲಿ ಸೇತುವೆ ಮತ್ತು ಉಳಾಯಿಬೆಟ್ಟು ಕಿರು ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಹಾಗೂ ಎರಡೂ ಕಡೆ ಹೊಸ ಸೇತುವೆ ನಿರ್ಮಿಸುವ ಕುರಿತು ಇಂದು (ಅ.29) ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿದರು.


ಎರಡೂ ಕಡೆ ಸೇತುವೆಯಲ್ಲಿ ಘನ ವಾಹನ ಸಂಚಾರ ಸ್ಥಗಿತದಿಂದ ಸಾರ್ವಜನಿಕ ಬಸ್ ಸಂಚಾರ ಮತ್ತು ಕಾರ್ಮಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಇತ್ತೀಚೆಗೆ ಪೊಳಲಿ ಮತ್ತು ಉಳಾಯಿಬೆಟ್ಟಿನಲ್ಲಿ ಸೇತುವೆ ತಜ್ಞರು ನಡೆಸಿದ ಪರೀಕ್ಷೆ ವೇಳೆ ಎರಡೂ ಸೇತುವೆಗಳು ಶಿಥಿಲಗೊಂಡಿದೆ. ಸೇತುವೆಗಳ ಧಾರಣಾ ಶಕ್ತಿ ಹೆಚ್ಚಿಸುವ ಹಾಗೂ ಹೊಸ ಸೇತುವೆ ನಿರ್ಮಾಣದ ಕುರಿತು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕದ್ವಯರು ಜಿಲ್ಲಾಧಿಕಾರಿ ಮುಲ್ಲೈ  ಮಹಿಲನ್ ಅವರೊಂದಿಗೆ ಮಂಗಳವಾರ ಡೀಸಿ ಕಚೇರಿಯಲ್ಲಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಇಂಜಿನಿಯರ್‌ಗಳು ಹಾಗೂ ಎರಡೂ ಕಡೆಯ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.


ವಿಜಯವಾಣಿಯೊಂದಿಗೆ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಪೊಳಲಿ ಸೇತುವೆಯ ಧಾರಣಾ ಶಕ್ತಿ ಹೆಚ್ಚಿಸಲು 6 ಕೋಟಿ ರೂ ಹಾಗೂ ಹೊಸ ಸೇತುವೆ ನಿರ್ಮಾಣಕ್ಕೆ ಅಂದಾಜು 50 ಕೋಟಿ ರೂ ತಗುಲಲಿದೆ. ಅಂತೆಯೇ ಉಳಾಯಿಬೆಟ್ಟಿನಲ್ಲಿ ಹೊಸ ಕಿರು ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ ತಗುಲಲಿದೆ. ಪೊಳಲಿಯಲ್ಲಿ ಮೊದಲಿಗೆ ಸೇತುವೆ ಧಾರಣಾ ಶಕ್ತಿ ಹೆಚ್ಚಿಸುವ ಕಾಮಗಾರಿ ನಡೆಯಲಿದೆ. ಮಾತುಕತೆ ಫಲಪ್ರದವಾದಲ್ಲಿ ಎರಡೂ ಕಡೆ ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದರು.


ಪ್ರಸಕ್ತ ಮಾತುಕತೆ ಬಗ್ಗೆ ಶೀಘ್ರವೇ ತಾನು ಮತ್ತು ರಾಜೇಶ್ ನಾಯ್ಕ್ ಅವರು ಸರ್ಕಾರದ ಜೊತೆ ಮಾತುಕತೆ ನಡೆಸಿ ಕಾಮಗಾರಿಗೆ ಅಗತ್ಯವಿರುವ ಅನುದಾನ ಬಿಡುಗಡೆಗೆ ಚರ್ಚಿಸಲಿದ್ದೇವೆ ಎಂದವರು, ಸೇತುವೆ ಧಾರಣಾ ಶಕ್ತಿ ಹೆಚ್ಚಿಸಿದ ಬಳಿಕ ಸಾರ್ವಜನಿಕ ಬಸ್ಸುಗಳು ಮತ್ತು ಶಾಲಾ-ಕಾಲೇಜು ಬಸ್ಸುಗಳು ಯಥಾವತ್ತಾಗಿ ಸಂಚಾರ ನಡೆಸಲು ಅವಕಾಶವಿರುತ್ತದೆ. ಆದರೆ ನಿಗದಿತ ಭಾರಕ್ಕಿಂತ ಹೆಚ್ಚಿನ ಭಾರದ ಘನ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಘನ ವಾಹನ ಸಂಚಾರದ ಮೇಲೆ ನಿಗಾ ಇಡಲು ಪೊಳಲಿಯಲ್ಲಿ ಪೊಲೀಸ್ ಚೆಕ್ ಪೋಸ್ಟ್‌ಗೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಮಾತಕತೆ ನಡೆಸಲಾಯಿತು ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top