ಶಿರಸಿಯ ಮಾರಿಕಾಂಬಾದೇವಿಯನ್ನು ಮಾರಿಗುಡಿ ಎಂದು ಕೂಡ ಕರೆಯಲಾಗುತ್ತದೆ. ಮಾರಿಕಾಂಬಾ ಎಂದರೆ ದುರ್ಗಾದೇವಿ ಈ ದೇವಾಲಯವನ್ನು ಕ್ರಿ.ಶ 1689ರಲ್ಲಿ ನಿರ್ಮಿಸಲಾಗಿದ್ದು ಕರ್ನಾಟಕದ ಎಲ್ಲ ಮಾರಿದೇವಿಯ ಗುಡಿಗಳ ಹಿರಿಯಕ್ಕ ಎಂದು ಭಾವಿಸಲಾಗಿದೆ. ಮಾರಿದೇವಿಯು ವಿಶ್ವದ ಮಾತೆಯಾಗಿದ್ದಾಳೆ. ಅವಳು ಬಲ ಮತ್ತು ಪೋಷಣೆ, ಆರೋಗ್ಯ, ಮಮತೆ ಮಳೆ ಮತ್ತು ಸಮೃದ್ಧಿಯ ದೇವಿಯಾಗಿದ್ದಾಳೆ. ಮಾರಿಕಾಂಬಾ ದೇವಿಯ ಆಯುಧಗಳು ತ್ರಿಶೂಲ, ಖಡ್ಗ, ಗದಾ, ಡಮರು, ಶಂಖ, ಕತ್ತಿ, ಗುರಾಣಿ, ಕಪಾಲ ಇವುಗಳೇ ಅವಳ ಆಯುಧಗಳಾಗಿವೆ. ಅವಳ ವಾಹನ ಹುಲಿಯಾಗಿದ್ದು ಹಳದಿ ಮತ್ತು ಕೆಂಪು ಇವಳ ಪ್ರೀತಿಯ ಬಣ್ಣಗಳಾಗಿವೆ. ಕನ್ನಡನಾಡಿನ ಮಲೆನಾಡಿನ ಪ್ರದೇಶಗಳಲ್ಲಿ ಇವಳ ವಾಸವಾಗಿದೆ.
ಶಿರಸಿಯಲ್ಲಿ ಮಾರಿಕಾಂಬ ದೇವಿಯ ಪ್ರತಿಷ್ಠಾಪನೆಯಾದ ಕುರಿತು ಒಂದು ಐತಿಹ್ಯವಿದೆ. 1689ರಲ್ಲಿ ಶಿರಸಿ ಒಂದು ಕುಗ್ರಾಮವಾಗಿತ್ತು. ವಿಜಯನಗರದ ಅರಸರ ಸಾಮಂತರಾದ ಸೋಂದಾ ಸಾಮಂತರದಲ್ಲಿ ತಮ್ಮ ಗ್ರಾಮದಕೆರೆಯಲ್ಲಿ ದೊರೆತ ಕಟ್ಟಿಯ ವಿಗ್ರಹವನ್ನು ಸ್ಥಾಪಿಸಲು ಸೋಂದಾ ಅರಸರಲ್ಲಿ ವಿನಂತಿಸಿದಾಗ, ಅರಸರಾದ ಇಮ್ಮಡಿ ಸದಾಶಿವರಾಯರು ಗ್ರಾಮದೇವತೆಯಾಗಿ ಸ್ಥಾಪಿಸಲು ಅನುಮತಿ ನೀಡಿದರು. ಅಂದು ಸ್ಥಾಪಿತವಾದ ಗುಡಿಯನ್ನು ಅಂದಿನಿಂದ ಊರಿನ ಹಿರಿಯರು ನೋಡಿಕೊಳ್ಳುತ್ತಿದ್ದಾರೆ. ದೇವಾಲಯದ ಗೋಪುರ, ಗರ್ಭಗುಡಿ, ಚಂದ್ರ ಶಾಲೆ ಮತ್ತು ಮಹಾದ್ವಾರಗಳು 1850ರಿಂದ 1875ರ ನಡುವೆ ನಿರ್ಮಾಣವಾಗಿವೆ. ಸ್ವಾತಂತ್ರದ ನಂತರ ಧರ್ಮದರ್ಶಿಗಳ ಮೂಲಕ ಆಡಳಿತ ಕಾರ್ಯಗಳು ಉತ್ಸವವು ನಡೆಯುತ್ತವೆ. 5 ವರ್ಷಗಳಿಗೊಮ್ಮೆ ಜಿಲ್ಲಾ ನ್ಯಾಯಾಧೀಶರು ಧರ್ಮದರ್ಶಿಗಳನ್ನು ನೇಮಿಸುತ್ತಾರೆ. ಎರಡು ವರ್ಷಗಳಿಗೊಮ್ಮೆ ದೇವಿಯ ಜಾತ್ರೆಯು 8 ದಿನಗಳ ಕಾಲ ವೈಭವಪೂರ್ಣವಾಗಿ ನಡೆಯುತ್ತದೆ. ಇದಲ್ಲದೇ ದೇವಿಯ ಜಯಂತಿ, ನವರಾತ್ರಿ ಉತ್ಸವ ಕಾರ್ತಿಕೋತ್ಸವವು ಪ್ರತಿ ವರ್ಷವೂ ನಡೆಯುತ್ತವೆ.
ಮಾರಿಕಾಂಬಾದೇವಿಯ ಬಗೆಗೆ ಅನೇಕ ಕಥೆಗಳಿವೆ ದೇವಿಯ ವಿಗ್ರಹವು ಹಾನಗಲ್ ನಿಂದ ಬಂದಿತೆಂದು ಹೇಳುತ್ತಾರೆ. ಪುರಾಣಗಳ ಪ್ರಕಾರ ಹಾನಗಲ್ನಲ್ಲಿ ಪ್ರಬಲವಾದ ಶಕ್ತಿ ಪೀಠಗಳು ಇದ್ದವೆಂಬ ಉಲ್ಲೇಖ ದೊರೆಯುತ್ತದೆ. ಮಹಾಭಾರತದ ಸಮಯದ ಕಥೆಯನ್ನು ಹಾನಗಲ್ ವಿರಾಟನಗರವೆಂದು ಕರೆಯುತ್ತಾರೆ. ಅಜ್ಞಾತವಾಸಕ್ಕೆ ಹೋಗುವ ಮೊದಲು ವಿರಾಟನಗರದ ದ್ವಾರದಲ್ಲಿದುರ್ಗಾದೇವಿಯ ಪೂಜೆಯನ್ನು ಧರ್ಮರಾಯನು ಮಾಡಿದನೆಂದು ಇವೆಲ್ಲವನ್ನು ಸಂಶೋಧನಕಾರರ ಇತಿಹಾಸಕಾರರ ಅಭಿಪ್ರಾಯವಾಗಿದೆ. ಕುಂತಿಯ ದಿಬ್ಬವು ಹಿಂದೆ ತ್ರಿಭುವನೇಶ್ವರಿ ಕುಳಿತಿದ್ದ ಸ್ಥಳವಾಗಿತ್ತೆಂದು ಕೂಡ ಹೇಳುತ್ತಾರೆ ಇದೇ ರೀತಿ ಪುರಾಣ ಇತಿಹಾಸಗಳಿರುವ ದೇವಿ ಮಾರಿಕಾಂಬಾ ದೇವಿಯಾಗಿದ್ದಾಳೆ.
ಮಾರಿದೇವಿಯ ಬಗೆಗೆ ಅನೇಕ ಜಾನಪದ ಕಥೆಗಳಿವೆ. ಅದರಲ್ಲಿ ಎರಡು ಪ್ರಮುಖ ಕಥೆಗಳಲ್ಲಿ ಬಸವ ಎಂಬ ಭಕ್ತನು ಚಂದ್ರಗುತ್ತಿಗೆ ಪ್ರತಿಬಾರಿ ಉತ್ಸವಕ್ಕೆ ಹೋಗುತ್ತಿದ್ದನು ಅಲ್ಲಿ ಅವನಿಗೆ ತೊಂದರೆಯಾದ ಕಾರಣ ದೇವಿಯ ಕನಸಿನಲ್ಲಿ ಬಂದು ನಿಮ್ಮೂರಿನ ಕೆರೆಯಲ್ಲಿಯೇ ದೊರೆಯುವೆ ಎಂದು ಹೇಳಿದಳು ಆಗ ಅವನು ಆ ಊರಿನ ಹಿರಿಯರೊಂದಿಗೆ ಹೋಗಿ ನೋಡಿದಾಗ ಶಿರಸಿಯ ಕೆರೆಯಲ್ಲಿ ಪೆಟ್ಟಿಗೆಯ ದೇವಿ ದೊರೆತಳು ಎಂಬುದು ಒಂದು ಕಥೆಯಾದರೆ ಇನ್ನೊಂದು ಕಥೆ ಮಾರಿ ದೇವಿ ಶುದ್ಧ ಬ್ರಾಹ್ಮಣರ ಮನೆಯ ಸುಂದರ ಕನ್ಯೆಯಾಗಿದ್ದಳು. ಅನ್ಯ ಜಾತಿಯ ಹುಡುಗ ಮೋಹಿತನಾಗಿ ಬ್ರಾಹ್ಮಣ ವೇಷದಲ್ಲಿ ಬಂದು ಮಂತ್ರಗಳನ್ನು ಕಲಿತು ಆ ಕನ್ಯೆಯನ್ನು ಮದುವೆಯಾಗಿದ್ದನು. ಮಕ್ಕಳಾದ ನಂತರವೂ ಅವನಿಗೆ ತನ್ನ ಜಾತಿಯ ಅಭ್ಯಾಸದಂತೆ ಮಾಂಸಾಹಾರ ಬಿಡಲು ಆಗದೇ ಅದನ್ನು ಮಕ್ಕಳಿಗೂ ತಿನ್ನಿಸಿ ತಾನು ತಿನ್ನುವಾಗ ಮಡದಿಯ ಕೈಲಿ ಸಿಕ್ಕಿ ಬಿದ್ದು ಕ್ರೋಧಿತಳಾದ ಹೆಂಡತಿಯು ಅವನನ್ನು ಸಂಹಾರ ಮಾಡಿ ಸಾಮಾನ್ಯ ಸ್ತ್ರೀಯಿಂದ ದೇವಿಯಾದಳು ಎಂಬ ಕಥೆಯನ್ನು ಹೇಳುತ್ತಾರೆ.
ದೇವಾಲಯದಲ್ಲಿ ಕೋಣದ ರೂಪದಲ್ಲಿ ಹತನಾದ ಪತಿಯನ್ನು ಮತ್ತು ಸುಟ್ಟು ಮನೆಗೆ ಬೆಂಕಿ ಹಚ್ಚಿ ತಾನು ಕೂಡ ಆಹುತಿಯಾಗುತ್ತಾಳೆ. ಜಾತ್ರೆಯ ಸಮಯದಲ್ಲಿ ಕೂಡ ಇದಕ್ಕೆ ವಿಶೇಷ ವಿಧಿ ವಿಧಾನಗಳಿವೆ 8 ದಿನ ವೈಭವದಿಂದ ಪೂಜೆಯಾದ ನಂತರದಲ್ಲಿ 9ನೇ ದಿನ ಕೋಣ ಬಲಿಯನ್ನು ನೀಡಿ ಚಪ್ಪರಕ್ಕೆ ಬೆಂಕಿಯನ್ನು ಹಚ್ಚುವ ಪದ್ಧತಿ ಇತ್ತು. ಸ್ವಾತಂತ್ರ್ಯದ ನಂತರ ಕೋಣ ಬಲಿಯ ಬದಲು ಬೂದುಗುಂಬಳ ಒಡೆಯುವ ಪದ್ಧತಿ ಬೆಳೆದಿದೆ. ಇದಕ್ಕೆ ಮಹಾತ್ಮ ಗಾಂಧಿಯವರು ಇಲ್ಲಿ ಭೇಟಿ ನೀಡಿದ್ದರು. ಅವರ ಅಹಿಂಸೆಯ ಪ್ರಭಾವದಿಂದ ಈ ಕೋಣಬಲಿ ಪದ್ಧತಿಯು ರದ್ದಾಯಿತೆಂದು ಹೇಳುತ್ತಾರೆ.
ದೇಶ ವಿದೇಶಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಶಿರಸಿ ಮಾರಿಕಾಂಬಾ ದೇವಾಲಯವನ್ನು ಸಂದರ್ಶಿಸಿ ಅವಳ ಕೃಪೆಗೆ ಪಾತ್ರರಾಗುತ್ತಾರೆ.
- ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ