ಕಾರ್ಕಳ: ರೋಟರಿ ಕ್ಲಬ್, ನಿಟ್ಟೆ ಮತ್ತು ಸೈಬರ್ ಸೆಕ್ಯುರಿಟಿ ವಿಭಾಗ, ಎನ್ಎಂಎಎಂಐಟಿ, ನಿಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ 21 ರಿಂದ 25 ಅಕ್ಟೋಬರ್ ವರೆಗೆ ಸೈಬರ್ ಸೆಕ್ಯುರಿಟಿ ಜಾಗೃತಿ ಮತ್ತು ಅರಿವಿನ ಸಪ್ತಾಹವನ್ನು ಆಯೋಜಿಸಲಾಗಿತ್ತು. ಇದರ ಸಮಾರೋಪ ಸಮಾರಂಭ ಅಕ್ಟೋಬರ್ 25ರಂದು ಅತ್ತೂರಿನ ಸೈಂಟ್ ಲಾರೆನ್ಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದ ಉದ್ದೇಶವು ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿಯ ಮಹತ್ವವನ್ನು ತಿಳಿಸಿಕೊಡುವುದು ಮತ್ತು ಸುರಕ್ಷಿತ ಆನ್ಲೈನ್ ನಡವಳಿಕೆಯನ್ನು ಉತ್ತೇಜಿಸುವುದಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನಿಟ್ಟೆ ಇದರ ಅಧ್ಯಕ್ಷರಾದ ರೊ. ಕೆ. ಸತೀಶ್ ಕುಮಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲೆ 3182 ಸಹಾಯಕ ಗವರ್ನರ್ ರೊ. ಅನಿಲ್ ದೇಸಾ, ಸೈಂಟ್ ಲಾರೆನ್ಸ್ ಬಾಸಿಲಿಕಾ ಅತ್ತೂರಿನ ಸಹಾಯಕ ಗುರುಗಳಾದ ವಂದನೀಯ ಲ್ಯಾರಿ ಪಿಂಟೋ, ಸೈಂಟ್ ಲಾರೆನ್ಸ್ ಶಿಕ್ಷಣ ಸಂಸ್ಥೆ (ಹೈಸ್ಕೂಲ್) ಅತ್ತೂರು ಇದರ ಪ್ರಾಂಶುಪಾಲ ಸುಬ್ರಹ್ಮಣ್ಯ ಉಪಾಧ್ಯಾಯ, ಸೈಂಟ್ ಲಾರೆನ್ಸ್ ಶಿಕ್ಷಣ ಸಂಸ್ಥೆ (ಪ್ರಾಥಮಿಕ ಶಾಲೆ) ಅತ್ತೂರು ಇದರ ಪ್ರಾಂಶುಪಾಲ ಪ್ರದೀಪ್ ನಾಯಕ್, ರೋಟರಿ ಕ್ಲಬ್ ನಿಟ್ಟೆ ಇದರ ಕಾರ್ಯದರ್ಶಿಯಾದ ರೊ. ಡಾ. ರಘುನಂದನ್ ಕೆ.ಆರ್., ರೋಟರಿ ಕ್ಲಬ್ ನಿಟ್ಟೆಯ ಸದಸ್ಯರೂ ಹಾಗೂ ಎನ್ಎಂಎಎಂಐಟಿಯ ಸೈಬರ್ ಸೆಕ್ಯುರಿಟಿ ವಿಭಾಗದ ಮುಖ್ಯಸ್ಥ ರೊ. ಡಾ. ರೋಷನ್ ಫೆರ್ನಾಂಡಿಸ್, ರೊ. ಜೋಕಿಮ್ ಮೆನೆಜೆಸ್ ಉಪಸ್ಥಿತರಿದ್ದರು.
ಸೈಬರ್ ಸೆಕ್ಯುರಿಟಿ ವಿಭಾಗದ ಮುಖ್ಯಸ್ಥ ಡಾ. ರೋಷನ್ ಫೆರ್ನಾಂಡಿಸ್ ಎಲ್ಲರನ್ನೂ ಸಭೆಗೆ ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾದ ಅನಿಲ್ ಡೆಸಾ ಸಪ್ತಾಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಈಗಿನ ವಿದ್ಯಮಾನಕ್ಕೆ ಸೈಬರ್ ಜಾಗೃತಿಯ ಮಹತ್ವ ಅನಿವಾರ್ಯವಾಗಿದೆ ಎಂದು ಹೇಳಿದರು. ಸೈಂಟ್ ಲಾರೆನ್ಸ್ ಬಾಸಿಲಿಕಾ ಅತ್ತೂರಿನ ಸಹಾಯಕ ಗುರುಗಳಾದ ವಂದನೀಯ ಲ್ಯಾರಿ ಪಿಂಟೋ ಮಾತನಾಡಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪೋಷಕರಿಗೂ ಆಯೋಜಿಸುವಂತೆ ಹೇಳಿದರು ಮತ್ತು ಸಪ್ತಾಹದ ಆಯೋಜನೆಗೆ ರೋಟರಿ ಕ್ಲಬ್ ನಿಟ್ಟೆಗೆ ಅಭಿನಂದಿಸಿದರು. ಅಧ್ಯಕ್ಷೀಯ
ಭಾಷಣದಲ್ಲಿ ರೋಟರಿ ಕ್ಲಬ್ ನಿಟ್ಟೆ ಇದರ ಅಧ್ಯಕ್ಷ ರೊ. ಕೆ. ಸತೀಶ್ ಕುಮಾರ್ ಸಪ್ತಾಹದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಸೈಬರ್ ಸೆಕ್ಯೂರಿಟಿ ವಿದ್ಯಾರ್ಥಿಗಳಿಗೆ ಗುರುತಿಸಿ ಅಭಿನಂದಿಸಿದರು ಮತ್ತು ಸೈಬರ್ ಸೆಕ್ಯುರಿಟಿಯ ಮಹತ್ವದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಸೈಂಟ್ ಲಾರೆನ್ಸ್ ಶಿಕ್ಷಣ ಸಂಸ್ಥೆ (ಹೈಸ್ಕೂಲ್) ಅತ್ತೂರು ಇದರ ಪ್ರಾಂಶುಪಾಲ ಸುಬ್ರಹ್ಮಣ್ಯ ಉಪಾಧ್ಯಾಯ ಎಲ್ಲರನ್ನು ವಂದಿಸಿದರು.
ಮಾಹಿತಿ ಕಾರ್ಯಾಗಾರ ಸೈಬರ್ ಸೆಕ್ಯುರಿಟಿಯ ಪರಿಚಯದೊಂದಿಗೆ ಪ್ರಾರಂಭವಾಯಿತು, ಇದರಲ್ಲಿ ಮಾಲ್ವೇರ್, ಗುರುತಿನ ಕಳ್ಳತನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವೈಫೈ ಬಳಸುವ ಮುಂಜಾಗ್ರತೆ ಮುಂತಾದ ಸೈಬರ್ ಮಹತ್ವವನ್ನು ತಿಳಿಸಿದರು. ನಂತರ, HTTPS ಬಳಕೆ, ಮಲ್ಟಿ-ಫ್ಯಾಕ್ಟರ್ ಪ್ರಾಮಾಣೀಕರಣದ ಅನುಷ್ಠಾನ ಮತ್ತು ಬಲವಾದ ಪಾಸ್ವರ್ಡ್ಗಳನ್ನು ರಚಿಸುವಂತಹ ಸುರಕ್ಷಿತ ಆನ್ಲೈನ್ ಅಭ್ಯಾಸಗಳ ಕುರಿತು ಮಾಹಿತಿಯನ್ನು ನೀಡಿದರು. ಸೈಬರ್ ಬುಲ್ಲಿಂಗ್ ಬಗ್ಗೆ ಚರ್ಚಿಸಿ, ಆನ್ಲೈನ್ ಜಾಗತಿಕ ಪ್ರಗತಿಯಲ್ಲಿ ಸುರಕ್ಷಿತ ಸಂವಹನದ ಪ್ರಾಯೋಗಿಕ ಸಲಹೆಗಳನ್ನು ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಡಾರ್ಕ್ ವೆಬ್ ಮತ್ತು ಅದರ ಕಾರ್ಯಗಳು ಹಾಗೂ ಎಚ್ಚರಿಕೆಯಿಂದ ವರ್ತಿಸುವ ಅಗತ್ಯತೆಯನ್ನು ವಿವರಿಸಲಾಯಿತು. ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸುವ ಕ್ವಿಜ್ ನಡೆಸಿ ಸರಿಯಾದ ಉತ್ತರ ಒದಗಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ರೋಟರಿ ಕ್ಲಬ್ ನೀಡಿದರು.
ಈ ಕಾರ್ಯಕ್ರಮವು 80 ಮಂದಿ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನೆರವೇರಿತು, ಮತ್ತು ವಿದ್ಯಾರ್ಥಿಗಳಲ್ಲಿ ಸೈಬರ್ ಸೆಕ್ಯುರಿಟಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ