ಸೃಷ್ಟಿಕರ್ತರ ಅಗೋಚರ ಮಮತೆ

Upayuktha
0


ನನ್ಯಾಶ್ಚಿಂತಯಂತೋ ಮಾಂ 

ಯೇ ಜನಾ: ಪರ್ಯುಪಾಸತೇ /

ತೇಷಾಂ ನಿತ್ಯಾಭಿಯುಕ್ತಾನಾಂ 

ಯೋಗ ಕ್ಷೇಮಂ ವಹಾಮ್ಯಹಮ್ //ಅ ೦೯:೨೨//


ಅನನ್ಯವಾದ ಮನಸ್ಸಿನಿಂದ ಭಕ್ತ ಜನರು ಪರಮೇಶ್ವರನಾದ ನನ್ನನ್ನು ನಿರಂತರ ಚಿಂತನೆ ಮಾಡುತ್ತಾ ಭಜಿಸುತ್ತಾರೋ  ಅಂತಹ ನಿತ್ಯಯುಕ್ತರ ಯೋಗ ಕ್ಷೇಮಗಳನ್ನು ನಾನೇ ಸ್ವಯಂ ವಹಿಸಿಕೊಳ್ಳುತ್ತೇನೆ ಎಂದು ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ.


ಮಕ್ಕಳ ಅವಶ್ಯಕತೆಗಳನ್ನು ಹೆತ್ತವರು ಪೂರೈಸುತ್ತಾರೆ. ಮಕ್ಕಳು ಆ ಬಗ್ಗೆ ಚಿಂತೆಯನ್ನು ಮಾಡುವುದಿಲ್ಲ. ಹಾಗೆಯೇ ಭಕ್ತರ ಜೀವನದಲ್ಲಿ ಲೌಕಿಕ ಅಥವಾ ಪಾರಮಾರ್ಥಿಕ ವಸ್ತುಗಳ ರಕ್ಷಣೆಗಳ ಅವಶ್ಯಕತೆ ಇದೆಯೋ ಅದನ್ನು ಭಗವಂತನೇ ನಿಶ್ಚಯವಾಗಿ ಮಾಡುತ್ತಾನೆ. ಆದರೆ ಸಮಾಜದಲ್ಲಿ  ಬೆಳೆಯುತ್ತಾ ನಮ್ಮ ಜವಾಬ್ದಾರಿಗಳನ್ನು ಅರಿಯುವ ಮನಸ್ಸು ಮಾಡಬೇಕಾಗುತ್ತದೆ. 


ನಮ್ಮ ಅನುಭವಗಳೇ ನಮಗೆ ಪಾಠ ಕಲಿಸುತ್ತವೆ. ಯಾರನ್ನು ಅತಿಯಾಗಿ ನಂಬುತ್ತೇವೆಯೋ ಅವರು ಕೆಲವೊಮ್ಮೆ ನಮ್ಮ ಸಹಾಯವನ್ನು ಮಾತ್ರ ಬಯಸುತ್ತಿರುತ್ತಾರೆ. ಇತರೇ ಸಮಯಗಳಲ್ಲಿ ಅಪರಿಚಿತರಂತೆ ಇದ್ದುಬಿಡುತ್ತಾರೆ. ರಕ್ತ ಸಂಬಂಧಿಕರಲ್ಲಂತೂ ಇದು ತೀರಾ ಸಾಮಾನ್ಯ. ತಮಗೆ ತೊಂದರೆಯಾದಾಗ ಮಾತ್ರ ಪರಿಹಾರ ಕೇಳುವ ಸಣ್ಣ ಮನಸ್ಸಿನವರಾಗಿರುತ್ತಾರೆ. ಹಾಗಾಗಿ ಪಾಠಗಳೆಂದರೆ ಹಾಗೆ. ನಿರೀಕ್ಷೆ ಇಲ್ಲದೇ ಬರುವ ಮಳೆಯಂತೆ ಅಥವಾ ಹಿಂದೆಲ್ಲಾ ನೆಂಟರು ಮನೆಗೆ ಬರುವಂತೆಯೇ ಹೌದು. ಈಗಲಾದರೋ ಫೋನಾಯಿಸಿ ಬರುವುದು ಕ್ರಮ. ಆದರೂ ಪುರುಸೊತ್ತಿಲ್ಲ. ಬಂಧು ಜನ ಪ್ರೀತಿಯನ್ನು ನೆನೆದು ಭಗವಂತನನ್ನು ಕಾಣಬೇಕು. ಆಗ ಎಲ್ಲರ ಮನಸ್ಸು ಮಾರ್ದವವಾಗುವುದು. 

 

ಹಿಡಿಸೂಡಿ, ಮೈಪುಸೂಡಿ ಎಂದೆಲ್ಲ ಕರೆಸಿಕೊಳ್ಳುವ ಪೊರಕೆ ಶುದ್ಧತೆಯ ಶ್ರೇಷ್ಠ ವಸ್ತುವೇ ಆಗಿದೆ. ಅದಿಲ್ಲದೆ ಮನೆ, ಅಂಗಳ, ವಠಾರದ ಬೀದಿಗಳ ಸ್ವಚ್ಛತೆ ಕಾಪಾಡಲಾಗದು. ಹನಿ ಹನಿ ಗೂಡಿ ಹಳ್ಳ ಎಂಬಂತೆಯೇ ಒಂದೊಂದು ಕಡ್ಡಿಯು ಸೇರಿ ಪೊರಕೆಯಾಗುವುದು. ಇಲ್ಲವಾದಲ್ಲಿ ಅದುವೇ ಕಸದಂತೆ ಕಾಣುವುದು. ಈ ಪೊರಕೆಯು ರಕ್ಷಣೆಯೂ ಹೌದು. ಜಿರಳೆ,ಜೇಡ,ಇರುವೆಗಳ ಮುಕ್ತಿಗೂ ಇದು ಉಪಯೋಗವಾಗಿದೆ. ಅನೇಕ ಸಲ  ಜಿರಳೆಯನ್ನು ಕಂಡಾಗ ಹೆದರಿ ಓಡುವವರು ಇದ್ದಾರೆ. ಆದರೆ ಕೈಯಲ್ಲಿ ಪೊರಕೆ ಇದ್ದರೆ ಆತ್ಮಸ್ಥೈರ್ಯ ಹೆಚ್ಚುತ್ತದೆ! ಹೇಗೆ ಸೂರ್ಯನ ಕಿರಣಗಳು ಮರದ ಎಲೆಗಳನ್ನೆಲ್ಲಾ ತೂರಿ ಬಂದು ಬೆಳಕು ಚೆಲ್ಲುತ್ತವೆಯೋ ಅದೇ ರೀತಿ ಪೊರಕೆ ಮನೆ  ಮನೆಯ ಮೂಲೆ ಮೂಲೆಯನ್ನು ಪ್ರವಹಿಸಿ ಅಲ್ಲಿರುವ ಕಸ ಕಡ್ಡಿಗಳನ್ನು ಈಚೆಗೆ ತಂದು ಅನಾವರಣಗೊಳಿಸುತ್ತವೆ. ಆದರೆ ಈ ಮನಸ್ಸಿನ ಮೂಲೆ ಮೂಲೆಯನ್ನು ಹುಡುಕುತ್ತ ಸ್ವಚ್ಛಗೊಳಿಸುವುದು ಹೇಗೆ? 


ಕೆಟ್ಟ ಆಲೋಚನೆಗಳನ್ನು ತ್ಯಜಿಸುವುದು ದಿನ ದಿನದ ಪಾಠವಾಗಬೇಕು. ಆಗ ಮನಸ್ಸೆಂಬ ಕಲಿಕೆಯು ನಿಧಾನವಾಗಿ ಅರಿವಿನ ಚಿಂತನೆಗಳನ್ನು ಕೈ ಹಿಡಿಯುತ್ತದೆ. ಒಳ್ಳೆಯ ಬದುಕನ್ನು ಹೆಮ್ಮರವಾಗಿಸಲು ಅಂತರಾತ್ಮವನ್ನು ಪ್ರತಿನಿಧಿಸಬೇಕು. ಕಾಮ, ಕ್ರೋಧ, ಲೋಭ, ಮೋಹ, ಮತ್ಸರಗಳೆಂಬ  ಮುಷ್ಟಿಯನ್ನು ಬಿಗಿಹಿಡಿದು ಹೋರಾಡಬೇಕು. ಆಗ ಪ್ರೀತಿ, ಸಹನೆ, ತಾಳ್ಮೆ, ವಿನಯ, ಬುದ್ಧಿಯೆಂಬ ಮುಷ್ಟಿ ಕೈ ಹಿಡಿಯುತ್ತದೆ. ಮನಸ್ಸು ಕಸಿವಿಸಿಗೊಂಡಾಗ, ಗಲಿಬಿಲಿಗೊಂಡಾಗ ಹೆಚ್ಚು ಮಾತಾಡದೇ ಇರುವುದು ಸೂಕ್ತ. ಆಗ ಮೌನವೇ ಅರ್ಧ ಸಮಸ್ಯೆಯನ್ನು ಪರಿಹರಿಸುತ್ತದೆ. ಇನ್ನರ್ಧ ಕಾಲವೇ ನಿವಾರಿಸಿಬಿಡುತ್ತದೆ. ಸಿಟ್ಟುಗೊಂಡಾಗ ಯಾರನ್ನೋ ಅತಿಯಾಗಿ ಬೈಯುವುದು, ಆಗ ಎದುರು ನಿಂತವರು ಅವರ ಭಾವನೆಗಳನ್ನು ಹತ್ತಿಕ್ಕಲಾಗದೇ ಪ್ರತಿಯಾಗಿ ಬೈಯುವುದು, ಕಲಹಗಳೇರ್ಪಟ್ಟು ದ್ವೇಷ ಸಾಧಿಸುವುದು ಮುಷ್ಟಿಯ ಸಡಿಲತೆಯನ್ನು ತೋರಿಸುತ್ತದೆ. 


ಸ್ನೇಹವೆಂದರೆ ಅಲ್ಲಿ ವಿನಯ, ಸಹಬಾಳ್ವೆ, ಅಂತಃಕರಣ, ಮಮಕಾರ ತುಂಬಿರುತ್ತದೆ. ಕುಚೇಲ ತನ್ನ ಬಾಲ್ಯ ಸ್ನೇಹಿತ ಕೃಷ್ಣ ಪರಮಾತ್ಮನಿಗೆ ಒಂದು ಮುಷ್ಟಿ ಅವಲಕ್ಕಿಯನ್ನು ನೀಡಿ ಸಾರ್ಥಕತೆಯನ್ನು ಹೊಂದಿದ ಅಥವಾ ಪಡೆದಂತಹ ಬಾಳು ಪರಿಶುದ್ಧವಾದ ಮನಸ್ಸನ್ನು ಎತ್ತಿ ತೋರಿಸುತ್ತದೆ. ಅಂತಹ ಪರಿಶುದ್ಧವಾದ ಮನಸ್ಸು ಎಲ್ಲರಲ್ಲಿಯೂ ಬರಬೇಕು. ಈ ಜಗತ್ತು ಪರಮಾತ್ಮನ ಅಧೀನದಲ್ಲಿದೆ. ಆದರೆ ಮನುಜರು ನಾವೇ ದೇವರು ಅನ್ನುವ ಧೋರಣೆಯಿಂದ ವರ್ತಿಸುತ್ತ ಬದುಕು ನಡೆಸುತ್ತಾರೆ. ಪರಮಾತ್ಮನ ಭಿಕ್ಷೆ ಈ ಜೀವ- ಜೀವನ. ಆತ್ಮ ಪರಮಾತ್ಮ ಸಂಪನ್ನಗೊಂಡಾಗ ಬದುಕು ಶ್ರೇಷ್ಠ ವಾಗುತ್ತದೆ. ಉಳಿದಂತೆ ಏನೇ ಚಿಂತೆಗಳು ಒಳಗಿನ ಮಾಯಜಾಲವೇ ಆಗಿರುತ್ತದೆ. ಬದುಕನ್ನು ಬಂದಂತೆ ಸ್ವೀಕರಿಸುವುದು. ಪರಮಾತ್ಮನಲ್ಲದೇ ನಮ್ಮಿಂದ ಒಂದು ಹುಲ್ಲು ಕಡ್ಡಿಯನ್ನೂ ಅಲುಗಾಡಿಸಲಾಗದು. ಬದುಕನ್ನು ಎತ್ತರಗೊಳಿಸಲು ನಿರ್ವಿಕಾರ, ನಿರಾಕಾರನಾದ ಆತ್ಮ- ಪರಮಾತ್ಮ ಸಂಯೋಗದಿಂದ ಮಾತ್ರ ಸಾಧ್ಯ. 


ತಾಯಿ, ತಂದೆ ತಮ್ಮ ಮಗುವನ್ನು, ಮಕ್ಕಳನ್ನು ಹೇಗೆ ಪ್ರೀತಿಯಿಂದ ಬೆಳೆಸುವರೋ ಅದೇ ರೀತಿ ಈ ಆತ್ಮವನ್ನು ಪರಮಾತ್ಮ ಸಲಹುತ್ತಿರುವರು. ತಾಯಿ- ತಂದೆ, ವಿದ್ಯೆ ಕಲಿಸಿದ ಗುರು, ಹಿತಚಿಂತಕರು ನಮ್ಮೊಳಗಿನ ಅರಿವಿಗೆ ದೀಪ ಹಚ್ಚಿ ಬೆಳಕಾದವರು. ಇವರುಗಳ ಮುಖೇನ ಈ ಭೂಮಿಯ ಮೇಲೆ ಒಂದು ಬಿಂದುವಿಗಿಂತಲೂ ಕನಿಷ್ಠರಾಗಿ ಬದುಕು ನಡೆಸಲು ಆ ದೇವರು ನಮಗೆ ಅವಕಾಶ ನೀಡಿದ್ದಾರೆ. ಆ ಬಿಂದುವನ್ನು ಸಿಂಧುವಾಗಿ ಮಾಡುವುದು ನಮ್ಮ ಒಳ್ಳೆಯ ಯೋಚನೆಗಳಿಂದ ಮಾತ್ರ ಸಾಧ್ಯವಾಗುವುದು.


ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಮಾನವೀಯತೆ ಜೀವನ ಪರ್ಯಂತ ಇರುತ್ತದೆ, ಇರತಕ್ಕದ್ದು. ಅದನ್ನು ಬೆಳೆಸುತ್ತಾ ಮಾನವ ತತ್ವವನ್ನು ಶ್ರೇಷ್ಠವಾಗಿಸಿಕೊಳ್ಳಬೇಕು. ಹರಿಯುವ ನೀರು ತನ್ನೊಂದಿಗೆ ಕೊಳೆ, ಕಶ್ಮಲಗಳನ್ನು ಎಲ್ಲವನ್ನೂ ಸಾಗಿಸುತ್ತಾ ಮುನ್ನಡೆಯುತ್ತದೆ. ಮನಸ್ಸೆಂಬ ಈ ನೀರೂ ಕೂಡಾ ತನ್ನಲ್ಲಿನ ಕೊಳೆ ಕಶ್ಮಲಗಳನ್ನು ಹರಿಯ ಬಿಡಬೇಕು. ಆಗಲೇ ಸ್ವಚ್ಛತೆಯ ಅಗೋಚರ ಸೊತ್ತು ಕಾಣಲು ಸಾಧ್ಯವಾಗುತ್ತದೆ. 


ಸ್ವಚ್ಛವೆಂದರೆ ಅಂಗಳಕ್ಕೆ ಇಂಟರ್ಲಾಕ್ ಹಾಕಿ ಕಾಲಿಗೆ ಮಣ್ಣಾಗದ ರೀತಿ ನೋಡಿಕೊಳ್ಳುವುದಲ್ಲ. ಮಣ್ಣಿನೊಂದಿಗೆ ಇರುವ ಆ ಹುಲ್ಲುಗಳೊಂದಿಗೆ ಹೊಂದಾಣಿಕೆ ನಡೆಸುತ್ತಾ ಬೆಳೆಯುವ ಪರಿ. ಅದಕ್ಕೆ ದೊಡ್ಡ ಮರವೇ ಬೇಕಾಗಿಲ್ಲ. ಹಸಿರ ಸೆಲೆಯ ಆಕರ್ಷಣೆ ನಾರಿ ಹಸಿರು ಸೀರೆಯುಟ್ಟು ಕಂಗೊಳಿಸುವಂತೆ, ಭೂಮಿಯ ಮಣ್ಣು ಕರಗಿ ಹೋಗದ ರೀತಿಯಲ್ಲಿ ಸಣ್ಣ ಸಣ್ಣ ಹುಲ್ಲಿನಂತಹ ಸಸಿಗಳು ಕಾಪಾಡುತ್ತವೆ. ಅದರ ಸ್ಪರ್ಶಕ್ಕೆ ಕಾಲುಗಳು ಹಿತವಾದ ಸೋಜಿಗವನ್ನು ಅನುಭವಿಸುತ್ತವೆ. ಇದುವೇ ತಂಪಾದ ತಾಯಿ ಮಮತೆಯೆಂದರೂ ತಪ್ಪಾಗದು. ತಾಯಿ ಮನಸ್ಸಿನ ಎಲ್ಲಾ ಶಿಕ್ಷಕರಿಗೂ ನಮನಗಳು. 


- ಮಲ್ಲಿಕಾ ಜೆ ಆರ್ ರೈ ಪುತ್ತೂರು    

ಅಂಕಣಕಾರರು, ಕವಯಿತ್ರಿ             

ಅಧ್ಯಕ್ಷರು, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top