ಮಂಗಳೂರು: ಸ್ವಚ್ಚತೆ ಎನ್ನುವುದು ತಾಯಿ ಭಾರತಾಂಬೆ ಹಾಗೂ ಭಗವಂತನ ಸೇವೆಯಾಗಿದ್ದು ಇದು ನಮ್ಮೆಲ್ಲರ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರಬೇಕು ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಕರೆ ನೀಡಿದ್ದಾರೆ.
ಸ್ವಚ್ಛ ಭಾರತ ಅಭಿಯಾನದ 10ನೇ ವಾರ್ಷಿಕೋತ್ಸವದ ಪ್ರಯುಕ್ತ ದೇಶದೆಲ್ಲೆಡೆ ನಡೆಯುತ್ತಿರುವ ಸ್ವಚ್ಚತಾ ಹೀ ಸೇವಾ ಅಭಿಯಾನದಡಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್)ಯ ಮಂಗಳೂರು ಘಟಕದಲ್ಲಿ ಇಂದು ನಡೆದ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತನಾಡಿದ ಅವರು, " ಭಾರತೀಯ ಸಂಸ್ಕೃತಿಯಲ್ಲಿ ಸೇವೆ ಮತ್ತು ತ್ಯಾಗಕ್ಕೆ ತನ್ನದೇ ಮಹತ್ವವಿದೆ. ಹೀಗಾಗಿ ನಾವೆಲ್ಲರೂ ಸ್ವಚ್ಚತೆ ಸೇವೆಯನ್ನು ವ್ರತದಂತೆ ಸ್ವೀಕರಿಸಬೇಕು. ಇದು ಒಂದು ದಿನದ ಅಭಿಯಾನಕ್ಕೆ ಮಾತ್ರ ಸೀಮಿತವಾಗಬಾರದು. ಯಾವುದೋ ಒಂದು ಸಂಸ್ಥೆ ಅಥವಾ ವ್ಯವಸ್ಥೆ ಭಾಗವಾಗಿದ್ದಾಗ ನಾವು ಸ್ವಚ್ಚತೆಯನ್ನು ಸೇವೆ ರೂಪದಲ್ಲಿ ಮಾಡುವುದನ್ನು ವೈಯಕ್ತಿಕವಾಗಿಯೂ ಹೆಚ್ಚು ಬದ್ಧತೆಯಿಂದ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಥವಾ ದೇಶದ ಯಾವುದೇ ಭದ್ರತಾ ಪಡೆಯ ಸೈನಿಕನನ್ನು ಜನಸಾಮಾನ್ಯರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ಹೀಗಾಗಿ ಸೈನಿಕರೂ ಇಡುವ ಪ್ರತಿ ಹೆಜ್ಜೆಯೂ ಜನರಿಗೆ ಸ್ಪೂರ್ತಿಯಾಗುವಂತೆ ಇರಬೇಕು. 10 ವರ್ಷಗಳ ಹಿಂದೆ 2014ರ ಅ.2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ್ದ ಸ್ವಚ್ಛ ಭಾರತ ಅಭಿಯಾನವನ್ನು ಸೇವೆ ರೂಪದಲ್ಲಿ ಮಾಡಬೇಕು ಎಂದು ಕ್ಯಾ. ಚೌಟ ತಿಳಿಸಿದ್ದಾರೆ.
ಶಾಸಕರಾದ ಉಮಾನಾಥ ಕೋಟ್ಯಾನ್, ಸೀನಿಯರ್ ಕಮಾಂಡೆಂಟ್ ವೀರೇಂದ್ರ ಮೋಹನ್, ಡೆಪ್ಯೂಟಿ ಕಮಾಂಡೆಂಟ್ ಎಸ್ ಎಮ್ ಮೈಟೈ, ಸನತ್ ಕುಮಾರ್ ಶೆಟ್ಟಿ, ಭದ್ರತಾ ಸಿಬ್ಬಂದಿಗಳು ಮತ್ತು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ