ಲೇಖಾ ಲೋಕ-16: ಸಮಾಜ ಸೇವಾ ಧುರೀಣ ಡಾ. ಹೆಚ್. ಸುದರ್ಶನ್

Upayuktha
0


ಡಾ॥ ಹನುಮಪ್ಪ ಸುದರ್ಶನ್ ಕನ್ನಡ ನಾಡಿನ ಸಮಾಜ ಸೇವಾಸಕ್ತರಾಗಿ, ಆದಿವಾಸಿಗಳ ಹಕ್ಕು ಹೋರಾಟಗಾರರಾಗಿ, ವೈದ್ಯಕೀಯ ನೆರವು ನೀಡುವ  ಮಹನೀಯರು. ಚಾಮರಾಜನಗರ ಜಿಲ್ಲೆಯ, ಬಿಳಿಗಿರಿರಂಗನ ಬೆಟ್ಟದ ಸೋಲಿಗರ, ಕಾಡು ಜನರ ಬುಡಕಟ್ಟಿನ ಸರ್ವಾಂಗೀಣ ಏಳಿಗೆಗೆ, ಶ್ರಮ ವಹಿಸಿ, ಪದ್ಮಶ್ರೀ, ಮತ್ತು 'ರೈಟ್ ಲೈವ್ಲಿಹುಡ್ ಅವಾರ್ಡ್' ಪ್ರಶಸ್ತಿ ಪಡೆದ ಸಾಧಕರು.

 

ಕರ್ನಾಟಕದ, ಬೆಂಗಳೂರು ಹತ್ತಿರವಿರುವ ಯೆಮಲೂರು ಗ್ರಾಮದಲ್ಲಿ, ತಾ॥ 30-12-1950 ರಂದು ಜನಿಸಿದರು. ವೃತ್ತಿಯಲ್ಲಿ ವೈದ್ಯರಾಗಿ, ಸಾಮಾಜಿಕ  ಸೇವೆ ಮಾಡುತ್ತಾ, ಅನೇಕ ಸೋಲಿಗರಿಗೆ ಅಭಯಹಸ್ತ ನೀಡುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ, ಆದಿವಾಸಿಗಳ ಹಕ್ಕುಗಳ ಹೋರಾಟಗಾರರಾಗಿ,   ಗಾಂಧೀಜಿಯವರ ಅನುಯಾಯಿಯಾಗಿ, ಸದಾ ಕ್ರಿಯಾಶೀಲರಾಗಿರುವ ಮಹನೀಯರು.


ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆದು, 1973 ರಿಂದ ವೈದ್ಯಕೀಯ ವೃತ್ತಿ ಪ್ರಾರಂಭಿಸಿದರು. ಇಗ್ನೋ ಪ್ರೋಫೆಸರ್ ಆಗಿ ಸೇವೆಯನ್ನು ಸಲ್ಲಿಸಿದ್ದಾರೆ. ಮೆಡಿಕಲ್ ಪದವಿ ಪಡೆದ ಮೇಲೆ, ರಾಮಕೃಷ್ಣ ಮಿಷನ್ ನ ವೈದ್ಯಕೀಯ ಕೇಂದ್ರ ಸೇರಿ, ಉತ್ತರ ಪ್ರದೇಶದ ಹಿಮಾಲಯ, ಪಶ್ಚಿಮ ಬಂಗಾಳದ ಬೇಲೂರು ಮಠ, ಕನಾ೯ಟಕದ ಪೊನ್ನಂಪೇಟೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಗರದಲ್ಲಿ ವೈದ್ಯ ವೃತ್ತಿ ಮಾಡುವ ಬದಲು 1980ರಿಂದ ಆದಿವಾಸಿಗಳ, ಬುಡಕಟ್ಟು ಜನರ ಸೇವೆ  ಮಾಡಲು ಪ್ರಾರಂಭಿಸಿದರು. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಬುಡಕಟ್ಟು ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಸ್ಥಾಪಿಸಿದರು. ಅರುಣಾಚಲಪ್ರದೇಶ ಮತ್ತು ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಕೇಂದ್ರ "ಕರುಣಾ ಟ್ರಸ್ಟ್"ಗೆ, ಸ್ಥಾಪಕರಾಗಿ, ಗೌರವ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದಾರೆ. ಡಾ॥ ಸುದರ್ಶನ್ ಅವರು ವಿಶ್ವ ಆರೋಗ್ಯ ಕೇಂದ್ರದ ಸದಸ್ಯರಾಗಿರುವುದು ವಿಶೇಷ.  


ಮಹಾತ್ಮಾಗಾಂಧೀಜಿಯವರ, ಸ್ವಾಮಿ ವಿವೇಕಾನಂದರ ಆದರ್ಶಗಳು, ಬುಡಕಟ್ಟು ಜನರ, ಸೋಲಿಗರ ಅಭಿವೃದ್ಧಿಗೆ, ಶ್ರಮಿಸಲು ತಮಗೆ, ಸಮಾಜ ಸೇವೆ ಮಾಡಲು ಪ್ರಭಾವ ಬೀರಿದೆಯೆಂದು ತಿಳಿಸಿ ಹೇಳಿದ್ದಾರೆ. ಗಾಂಧೀಜಿಯವರ ತತ್ವಗಳನ್ನು, ಗ್ರಾಮೀಣ ಅಭಿವೃದ್ಧಿಗೆ ಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಪ್ರಸಿಧ್ಧ ಕವಿಯಾದ ಶೌನಕ್ ಚಕ್ರಬರ್ತಿ ಇವರ  ತತ್ವಗಳಿಗೆ ಸಾಮಾಜಿಕ ಕಾಯ೯ಗಳಿಗೆ ಮನಸೋತು ತಾವು 30-7-2019 ರಂದು ಡಾ॥  ಸುದರ್ಶನ್ ಅವರ ಹೆಸರಿನಲ್ಲಿ "ಸುದಶ೯ನ್ ಆರ್ಮಿ' ಸ್ಥಾಪಿಸಿದರು.

ಸುದರ್ಶನ್ ಸ್ಥಾಪಿಸಿದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ "ಪ್ರಮುಖವಾಗಿ ಬುಡಕಟ್ಟು ಜನರ, ಸೋಲಿಗರ ಆರೋಗ್ಯ, ಶಿಕ್ಷಣ, ಜೀವನೋಪಾಯದ ಭದ್ರತೆ, ಮತ್ತು ನಾನಾ ಜೈವಿಕ ವೈವಿಧ್ಯಗಳ ಸಂರಕ್ಷಣೆಯ ಆಶಯವಾಗಿದೆ. 1981 ರಿಂದ ಪ್ರಾರಂಭವಾದ, ಈ ಕೇಂದ್ರ, ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಜನರ, ಹಾಗೂ ತಮಿಳುನಾಡು, ಅರುಣಾಚಲ ಪ್ರದೇಶ, ಅಂಡಮಾನ್ ನಿಕೋಬಾರ್ ದ್ವೀಪಗಳ ಜನರ ಮಧ್ಯೆ ಪರಸ್ಪರ ಸ್ಪಂದಿಸುವ ಪ್ರಭಾವ ಬೀರುವಂತಾಗಿದೆ. ಈ ಕೇಂದ್ರ, ಸುಮಾರು 450 ಬುಡಕಟ್ಟು ಮಕ್ಕಳ ಶಾಲೆ ಪ್ರಾರಂಭಿಸಿ, ನಗರದಲ್ಲಿ ದೊರೆಯುವ ಶಿಕ್ಷಣದಂತೆ, ಇಲ್ಲಿಯೂ ಅದೇ ರೀತಿ ಸೌಲಭ್ಯಗಳನ್ನು ನೀಡುತ್ತಿದೆ. ಪರಿಸರ ಸಂರಕ್ಷಣೆ, ಗಿರಿಜನರ ಮೌಲ್ಯಗಳು, ಸಂಸ್ಕೃತಿ ಪಾಠಗಳಲ್ಲಿ ವಿವರಿಸಿದೆ. 16 ಕುಶಲ ಕರ್ಮದ ಕೇಂದ್ರಗಳನ್ನು ಸ್ಥಾಪಿಸಿದೆ. ಇದರ ಸಹಾಯದಿಂದ ವರ್ಷದಲ್ಲಿ 300 ದಿವಸ ಶೇಕಡಾ 60ರಷ್ಟು ಸೋಲಿಗರು ನೌಕರಿಯನ್ನು, ಅರಣ್ಯ ಇಲಾಖೆಯಿಂದ ಮತ್ತುಇನ್ನಿತರ ಬೇರೆ  ಸಂಸ್ಥೆಗಳಿಂದ ಪಡೆಯುತ್ತಿದ್ದಾರೆ. ಕುಷ್ಠರೋಗ ನಿವಾರಣೆಗೆ ಯಳಂದೂರು ತಾಲ್ಲೂಕಿನಲ್ಲಿ ಕರುಣಾಟ್ರಸ್ಟ್ ಕೆಲಸ ಮಾಡುತ್ತಾ ಅಲ್ಲಿನ ಜನರ ಸಮಗ್ರ  ಅಭಿವೃದ್ಧಿ ಮತ್ತು ಶಿಕ್ಷಣ ದೊರಕಿಸಿ ಸಹಾಯ ಮಾಡುತ್ತಾ ಇದೆ. ಈ ಜಿಲ್ಲೆಯಲ್ಲಿ ಮತ್ತು ಅರುಣಾಚಲ ಪ್ರದೇಶದಲ್ಲಿ, 72 ಪ್ರೈಮರಿ ಹೆಲ್ತ್ ಕೇಂದ್ರಗಳನ್ನುಕರುಣಾ ಟ್ರಸ್ಟ್ ಮೂಲಕ ನಡೆಸುತ್ತಾ ಇದೆ.


ಡಾ॥ ಸುದರ್ಶನ್ ಅವರು ಕರ್ನಾಟಕ ಸರಕಾರದ ಪ್ರೈಮರಿ ಹೆಲ್ತ್ ಮತ್ತು ಕುಟುಂಬ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿ, ಹಲವಾರು ಸ್ಥಾನಮಾನ ಗಳನ್ನು ಹೊಂದಿದ್ದರು. ಕರ್ನಾಟಕ ಲೋಕಾಯುಕ್ತಕ್ಕೆ ವಿಜಿಲೆನ್ಸ್ ಡೈರೆಕ್ಟರ್ ಆಗಿ ಸಹ ಕೆಲಸ ಮಾಡಿದ್ದಾರೆ. ಇದರ ನೆರವಿನಿಂದ ಅನೇಕ ಬಾರಿ ಹಲವಾರು ಸರಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ, ಹಠಾತ್ ಶೋಧ ನಡೆಸಿ ಜನ ಮೆಚ್ಚುಗೆಗೆ ಪಾತ್ರರಾದರು.


ರೈಟ್  ಲೈವ್ಲಿಹುಡ್ ಪ್ರಶಸ್ತಿ, (1994) ಪದ್ಮಶ್ರೀ, ಕರ್ನಾಟಕ ರಾಜ್ಯೋತ್ಸವ  ಪ್ರಶಸ್ತಿ, ಅಶೋಕ ಫೆಲೋ, ಮದರ್ ಥೆರೆಸಾ ಪ್ರಶಸ್ತಿಗೆ ಡಾ॥ ಸುದರ್ಶನ್ ಭಾಜನರಾಗಿ ಸನ್ಮಾನಿಸಲಾಯಿತು.

  

ಕನ್ನಡ ನಾಡಿನ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಜನರ, ಸೋಲಿಗರ ಅಭ್ಯುದಯ, ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಡಾ॥ ಹೆಚ್.  ಸುದರ್ಶನ್ ಅವರು ಎಲ್ಲಾ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top