ಸಾಧನೆಯ ಪಥದ ಕರ್ಮಯೋಗಿ- ನಮ್ಮ ಕುಮಾರಣ್ಣ

Upayuktha
2 minute read
0


ಗುಂಪೆ ವಲಯದ ಎಲ್ಲರಿಗೂ 'ಕುಮಾರಣ್ಣ' ಎಂದೇ ಪರಿಚಿತರಾದ, ಕೇರಳ ಸರಕಾರದ ವಿದ್ಯುತ್ ಇಲಾಖೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ, ಪ್ರಸ್ತುತ ಗುಂಪೆ ವಲಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವ, ಸದಾ ಹಸನ್ಮುಖದ, ಆತ್ಮೀಯ ವರ್ತನೆಯ ಕೊಂದಲಕಾಡು ಕುಮಾರ ಸುಬ್ರಹ್ಮಣ್ಯ ಅವರು ವೃತ್ತಿ ಜೀವನದಿಂದ ನಿವೃತ್ತಿಗೊಳ್ಳಲಿರುವ ಸಂದರ್ಭದಲ್ಲಿ ಅವರ ಜೀವನದ ಸಾಧನೆಯ ಪಥದ ಒಂದು ಕಿರುಪರಿಚಯ.


ಎಡಕ್ಕಾನ ಮನೆತನದ ಕೊಂದಲಕಾಡು ರಾಮ ಭಟ್, ಸಾವಿತ್ರಿ ದಂಪತಿಗಳ ಪುತ್ರರಾದ ಇವರು ಬಾಲ್ಯ ಜೀವನವನ್ನು ಬಡತನದಲ್ಲಿಯೇ ಕಳೆದವರು.


ಎಸ್.ಎಸ್.ಎಲ್. ಸಿ.ಯ ನಂತರ ಕೇರಳದ ಕಣ್ಣೂರಿನಲ್ಲಿ ಇಲೆಕ್ಟ್ರಿಕಲ್ ಡಿಪ್ಲೋಮಾ ಮುಗಿಸಿದ ಅವರು ತಮ್ಮ ವಿದ್ಯಾಭ್ಯಾಸ ಜೀವನದ ಸಂಕಷ್ಟದ ಸಂದರ್ಭದಲ್ಲಿ ಸಹಕಾರ ನೀಡಿದ ದಿ. ದೇವಕಾನ ಕೃಷ್ಣ ಭಟ್ ಅವರು ಪ್ರಾತಃ ಸ್ಮರಣೀಯರು' ಎಂದು ಜ್ಞಾಪಿಸಿಕೊಳ್ಳುತ್ತಾರೆ.


1997 ಫೆಬ್ರವರಿ ತಿಂಗಳಲ್ಲಿ ಕೇರಳ ವಿದ್ಯುತ್ ಇಲಾಖೆಗೆ PSC (ಸಾರ್ವಜನಿಕ ಸೇವಾ ಆಯೋಗ) ಮೂಲಕ ಆಯ್ಕೆಯಾದ ಇವರು ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ಕಾಸರಗೋಡು ವಿಭಾಗದಲ್ಲಿ ಮೀಟರ್ ರೀಡರ್ ಆಗಿ ಪ್ರಾರಂಭಿಸಿದರು.


ಕಾಸರಗೋಡು ಹಾಗೂ ನೆಲ್ಲಿಕುಂಜೆಯಲ್ಲಿ ಒಂದೊಂದು ವರ್ಷಗಳ ವೃತ್ತಿ ಜೀವನದ ನಂತರ 1999 ರಿಂದ 2005ರ ವರೆಗೆ ಕುಂಬಳೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಇವರು 2005ರಲ್ಲಿ ಸಬ್ ಇಂಜಿನಿಯರ್ ಆಗಿ ಭಡ್ತಿ ಹೊಂದಿದರು.


2010 ರಲ್ಲಿ ಉಪ್ಪಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಇವರು ಇದೇ ವರ್ಷದಲ್ಲಿ ನೂತನವಾಗಿ ಆರಂಭವಾದ ಪೈವಳಿಕೆ ವಿದ್ಯುತ್ ವಿಭಾಗದಲ್ಲಿ ಸಬ್ ಇಂಜಿನಿಯರ್ ಆಗಿ ನಿಯುಕ್ತಿಗೊಂಡು 2017ರ ವರೆಗೆ ಅಲ್ಲಿಯೇ ಮುಂದುವರಿದರು.

 

ಮುಂದೆ ಪೆರ್ಲದಲ್ಲಿ ಒಂದು ವರ್ಷ ಕಾರ್ಯ ನಿರ್ವಹಿಸಿದ ಇವರು ಮರಳಿ ಪೈವಳಿಕೆ ವಿಭಾಗಕ್ಕೆ ಬಂದು 2020 ರ ವರೆಗೂ ಸಬ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಈ ನಡುವೆ ಅನೇಕ ಬಾರಿ ಸಹಾಯಕ ಇಂಜಿನಿಯರ್ ಹುದ್ದೆಯನ್ನು ನಿರ್ವಹಿಸುವ ಜವಾಬ್ದಾರಿ ಇವರ ಹೆಗಲಿಗೇರಿತ್ತು.


2020 ರಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಭಡ್ತಿ ಹೊಂದಿದ ಕುಮಾರಣ್ಣ ಎಲ್.ಎಂ.ಎಸ್ ಮೈಲಾಟಿಗೆ ವರ್ಗಾವಣೆ ಹೊಂದಿದರು. 2020 ರಲ್ಲಿ ಕೊಮ್ಮಂಗಳದಲ್ಲಿ ಸೌರ ವಿದ್ಯುತ್ ಸ್ಥಾವರ ಸ್ಥಾಪನೆಯಾಗುವಾಗ ಅದರ ಜವಾಬ್ದಾರಿ ನಿರ್ವಹಿಸುವ ಹೊಣೆ ಇವರಿಗೆ ದೊರಕಿತು.


'ಸೌರ ವಿದ್ಯುತ್ ಸ್ಥಾವರ ಸ್ಥಾಪನೆಯ ಸಂದರ್ಭದ ಕರ್ತವ್ಯ ನಿರ್ವಹಣೆ ವೃತ್ತಿ ಜೀವನದಲ್ಲಿ ಸವಾಲು ಹಾಗೂ ಸಂತೃಪ್ತಿಯ ಅನುಭವ ಮೂಡಿಸಿದೆ' ಎನ್ನುವ ಕುಮಾರಣ್ಣ ಅತ್ಯಂತ ಕಿರು ಅವಧಿಯಲ್ಲಿ ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ.


2022 ಜನವರಿಯಿಂದ 2024 ಆಗಸ್ಟ್ ವರೆಗೆ ಪೈವಳಿಕೆ ವಿಭಾಗದಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ ಕುಮಾರಣ್ಣ ಆ.31ರಂದು ತಮ್ಮ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದರು.


ತಮ್ಮ ವೃತ್ತಿಜೀವನದ ಅನುಭವಗಳ ಬಗ್ಗೆ ಹೇಳುತ್ತಾ "ಊರಿನಲ್ಲಿಯೇ ಕರ್ತವ್ಯ ನಿರ್ವಹಿಸುವುದು ಎಂದರೆ ಬಹುದೊಡ್ಡ ಸವಾಲು" ಎನ್ನುವ ಕುಮಾರಣ್ಣ ತಮ್ಮ ಹೆಗಲಿಗೇರಿದ ಜವಾಬ್ದಾರಿಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಿ ಜನರ ಮೆಚ್ಚುಗೆಗೆ ಪಾತ್ರರಾದವರು.


ಇವರು ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಪೈವಳಿಕೆ ವಿಭಾಗವು ಅಪಘಾತ ರಹಿತ ಸಂಸ್ಥೆ ಎಂಬ ಪ್ರಶಸ್ತಿ ಗಳಿಸಿಕೊಂಡಿದೆ. ರಾಜ್ಯದಲ್ಲಿ ಅತ್ಯಧಿಕ ಆನ್ ಲೈನ್  ಪೇಮೆಂಟ್ ಗಳಿಸಿದ ಮೊದಲ ಏರಿಯಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾತ್ರವಲ್ಲದೆ ಇನ್ನೂ ಅನೇಕ ಪ್ರಶಸ್ತಿಯ ಗರಿಗಳನ್ನು ಮುಡಿಗೇರಿಸಿಕೊಂಡಿದೆ.


ತಮ್ಮ ಸೇವಾ ಅವಧಿಯಲ್ಲಿ ವಿದ್ಯುತ್ ಇಲಾಖೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಕುಮಾರಣ್ಣ ಪೈವಳಿಕೆ ವಿಭಾಗದ ಜನತೆಗೆ ವಿದ್ಯುತ್ ಅಡಚಣೆ ನಿವಾರಣೆಯಾಗಲು ನಿರಂತರ ವಿದ್ಯುತ್ ಸರಬರಾಜಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಮಾಡಿದರು. 


ಇದುವರೆಗಿನ ತಮ್ಮ ವೃತ್ತಿ ಜೀವನಕ್ಕೆ ಸಂಪೂರ್ಣ ಸಹಕಾರ ನೀಡಿದ ಮೇಲಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಊರ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ "ಕಾನೂನಿನ ಚೌಕಟ್ಟಿನೊಳಗೆ ಜನರಿಗೆ ಸೌಲಭ್ಯಗಳನ್ನು ಒದಗಿಸಿಕೊಡಲು ಹೇಗೆ ಸಾಧ್ಯ ಎನ್ನುವ ಪರಿಕಲ್ಪನೆ ಇದ್ದರೆ ತಳಮಟ್ಟದಿಂದಲೇ ಅಭಿವೃದ್ಧಿ ಸಾಧ್ಯ. ಕೆಲಸ ಮಾಡದಿರಲು ಅನೇಕ ಕಾರಣಗಳು ಸಿಗಬಹುದು. ಆದರೆ ಕೆಲಸ ಮಾಡಲೇಬೇಕು ಎನ್ನುವ ಒಂದೇ ಗುರಿಯಿದ್ದರೆ ಆ ಕೆಲಸ ಖಂಡಿತಾ ಕೈಗೂಡುತ್ತದೆ" ಎನ್ನುತ್ತಾರೆ.

 

"ಈ ತತ್ವವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ  ಯಶಸ್ಸು ಗಳಿಸಬಹುದು " ಎನ್ನುವ ಇವರು ವೃತ್ತಿ ಜೀವನದ ಪೂರ್ತಿ ಅದೇ ತತ್ವವನ್ನು ಅಳವಡಿಸಿಕೊಂಡವರು.


'ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಪಕ್ಕಕ್ಕೆ ಸರಿಸಿ ತನ್ನ ಕರ್ತವ್ಯ ನಿರ್ವಹಣೆಗೆ ಸಂಪೂರ್ಣ ಸಹಕಾರ ನೀಡಿದ ಪತ್ನಿ ಸಹನಾ, ಮಕ್ಕಳಾದ ಸಂಧ್ಯಾ, ವಿಂಧ್ಯಾರ ಬೆಂಬಲವನ್ನು ಸ್ಮರಿಸುವ ಕುಮಾರಣ್ಣ ತಮ್ಮ ವೃತ್ತಿ ಜೀವನದ ಬಗ್ಗೆ ಧನ್ಯತಾ ಭಾವ ಇದೆ" ಎನ್ನುತ್ತಾರೆ.


ಅನೇಕ ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿದ್ದುಕೊಂಡು ಸೇವಾ ನಿರತರಾಗಿರುವ ಕುಟುಂಬ ಇವರದ್ದು. 2023 ರಲ್ಲಿ ಗುಂಪೆ ವಲಯದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಲಾರಂಭಿಸಿದ ಕುಮಾರಣ್ಣ 2024ರಿಂದ ಗುಂಪೆ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ವೃತ್ತಿ ಜೀವನದಿಂದ ನಿವೃತ್ತಿ ಹೊಂದಲಿರುವ ಕುಮಾರಣ್ಣನ ಮುಂದಿನ ಜೀವನ ಸುಖಮಯವಾಗಿ ಸಾಗಲಿ. ಶ್ರೀಗುರುಗಳ ಹಾಗೂ ಶ್ರೀಕರಾರ್ಚಿತ ದೇವರುಗಳ ಅನುಗ್ರಹದಿಂದ ಸಮಾಜಕ್ಕೆ ಅವರ ಸೇವೆ ಇನ್ನಷ್ಟು ದೊರಕಲಿ ಎಂಬ ಪ್ರಾರ್ಥನೆ.


-ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top