ಶಿಕ್ಷಣ, ಶಿಕ್ಷಕ, ಶಿಕ್ಷೆ ಮತ್ತು ಕಲಿಕೆ

Upayuktha
0


- ಟಿ. ದೇವಿದಾಸ್


ಶಿಕ್ಷೆ ಇಲ್ಲದ ಶಿಕ್ಷಣದ ಪ್ರತಿಪಾದನೆಗಳು ಈಗ ಎಲ್ಲೆಡೆ ಕೇಳುತ್ತಿದ್ದೇವೆ. ಆದರೆ ಶಿಕ್ಷೆರಹಿತ ಶಿಕ್ಷಣದ ಸ್ವರೂಪವನ್ನು ಕಲ್ಪಿಸುವ ಪ್ರಯತ್ನಗಳು ಕಾಣಿಸುವುದಿಲ್ಲ. ಯಾವೊಬ್ಬ ಶಿಕ್ಷಕನು ತನ್ನ ವಿದ್ಯಾರ್ಥಿಗಳಿಗೆ ದ್ವೇಷದಿಂದ ಕಲಿಸುವುದನ್ನು ಯಾರೂ ನೋಡಿರಲು ಸಾಧ್ಯವಿಲ್ಲ. ಇದು ಅನುಭವಜನ್ಯ ಸತ್ಯ. ಹಾಗಂತ ಪ್ರತಿಯೊಂದೂ ಜ್ಞಾನವೂ ಸ್ವಹಿಂಸೆಯನ್ನು ಅನುಭವಿಸಿಯೇ ಪ್ರಾಪ್ತವಾಗಿರುತ್ತದೆ. ಒಂದು ಸಹಜ ಸ್ಥಿತಿಯಲ್ಲಿ ಕಲಿಕೆ ಸಾಧ್ಯವಾಗಬೇಕು. ಅಂದರೆ ಸಂಸ್ಕಾರವನ್ನು ಇದು ಅಪೇಕ್ಷಿಸುತ್ತದೆ. ಸಂಸ್ಕಾರವನ್ನು ಮನೆಯಲ್ಲಾಗಲೀ ಶಾಲೆಯಲ್ಲಾಗಲೀ ರೂಢಿಸಬೇಕೆಂದರೆ ಮತ್ತೆ ಅದು ಬಲಪ್ರಯೋಗವನ್ನೇ ಅಪೇಕ್ಷಿಸುತ್ತದೆ. ಯಾವುದೇ ಬಗೆಯ ಶಿಕ್ಷಣವಾದರೂ ಅದು ಸ್ವಯಂ ಕಲಿಕೆಯದ್ದಾಗಿರಬೇಕು. ಅಂದಾಗ ಮಾತ್ರ ಅದು ಒಂದು ಸಕಾರಾತ್ಮಕವಾದ ಪರಿವರ್ತನೆಗೆ ಅವಕಾಶ ನೀಡುತ್ತದೆ. ಒಂದು ವ್ಯವಸ್ಥೆಗೆ ಒಗ್ಗಿಕೊಳ್ಳುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ತಾನಾಗಿಯೇ ಹುಟ್ಟಬೇಕು. ಇಂಥ ಸನ್ನಿವೇಶವನ್ನು ಸೃಷ್ಟಿಸುವ ಹೊಣೆಗಾರಿಕೆ ಶಾಲೆಯದ್ದೂ ಹೌದು, ಮನೆಯದ್ದೂ ಹೌದು. ಶಾಲೆಯದ್ದೂ ಅಂದರೆ ಶೈಕ್ಷಣಿಕವಾದ ಆಡಳಿತ, ಶೈಕ್ಷಣಿಕ ಕಾರ್ಯಚಟುವಟಿಕೆಗಳು, ಪಠ್ಯವಿನ್ಯಾಸಗಳು. ಇಲ್ಲಿ ಪೋಷಕರದ್ದೂ ಪಾತ್ರವಿದೆ, ಸಮಾಜದ್ದೂ ಪಾತ್ರವಿದೆ. ಅಂದರೆ ಶಾಲೆಯ, ಸಮಾಜದ ರೀತಿನೀತಿಗಳನ್ನು ಉಲ್ಲಂಘಿಸದಂತೆ ಮಕ್ಕಳನ್ನು ಸಹಜವಾದ ನೆಲೆಯಲ್ಲಿ ಬೆಳೆಸುವ ಮುತುವರ್ಜಿಯದು. ಮುಖ್ಯವಾಗಿ ಶಾಲೆ, ಶಿಕ್ಷಕ, ಸಮಾಜ, ಪಠ್ಯಗಳನ್ನು ಗೌರವಿಸುವ ಮನೋಭಾವವನ್ನು ಮಕ್ಕಳಲ್ಲಿ ಎಳವೆಯಿಂದಲೇ ಬೆಳೆಸಬೇಕು. ಅದ್ದರಿಂದ ಇದೊಂದು ಸಮಗ್ರವಾದ ಪ್ರಯತ್ನವಾಗಿದೆ. ಕೇವಲ ಶಾಲೆಯೊಂದರ ಪಾತ್ರ ಮಾತ್ರವೇ ಮುಖ್ಯವೆಂಬುದು ಹುರುಳಿಲ್ಲದ ಮಾತು.


ವಿದ್ಯಾರ್ಥಿಗಳ ಮನಸನ್ನು ತನ್ನೆಡೆಗೆ, ತನ್ನಿಂದ ಕಲಿಕೆಯ ಕಡೆಗೆ ಸೆಳೆಯುವಂಥ ಬೋಧನಾ ವಿಧಾನಗಳನ್ನು ಶಿಕ್ಷಕನು ಅನುಸರಿಸುವುದು ಉತ್ತಮ ಕಲಿಕೆಗೆ ಮೂಲ ತಳಹದಿ. ಇದೊಂದು ಗಟ್ಟಿಬೇರು. ಇಂಥ ಬಾಂಧವ್ಯವನ್ನು ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೊಂದಿದಾಗ, ಆಕಸ್ಮಾತ್ ಆ ಶಿಕ್ಷಕನು ಏನೇ ಶಿಕ್ಷೆ ಕೊಟ್ಟರೂ ಆ ವಿದ್ಯಾರ್ಥಿಗಳು ಆ ಶಿಕ್ಷಕರನ್ನು ತಿರಸ್ಕರಿಸಲಾರರು. ಕಾರಣ ವಿದ್ಯಾರ್ಥಿಗಳು ತಾವು ಮೆಚ್ಚಿದ ಶಿಕ್ಷಕರೊಂದಿಗೆ ಬೆಳೆಸಿಕೊಂಡಿರುವ ಭಾವನಾತ್ಮಕ ಸಂಬಂಧವನ್ನು ಕಳೆದುಕೊಳ್ಳಲಿಕ್ಕೆ ಮನಸು ಮಾಡಲಾರರು. ಆದರೆ ವಿದ್ಯಾರ್ಥಿಗಳೊಂದಿಗಿನ ಸಂಬಂಧವನ್ನು ಶಿಕ್ಷಕನು ದುರುಪಯೋಗಪಡಿಸಿಕೊಳ್ಳಬಾರದು. ಸ್ವಾರ್ಥಕ್ಕೆ ಅವರನ್ನು ಬಳಸಿಕೊಳ್ಳದೆ ಕೇವಲ ಶೈಕ್ಷಣಿಕವಾದ ಮತ್ತು ನೈತಿಕವಾದ ನೆಲೆಯಲ್ಲಿ ವಿದ್ಯಾರ್ಥಿಗಳು ದಾರಿತಪ್ಪದಂತೆ ಶಿಕ್ಷಕರು ಕಾಳಜಿ ವಹಿಸಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳ ಕಲಿಕೆ ಯಾಂತ್ರಿಕವಾಗದೆ ಅರ್ಥಪೂರ್ಣ ಕಲಿಕೆ ಸಾಧ್ಯವಾಗುತ್ತದೆ. ಪ್ರತಿ ವಿದ್ಯಾರ್ಥಿಯನ್ನು ಉದ್ಧಾರ ಮಾಡಿಯೇ ತೀರುತ್ತೇನೆಂಬ ಯಾವ ಹಠಕ್ಕೂ ಛಲಕ್ಕೂ ಶಿಕ್ಷಕನು ಬೀಳಲಾರ. ಬೀಳಲು ಸಾಧ್ಯವೂ ಇಲ್ಲ. ಹಾಗಂತ ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವ ಶಿಕ್ಷಕನೂ ಇಂಥ ಹುಂಬು ಹುಕಿಗೆ ಬೀಳುವುದಿಲ್ಲ ಎಂದೇ ನಾನು ನಂಬಿದವ. ಯಾಕೆಂದರೆ ಶಿಕ್ಷಕನೂ ಒಬ್ಬ ಮನುಷ್ಯನೇ! ಆತ್ಮಸಾಕ್ಷಿಯನ್ನು ಕಳಚಿಕೊಂಡು ಬದುಕಬೇಕಾದ ವಾತಾವರಣವೊಂದು ನಿರ್ಮಾಣವಾದಲ್ಲಿ ಶಿಕ್ಷಕನೂ ಆತ್ಮಸಾಕ್ಷಿಯನ್ನು ಕಳಚಿಕೊಳ್ಳುವುದು ಅನಿವಾರ್ಯವಾದ ಸತ್ಯವಾಗುತ್ತದೆ. ಮೇಲಧಿಕಾರಿಗಳ ಮುಂದೆ, ಪಾಲಕರ ಎದುರು ತಾವು ಎಲ್ಲವನ್ನೂ ಸರಿಮಾಡಿಬಿಡುತ್ತೇವೆ ಎಂದು ಆತ್ಮಸಾಕ್ಷಿಗೆ ಅಥವಾ ಆತ್ಮಪ್ರಜ್ಞೆಗೆ ವಿರುದ್ಧವಾಗಿ ಜೀವನನಿಷ್ಠೆಯನ್ನು ಯಾವ ಶಿಕ್ಷಕನೂ ಹೊಂದಬಾರದು ಎಂಬ ಎಚ್ಚರವನ್ನು ಮರೆಯಬಾರದು.


ಪ್ರಾಥಮಿಕ ಶಿಕ್ಷಣದ ಗುಣಮಟ್ಟದಲ್ಲಿ ಬೆಳೆಯುತ್ತಿರುವ ಶೈಥಿಲ್ಯಕ್ಕೆ ಮೂಲಕಾರಣವೇ ಎಂಟನೆಯ ತರಗತಿಯವರೆಗೆ ಯಾವ ಪರೀಕ್ಷೆಯೂ ಅದರ ಗಾಂಭೀರ್ಯವನ್ನು ಉಳಿಸಿಕೊಳ್ಳದೆ ಹೋಗಿರುವುದರಿಂದ! ಹಿಂದೆಲ್ಲ ಏಳನೆಯ ತರಗತಿಗೆ ಪಬ್ಲಿಕ್ ಪರೀಕ್ಷೆಯಿತ್ತು. ಫೇಲ್ ಮಾಡುವ ಅಧಿಕಾರ ಶಿಕ್ಷಕರಿಗಿತ್ತು. ಅಂದರೆ ಓದದೆ ಇರುವವರನ್ನು ಓದುವಂತೆ ಚುರುಕು ಮುಟ್ಟಿಸುವ ಕ್ರಮ ಅದಾಗಿತ್ತು. ಈಗ ಸರ್ವ ಶಿಕ್ಷಣ ಅಭಿಯಾನದಲ್ಲಿ ಎಲ್ಲರಿಗೂ ಶಿಕ್ಷಣ ಮೂಲಭೂತ ಹಕ್ಕಾಗಿ ಸಿಗಲೇಬೇಕೆಂಬ ಆದೇಶದಲ್ಲಿ ಯಾರನ್ನೂ ಫೇಲ್ ಮಾಡದೇ ಎಂಟನೆಯ ತರಗತಿಯವರೆಗೆ ಕಡ್ಡಾಯ ಪಾಸು ಮಾಡಬೇಕಾಗಿ ಬಂತು. ಒಂಬತ್ತನೆಯ ತರಗತಿಯಲ್ಲಿ ಫೇಲ್ ಮಾಡಬಹುದಾದ ಅಧಿಕಾರ ಇದ್ದರೆ ಏನು ಪ್ರಯೋಜನ? ಹತ್ತನೆಯ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ಎದುರಿಸುವ ಸಾಮರ್ಥ್ಯ ಕಲಿಕೆಯಲ್ಲಿ ಸಾಮಾನ್ಯವಾಗಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಇರುವುದಿಲ್ಲ. ಪರಿಣಾಮವಾಗಿ ಕಡಿಮೆ ಅಂಕ ಗ್ಯಾರಂಟಿ. ಶಿಕ್ಷಣದ ಘನತೆಯೂ ಕುಸಿಯುತ್ತದೆ. ಮತ್ತೆ ಒತ್ತಡ ಇದ್ದದ್ದೇ. ಫೇಲು ಮಾಡುವ ಶಕ್ತಿಯನ್ನು ಶಿಕ್ಷಕರಿಗೆ ಕೊಡದಿರುವ ಶಿಕ್ಷಣ ವ್ಯವಸ್ಥೆಯನ್ನು ಕಳೆದ ಸುಮಾರು ೨೦ ವರ್ಷಗಳಿಂದ ನೋಡುತ್ತಲೇ ಬಂದಿದ್ದೇವೆ. ಪರೀಕ್ಷೆಯಲ್ಲಿ ತಾನು ಫೇಲ್ ಆಗುವುದು ಪಕ್ಕಾ ಎಂದು ಗೊತ್ತಿದ್ದ ವಿದ್ಯಾರ್ಥಿಗೆ ಯಾವ ಭಯವೂ ಇರುವುದಿಲ್ಲ. ಯಾಕೆಂದರೆ ನನ್ನನ್ನು ಫೇಲ್ ಮಾಡಲು ಈ ಶಿಕ್ಷಣ ವ್ಯವಸ್ಥೆಗಿಲ್ಲ ಎಂಬುದು ವಿದ್ಯಾರ್ಥಿಗೆ ಗೊತ್ತಾಗಿರುವುದರಿಂದ ಅವನನ್ನು ಓದುವುದಕ್ಕೆ ಶಿಕ್ಷಕರಾಗಲೀ ಪೋಷಕರಾಗಲೀ ಒತ್ತಡ ತರಲಾಗದು. ಒತ್ತಡ ತಂದರೂ ಅವನು‌ ಇವರುಗಳ ಮಾತನ್ನು ಕೇಳುವುದು ಸಾಧ್ಯವಿಲ್ಲದ ಮಾತು! ತಾನು ಬರೆದ ಪರೀಕ್ಷೆಯಲ್ಲಿ ತನ್ನನ್ನು ಫೇಲ್ ಮಾಡುವ ಅಥವಾ ತಾನು ಫೇಲ್ ಆಗುವ ಸಾಧ್ಯತೆ ಇದೆಯೆಂಬುದು ವಿದ್ಯಾರ್ಥಿಗೆ ಅರಿವಾಗಬೇಕು. ಅದರರ್ಥ ಕಲಿಕೆಯ ಬಗ್ಗೆ ಭಯವಿರಬೇಕು ಎಂದಲ್ಲ. ಈ ಬಗೆಯಾದ ಅರಿವಿನಲ್ಲಿ ಬೋಧನೆ ಮತ್ತು ಕಲಿಕೆ ಎರಡೂ ಫಲಪ್ರದವಾಗುತ್ತದೆ. ಆಗ ಮಾತ್ರ ಬೋಧನೆ ಮತ್ತು ಕಲಿಕೆ ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯ. ಯಾವ ಪರೀಕ್ಷೆಯೂ ಇಲ್ಲದೆ, ಇದ್ದರೂ ಅದು ನಾಮಕಾವಸ್ಥೆಯಾಗಿದ್ದರೆ ಏನು ಪ್ರಯೋಜನ?


ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿದುದರ ಪರಿಣಾಮವಾಗಿ ಆ ಹಂತದ ಕಲಿಕೆ ಮತ್ತು ಬೋಧನೆ ನೀರಸವೂ ನಿಸ್ಸಾರವೂ ಆಗುತ್ತಾ ಬಂತು. ಸರಿಯಾಗಿ ಮಾತೃಭಾಷೆಯೂ ಬಾರದ, ಆಂಗ್ಲಭಾಷೆಯೂ ಬಾರದ, ವಿಷಯ ಜ್ಞಾನವೂ ಇಲ್ಲದ, ಕಲಿಕೆಯ ಕೌಶಲದ ಸಾಮಾನ್ಯ ಅನುಭವವೂ ಇಲ್ಲದ ಅಕ್ಷರ ಜ್ಞಾನವೂ ಸರಿಯಾಗಿ ಆಗದೆ ವಿದ್ಯಾರ್ಥಿಗಳು ಕೇವಲ ಸರ್ಟಿಫಿಕೇಟುಗಳಲ್ಲಿ ಮಾತ್ರ ವಿದ್ಯಾರ್ಹತೆಯನ್ನು ಗಳಿಸುತ್ತಿದ್ದಾರೆ. ವಿದ್ಯೆ ಎಷ್ಟೆಂಬುದು ಪ್ರಶ್ನೆಯಾಗೇ ಇರುತ್ತದೆ. ಮೇಷ್ಟ್ರುಗಳಿಗೆ ಸ್ವಾಧ್ಯಾಯದ ಅಗತ್ಯವಿಲ್ಲ. ಪಾಠ ತಯಾರಿ ಮಾಡಬೇಕಾದ ಆವಶ್ಯವಿಲ್ಲ. ಎಷ್ಟೋ ಕಡೆ ಪಾಠಗಳನ್ನೇ ಸರಿಯಾಗಿ ಮಾಡದಿರುವ ಪದ್ಧತಿಯಿದೆ. ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡ, ಪಾಠ‌ಮಾಡಬೇಕು, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಬೇಕೆಂಬ ಹಂಬಲವಿರುವ, ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಶಿಸ್ತು ಕೂಡ ಮುಖ್ಯ ಎಂದು ನಂಬಿದ ಹಲವು ಸರ್ಕಾರಿ ಶಿಕ್ಷಕರ ಮಾತುಗಳಲ್ಲಿ ಗ್ರಹಿಸಿದ್ದು: ತಿಂಗಳಿಗೊಮ್ಮೆ ಆ ಟ್ರೇನಿಂಗ್, ಈ ಟ್ರೇನಿಂಗ್ ಅಂತ ಬೇರೆಬೇರೆ ನೆಪದಲ್ಲಿ ಕಾಲ ಹರಣ, ಬಿಸಿಯೂಟದಿಂದ ಉಂಟಾಗುವ‌ ಸಮಸ್ಯೆಗಳು, ಹನ್ನೊಂದು ಹತ್ತು ರೆಕಾರ್ಡುಗಳನ್ನು ನಿರ್ವಹಣೆ ಮಾಡುವುದು, ಇದರಲ್ಲೇ ನಮ್ಮ ದಿನಚರಿ ಮುಗಿದುಹೋಗುತ್ತದೆ ಎಂದು ಅಲವತ್ತುಕೊಳ್ಳುವವರನ್ನು ನೋಡಿದ್ದೇನೆ. ಇದರರ್ಥ ತರಗತಿಯೊಳಗೆ ಮಕ್ಕಳಿಗೆ ಪಾಠ ಮತ್ತು ಪಾಠೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನಸ್ಸಿರುವ ಶಿಕ್ಷಕರಿಗೂ ಈ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟ.


ಬಿಸಿಯೂಟಕ್ಕೆ ಸಂಬಂಧಿಸಿದ ಕಾರ್ಯನಿಮಿತ್ತವಾಗಿ ಒಬ್ಬ ಶಿಕ್ಷಕ ಯಾವತ್ತೂ ಶಾಲೆಯಿಂದ ಹೊರಗೇ ಉಳಿಯಬೇಕಾಗಿದೆ. ಇದು ವಿಪರ್ಯಾಸ! ಪ್ರತಿ ತಿಂಗಳು ತರಬೇತಿಯನ್ನು ನೀಡುವ ಅಗತ್ಯವಾದರೂ ಏನೆಂಬುದು ಅರ್ಥವಾಗುವುದಿಲ್ಲ! ಹಾಗಂತ ಈಗಿನ ಶಿಕ್ಷಣ ಸಚಿವರು ಇಂಥ ಆದೇಶವನ್ನು ಹೊರಡಿಸಿಲ್ಲ ಎಂಬುದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿದೆ. ಡಿಸೆಂಬರ್ ಅನಂತರ ಯಾವುದೇ ತರಬೇತಿ ನಡೆಸಬಾರದು ಎಂದು ಸಚಿವರು ಆದೇಶ ಹೊರಡಿಸಿದ್ದಾರೆ. ಸಚಿವರ ಮಾತುಗಳನ್ನು ಮೀರಿ‌ ಕೆಲವು ಉಪನಿರ್ದೇಶಕರು ಶಿಕ್ಷಕರಿಗೆ ಪ್ರತಿ ತಿಂಗಳು ತರಬೇತಿಯನ್ನು ಆಯೋಜಿಸುತ್ತಿರುವುದು ಪ್ರಚಾರದಲ್ಲಿದೆ. ಇದು ಅಧಿಕಾರದ ದುರುಪಯೋಗವಲ್ಲದೆ ಮತ್ತೇನು? ಮೇಲಧಿಕಾರಿಗಳ ಮರ್ಜಿಗೆ ಬಿದ್ದು ತರಬೇತಿಗೆ ಹೋಗಲೇಬೇಕು.  ಹೋಗದಿದ್ದರೆ ಕ್ರಮ ಜರುಗಿಸಲಾಗುತ್ತದೆಂಬ ಭಯ ಮತ್ತು ಮಾನಸಿಕ ಒತ್ತಡದಿಂದ ತರಬೇತಿಗೆ ಶಿಕ್ಷಕರು ಹಾಜರಾಗಲೇಬೇಕಾಗುತ್ತದೆ. ಅಂಥ ತರಬೇತಿಯಿಂದ ಯಾವ ಲಾಭವೂ ಇಲ್ಲ. ಪಠ್ಯಕ್ರಮ ಬದಲಾದಾಗ ತರಬೇತಿಯ ಅಗತ್ಯ ಹಾಗೂ ಅನಿವಾರ್ಯತೆ ಇರುವುದು ಸಹಜ. ಅಂಥ ತರಬೇತಿಯನ್ನು ಸರ್ಕಾರ ಕಾಲಕಾಲಕ್ಕೆ ಆಯೋಜಿಸುತ್ತಲೇ ಬಂದಿದೆ. 


ಮಗುವಿನ ಕಲಿಕೆಯಲ್ಲಿ ಪ್ರಾಥಮಿಕ‌ ಹಂತ ಬಹುಮುಖ್ಯವಾದುದು. ಕಲಿಕೆಯ ಮೂಲ ಕೌಶಲಗಳಾದ ಓದುವುದು, ಬರೆಯುವುದು, ಗ್ರಹಿಸುವುದು, ಚಿಂತಿಸುವುದು (ಆಲೋಚಿಸುವುದು) ಇವುಗಳು ಭದ್ರವಾಗಿ ಬೇರೂರಬೇಕಾದ ಸನ್ನಿವೇಶದಲ್ಲಿ ಮಗುವಿಗೆ ಮನೆಯಲ್ಲೂ ಶಾಲೆಯಲ್ಲೂ ತಿದ್ದುವವರು, ತೀಡುವವರು ಹತ್ತಿರ ಇರಬೇಕಾಗುತ್ತದೆ. ಕೇವಲ ಶಾಲೆಯನ್ನೇ ಈ ಸಂದರ್ಭದ ಮಗುವಿನ ಕಲಿಕೆಯಲ್ಲಿ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾರು ಎಷ್ಟೇ ಚೆನ್ನಾಗಿ ಕಲಿಸಿದರೂ ಕಲಿಯುವವನ ಆಸಕ್ತಿ, ಏಕಾಗ್ರತೆ, ಗ್ರಹಿಸುವಿಕೆ ಮತ್ತು ಬುದ್ದಿಮತ್ತೆಯೇ ಹೆಚ್ಚು ಮಹತ್ವದ್ದಾಗಿರುತ್ತದೆ. ಶಾಲೆಯಲ್ಲಿ ಕಲಿತದ್ದನ್ನು ಮನೆಯಲ್ಲಿ ಪೋಷಕರು ವಿಚಾರಿಸಬೇಕು. ಶಾಲೆಯಲ್ಲಿನ ಕಲಿಕೆಯ ಪ್ರಕ್ರಿಯೆ ಮನೆಯಲ್ಲೂ ಮುಂದುವರೆದರೆ ಮಗುವಿನ ಕಲಿಕೆ ಹೆಚ್ಚು ಫಲಸ್ವರೂಪವನ್ನು ಕಾಣಲು ಸಾಧ್ಯ. ಈ ಹಿನ್ನೆಲೆಯಲ್ಲಿ ಏಳನೆಯ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ಜಾರಿಗೆ ತರುವ ಶಿಕ್ಷಣ ಸಚಿವರ ಕ್ರಮವನ್ನು ಸ್ವಾಗತಿಸಲೇಬೇಕು. ಬೇರೆ ಮಾತಿಲ್ಲದೆ ಸರ್ಕಾರದ ಈ ಕ್ರಮವನ್ನು ಬೆಂಬಲಿಸಲೇಬೇಕು.


ಒಂದಿಷ್ಟು ಸಂಗತಿಗಳನ್ನು ಇಲ್ಲಿ ಪರಾಮರ್ಶಿಸಲೇಬೇಕು. 7ನೆಯ ತರಗತಿಗೆ ಪಬ್ಲಿಕ್ ಪರೀಕ್ಷೆ ಅಂದಾಕ್ಷಣ ವಿದ್ಯಾರ್ಥಿಗಳಲ್ಲಿ ಒಂದು ಭಯ  ಆವರಿಸುತ್ತದೆ. ಪರೀಕ್ಷೆಯ ಬಗ್ಗೆಯೂ, ಫಲಿತಾಂಶದ ಬಗ್ಗೆಯೂ ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಭಯ ಹುಟ್ಟಿಕೊಳ್ಳುತ್ತದೆ. ಶಿಕ್ಷಕರಲ್ಲೂ ಭಯವಿರುತ್ತದೆ. ಹಾಗಂತ ಹಿಂದೆಲ್ಲ ಪಬ್ಲಿಕ್ ಪರೀಕ್ಷೆಯೇ ಇದ್ದದ್ದು. ಆಗಲೂ ಭಯ ಇದ್ದೇ ಇತ್ತು. ಆದ್ದರಿಂದ ಈ ಭಯವೆಂಬುದು ಸಹಜವಾದದ್ದು. ಮಕ್ಕಳ ಸುರಕ್ಷತೆಗೆ ಅಂತ ಹುಟ್ಟಿಕೊಂಡ ಕಾಯ್ದೆ‌-ಕಾನೂನುಗಳು ಮಕ್ಕಳು ಸಹಜವಾಗಿ ಬೆಳೆಯಲು ಪ್ರೇರೇಪಿಸುತ್ತಿಲ್ಲ. ನಾನು ಏನೇ ಮಾಡಿದರೂ ನನ್ನನ್ನು ರಕ್ಷಣೆ ಮಾಡುವ ವ್ಯವಸ್ಥೆ ಅಥವಾ ರಕ್ಷಿಸುವವರು ಇದ್ದಾರೆಂಬುದು ಗೊತ್ತಾದ ತಕ್ಷಣ ನಾನು ಏನೇನೆಲ್ಲ ಮಾಡಲು ಆರಂಭಿಸುತ್ತೇನೆ. ಮೆಡಿಸಿನ್ ಹೆಚ್ಚು ಹೆಚ್ಚು ಸಂಶೋಧನೆಯಾದಷ್ಟು ಹೆಚ್ಚು ಹೆಚ್ಚು ರೋಗಗಳು ಹುಟ್ಟಿಕೊಂಡ ರೀತಿ ಮಕ್ಕಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಹುಟ್ಟಿಕೊಂಡ ಕಾನೂನುಗಳಿಂದ ಮಕ್ಕಳಲ್ಲಿ ಹೆಚ್ಚು ಹೆಚ್ಚು ಅಪರಾಧೀ ಪ್ರವೃತ್ತಿಗಳು ಬೆಳೆಯುತ್ತಿವೆ. ಮೊದಲೆಲ್ಲ ಮನೆ ಮತ್ತು ಶಾಲೆಗಳೇ ಮಕ್ಕಳಿಗೆ ಅತ್ಯಂತ ಸುರಕ್ಷಿತವಾದ ಸ್ಥಳವಾಗಿತ್ತು. ಈಗ ಮಕ್ಕಳ ಸ್ವಾತಂತ್ರ್ಯ ರಕ್ಷಣೆಯ ನೆಪದಲ್ಲಿ ಅವರನ್ನು ದಾರಿ ತಪ್ಪಿಸುವ ಬಹುದೊಡ್ಡ ಹುನ್ನಾರವೇ ಕಾರ್ಪೋರೇಟ್ ಪ್ರಪಂಚದಲ್ಲಿದೆ. ಕಾಲೇಜಿನಲ್ಲಿ, ವಿವಿಗಳಲ್ಲಿ ವಿದ್ಯಾರ್ಥಿಗಳ ಪರ ನಿಂತು ಹೋರಾಡುವ, ಪ್ರತಿಭಟಿಸುವ ಕಾಯಕ ನಿತ್ಯವೂ ನಡೆಯುತ್ತದೆ. ಕಾರಣ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಹೊಡೆಯಬಾರದು, ಹೆದರಿಸಬಾರದು, ಗದರಿಸಬಾರದು. ಅವರು ಅನೈತಿಕವಾಗಿ ವರ್ತಿಸಿದರೂ ತಿದ್ದಬಾರದು, ಅತಿರೇಕದ ಕುಚೇಷ್ಟೆಗಳಿಗೂ ಕಿವಿಗೊಡಬೇಕು. ಬರೆಯದೇ ಹೋದರೂ, ಓದಲು ಬಾರದಿದ್ದರೂ ನಾಕು ಬಾರಿಸಿ ಓದುವ ಹಾಗೆ, ಬರೆಯುವ ಹಾಗೆ ಮಾಡುವ ಅಧಿಕಾರ ಮತ್ತು ಶಕ್ತಿ ಶಿಕ್ಷಕರಿಗಿಲ್ಲ.


ಶಾಲೆಯಲ್ಲಿ ನಾಕು ಪೆಟ್ಟು ಕೊಟ್ಟು ತಿದ್ದಿದ್ದರೆ ಪೋಲಿಸ್ ಸ್ಟೇಷನ್ ಅಲ್ಲಿ ಪೆಟ್ಟು ಕಡಿಮೆಯಾಗುತ್ತಿತ್ತು ಎಂಬ ಒಂದು ಮೆಸೇಜು ವಾಟ್ಸ್ಯಾಪಲ್ಲಿ ಹರಿದಾಡುತ್ತಿತ್ತು. ಎಷ್ಟೋ ಸನ್ನಿವೇಶದಲ್ಲಿ ಇದು ನಿಜವಾಗಿಯೂ ಸತ್ಯವಾಗಿದೆ. ಹಿಂದಿನ‌ ಶಿಕ್ಷಣ ಪದ್ಧತಿಯಲ್ಲಿ ಕಲಿಕೆಯ ವಿಚಾರವಾಗಿ ಶಿಕ್ಷಕರು ಬಹಳ ಕಟ್ಟುನಿಟ್ಟು. ಕೊಟ್ಟ ಮನೆಗೆಲಸವನ್ನು ಮಾಡಿಕೊಂಡು ಬರದಿದ್ದರೆ ಪೆಟ್ಟು ಗ್ಯಾರಂಟಿ. ಅವರು ಪೆಟ್ಟು ಕೊಡುತ್ತಾರೆಂಬ ಭಯಕ್ಕಾದರೂ ಓದುತ್ತಿದ್ದರು, ಬರೆಯುತ್ತಿದ್ದರು. ಸಮಾಜಕ್ಕೆ ಹೆದರುತ್ತಿದ್ದರು. ಮಕ್ಕಳ ಕಲಿಕೆಗೆ ಸಂಬಂಧಿತವಾಗಿ ಶಿಕ್ಷಕರು ಯಾವುದೇ ಶಿಕ್ಷೆಯನ್ನು ನೀಡಿದರೂ ಪ್ರಶ್ನಿಸುವ ಮನೋಭಾವ ಪೋಷಕರಲ್ಲಿ ಇರಲಿಲ್ಲವಾಗಿತ್ತು. ಅವರಿಗೆ ಮಕ್ಕಳ ಕಲಿಕಾ ಪ್ರಗತಿಯಷ್ಟೇ ಮುಖ್ಯವಾಗಿರಲಿಲ್ಲ, ಸಾಮಾಜಿಕವಾಗಿ ತಮ್ಮ ಮಕ್ಕಳು ಒಳ್ಳೆಯವರಾಗಬೇಕು ಎಂಬ ಮನೋಭಿಲಾಷೆಯನ್ನು ಹೊಂದಿದ್ದರು. ಹಾಗಂತ ಶಿಕ್ಷಕರೂ ಕೂಡ ಕಲಿಕೆಗೆ ಮತ್ತು ಕೆಟ್ಟದಾಗಿ ವರ್ತಿಸಿದ್ದಲ್ಲಿ ಮಾತ್ರ ಶಿಕ್ಷೆಯನ್ನು ಕೊಡಬೇಕೆಂಬ ಪ್ರಜ್ಞೆಯನ್ನು ಹೊಂದಿದ್ದರು.


ಶಿಕ್ಷೆಯೆಂದರೆ ಕೇವಲ ದೈಹಿಕ ಶಿಕ್ಷೆಯೆಂದೇ ಅರ್ಥೈಸುವುದಲ್ಲ. ತರಗತಿಯಲ್ಲಿ ಕೆಳಗೆ ಕೂರಿಸುವುದು, ನಿಲ್ಲಿಸುವುದು, ಹತ್ತೋ ಇಪ್ಪತ್ತೋ ಸಾರಿ ಬರೆಸುವುದು, ತರಗತಿಯಿಂದ ಹೊರಗೆ ನಿಲ್ಲಿಸುವುದು, ಶಾಲಾವಧಿ ಅನಂತರ ಅರ್ಧ ಗಂಟೆ ಓದಿಸುವುದು, ಬರೆಯಿಸುವುದು, ಕಿವಿ ಹಿಡಿದುಕೊಂಡು ತಿದ್ದುವುದು- ಹೀಗೆಲ್ಲ ಹಿಂದೆ ಶಿಕ್ಷಕರು ಅಭ್ಯಾಸ ಮಾಡಿಸುತ್ತಿದ್ದರು. ಶಿಕ್ಷೆಯಿಂದ ಕಲಿಕೆ ಯಾಂತ್ರಿಕವಾಗುತ್ತದೆ ಎಂಬುದು ಸತ್ಯವೇ ಆದರೂ ತಾನು ಪಡೆದ ಶಿಕ್ಷೆಯು ವಿದ್ಯಾರ್ಥಿಯಲ್ಲಿ ತನ್ನ ತಪ್ಪಿನ ಮನವರಿಕೆ ಮಾಡಿಸುವಂತಿರಬೇಕು. ಆ ಬಗೆಯಲ್ಲಿ ಶಿಕ್ಷೆ ಇರಬೇಕು. ಯಾವುದೇ ಶಿಕ್ಷೆ ವಿದ್ಯಾರ್ಥಿಯನ್ನು ದಾರಿ ತಪ್ಪಿಸಬಾರದು, ಕೆಟ್ಟ ಆಲೋಚನೆಗೆ ಪ್ರಚೋದನೆ ನೀಡಬಾರದು. ತನ್ನದೇ ಸಹಪಾಠಿಗಳ ಎದುರು ತಾನು ತಲೆತಗ್ಗಿಸುವಂತಾಗಬಾರದು, ತಂದೆ-ತಾಯಂದಿರಿಗೆ ಬೇಸರವನ್ನು ಉಂಟು ಮಾಡಬಾರದು ಎಂಬ ಅರಿವಿನಿಂದ ಹುಟ್ಟುವ ಎಚ್ಚರವನ್ನು ವಿದ್ಯಾರ್ಥಿಯ ಪಡೆಯಬೇಕು. ಕಲಿಕೆಯಲ್ಲಿ ಒಂದು ಸಕಾರಾತ್ಮಕ ಪರಿವರ್ತನೆಯನ್ನು ಅವನಲ್ಲಿ ಉಂಟು ಮಾಡಬೇಕು. ಇಲ್ಲಿಯೇ ಒಂದು ಸಂಗತಿಯನ್ನು ಹೇಳುತ್ತೇನೆ. ಸಣ್ಣ ಸಣ್ಣ ತಪ್ಪನ್ನೂ ಗಂಭೀರವಾಗಿ ಪರಿಗಣಿಸಿ ತಪ್ಪಿಗಿಂತ ದೊಡ್ಡ ಶಿಕ್ಷೆಯನ್ನು ನೀಡಿದರೆ ವಿದ್ಯಾರ್ಥಿಯ ಮನಸು ಘಾಸಿಗೊಳ್ಳುವುದು ಆ ಶಿಕ್ಷಕನ ಮೇಲೆ ಮತ್ತು ಅವರು ಬೋಧಿಸುವ ವಿಷಯದ ಮೇಲೆ. ಮಕ್ಕಳ ಹಕ್ಕು ರಕ್ಷಣೆಯೇನೋ ಸರಿ. ಆದರೆ ಮಕ್ಕಳು ಕಲಿಕೆಯಲ್ಲಿ ತಿದ್ದಲು ಸಾಧ್ಯವೇ ಇಲ್ಲದಷ್ಟು ದಾರಿ ತಪ್ಪುತ್ತಿರುವಾಗಲೂ ನಾಕು ಪೆಟ್ಟು ಕೊಟ್ಟು ಸರಿದಾರಿಗೆ ತರಲು ಅಥವಾ ತಿದ್ದಲು ಶಿಕ್ಷಕರು ಮುಂದಾಗದೇ ಹೋದರೆ ಶಿಕ್ಷಕರ ಪಾತ್ರವೇನು? 


ಶಿಕ್ಷೆ ಕೊಡುವುದೊಂದೇ ಶಿಕ್ಷಕರ ಪಾತ್ರವೆಂದು ಯಾರೂ ಪರಿಗಣಿಸಬಾರದು. ಹಾಗೆ ಕೊಡುವ ಶಿಕ್ಷೆಯೂ ಶಿಕ್ಷಣದ ಒಂದು ಭಾಗವೇ ಸರಿ. ಯಾಕೆಂದರೆ ಪ್ರತಿ ಶಿಕ್ಷಕನೂ ಮಕ್ಕಳ ಕಲಿಕಾ ವಿಚಾರದಲ್ಲಿ ಮಕ್ಕಳ ಸ್ಪೆಷಲಿಷ್ಟ್ ಆಗಿಯೇ ಇರುತ್ತಾನೆ. ಶಿಕ್ಷಕನಿಗೂ ಶೈಕ್ಷಣಿಕ ಮನೋವಿಜ್ಞಾನದ ಅರಿವು ಇರುತ್ತದೆ. ಮಕ್ಕಳಿಗೆ ಶಿಕ್ಷೆ ಕೊಡುವುದರ ಹಿಂದಿನ ಉದ್ದೇಶ ಅವರ ಮೇಲೆ ಸೇಡಿನ ಅಥವಾ ಪ್ರತಿಕಾರದ ಮನೋಭಾವವಲ್ಲ. ಇನ್ನು ಮುಂದೆ ಅಂಥ ತಪ್ಪು ಆ ವಿದ್ಯಾರ್ಥಿಯಿಂದ ಆಗಬಾರದು ಎಂಬ ಸದಾಗ್ರಹ ಇರುತ್ತದೆ. ಒಬ್ಬ ಮಕ್ಕಳ ತಜ್ಞನಲ್ಲಿರುವಷ್ಟೇ ಸಕಲ ಸಂವೇದನೆಗಳು ಶಿಕ್ಷಕನಲ್ಲೂ ಇರುತ್ತದೆ ಎಂಬುದು ಗಮನಾರ್ಹ ಸಂಗತಿ. ತನ್ನಿಂದ ಶಿಕ್ಷಿಸಲ್ಪಟ್ಟ ವಿದ್ಯಾರ್ಥಿ ಶಾಲೆಗೆ ಹೆಸರು ತರುವಂಥ ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಅದೇ ಶಿಕ್ಷಕ ಅವನನ್ನು ಎಲ್ಲರ ಸಮ್ಮುಖದಲ್ಲಿ ಹೊಗಳುತ್ತಾನೆ. ಶಿಕ್ಷಕತನದ ಸಾರ್ಥಕ್ಯ ಭಾವವನ್ಬು ತಾಳುತ್ತಾನೆ. ಶಿಕ್ಷಿಸುವ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಮಾತ್ರ ಪ್ರತ್ಯೇಕವಾಗಿ ವಿಚಾರಣೆ ಮಾಡಬೇಕೆಂಬುದು ಶಿಕ್ಷಕನಿಗೆ ಗೊತ್ತಿರುತ್ತದೆ. ಹೊಗಳುವಾಗ ಎಲ್ಲ ವಿದ್ಯಾರ್ಥಿಗಳ ಮುಂದೆ ಹೊಗಳುವ ಶಿಕ್ಷಕನಿಗೆ, ಶಿಕ್ಷಿಸುವ ಪ್ರಮೇಯ ಬಂದಾಗ ಎಲ್ಲರ ಮುಂದೆ ಶಿಕ್ಷಿಸಬಾರದು ಎಂಬ ಪ್ರಜ್ಞೆ ಇದ್ದೇ ಇರುತ್ತದೆ. ಮಕ್ಕಳ ಕಲಿಕೆಯ ಬಗ್ಗೆ ಪೋಷಕರನ್ನು ಹೊರತುಪಡಿಸಿದರೆ ಶಿಕ್ಷಕನಲ್ಲೇ ಅತ್ಯಂತ ಹೆಚ್ಚು ತಾಳ್ಮೆ ಮತ್ತು ಕಾಳಜಿಯಿರುತ್ತದೆ. ನಾಳೆ ಪ್ರಶ್ನೆ ಕೇಳುತ್ತೇನೆ, ಇವಿಷ್ಟನ್ನು ಓದ್ಕೊಂಡು ಬನ್ನಿ ಅಂತ ಶಿಕ್ಷಕ ಹೇಳುವ ಮಾತಲ್ಲಿ ವಿದ್ಯಾರ್ಥಿಯ ಕಲಿಕೆಯ ಬಗೆಗಿನ ಕಾಳಜಿಯನ್ನು ಬಿಟ್ಟರೆ ಬೇರೇನನ್ನು ಕಾಣಲು ಸಾಧ್ಯವಿಲ್ಲ.


ಅವಲೋಕಿಸಿ ನೋಡಿ: ನಾವೆಲ್ಲ ನಮಗೆ ಕಲಿಸಿದ ಶಿಕ್ಷಕರು ಕೊಟ್ಟ ಏಟು, ಶಿಕ್ಷೆಯ ಬಗ್ಗೆಯೇ ಮಾತನಾಡಿಕೊಳ್ಳುತ್ತೇವೆ. ಆ ಮೇಷ್ಟ್ರು ಹಾಗೆ ಪಾಠ ಮಾಡ್ತಿದ್ರು, ಈ ಮೇಷ್ಟ್ರು ಹೀಗೆ ಹೊಡಿತಿದ್ರು, ಅವರು ಹೊಡೆತ ಅಂದರೆ ಉಚ್ಚೆ ಹೊಯ್ಕಬೇಕು ಅಂತೆಲೇ ಹೇಳುತ್ತೇವೆ. ಆ ಕಾಲದ ಶೈಕ್ಷಣಿಕ ಧೋರಣೆಗಳು ಹಾಗಿದ್ದವು. ಅಂದಿನ ಶಿಕ್ಷಕರ ಪ್ರಾಮಾಣಿಕತೆ ಮತ್ತು ಬದ್ಧತೆ ಹಾಗಿತ್ತು. ವಿದ್ಯಾರ್ಥಿಗಳೂ ಹಾಗೇ ಇದ್ದರು. ಹಾಗಂತ ಅವರು ಹೊಡೆದುದ್ದಕ್ಕಾಗಲೀ, ಶಿಕ್ಷೆ ಕೊಟ್ಟುದ್ದಕ್ಕಾಗಲೀ ನಮಗೆ ಅವರ ಮೇಲೆ ಪೂರ್ವಗ್ರಹ ಆಗಲೂ ಇಲ್ಲವಾಗಿತ್ತು, ಈಗಲೂ ಇಲ್ಲ. ಅವರೇನೇ ಮಾಡಿದರೂ ಅದು ನಮ್ಮ ಒಳ್ಳೆಯದಕ್ಕೆ ಅಂತ ನಾವು, ನಮ್ಮ ನಮ್ಮ ಮನೆಯ ಸದಸ್ಯರು ನಂಬಿದ್ದೆವು. ಆ ಕಾರಣವಾಗಿ ಈಗಲೂ ಅವರನ್ನು ನೆನಪು ಮಾಡುತ್ತಲೇ ಇರುತ್ತೇವೆ. ಅಂದು ಅವರಿಂದ ಕಲಿತ ಜೀವನಪಾಠ ನಮ್ಮ ಬದುಕಿಗೆ ದಾರಿದೀಪವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂದು ದಾರಿತಪ್ಪುವಂಥ ತಪ್ಪುಗಳು ನಮ್ಮಿಂದಾದಾಗ ಅದನ್ನವರು ತಿದ್ದದೇ ಹೋಗಿದ್ದರೆ ಇಂದು ಎಷ್ಟೋ ಜನರಲ್ಲಿ ಅವರುಗಳು ನೆನಪಲ್ಲಿ ಇರುತ್ತಿರಲಿಲ್ಲವೇನೋ! ಪರೀಕ್ಷೆಯಲ್ಲಿ ಫೇಲಾದಾಗ ಧೈರ್ಯ ತುಂಬಿದ ಅವರ ಕಣ್ಣಲ್ಲಿ ನಾವೆಲ್ಲ ಅವರ ಮನೆಯ ಮಕ್ಕಳಂತೆ ಬೆಳೆದವರು. ಈಗಲೂ ಅಂದಿನ ನಮ್ಮ ಶಿಕ್ಷಕರ ಮೇಲಿರುವ ಭಕ್ತಿ, ಪ್ರೀತಿ, ಗೌರವ ಕೊರತೆಯಾಗಿಲ್ಲ. ಇಂಥ ಪ್ರೀತಿ ಮತ್ತು ಕಾಳಜಿಯಿದ್ದಾಗ ಇಂಥ ಸಂಬಂಧಗಳು ಶಾಲೆ, ಶಿಕ್ಷಕ, ವಿದ್ಯಾರ್ಥಿ ಮತ್ತು ಸಮುದಾಯಗಳ ಮಧ್ಯೆ ಇರಲು ಸಾಧ್ಯವೇ ಹೊರತು ದಾರಿತಪ್ಪಿಸುವ ಅನ್ಯ ಬೆಂಬಲದ ಸಹಕಾರದಿಂದಲ್ಲ. ಯಾರೇ ಏನೇ ಹೇಳಿದರೂ ವಿದ್ಯಾರ್ಥಗಳ ಕಲಿಕೆಯ ಪ್ರಕ್ರಿಯೆಯಲ್ಲಿ ತರಗತಿಯಲ್ಲಿ ಶಿಕ್ಷಕನೇ ಆತ್ಯಂತಿಕ ಮಾರ್ಗದಾಯೀ ಆಗಿರುತ್ತಾನೆ. 


ಹೌದು, ಈಗ ಕಾಲ ಬದಲಾಗಿದೆ. ಶಿಕ್ಷೆಗೆ ಆಸ್ಪದವಿಲ್ಲ. ಶಿಕ್ಷೆ ಕೊಡುವುದು ತಪ್ಪು. ಸರಿ, ಆದರೆ ಕುಸಿಯುತ್ತಿರುವ ಶಿಕ್ಷಣದ ಬಗ್ಗೆ ನಮ್ಮ ಚಿಂತನೆಗಳೇನು? ಕಾಲವೂ ಬದಲಾಗಿದೆ; ಶಿಕ್ಷಕರ ಮನಸ್ಥಿತಿಯೂ ಬದಲಾಗಿದೆ. ಮಕ್ಕಳ ಕಲಿಕೆಯ ಮನಸ್ಥಿತಿಯೂ ಅಂದಿನಂತಿಲ್ಲ. ಶಿಕ್ಷೆ, ಶಿಕ್ಷಣ, ಶಿಕ್ಷಕ ಮತ್ತು ಕಲಿಕೆಯ ಕುರಿತಾಗಿ ಗಂಭೀರವಾಗಿ ಎಲ್ಲರೂ ಯೋಚಿಸಬೇಕಾದ ವಿಚಾರವಿದು. ಅಲ್ಲಮ ಒಂದು ವಚನ ನೆನಪಾಗುತ್ತದೆ: ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ, ಆಗಲಿ ಮಹಾಪ್ರಸಾದವೆಂದನಯ್ಯ, ತೇತ್ರಾಯಗದಲ್ಲಿ ಶ್ರೀ ಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ, ಆಗಲಿ ಮಹಾಪ್ರಸಾದವೆಂದನಯ್ಯ, ದ್ವಾಪರಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ, ಆಗಲಿ ಮಹಾಪ್ರಸಾದವೆಂದನಯ್ಯ, ಕಲಿಯಗದಲ್ಲಿ ಶ್ರೀ ಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ, ಆಗಲಿ ಮಹಾಪ್ರಸಾದವೆಂದನಯ್ಯ, ಗುಹೇಶ್ವರ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು. ಈ ಕಾಲದ ಕಟ್ಟಳೆಯೇ ಬಹು ವಿಚಿತ್ರವಾದುದು. ಬೆರಗು ಹುಟ್ಟಿಸುವಂಥದ್ದು ಎಂದು ಎಷ್ಟೋ ವರ್ಷಗಳ ಹಿಂದೆಯೇ ಅಲ್ಲಮನಂಥ ತಾತ್ವಿಕ ಚಿಂತನೆಯುಳ್ಳವರು ಹೇಳಿದ್ದು ಸತ್ಯವಾಗಿದೆ.  




- ಟಿ. ದೇವಿದಾಸ್


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top