ಇವತ್ತು ಮಾನವ ಉಪಯೋಗಿಯ ಎಲ್ಲಾ ವಸ್ತುಗಳೂ ಬಣ್ಣ ಬಣ್ಣದ ಹೊದಿಕೆಯ ಪ್ಯಾಕಿಂಗ್ನಲ್ಲಿರಬೇಕು. ನಾವು ಈ ದಿನಮಾನಗಳಲ್ಲಿ ಮನುಷ್ಯನ ಹೊರ ರೂಪ, ಢಾಂಬಿಕತನ, ನಾಜೂಕುತನದ ಮುಖವಾಡದ ಮರೆಯ ಕಪಟ ಮಾತು, ಸುಳ್ಳು ಭರವಸೆಗಳಿಗೆ ಟೋಪಿ ಬೀಳುತ್ತಲೇ ಇರುತ್ತೇವೆ.
ಎಲ್ಲಾ ಅಂಗಡಿಯಲ್ಲೂ 50% ಕಡಿತದ ಸೇಲ್ನ ಮರೆಯಲ್ಲಿ ಮಾಲಿನ ಬೆಲೆ ನೂರು ಪ್ರತಿಶತ ಹೆಚ್ಚಿಸಿ ಅದರಲ್ಲಿ ಐವತ್ತು ಪ್ರತಿಶತ ಕಡಿದದ್ದು ನಮ್ಮ ಅರಿವಿಗೇ ಬರೋಲ್ಲ...!!!
ವಿಪರ್ಯಾಸವೆಂದರೆ ಈ ಸರ್ಕಾರಿ ಸಬ್ಸೀಡಿ ಸ್ಕೀಮಿನ ತರಹದ ಕಪಟತನ, ಮೋಸಗಳು "ವ್ಯಾಪಾರಂ ದ್ರೋಹ ಚಿಂತನಾ" ಎಂಬ ಸ್ಲೋಗನ್ ಆಧಾರದಲ್ಲಿ ಪುಟ್ ಪಾಥ್ ವ್ಯಾಪಾರಿ ಗಳಿಂದ ಐಷರಾಮಿ ಮಾಲ್ ನ ತನಕ ತನ್ನ ಕಬಂಧ ಬಾಹುವನ್ನ ಚಾಚಿ ಗಟ್ಟಿಯಾಗಿ ಹಿಡಿದಿದೆ...!!
ಬಹಳ ವರ್ಷಗಳಿಂದ ನಮಗೆ ಬಳಪದ ಪಡ್ಡು ಯಾನೆ ಗುಳಿಯಪ್ಪನ ಕಾವಲಿ ಕೊಳ್ಳಬೇಕೆಂಬ ಆಸೆಯಲ್ಲಿ ಕಬ್ಬಿಣದ ಅಥವಾ ಯಾವುದೇ ಮೆಟಲ್ ನದ್ದು ಬೇಡ ಬಳಪದ ಕಲ್ಲಿನಿಂದ ತಯಾರಾದ ಪಡ್ಡು ಕಲ್ಲೇ ಬೇಕೆಂಬ ಹುಡುಕಾಟದಲ್ಲಿದ್ದೆವು.
ಕಾರ್ಯನಿಮಿತ್ತ ಉಡುಪಿಗೆ ಹೋದಾಗ ಅಲ್ಲಿ ಶ್ರೀಕೃಷ್ಣ ಮಠದ ಕನಕನ ಕಿಂಡಿಯ ಕನಕ ಮಂಟಪದ ಎದುರು ಒಬ್ಬ ಬಯಲು ಸೀಮೆಯವ "ಬಳಪದ ಪಡ್ಡು ಯಾನೆ ಗುಳಿಯಪ್ಪ"ದ ಕಲ್ಲನ್ನ ವ್ಯಾಪಾರ ಮಾಡ್ತಿದ್ದನ್ನ ನೋಡಿದೆವು. ಕರಿ ಕಪ್ಪನೇ ಮಿರ ಮಿರ ಮಿಂಚಿತ್ತಿದ್ದ ಬಳಪದ ಪಡ್ಡು ಕಲ್ಲು ನನ್ನನ್ನು ಆಕರ್ಷಿಸಿತು. ನಾನು ಆ ವ್ಯಾಪಾರಿಯ ಬಳಿ ಬೆಲೆ ಕೇಳಿದೆ. ಆತ ಆ ಮಾದರಿಯ ಪಡ್ಡು ಕಲ್ಲಿಗೆ ಆರನೂರು ರೂಪಾಯಿ ಹೇಳಿದ. ನಂತರ ನಾನು ಒರಿಜಿನಲ್ ಬಳಪದ ಬಣ್ಣದ ಬಳಪದ ಪಡ್ಡು ಕಲ್ಲು ಕೊಡು ಎಂದೆ. ಆದರೆ ಅವ ಬಳಪದ ಕಲ್ಲನ್ನ ತಯಾರಿಸುವಾಗ ಸುಟ್ಟಿರುತ್ತೇವೆ. ಆ ಮಸಿಗಾಗಿ ನಾವು ಕಲ್ಲಿನ ಮೇಲೆ ಬಣ್ಣ ಹಚ್ಚಿ ಇನ್ನಷ್ಟು ಕಪ್ಪು ಮಾಡಿದ್ದೇವೆ ಅಷ್ಟೇ" ಎಂದ.
ನಾನು ಕಲ್ಲನ್ನು ಮನೆಗೆ ತಂದು ತೊಳೆದು ಬಳಸಿದರಾಯಿತು ಎಂದು ಅವನಿಂದ ಪಡ್ಡು ಕಲ್ಲನ್ನು ಕೊಂಡು ಮನೆಗೆ ತಂದೆ.
ಮನೆಗೆ ತಂದು ನಾವು ಆ ಪಡ್ಡು ಕಲ್ಲನ್ನು ಚೆನ್ನಾಗಿ ತಿಕ್ಕಿ ತೊಳೆದು ಬಣ್ಣ ತೆಗೆದಾಗ ಆ ಬಳಪದ ಕಲ್ಲಿಗೇಕೆ ಕಪ್ಪು ಬಣ್ಣ ಹಚ್ಚಿದ್ದಾರೆಂದು ತಿಳಿಯಿತು.
ಬಳಪದ ಪಡ್ಡು ಕಲ್ಲಿನ ಮೇಲೆ ದೊಡ್ಡ ಎರಡು ಬಿರುಕುಗಳಿದ್ದವು. ಇದು ಬಳಪದ ಪಡ್ಡು ಕಲ್ಲನ್ನು ತಯಾರಿಸುವಾಗ ಆಗಿರಬಹುದು. ಈ ಬಿರುಕು ಬಳಪದ ಕಲ್ಲನ್ನ ಒಂದಷ್ಟು ದಿನ ಬಳಸಿದ ಮೇಲೆ ಈ ಬಿರಕು ಒಡೆದೇ ಹೋಗಿ ಎರಡು ತುಂಡಾಗುವುದರಲ್ಲಿ ಯಾವುದೇ ಅನುಮಾನವಿಲ್ಲ...!!
ಬಣ್ಣ ಎಲ್ಲಾ ಬಿರುಕು ಕೊಳಕು ಹುಳುಕನ್ನ ಮುಚ್ಚುತ್ತದೆ. ಅದಕ್ಕಾಗಿ ಈ ಕಲ್ಲುಗಳಿಗೆ ಕಪ್ಪು ಬಣ್ಣ ಹಚ್ಚಲಾಗಿದೆ.
ಬಳಪದ ಪಡ್ಡು ಕಲ್ಲು ತಯಾರಕರು ಕಲ್ಲು ತಯಾರಿಸುವಾಗ ಇಂತಹ ತಯಾರಿಕಾ ನ್ಯೂನತೆಯ ಕಲ್ಲಿಗೆ ಬಣ್ಣ ಹಚ್ಚಿ ಹೀಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟಕ್ಕೆ ಇಡುತ್ತಾರೆ. ನಾನು ಪಡ್ಡು ಕಲ್ಲು ಕೊಂಡು ತಂದ ವ್ಯಾಪಾರಿಯ ಬಳಿ ಮಾರಾಟಕ್ಕೆ ಇಟ್ಟಿದ್ದ ಬಹುತೇಕ ಎಲ್ಲಾ ಕಲ್ಲುಗಳೂ ತಯಾರಿಕಾ ನ್ಯೂನತೆಯ ಕಲ್ಲು ಎನಿಸುತ್ತದೆ. ಇದು ತಯಾರಿಕರು ಮಾರಾಟಗಾರರ ಈ ಕಾಲದ ದ್ರೋಹ ಚಿಂತನೆಯ ವ್ಯಾಪಾರ..!!
ಕೆಲವು ವರ್ಷಗಳ ಹಿಂದೆ ನನ್ನ ಬಂಧುಗಳೊಬ್ಬರು ಕಾಪರ್ ಬಾಟಮ್ ನ ಬಾಣಲೆ ಕಡಿಮೆ ದರಕ್ಕೆ ಸಿಕ್ಕಿತು ಎಂದು ಕೊಂಡಿದ್ದರು. ನಂತರದ ದಿನಗಳಲ್ಲಿ ಬಾಣಲೆ ಬುಡವನ್ನ ತಿಕ್ಕಿ ತಿಕ್ಕಿ ಉಜ್ಹಿದಾಗ ತಾಮ್ರದ ಬಣ್ಣ ತೊಳೆದು ಹೋಯಿತು.
ಈ ನಾನ್ ಸ್ಟಿಕ್ ಕೂಡ ಅತ್ಯಂತ ಅಪಾಯಕಾರಿ ರಾಸಾಯನಿಕಯುಕ್ತ.. ದಯವಿಟ್ಟು ನೋಡಲು ಮುದ್ದು ಮುದ್ದು ಎಂದು ಯಾವುದೇ ನಾನ್ ಸ್ಡಿಕ್ ಪಾತ್ರೆ ಕೊಂಡು ಬಳಸಬೇಡಿ... ನಾನ್ ಸ್ಟಿಕ್ ದೋಸೆ ತವಾ ದಲ್ಲಿ ದೋಸೆಯ ಜೊತೆಗೆ ನಾನ್ ಸ್ಟಿಕ್ ಬಣ್ಣ ಕೂಡ ಹೊಟ್ಟೆಯೊಳಗೆ ಹೋಗುತ್ತದೆ. ಕಪ್ಪು ಕಪ್ಪು ನಯಸ್ ನ ನಾನ್ ಸ್ಟಿಕ್ ತವ ಕೊಳ್ಳಬೇಡಿ.
ನಿಮ್ಮೂರಿನ ಅಧಿಕೃತ ಸ್ಟೀಲ್ ಪಾತ್ರೆ ಅಂಗಡಿಯಲ್ಲೇ ಸ್ಟೀಲ್ ಪಾತ್ರೆ ಪಡಗ ಕೊಳ್ಳಿ.
ಹೊರಗಡೆ ಕಮ್ಮಿ ಎಂದು ಕೊಂಡರೆ "ರೀ ಸೈಕಲ್ ಪಾತ್ರೆಗಳೂ", ಅಪಾಯಕಾರಿ ಅಲ್ಯುಮಿನಿಯಮ್ ಪಾತ್ರೆಗಳು (ಕೆಲವೊಮ್ಮೆ ಸ್ಟೀಲ್ ಪಾತ್ರೆಯ ಬಣ್ಣದಲ್ಲಿ ಸಿಗುತ್ತದೆ) ನಿಮ್ಮ ಮನೆ ಸೇರಿ ಆಹಾರ ತಯಾರಿಸುವಾಗ ಆಹಾರದ ಮೂಲಕ ನಿಮ್ಮ ದೇಹವನ್ನು ಸೇರುತ್ತದೆ.
ನಿಮ್ಮೂರ ಯಾವುದೋ ಒಂದು ಸ್ಟೀಲ್ ಪಾತ್ರೆ ಅಂಗಡಿಲಿ ಪಾತ್ರೆ ಬೆಲೆ ಹೆಚ್ಚು ಎಂದಾದರೆ ಅಲ್ಲಿ ಪಾತ್ರೆ ಗುಣಮಟ್ಟ ಇದೆ ಎಂದರ್ಥ.
ಗುಣಮಟ್ಟದ ವಸ್ತುಗಳಿಗೆ ಬೆಲೆ ಯಾವತ್ತೂ ಹೆಚ್ಚು ಇರುತ್ತದೆ. ನಾವು ನಮ್ಮ ಆಹಾರದ ವಿಚಾರದಲ್ಲಿ ಗುಣಮಟ್ಟ ಕ್ಕೆ ಆದ್ಯತೆ ನೀಡಲೇಬೇಕಾಗುತ್ತದೆ.
ಬಣ್ಣ ಬಣ್ಣದ ಪ್ಯಾಕಿಂಗ್, 50% ಆಫ್ ಗಳು ಖಂಡಿತವಾಗಿಯೂ ನ್ಯಾಯವಲ್ಲ.
ಬೀದಿ ಬದಿಯ ಪಾತ್ರೆ, ಪ್ಲಾಸ್ಟಿಕ್ ಸಾಮಾನುಗಳು, ಮನೆ ಬಾಗಿಲಿಗೆ ಹೊತ್ತು ತರುವ ರಗ್ಗು ಬೆಡ್ ಷೀಟ್ ಗಳು ನೂರಕ್ಕೆ ತೊಂಬತ್ತರಷ್ಟು ಮೋಸವೇ.
ಪ್ರಬಂಧ ಅಂಬುತೀರ್ಥ
9481801869
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ