ಹಿಂದೆ 1924-25 ಇಸವಿಯಲ್ಲಿ, ನಂಜನಗೂಡಿನಲ್ಲಿ ಜಿ.ವಿ.ಅಯ್ಯರ್ ಅವರ ತಂದೆ ಸ್ಥಾಪಿಸಿದ್ದ, ಶ್ರೀಕಂಠೇಶ್ವರ ನಾಟಕ ಮಂಡಳಿ, ಮಕ್ಕಳ ನಾಟಕ ಕಂಪನಿ ಮಾಡಿ ಮಕ್ಕಳ ಬಳಿ ನಾಟಕ ಆಡಿಸ್ತಿದ್ರು. 1927ರಲ್ಲಿ ಗುಬ್ಬಿ ಕಂಪನಿ ಅಲ್ಲಿಗೆ ಬಂತು. ನಾಟಕದ ಚಟ ಇದ್ದಿದ್ದರಿಂದ, ಕಂಪನಿಯ ತಟಿಕೆ ಹರಕೊಂಡು ಹೋಗಿ ನಾಟಕ ನೋಡ್ತಾ, ಬೆನ್ನತ್ತಿ ಬಂದವರು ಬೆನ್ನ ಮೇಲೆ ಬಾರಿಸಿದಾಗ, ಅಳ್ತಾ ಹೋಗ್ತಿದ್ರು ಹೊರಗೆ ಅಯ್ಯರ್. ಮನೆಯಲ್ಲಿ ಹೇಳದೆ ಕೇಳದೇ ಆ ಕಂಪನಿ ಜೊತೆ ಓಡಿ ಹೋಗಿ ಗುಬ್ಬೀ ಕಂಪನಿ ವಾಲ್ಪೋಸ್ಟರ್ ಅಂಟಿಸೋ ಕೆಲಸ ಮಾಡಿದ್ರು ಅಯ್ಯರ್. ರಂಗದ ಮೇಲೆ ಪರಿಚಯವಿದ್ದವರು, 2 ಹೊತ್ತು ಅನ್ನ ಹಾಕಿಸ್ತಿದ್ರು. ಸುಮ್ನೆ ಅನ್ನ ತಿಂತಾನೆ ಅಂತ ರಾಮಯ್ಯನಿಗೆ ಸಹಾಯಕರಾಗಿ, ಊರೆಲ್ಲಾ ನಾಟಕದ ವಾಲ್ಪೋಸ್ಟರ್ ಅಂಟಿಸ್ತಿದ್ರು. ಆಮೇಲೆ ಜೋಧಾ ಸಿಂಧಿಯಾ ಹೇರ್ ಅನ್ನುವ ದೊಡ್ಡ ಪೇಂಟರ್, ಬಣ್ಣ ಕಲಸೋ ಕೆಲಸಕ್ಕೆ ಅಯ್ಯರನ್ನು ಹಾಕಿಕೊಂಡ್ರು. ನಾಟಕದ ಬೋರ್ಡು ಬರೆದ್ರು. 3 ವರ್ಷ ನಟನಾಗುವ ಕನಸು, ಹಾಗೆ ಉಳಿಯಿತು. ಚಿಕ್ಕ ಒಂದು ಪಾತ್ರ ಸಿಕ್ಕಿತು. 6 ತಿಂಗಳು ಮಾತು ಗಟ್ಟಿ ಮಾಡಿಕೊಂಡು, ಅದನ್ನು ಒಪ್ಪಿಸಲು ಶ್ರಮಪಟ್ರು. ನಾಟಕ 'ಕೃಷ್ಣಗಾರುಡಿ'. ಅದರಲ್ಲಿ ಧೌಮ್ಯನ ಪಾತ್ರ. 6 ತಿಂಗಳು ಪ್ರಾಕ್ಟೀಸ್ ಮನೇಲಿದ್ದವರ ಕಾಲು ಒತ್ತಿ ಶುಶ್ರೂಷೆ ಮಾಡಿ, ಆ ಪಾರ್ಟು ಗಿಟ್ಟಿಸಿದ್ದರು.
ಆಗ ಅಯ್ಯರ್ ವಯಸ್ಸು 14-15. ಗುಬ್ಬೀ ಕಂಪನಿಯ ನಾಟಕದ ಮೊದಲ ಮಾತು ಧೌಮ್ಯನದು. ಮಾತು ಸರಿಯಾಗಿ ಬರದಿದ್ರೆ ನಾಟಕ ಕೆಟ್ಟುಹೋಯ್ತು ಅಂತ ಪ್ರತೀತಿ. ಹಾಗಾದ್ರೆ ಹಾರ್ಮೋನಿಯಂ ಅನ್ನು ತಕ಼ಣ ಬಾರಿಸುತ್ತಿದ್ದ “ಏನ ಪೇಳಿದೆ ಎಲೆ ಸಚಿವ”. ಗ್ರೀನ್ರೂಂಲಿದ್ದವರೆಲ್ಲ ಬಂದು, ಸೈಡ್ವಿಂಗ್ಸ್ನಲ್ಲಿ ನಿಂತು, ಕೆಕ್ಕರಿಸಿಕೊಂಡು, “ಇಷ್ಟಿಷ್ಟು ಅನ್ನ ಊಟ ಮಾಡಲು ಮಾತ್ರ ಈತ ಲಾಯಕ್ಕು” ಅಂತ ಅಭಿನಯಿಸ್ತಿದ್ರು. 72-73 ರಲ್ಲಿ ಅಯ್ಯರ್ಗೆ ಬೆಳೆದಿದ್ದ ನಿಜವಾದ ಗಡ್ಡದ ರೀತಿ, 14-15 ವರ್ಷದ ಬಾಲ ಅಯ್ಯರ್, ಅಂದು ಕೃತಕ ಗಡ್ಡ ಅಂಟಿಸಿಕೊಂಡಿದ್ರು ಕಲಾತ್ಮಕವಾಗಿ (ಪೇಂಟರ್ ಆಗಿದ್ರಿಂದ) ಒಂದೊAದಾಗಿ ಬಿಡಿಯಾಗಿ, ಕುರಿ ತುಪ್ಪಳ ಅಂಟಿಸಿಕೊAಡ್ರು. ಸೊಗಸಾದ ಮೇಕಪ್. ಮೊದಲು ಗುಂಪುಗೀತೆ. ನಂತರ ಧೌಮ್ಯನ ಸರದಿ. ಬಹಳ ನಿರೀಕ್ಷೆಯಿಂದ ಹೋಗಿ ನಿಂತ್ರೆ, footlight ಸೆಕೆ, ಕಣ್ಣಿಗೆ ಹೊಡೀತಿತ್ತು. ಬೆಳ್ಳಾವೆ ನರಹರಿಶಾಸ್ತ್ರಿಗಳು ಬರೆದ ದೊಡ್ಡ ಮಾತು.
“ಭಾರತ ಭೂ ಚಕ್ರವತಿಯಾದ ಧರ್ಮನಂದನನೇ, ಲೋಕವಿಖ್ಯಾತ ನಿರ್ಮಲ ಚಂದ್ರವAಶ ಪಯೋನಿಧಿಯಲ್ಲಿ, ಕಲ್ಪವೃಕ್ಷದಂತೆ ಜನಿಸಿ, ಭೀಮ, ಅರ್ಜುನ ನಕುಲ ಸಹದೇವರೆಂಬ ಚತುರ್ಭುಜಗಳಿಂದ ಪರಿಶೋಭಿತನಾಗಿ, ಧರ್ಮಾವತಾರನೆನಿಸಿರುವ ನಿನ್ನ ಈ ಸಾಮ್ರಾಜ್ಯ, ಪಟ್ಟಾಭಷೇಕವನ್ನು ನೆರವೇರಿಸಿ, ನಿಮ್ಮೆಲ್ಲರನ್ನೂ ಆಶೀರ್ವದಿಸಿ, ಅಪೂರ್ವ ನೇತ್ರಾನಂದವನೂ, ಅತ್ಯಂತ ಚಿತ್ತ ಸಂತೋಷವನ್ನೂ ಹೊಂದುವ, ಸುಯೋಗವು ದೊರೆತ ಈ ದಿನವೇ, ನಮಗೆ ಶುಭದಿನವು” ಹೀಗೆ 3 ಪುಟದ ಡೈಲಾಗ್. ಅಯ್ಯರ್ಗೆ ಧೈರ್ಯ ಇತ್ತು. ಬೆವತಿದ್ದ ಅಯ್ಯರ್ ಮೊದಲ ವಾಕ್ಯ ಹೇಳಿದೊಡನೆ, ಅಂಟಿಸಿದ್ದ ಮೀಸೆ ಬಾಯಲ್ಲಿ ಬಂತು. ಮೀಸೆ ಹೋದ ಭರದಲ್ಲಿ, ಬೆನ್ನು ತಿರುಗಿಸಿದಾಗ, ಎಲ್ಲ ಮರೆತೇ ಹೋಯ್ತು. ಕೊನೆ ವಾಕ್ಯ ಹೇಳ್ಬಿಟ್ರು. “ಈ ಸಂದರ್ಭದಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇನೆ.” ಹಾರ್ಮೋನಿಯಂನನ್ನು “ಏನ ಪೇಳುವೆ ಎಲೆ ಸಚಿವ” ಬಾರಿಸಿಯೇಬಿಟ್ಟ ಕಲಾವಿದರು ಹಂಗಿಸಿದ್ರು, ಅಪಹಾಸ್ಯ ಮಾಡಿದ್ರು. ಆಗ ನಾರದ ವಿಡಂಬನೆ ಮಾಡಿದ ಪೂಜ್ಯರಾದ ಧೌಮ್ಯರು ಬಹಳ ಪ್ರಯಾಸಪಟ್ಟು, ಧರ್ಮನಂದನ ನಿನ್ನನ್ನು ಆಶೀರ್ವದಿಸಿದರು” ಅಂದ್ರು. ಅಂದು ಪಾರ್ಟು ತಪ್ಪಿದ್ದು, ಮತ್ತೆ 6 ತಿಂಗಳು ರಂಗದ ಹೊಸಿಲು ಹತ್ತಲು ಅವಕಾಶ ಸಿಗಲಿಲ್ಲ. ನಂತರ ಒಂದೇ ಮಾತು. ಆ ಪಾತ್ರದ ಮಾತು ‘ಸುಭದ್ರಾ ಪರಿಣಯದಲ್ಲಿ’. “ಸುಭದ್ರೆ ಹತ್ತಿರ ಅರ್ಜುನ ಹೋಗಬಾರದು” ಅಂತ ಕೃಷ್ಣನ ಬಳಿ ಮೊರೆಯಿಡುವ ಸೇವಕನ ಪಾತ್ರ. Action ಮಾಡಿ Timing ಮಾಡಿ ಹೇಳಿದ ಡೈಲಾಗ್ ಕೇಳಿ ಗುಬ್ಬಿ ವೀರಣ್ಣ ಅವರ ಗಮನ ಸೆಳೆದ್ರು. ಇದು ಕಂಪನಿ ಸೇರಿದ 5 ವರ್ಷದ ನಂತರ ನಡೆದದ್ದು. ಒಳಗಡೆ ಬಂದು ಬೆನ್ನು ತಟ್ಟಿ “ಚೆನ್ನಾಗಿ ಮಾಡಿದೆ ಪಾರ್ಟು” ಅಂದ್ರು ವೀರಣ್ಣನವರು. ಅವತ್ನಿಂದ 5.ರೂ ಸಂಬಳ ತಿಂಗಳಿಗೆ.
ಇಂತಹ ಹಿನ್ನೆಲೆಯ ಜಿ.ವಿ.ಅಯ್ಯರ್ ಅವರು ಮುಂದೆ ರಂಗಭೂಮಿ ಚಲನಚಿತ್ರ ಕ್ಷೇತ್ರಗಳ ಭೀಷ್ಮರಾದುದು ಹೇಗೆ? ಜಿ.ವಿ.ಅಯ್ಯರ್:-ಕನ್ನಡ ಚಿತ್ರರಂಗದ ಭೀಷ್ಮ ಎಂಬ ಪ್ರಖ್ಯಾತಿಯ ಜಿ ವಿ ಅಯ್ಯರ್ (ಸೆಪ್ಟೆಂಬರ್ 3, 1917 - ಡಿಸೆಂಬರ್ 21, 2003) ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು. ಆರಂಭದ ದಿನಗಳು:- ಜಿ.ವಿ.ಅಯ್ಯರ್ ಅವರ ಪೂರ್ಣ ಹೆಸರು ಗಣಪತಿ ವೆಂಕಟರಮಣ ಅಯ್ಯರ್. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಹುಟ್ಟಿದ ಜಿ.ವಿ.ಅಯ್ಯರ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮೈಸೂರಿನ "ಸದಾರಮೆ" ನಾಟಕ ಕಂಪನಿಯಲ್ಲಿ, ಹಾಗೂ ಗುಬ್ಬಿ ನಾಟಕ ಕಂಪನಿಯಲ್ಲಿ ಪರಿಚಾರಕರಾಗಿ, ಪೋಸ್ಟರ್ ಬರೆಯುವವರಾಗಿ ಕೆಲಸ ಮಾಡಿದರು. ನಂತರ ಅವಕಾಶಗಳನ್ನರಸಿ ಪುಣೆಗೆ ಹೋದ ಅಯ್ಯರ್, ಹೋಟೆಲ್ ಮಾಣಿಯಾಗಿದ್ದುಕೊಂಡೇ ಚಿತ್ರರಂಗದಲ್ಲಿನ ಅವಕಾಶಗಳಿಗೆ ಪ್ರಯತ್ನಿಸಿದರು. ಅದು ಫಲಕಾರಿಯಾಗದೇ, ಕರ್ನಾಟಕಕ್ಕೆ ಹಿಂದಿರುಗಿದರು.
ಚಿತ್ರರಂಗ: 1943ರಲ್ಲಿ ರಾಧಾರಮಣ ಚಿತ್ರದ ಕೇಶಿದೈತ್ಯನ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1954ರಲ್ಲಿ ಬಿಡುಗಡೆಯಾದ ಬೇಡರ ಕಣ್ಣಪ್ಪ ಚಿತ್ರದ ಕೈಲಾಸನ ಪಾತ್ರದಲ್ಲಿನ ಅಭಿನಯ ಅಯ್ಯರ್ ಅವರಿಗೆ ಜನಪ್ರಿಯತೆಯನ್ನು ಒದಗಿಸಿತು. ಚಲನಚಿತ್ರಗಳಲ್ಲಿ ನಟಿಸುತ್ತಿದ್ದರೂ, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.1955ರಲ್ಲಿ ತೆರೆಕಂಡ ಸೋದರಿ ಚಿತ್ರದಲ್ಲಿನ ಹಾಡುಗಳು ಮತ್ತು ಸಂಭಾಷಣೆ ಬರೆಯುವುದರೊಂದಿಗೆ ಚಲನಚಿತ್ರ ಸಾಹಿತಿಯಾಗಿ ಕೆಲಸ ನಿರ್ವಹಿಸಲು ಪ್ರಾರಂಭಿಸಿದರು. ಭೂದಾನ (1962) ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾದರು. ಕನ್ನಡದ ಕಲಾವಿದರು ಸಂಕಷ್ಟದ ಸ್ಥಿತಿಯಲ್ಲಿರುವಾಗ, ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಇವರನೊಡಗೂಡಿ ಕನ್ನಡ ಕಲಾವಿದರ ಸಂಘವನ್ನು ಸ್ಥಾಪಿಸಿ, ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡ ಚಿತ್ರೋದ್ಯಮ ನೆಲೆ ನಿಲ್ಲಲು, ಕಲಾವಿದರು ಬದುಕಲು ಮಾರ್ಗಗಳನ್ನು ಹುಡುಕಿದರು. ಈ ಸಂಘದ ಗೆಳೆಯರೊಡನೆ ರಣಧೀರ ಕಂಠೀರವ ಚಲನಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದರು. ಜಿ.ವಿ.ಅಯ್ಯರ್ ಪ್ರಸಿದ್ಧಿ ಪಡೆದಿರುವುದು ಚಿತ್ರ ನಿರ್ದೇಶಕರಾಗಿ. ಒಟ್ಟು ಸುಮಾರು 65 ಚಿತ್ರಗಳಲ್ಲಿ ನಿರ್ದೇಶಕರಾಗಿ ಅಥವಾ ನಿರ್ಮಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಜಿ.ವಿ.ಅಯ್ಯರ್ 1975 ರಿಂದ ಮುಂದಕ್ಕೆ ಬಾಕ್ಸ್ ಆಫೀಸನ್ನು ಲೆಕ್ಕಿಸದೆ ಕಲಾತ್ಮಕ ಚಿತ್ರಗಳತ್ತ ತಿರುಗಿದರು. ಸಂಸ್ಕೃತ ಭಾಷೆಯಲ್ಲಿ ಅನೇಕ ಪ್ರಸಿದ್ಧ ಚಿತ್ರಗಳನ್ನು ನಿರ್ದೇಶಿಸಿದ್ದಲ್ಲದೆ ಹಿಂದಿ ಭಾಷೆಯಲ್ಲಿಯೂ ನಿರ್ದೇಶನ ಮಾಡಿದರು. 1954 ರಲ್ಲಿ "ಬೇಡರ ಕಣ್ಣಪ್ಪ" ನಾಟಕವನ್ನೂ ನಿರ್ದೇಶಿಸಿದ್ದರು.ಇವರು ನಿರ್ದೇಶಿಸಿದ ಪ್ರಥಮ ಸಂಸ್ಕೃತ ಚಿತ್ರ "ಆದಿ ಶಂಕರಾಚಾರ್ಯ"ಭಾರತದ ಅತ್ಯುತ್ತಮ ಚಿತ್ರವೆನಿಸಿ "ಸ್ವರ್ಣ ಕಮಲ "ಪ್ರಶಸ್ತಿ ಗಳಿಸಿದೆ.
ನಿರ್ದೇಶಿಸಿದ ಚಲನಚಿತ್ರಗಳು- ಕನ್ನಡ- ಭೂದಾನ (1962), ತಾಯಿಕರುಳು (1962), ಲಾಯರ್ ಮಗಳು (1963), ಬಂಗಾರಿ (1963), ಪೋಸ್ಟ್ ಮಾಸ್ಟರ್ (1964), ಕಿಲಾಡಿ ರಂಗ (1966), ರಾಜಶೇಖರ (1967), ಮೈಸೂರು ಟಾಂಗ (1968), ಚೌಕದ ದೀಪ (1969), ಹಂಸಗೀತೆ (1975), ನಾಳೆಗಳನ್ನು ಮಾಡುವವರು (1979), ಮಧ್ವಾಚಾರ್ಯ (1986), ಚಿತ್ರಕಥೆ: ರಣಧೀರ ಕಂಠೀರವ (1960) ಹಾಗೂ ಸಂಸ್ಕೃತ: ಭಗವದ್ಗೀತಾ (1993), ಆದಿ ಶಂಕರಾಚಾರ್ಯ (1983), ತಮಿಳು: ರಾಮಾನುಜಾಚಾರ್ಯ (1989), ಹಿಂದಿ: ಆಖ್ರೀ ಗೀತ್ (1975), ಸ್ವಾಮಿ ವಿವೇಕಾನಂದ. ಜಿ.ವಿ.ಅಯ್ಯರ್ ನಿರ್ಮಾಣದ ಕನ್ನಡ ಚಲನಚಿತ್ರಗಳು:- ರಣಧೀರ ಕಂಠೀರವ (1960), ತಾಯಿಕರುಳು (1962), ಲಾಯರ್ ಮಗಳು (1963), ವಂಶವೃಕ್ಷ (1972), ಹಂಸಗೀತೆ (1975), ನಾಳೆಗಳನ್ನು ಮಾಡುವವರು (1979) ಹಾಗೂ ಜಿ.ವಿ.ಅಯ್ಯರ್ ಸಾಹಿತ್ಯದಲ್ಲಿನ ಪ್ರಮುಖ ಚಿತ್ರಗೀತೆಗಳು: ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ, ಕನ್ನಡದ ಕುಲದೇವಿ, ಕಾಪಾಡು ಬಾ ತಾಯೆ, ಬಾ ತಾಯೆ ಭಾರತಿಯೇ.
ನಿಧನ: 1975ರಲ್ಲಿ "ಆಚಾರ್ಯ"ಬಿರುದನ್ನು ಪಡೆದ ಅಯ್ಯರ್ ತಮ್ಮ ಬದುಕಿನ ಶೈಲಿಯನ್ನು ಬದಲಾಯಿಸಿಕೊಂಡರು. ಅದರಲ್ಲಿ ಚಪ್ಪಲಿ ತೊಡುವುದನ್ನು ತ್ಯಜಿಸಿ ಮುಂದೆ ಬರಿಗಾಲಲ್ಲೇ ನಡೆದಾಡಿದರು. ಜಿ.ವಿ. ಅಯ್ಯರ್ ಬಾಣಭಟ್ಟನ ಸಂಸ್ಕೃತ ಕೃತಿಯಾದ "ಕಾದಂಬರಿ"ಯನ್ನು ಚಿತ್ರೀಕರಿಸುವ, ಹಾಗೂ ರಾಮಾಯಣ ಮಹಾಕಾವ್ಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಚಿತ್ರಿಸುವ ಯೋಚನೆಯಲ್ಲಿದ್ದರು. ಈ ಕುರಿತ ಚರ್ಚೆಗಾಗಿ ಮುಂಬೈಗೆ ತೆರೆಳಿದ್ದಾಗಲೇ 2003 ಡಿಸೆಂಬರ್ 21ರಂದು ಮೂತ್ರ ಪಿಂಡದ ಸೋಂಕಿನಿಂದ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ