ಸುಂದರ ಬದುಕಿಗೆ ಚೌಕಟ್ಟು ಅಗತ್ಯ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಇಡೀ ಶಿಷ್ಯವರ್ಗ ಒಂದು ಚೌಕಟ್ಟಿನಲ್ಲಿ ಬರಬೇಕು ಎನ್ನುವುದು ಶ್ರೀಮಠದ ಅಪೇಕ್ಷೆ. ಎಷ್ಟೇ ಸುಂದರ ಚಿತ್ರಕ್ಕೂ ಶೋಭೆ ಬರಬೇಕಾದರೆ ಆಕರ್ಷಕ ಚೌಕಟ್ಟು ಬೇಕು. ಅಂತೆಯೇ ಬದುಕು ಸುಂದರವಾಗಬೇಕಾದರೆ ಬದುಕಿಗೂ ಒಂದು ಚೌಕಟ್ಟು ಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.


ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 46ನೇ ದಿನವಾದ ಬುಧವಾರ ಉಪ್ಪಿನಂಗಡಿ ಮಂಡಲದ ವೇಣೂರು, ಉಜಿರೆ, ಉರುವಾಲು, ಉಪ್ಪಿನಂಗಡಿ, ಕಬಕ ಮತ್ತು ಮಾಣಿ ವಲಯಗಳ ಭಕ್ತರ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿ, "ಮಠಕ್ಕೆ ಹೇಗೆ ನಿಗದಿತ ನೀತಿ, ಚೌಕಟ್ಟು ಇದೆಯೋ, ಶಿಷ್ಯರಿಗೂ ಇದು ಬೇಕು. ನಿರ್ದಿಷ್ಟ ಚೌಕಟ್ಟಿನ ಒಳಗೆ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು" ಎಂದರು.


ಉಪ್ಪಿನಂಗಡಿ ಭಾಗದ ಶಿಷ್ಯರು ಮಠದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಊಟಕ್ಕೆ ಉಪ್ಪು ಎಷ್ಟು ಮಹತ್ವದ್ದೋ ಹಾಗೆ ಉಪ್ಪಿನಂಗಡಿ ಮಠಕ್ಕೆ ಅಷ್ಟು ಮಹತ್ವದ್ದು. ಬದುಕಿನಲ್ಲಿ ಸಮತೋಲನ ತಪ್ಪದಂತೆ ಹೇಗಿರಬೇಕು ಎನ್ನುವುದನ್ನು ಪ್ರತಿನಿತ್ಯ ನೆನಪಿಸುವ ರಸ ಉಪ್ಪು; ಪದಾರ್ಥಕ್ಕೆ ಉಪ್ಪು ರುಚಿ ಕೊಡುವಂತೆ ಜೀವನದಲ್ಲಿ ಸಮತೋಲನ ಸಾಧಿಸಬೇಕು ಎನ್ನುವ ಪಾಠವನ್ನು ಇದು ಸದಾ ನೆನಪಿಸುತ್ತದೆ ಎಂದು ವಿವರಿಸಿದರು.


ಶ್ರೀಮಠದ ವಿಕಾಸದಲ್ಲಿ, ಅಭಿವೃದ್ಧಿ ಕಾರ್ಯದಲ್ಲಿ ಉಪ್ಪಿನಂಗಡಿ ಇಂಥದ್ದೇ ಪಾತ್ರ ವಹಿಸಿದೆ. ಸಂಪನ್ಮೂಲ ಮತ್ತು ಸಮಯಕ್ಕೆ ವಿಶೇಷ ಮಹತ್ವ ಇದೆ. ತಮ್ಮ ಅಮೂಲ್ಯ ಸಮಯ ಮತ್ತು ಸಂಪನ್ಮೂಲವನ್ನು ಮಠಕ್ಕಾಗಿ ನೀಡಿದ ಬಹಳಷ್ಟು ಶಿಷ್ಯರು ಈ ಭಾಗದಲ್ಲಿದ್ದಾರೆ. ಮಠ ಎನ್ನುವುದು ಎಲ್ಲರ ಮನೆ; ಇಡೀ ವರ್ಷ ಇಲ್ಲಿಗೆ ಶಿಷ್ಯರು ಬಂದಷ್ಟೂ ಸಂತೋಷ. ಹೆಚ್ಚು ಹೆಚ್ಚು ಮಠಕ್ಕೆ ಬಂದು ಸೇವೆ ಸಲ್ಲಿಸಿ ಎಂದು ಆಶಿಸಿದರು.


ವಿಶೇಷ ಕುಸುರಿ ಕೆಲಸದ ಕಲಾವಿದ ಕಾಷ್ಟಶಿಲ್ಪಿ ಕೊಂಕಣಾಜೆ ಶಂಕರ ನಾರಾಯಣ ಭಟ್ಟ ವಿಶೇಷತೆ ಇಂದು ಅನಾವರಣಗೊಂಡಿದೆ. ಕಾಷ್ಟಶಿಲ್ಪಕ್ಕೆ ಬೌದ್ಧಿಕ ತಂತ್ರಜ್ಞನಾಗಿ ಕಲಾತ್ಮಕ ಅಂಶಗಳನ್ನು ಸೇರಿಸುವ ಇವರ ಕಲೆ ಅಪೂರ್ವ. ಅವರದ್ದು ಮರದ ಕೆಲಸ ಮಾಡುವ ಚಿನ್ನದ ಕೈ. ಮರವನ್ನು ಕೆತ್ತುವ ಅಮರ ಕೈ ಇದು. ಶ್ರೀಮಠಕ್ಕೆ ತುಂಬಾ ನಿಷ್ಠೆಯಿಂದ ಇರುವ ಕಲಾಕುಟುಂಬದ ಸೇವೆ ಸಮಾಜಕ್ಕೆ ಇನ್ನಷ್ಟು ಲಭಿಸಲಿ ಎಂದು ಹಾರೈಸಿದರು.


ಒಂದು ವಸ್ತು ನಿಮ್ಮ ಕೈಗೆ ಬರುವಾಗ ಹೇಗಿತ್ತು ಅದು ನಂತರ ಅದು ಹೇಗೆ ಮಾರ್ಪಾಡಾಗುತ್ತದೆ ಎನ್ನುವುದು ಮುಖ್ಯ. ಕೊಂಕಣಾಜೆಯವರ ಕೈಗೆ ಸಿಕ್ಕಿದ ಮರದ ತುಂಡು ಅಪೂರ್ವ ಕಲಾಕೃತಿಯಾಗಿ ರೂಪುಗೊಳ್ಳುತ್ತದೆ ಎಂದು ಬಣ್ಣಿಸಿದರು.


ಹಿರಿಯ ಗುರಿಕ್ಕಾರರಾದ ಮುದ್ರಜೆ ಗೋವಿಂದ ಭಟ್ ಇಂದಿನ ಅನಾವರಣ ನೆರವೇರಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಪದಾಧಿಕಾರಿಗಳಾದ ಹೇರಂಬ ಶಾಸ್ತ್ರಿ, ಈಶ್ವರಪ್ರಸಾದ್ ಕನ್ಯಾನ, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ವಿವಿವಿ ಪ್ರಾಂತ ಉಪಾಧ್ಯಕ್ಷ ಪರಮೇಶ್ವರ ಭಟ್, ವಿವಿವಿ ಮಂಡಲ ಅಧ್ಯಕ್ಷೆ ಶೈಲಜಾ ಕೆ.ಟಿ, ಕಾರ್ಯದರ್ಶಿ ಶ್ರೀಧರ ಭಟ್, ಚಾತುಮಾಸ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ಈಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top