ಮಂಗಳೂರು: ಯಕ್ಷಗಾನವು ಆರ್ಥಿಕ ಬೆಂಬಲದಿಂದ ಬೆಳಗುವ ರಾಜಕಲೆ. ಅದಕ್ಕೆ ಬೆಂಬಲ- ಪ್ರೋತ್ಸಾಹ ಸದಾ ದೊರೆತ ಕಾರಣದಿಂದ ಅದು ಇಂದು ವಿಶ್ವಮಾನ್ಯ ಕಲೆಯಾಗಿ ಮೆರೆಯುತ್ತಿದೆ. ಎಲ್ಲಾ ದೇವಾಲಯಗಳೂ ಇದಕ್ಕೆ ಸಹಕರಿಸಬೇಕು. ಅಂತೆಯೇ ಸರಕಾರವೂ ತಕ್ಕ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ. ನಮ್ಮ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲೂ ಅದು ಬೆಳಗುತ್ತಿದೆ. ಧಾರ್ಮಿಕ ಕಲೆಗಳಿಗೆ ಧಾರ್ಮಿಕ ನೆಲೆಗಟ್ಟು ದೊರೆಯಲಿ ಎ೦ದು ಕುತ್ತಾರ್ ಪದವು ಶ್ರೀರಾಜರಾಜೇಶ್ವರಿ ದೇವಳದಲ್ಲಿ ನಡೆದ ಕೌಶಿಕ್ ಕರ್ಕೆರರ ತಂಡದ ಯಕ್ಷಗಾನ ಸಭಾಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ಅತ್ತಾವರ್ ರವರು ಹೇಳಿದರು.
ವೇ.ಮೂ. ರಾಘವೇಂದ್ರ ಹೊಳ್ಳರು ಲಲಿತ ಕಲೆಗಳ ಸಂವರ್ಧನೆಗಾಗಿ ಕಲೆ ಬೆಳೆಯಬೇಕು. ಅದರಲ್ಲೂ ನಮ್ಮ ಮಣ್ಣಿನ ಕಲೆ ಯಕ್ಷಗಾನ ಸಂಘಟನೆಗಳಿಗೆ ಒತ್ತಾಸೆಯಾಗಿ ನಿಂತರೆ, ಅವು ಚಿರಕಾಲ ಉಳಿಯಲು ಸಾಧ್ಯ ಎಂದು ಹೇಳಿದರು.
ಕ್ಷೇತ್ರದ ಪದಾಧಿಕಾರಿಗಳಾದ ಜಗನ್ನಾಥ ಸಾಲಿಯಾನ್, ಪವಿತ್ರಾ ಗಟ್ಟಿ, ಸುನಿಲ್ ಗಟ್ಟಿ, ಮತ್ತು ಸದಸ್ಯರು ಉಪಸ್ಥಿತರಿದ್ದರು. ಸ್ಕಂದ ಮಯ್ಯ ಮತ್ತು ಬಳಗದವರು ಪ್ರಾರ್ಥನೆ ನಡೆಸಿಕೊಟ್ಟರು. ಮಾಧವ ನಾವಡರು ನಿರ್ವಹಿಸಿದರೆ, ವಿಜಯಲಕ್ಷ್ಮೀ ಧನ್ಯವಾದವಿತ್ತರು.
ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ವಾಸುದೇವ ಮಯ್ಯರ ಹಾಡುಗಾರಿಕೆಯಲ್ಲಿ ಶ್ರೀಕೃಷ್ಣ ಕಾರುಣ್ಯ ಎಂಬ ಯಕ್ಷಗಾನ ಬಯಲಾಟ ಜರಗಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ