ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ: ರಾಘವೇಶ್ವರ ಸ್ವಾಮೀಜಿ

Upayuktha
0

 ಅನಾವರಣ ಚಾತುಮಾಸ್ಯದಲ್ಲಿ ಶ್ರೀಗಳಿಂದ ಜೀವಯಾನ ಪ್ರವಚನ ಸರಣಿ




ಗೋಕರ್ಣ: ಸೃಷ್ಟಿಯಲ್ಲಿ ಶಾಶ್ವತ ಯಾವುದೂ ಅಲ್ಲ; ಸೃಷ್ಟಿ ಅದಕ್ಕೆ ಅವಕಾಶ ನೀಡುವುದಿಲ್ಲ. ಸ್ವತಃ ದೇವರೇ ಅವತಾರವೆತ್ತಿ ಬಂದರೂ ಅಂತ್ಯ ಇರುತ್ತದೆ. ಅಂತೆಯೇ ಯಾವುದೂ ಮೂಲಸ್ವರೂಪದಲ್ಲಿ ಉಳಿಯುವುದಿಲ್ಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರಿರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.


ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 18ನೇ ದಿನವಾದ ಬುಧವಾರ ಜೀವಯಾನ ಮಾಲಿಕೆಯಲ್ಲಿ 'ಯಮನನ್ನು ಗೆದ್ದವರುಂಟೇ' ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದರು.


ಯಮಯಾತನೆಯಿಂದ ಮುಕ್ತಿ ಪಡೆಯಲು ದಾನವೊಂದೇ ಮಾರ್ಗ. ಜೀವನದಲ್ಲಿ ದಾನ ಮಾಡಿದವನು ಯಮನ ಕೃಪೆಗೂ ಪಾತ್ರನಾಗುತ್ತಾನೆ. ಜೀವಯಾನ ಎನ್ನುವುದು ಕಾಲಕ್ಕೆ ಅನುಗುಣವಾಗಿ ನಡೆಯುತ್ತಾರೆ. ಪುಣ್ಯಾತ್ಮರು ಕಾಲವನ್ನು ದಾಟಿ ಮುನ್ನಡೆಯುತ್ತಾರೆ. ಜೀವಗಳ ದುರವಸ್ಥೆ ಬಗ್ಗೆ ಒಂದನೇ ಮಾಲಿಕೆಯಲ್ಲಿ ಪ್ರವಚನ ನೀಡಲಾಗಿತ್ತು. ಪ್ರತಿಯೊಬ್ಬರೂ ಯಮನ ಕೈವಶ. ಆದರೆ ಯಮನೊಂದಿಗೆ ಹೋರಾಡಿ ಗೆದ್ದ ಮಹಾತ್ಮರ ಕಥಾ ಸರಣಿ ಈ ಪ್ರವಚನ ಮಾಲಿಕೆಯಲ್ಲಿ ಪ್ರವಚನ ನೀಡಲಾಗುತ್ತಿದೆ ಎಂದರು.


ಎಲ್ಲರೂ ಕಾಲವಶವೇ ಸರಿ. ಶ್ರೀರಾಮ, ಪಾಂಡವರು, ಶ್ರೀಕೃಷ್ಣ, ಬಲಿ ಚಕ್ರವರ್ತಿ, ನಳ, ರಾವಣನಂಥವರು ಕೂಡಾ ಕಾಲನ ಕಾರಣದಿಂದ ಸಂಕಷ್ಟ ಎದುರಿಸಬೇಕಾಯಿತು. ಯಮನಿಗೆ ತುತ್ತಾಗದವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ವಿವರಿಸಿದರು.


10 ಸಾವಿರ ವರ್ಷಗಳ ಉಪವಾಸವಿದ್ದು, ಘೋರ ತಪಸ್ಸು ಮಾಡಿದ ರಾವಣ ಅಮರತ್ವದ ವರ ಕೇಳುತ್ತಾನೆ. ಒಂದೊಂದು ಸಾವಿರ ವರ್ಷದ ತಪಸ್ಸು ಪೂರ್ತಿಯಾದಾಗ ತನ್ನದೇ ತಲೆ ಕತ್ತರಿಸಿ ಹೋಮಕ್ಕೆ ಆಹುತಿ ನೀಡಿದ. ಒಂಬತ್ತು ಸಾವಿರ ವರ್ಷ ಮುಗಿದ ಮೇಲೆ ಕೊನೆಗೆ ಹತ್ತು ಸಾವಿರ ವರ್ಷ ಪೂರ್ತಿಯಾದಾಗ ಕೊನೆಯ ತಲೆಯನ್ನೂ ಕತ್ತರಿಸುವ ನಿರ್ಧಾರಕ್ಕೆ ಬಂದ. ಆಗ ಬ್ರಹ್ಮ ಪ್ರತ್ಯಕ್ಷವಾಗಿ ಯಾವ ವರ ಬೇಕು ಎಂದು ಪ್ರಶ್ನಿಸುತ್ತಾನೆ.  

ಮೃತ್ಯುವಿಗಿಂತ ದೊಡ್ಡ ಶತ್ರು ಯಾರೂ ಇಲ್ಲ; ಆದ್ದರಿಂದ ಮೃತ್ಯುವನ್ನೇ ಗೆಲ್ಲುವ ಅಮರತ್ವದ ವರ ನೀಡು ಎಂದು ರಾವಣ ಕೇಳುತ್ತಾನೆ. ಅದಕ್ಕೆ ಬ್ರಹ್ಮ ನಿರಾಕರಿಸಿದಾಗ ರಾವಣ, ಮನುಷ್ಯ ಮತ್ತು ವಾನರರು ಬಿಟ್ಟು ಯಾರಿಂದಲೂ ಮರಣ ಬರಬಾರದು ಎಂದು ಬೇಡುತ್ತಾನೆ. ಜತೆಗೆ ಬೇಕಾದ ರೂಪ ಪಡೆಯುವ ಶಕ್ತಿಯನ್ನೂ ಕತ್ತರಿಸಲ್ಪಟ್ಟ ಒಂಬತ್ತು ತಲೆಗಳು ಮರಳಿ ಬರುವಂತೆ ಬ್ರಹ್ಮ ವರ ನೀಡುತ್ತಾನೆ ಎಂದು ಬಣ್ಣಿಸಿದರು.


ರಾವಣನು ವರ ಪಡೆದು ಬಂದ ತಕ್ಷಣದ ಆತನ ದುಷ್ಟತನ ಹೆಚ್ಚಿತು. ಇಡೀ ಭೂಮಿ ಸ್ಮಶಾನವಾಯಿತು. ಚೀತ್ಕಾರ, ದುಃಖ, ಗೋಳಿನಿಂದ ಪ್ರಪಂಚ ತುಂಬಿಹೋಯಿತು. ಆ ಸಂದರ್ಭದಲ್ಲಿ ಮೋಡಗಳ ನಾಡಿನಲ್ಲಿ ರಾವಣ ನಾರದನನ್ನು ಭೇಟಿ ಮಾಡಿದ. ರಾವಣನ ಗುಣಗಾನ ಮಾಡಿ, ಯಃಕಶ್ಚಿತ್ ಮನುಷ್ಯರಿಗೆ ಕಾಟ ನೀಡಬಾರದು ಎಂದು ನಾರದ ಕೇಳಿದ. ಸಾಯುವವರಿಗೆ ಪೀಡೆ ನೀಡುವ ಬದಲು ಸಾಯಿಸುವವನ್ನೇಕೆ ಕೆಣಕಬಾರದು ಎಂದು ಪ್ರಶ್ನಿಸುತ್ತಾನೆ. ಪರೋಕ್ಷವಾಗಿ ಯಮನ ಮೇಲೆ ಪರಾಕ್ರಮ ತೋರಿಸುವಂತೆ ಸವಾಲು ಹಾಕುತ್ತಾನೆ ಎಂದು ವಿವರಿಸಿದರು.


ರಾವಣನನ್ನು ವಿಮುಖಗೊಳಿಸುವಂತೆ ಮಾಡುವುದು ನಾರದನ ಉದ್ದೇಶವಾಗಿತ್ತು. ಆ ಹಂತದಲ್ಲಿ ರಾವಣ ಸಮುದ್ರ ಮಥನ ಮಾಡಿ ಅಮೃತ ಪಡೆದು ಅಮರತ್ವ ಪಡೆಯುವ ಯೋಚನೆ ಮಾಡಿದ್ದ. ಆದರೆ ದಕ್ಷಿಣಾಭಿಮುಖವಾಗಿ ಹೋಗಿ ಪ್ರೇತರಾಜನನ್ನು ಯುದ್ಧದಲ್ಲಿ ಸೋಲಿಸು ಎಂದು ಮನವೊಲಿಸುತ್ತಾನೆ. ಅದರಂತೆ ನಾಲ್ಕು ಮಂದಿ ಪ್ರಧಾನ ಲೋಕಪಾಲಕರನ್ನು ಗೆಲ್ಲುವ ಪ್ರತಿಜ್ಞೆಯಂತೆ ದಕ್ಷಿಣ ದಿಕ್ಕಿನ ಯಮನನ್ನು ಸೋಲಿಸುವ ಪಣದೊಂದಿಗೆ ರಾವಣ ತೆರಳುತ್ತಾನೆ. ಅಲ್ಲಿ ರಾವಣ ರೌರವ ನರಕವನ್ನು ನೋಡಿ, ಪಾಪಿಗಳನ್ನು ಶಿಕ್ಷೆಯಿಂದ ಬಿಡಿಸುತ್ತಾನೆ ಎಂದು ಹೇಳಿದರು.


ಇದರಿಂದ ಕೋಪಗೊಂಡ ಪ್ರೇತಭೂಪರು, ಯಮಯೋಧರು ಪುಷ್ಪಕವಿಮಾನದ ಮೇಳೆ ದಾಳಿ ಮಾಡುತ್ತಾರೆ. ಆದರೆ ಪುಷ್ಪಕ ವಿಮಾನಕ್ಕೆ ಏನೂ ಆಗುವುದಿಲ್ಲ. ಯಮಸೈನಿಕರು ದೊಡ್ಡ ಸಂಖ್ಯೆಯಲ್ಲಿ ಬಂದು ದಾಳಿ ಮಾಡುತ್ತಾರೆ. ಆಗ ಯಮಸೈನಿಕರ ಜತೆ ಯುದ್ಧಕ್ಕೆ ರಾವಣನ ಮಂತ್ರಿಗಳು ಬಂದಾಗ, ಅಮಾನ್ಯರು ಪ್ರತಿಹತರಾದರು. ಆಗ ಯಮದೂತರು ಮತ್ತು ರಾವಣನ ಮಧ್ಯೆ ಭೀಕರ ಕದನ ನಡೆಯುತ್ತದೆ. ಪಾಶುಪತಾಸ್ತ್ರದಿಂದ ಯಮಧೂತರೆಲ್ಲರೂ ಸುಟ್ಟುಹೋದರು ಎಂದು ಬಣ್ಣಿಸಿದರು.


ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ ಪುಳು, ಯುವ ಪ್ರಧಾನ ಕೇಶವ ಪ್ರಕಾಶ್ ಮುಣ್ಚಿಕಾನ, ವಿವಿವಿ ಕೇಂದ್ರೀಯ ಸಮಿತಿ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಚಾತುರ್ಮಾಸ್ಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಭಟ್ ಹರಿಹರ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ಮುರೂರು, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ ಹೊಸಾಕುಳಿ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಮುಖ್ಯಸ್ಥರಾದ ನರಸಿಂಹ ಭಟ್ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಭಟ್ ಸೂರಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top