ನಾವು ಎಷ್ಟೇ ಶ್ರೀಮಂತರಿರಬಹುದು ಆದರೆ ನಮ್ಮೊಳಗಿನ ಆಸೆ ಅಳಿಯದಿದ್ದರೆ, ಇರುವುದರಲ್ಲೇ ತೃಪ್ತರಾಗದಿದ್ದರೆ ಸಂಪತ್ತು ಹೊಂದಿದ್ದರೂ ಬಡವರಂತೆ ಇರುತ್ತೇವೆ ಡಿ.ವಿ. ಗುಂಡಪ್ಪನವರು ಒಂದು ಸುಂದರವಾದ ಮಾತನ್ನು ಹೇಳುತ್ತಾರೆ. "ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು ಅದೇ ಹರುಷಕ್ಕೆ ದಾರಿ". ಅಂದರೆ ನಮಗೆ ಭಗವಂತ ಎಷ್ಟು ದಯಪಾಲಿಸಿದ್ದಾನೋ ಅಷ್ಟರಲ್ಲೇ ಆನಂದ ಪಡುವುದು ಇತರರ ಶ್ರೀಮಂತಿಕೆಯನ್ನ ನೋಡಿ ನಾವು ಕೊರಗಬಾರದು. ಯಾರು ಇರುವುದರಲ್ಲೇ ಆನಂದ ಪಡುತ್ತಾರೋ ಅವರ ಬಳಿ ಎಲ್ಲವೂ ಇದ್ದಾಗಲೂ ಹಾಗೆ ಇರುತ್ತಾರೆ ಇಲ್ಲದಾಗಲೂ ಹಾಗೆ ಇರುತ್ತಾರೆ.
ನಮ್ಮ ಪೂರ್ವಜರು ಒಂದು ಹೊತ್ತಿನ ಊಟಕ್ಕೆ ದಿನವಿಡಿ ದುಡಿಯುತ್ತಿದ್ದರು. ಅಷ್ಟು ಕಷ್ಟದ ಬದುಕು ಅವರದ್ದು. ಆದರೆ ಅವರ ಆನಂದಕ್ಕೆ ಯಾವತ್ತಿಗೂ ಕೊರತೆ ಇರಲಿಲ್ಲ. ನಮ್ಮ ಬಳಿ ಹತ್ತು ತಲೆಮಾರು ಕುಳಿತು ತಿನ್ನುವಷ್ಟು ಆಸ್ತಿ ಇದೆ. ಆದರೆ ಜೀವನದಲ್ಲಿ ಸಮಾಧಾನವೇ ಇಲ್ಲ. ಮೊದಮೊದಲು ಸೈಕಲ್ ಬೇಕೆನಿಸಿತು. ಆಮೇಲೆ ಬೈಕು, ಕಾರು, ವಿಮಾನ- ಹೀಗೆ ಒಂದರ ಹಿಂದೊಂದು ಬೇಕು ಬೇಕುಗಳ ಸರಮಾಲೆ ನಮ್ಮದು. ಈ ಆಸೆಯ ನದಿಗೆ ಕೊನೆ ಎನ್ನುವುದೇ ಇಲ್ಲ.
ಶರಣ ಸಂತರ ಬದುಕು ನಮಗೆಲ್ಲರಿಗೂ ದಾರಿದೀಪ ಆಸೆಯನ್ನು ಕಳಚಿ ಬದುಕಿದ ಯೋಗಿಗಳವರು ಒಂದು ದಿನ ಶಿವಶರಣ ಮಾರಯ್ಯನು ತಮ್ಮ ದಿನದ ಪ್ರಸಾದಕ್ಕಿಂತ ಹೆಚ್ಚಿನ ಅಕ್ಕಿಯನ್ನು ಆಯ್ದುಕೊಂಡು ಬಂದಾಗ ಆತನ ಪತ್ನಿ ಶರಣಿ ಆಯ್ದಕ್ಕಿ ಲಕ್ಕಮ್ಮ ಪತಿಗೆ ಹೇಳುತ್ತಾಳೆ. ಈಸಕ್ಕಿಯ ಆಸೆ ನಿಮಗೆೇಕೆ ನಮ್ಮ ಇಂದಿನ ಪ್ರಸಾದಕ್ಕೆ ಎಷ್ಟು ಬೇಕೋ ಅಷ್ಟೇ ಸಾಕು. ನೀವು ಉಳಿದ ಅಕ್ಕಿಯನ್ನು ಎಲ್ಲಿಂದ ತಂದಿರುವೆರೂ ಅಲ್ಲೇ ಹೋಗಿ ಹಾಕಿ ಬನ್ನಿ. ನಾಳೆಯ ದಿನ ಮತ್ತೆ ಕಾಯಕದಿಂದಲೇ ಪ್ರಸಾದ ನಡೆಯಬೇಕು ಎಂದಳು.
ಯಾವಾಗ ನಾವು ಸಾಕು ಎನ್ನುತ್ತೇವೆಯೋ ಆ ಕ್ಷಣಕ್ಕೆ ನಾವು ಜಗತ್ತಿನ ಬಹುದೊಡ್ಡ ಶ್ರೀಮಂತರಾಗುತ್ತೇವೆ. ಇರುವುದಷ್ಟೇ ಸಾಕೆನಿಸುವವನಿಗೆ ಮತ್ತೇನು ಬೇಕೆನಿಸುವುದಿಲ್ಲ. ಯಾರೊಳಗೆ ಬೇಕುಗಳ ಆಸೆ ಇರುವುದಿಲ್ಲವೋ ಆತನೇ ಆನಂದ ಸ್ವರೂಪಿ. ಈ ಆಸೆಯ ದಾಹ ಸುಲಭವಾಗಿ ಹಿಂಗುವಂತದ್ದಲ್ಲ. ಅನೇಕ ಮಹಾನ್ ವ್ಯಕ್ತಿಗಳೇ ಈ ದಾಹಕ್ಕೆ ಬಳಲಿ ಬೆಂಡಾಗಿದ್ದಾರೆ. ಇನ್ನು ಸಾಮಾನ್ಯರಾದ ನಮ್ಮ ಸ್ಥಿತಿ ಹೇಳತಿರದು. ಆಸೆಯ ಗಂಟು ಹರಿಯಬೇಕೆಂದರೆ ಅದು ಭಗವಂತನ ಚಿಂತನೆ ಗುರುವಾಣಿಯಿಂದ ಮಾತ್ರ ಸಾಧ್ಯವಾಗಬಲ್ಲದು.
- ಶ್ರೀರಾಮಕೃಷ್ಣ ದೇವರು
ಶ್ರೀ ಷಣ್ಮುಖಾರೂಢ ಮಠ.ವಿಜಯಪುರ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ