ಬಿಜೆಪಿ ಸಂಘಟನೆಗೆ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡಬೇಕು: ಶಾಸಕ ರಾಜೇಶ್ ನಾಯ್ಕ್‌

Upayuktha
0


ಬಂಟ್ವಾಳ: ಬಿಜೆಪಿ ಪಕ್ಷವನ್ನು ಇನ್ನಷ್ಟು ಸಂಘಟನಾತ್ಮಕವಾಗಿ ಬೆಳೆಸಲು ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.


ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ನಡೆಸುವ ಎಂದು ಅವರು ಕಾರ್ಯಕರ್ತರಿಗೆ ತಿಳಿಸಿದರು. ಅವರು ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ಅಭಿನಂದನಾ ಸಭೆಯ ಉದ್ಘಾಟಿಸಿ ಮಾತನಾಡಿದರು.


ಕಾರ್ಯಕರ್ತರ ನಿರಂತರವಾದ ಶ್ರಮ ಮತ್ತು ತ್ಯಾಗದ ಫಲವಾಗಿ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಎಂ.ಎಲ್.ಸಿ.ಎಲ್.ಬೋಜೇಗೌಡ ಅವರನ್ನು ಅಭಿನಂದಿಸಲಾಯಿತು.


ಅಭಿನಂದನೆಯನ್ನು ಸ್ವೀಕರಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಂಘಟನಾತ್ಮಕವಾಗಿ ಬಲಿಷ್ಠವಾಗಿದೆ, ಹಲವು ಷಡ್ಯಂತ್ರಗಳ ನಡುವೆಯೂ 2024 ರ ಲೋಕಸಭಾ  ಚುನಾವಣೆಯಲ್ಲಿ ಅಭೂತಪೂರ್ವ ಬಹುಮತದ ಆಶ್ರೀರ್ವಾದ ಮಾಡಿದ್ದೀರಿ, ಅದಕ್ಕೆ ವಿಶೇಷವಾದ ಧನ್ಯವಾದ ನೀಡುತ್ತೇನೆ ಎಂದರು. ಬಿಜೆಪಿ ವಿಚಾರಧಾರೆಯ ಅಡಿಯಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ ಎಂದು ಅವರು ತಿಳಿಸಿದರು.


ಈ ಜಿಲ್ಲೆಯ ಮೂಲಭೂತವಾದ ಅಭಿವೃದ್ಧಿ ದೃಷ್ಟಿಯಿಂದ ಕಾನೂನಾತ್ಮಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮುಂದುವರಿಸುವ ಭರವಸೆ ನೀಡುತ್ತೇನೆ. ಅನುಷ್ಠಾನ ಹಂತದಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಪೂರ್ತಿಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವಯುಗ, ನವಪಥ ಎಂಬ ಯೋಜನೆಯನ್ನು ಚುನಾವಣಾ ಪೂರ್ವದಲ್ಲಿ ಹಾಕಿಕೊಂಡಿದ್ದು, ಕೇಂದ್ರದ ಸಚಿವರ ಸಹಕಾರದೊಂದಿಗೆ ಯೋಜನೆಗಳಿಗೆ ಸಂಬಂಧಿಸಿದಂತೆ ಪುಷ್ಟಿ ನೀಡುವ ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು.


ಭ್ರಷ್ಟಾಚಾರ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ಮಿಗೆ ಕಾಂಗ್ರೆಸ್ ನಿಂತಿರುವುದು ನಾಚಿಕೆಯ ವಿಚಾರ. ಕಾನೂನು ಬಾಹಿರವಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡಿ, ಬಾಂಗ್ಲಾದೇಶದ ರೀತಿಯಲ್ಲಿ ರಾಜ್ಯಪಾಲರ ಭವನಕ್ಕೆ ನುಗ್ಗುತ್ತೇವೆ ಎಂಬ ಐವನ್ ಡಿಸೋಜ ಅವರ ಹೇಳಿಕೆಗೆ ತೀವ್ರ ಅಕ್ಷೇಪ ವ್ಯಕ್ತಪಡಿಸಿದರು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಬಗ್ಗೆ ಇವರಿಗೇಕೆ ಪ್ರೀತಿ ಎಂದು ಕಿಡಿಕಾರಿದರು. ರಾಜ್ಯದ  ಅಭಿವೃದ್ಧಿಗೆ ಒಂದು ನಯಪೈಸೆ ನೀಡದ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.


ವಿಧಾನಪರಿಷತ್ ಸದಸ್ಯ ಬಿ.ಎಲ್.ಬೋಜೇಗೌಡ ಮಾತನಾಡಿ, ಎಲ್ಲರ ಧ್ವನಿಯಾಗಿ ಪರಿಷತ್ ಒಳಗೆ ಮತ್ತು ಹೊರಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು. ಅವಿಭಜಿತ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಪಕ್ಷನಿಷ್ಠೆಯುಳ್ಳವರು ಹಾಗಾಗಿ ಸದಾ ಭದ್ರಕೋಟೆಯಾಗಿಯೇ ಉಳಿದಿದೆ ಎಂದು ಅವರು ತಿಳಿಸಿದರು. ಶಿಕ್ಷಣ ಕ್ಷೇತ್ರಕ್ಕೆ ನ್ಯಾಯವನ್ನು ಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಬಿಜೆಪಿ ಮಂಡಲದ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ  ಮಾಡ್ತ,ಸಂಘಟನಾ ಪರ್ವದ ಸಂಚಾಲಕ ದೇವದಾಸ ಶೆಟ್ಟಿ, ಬೂತ್ ಚಲೋ ಕಾರ್ಯಕ್ರಮದ ಸಂಚಾಲಕ ಸಂದೇಶ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ನಂದನ್ ಮಲ್ಯ, ಸಂಘಟನಾ ಪರ್ವದ ಪ್ರಭಾರಿ ಜಗದೀಶ್ ಶೇಣವ, ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಮತ್ತಿತರರು ಉಪಸ್ಥಿತರಿದ್ದರು. ವಿಕಾಶ್ ಪುತ್ತೂರು ಅಭಿನಂದನಾ ಭಾಷಣ ಮಾಡಿದರು.


ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಮಂಡಲದ ಕಾರ್ಯದರ್ಶಿ ರಶ್ಮಿತ್ ಶೆಟ್ಟಿ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.


ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯ ಅಂಗವಾಗಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು. ಬಳಿಕ ಬಿಜೆಪಿ ಪ್ರಮುಖರಾದ ಡೊಂಬಯ್ಯ ಅರಳ ಅವರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯ ಬಗ್ಗೆ ಪ್ರಧಾನ ಭಾಷಣ ಮಾಡಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top