ಉಜಿರೆ: ಕನ್ನಡ ಭಾಷೆ ಹಾಗೂ ಬರವಣಿಗೆಯಲ್ಲಿ ಹಿಡಿತವಿದ್ದರೆ ಸಾಕು; ಉದ್ಯೋಗದ ತೊಂದರೆಯಿರುವುದಿಲ್ಲ. ಹಲವಾರು ಅವಕಾಶಗಳು ಕಣ್ಣೆದುರು ಕಾಣುತ್ತವೆ. ಆದರೆ ಅವುಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು.
ಪ್ರಸ್ತುತ ಉದ್ಯೋಗವೆಂದರೆ ಮನೆಯಿಂದ ಹೊರಗಿದ್ದುಕೊಂಡೇ ಮಾಡುವಂಥದ್ದು ಎಂದೇನಿಲ್ಲ. ಮನೆಯಲ್ಲಿಯೇ ಕುಳಿತು ಸಾವಿರಾರು ರೂಪಾಯಿ ಗಳಿಸಬಹುದು. ಕಥೆ, ಕವನ ವಿಮರ್ಶೆ, ಲೇಖನಗಳ ಬರಹಕ್ಕೆ ಸಾವಿರಾರು ರೂಪಾಯಿಗಳನ್ನು ಬರಹಗಾರ ಗಳಿಸಬಹುದು ಎಂದು ಅವರು ಹೇಳಿದರು.
“ಆದರೆ ಬರಹವು ಮೌಲ್ಯಯುತವಾಗಿರಬೇಕು, ಸತ್ತ್ವಯುತವಾಗಿರಬೇಕು. ಏಕೆ, ಹೇಗೆ ಮತ್ತು ಏನು ಎಂಬ ಈ ಮೂರು ಪ್ರಶ್ನೆಗಳು ನಮ್ಮಲ್ಲಿ ಮೂಡಿದರೆ ಬರಹ ಸಾಧ್ಯವಾಗುತ್ತದೆ. ಓದುಗರ ಗಮನ ಸೆಳೆಯುವಂತೆ, ಓದುಗರಿಗೆ ಖುಷಿ ಕೊಡುವಂತೆ ಬರಹವಿರಬೇಕು” ಎಂದು ಅವರು ಕಿವಿಮಾತು ಹೇಳಿದರು.
ಕರ್ನಾಟಕದ ಹಲವು ಪ್ರದೇಶಗಳನ್ನು ಬೇರೆ ಬೇರೆ ರಾಜ್ಯಗಳು ವಶಪಡಿಸಿಕೊಂಡಿವೆ. ಇದರ ಬಗ್ಗೆ ಯಾವುದೇ ಪಕ್ಷಗಳು ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ರಾಷ್ಟ್ರಮಟ್ಟದ ಪರೀಕ್ಷೆಯನ್ನು ಬರೆಯಬಹುದಾಗಿದೆ” ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ಕಾರ್ಯದರ್ಶಿಯಾಗಿ ಸಾನಿಧ್ಯ, ಜತೆ ಕಾರ್ಯದರ್ಶಿಯಾಗಿ ಪವನ್ ಕುಮಾರ್, ಪದಾಧಿಕಾರಿಗಳಾಗಿ ಪ್ರಣಮ್ಯ, ಸಂಕೇತ್, ಪವನ್ ಸಿ. ಹಾಗೂ ಕವನ ನಿಯುಕ್ತಿಗೊಂಡರು. ಪ್ರಾಧ್ಯಾಪಕರಾದ ಡಾ. ನಾಗಣ್ಣ ಡಿ. ಎ., ಡಾ. ಎಂ. ಪಿ. ಶ್ರೀನಾಥ್, ಡಾ. ದಿವಾಕರ ಕೊಕ್ಕಡ, ಡಾ. ರಾಜಶೇಖರ್ ಉಪಸ್ಥಿತರಿದ್ದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಭೋಜಮ್ಮ ಕೆ. ಎನ್. ಪ್ರಸ್ತಾವಿಸಿ, ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಉಲ್ಲೇಖ ನಿರೂಪಿಸಿ, ಮನೀಷ್ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ