ಅಜೆಕಾರು ಕಲ್ಕುಡಮಾರ್ ಯಕ್ಷಗಾನ ಬಯಲಾಟ ಮತ್ತು ಕಲಾವಿದರ ಸನ್ಮಾನ
ಮಂಗಳೂರು: 'ಕರಾವಳಿ ಭಾಗದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವರೂಪದ ಏಕೈಕ ಕಲೆ ಯಕ್ಷಗಾನ. ಪುರಾಣದ ಸಂದೇಶಗಳನ್ನು ಸರಳ ರೂಪದಲ್ಲಿ ಜನಮಾನಸಕ್ಕೆ ಮುಟ್ಟಿಸುವ ಶ್ರೇಷ್ಠ ಕಾರ್ಯ ಯಕ್ಷಗಾನದಿಂದ ಆಗುತ್ತಿದೆ. ಅದೇ ರೀತಿ ತಮ್ಮ ಬದುಕಿನ ಅಶೋತ್ತರಗಳು ಈಡೇರಿದ ಸಂದರ್ಭದಲ್ಲಿ ಹರಿಕೆ ಬಯಲಾಟಗಳನ್ನು ಆಡಿಸುವ ಸಂಪ್ರದಾಯವೂ ಇಲ್ಲಿ ಬೆಳೆದು ಬಂದಿದೆ' ಎಂದು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀಮದೆಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಹೇಳಿದರು.
ಮುಂಬೈಯ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ತಮ್ಮ ಹುಟ್ಟೂರು ಅಜೆಕಾರಿನ ಕಲ್ಕುಡಮಾರ್ ಎಂಬಲ್ಲಿ ನೂತನವಾಗಿ ಕಟ್ಟಿಸಿದ 'ಶ್ರೀ ಬಾಲಾಜಿ' ಬಾಲಾಶಯ ನಿಲಯದ ಗೃಹಪ್ರವೇಶ ಪ್ರಯುಕ್ತ ಮೇ 3ರಂದು ಏರ್ಪಡಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಸೇವಾ ಬಯಲಾಟದ ವೇದಿಕೆಯಲ್ಲಿ ಕಲಾವಿದರನ್ನು ಸನ್ಮಾನಿಸಿ ಅವರು ಆಶೀರ್ವಚನ ನೀಡಿದರು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣರು ಮಾತನಾಡಿ 'ಯಕ್ಷಗಾನ ಸೇವೆಯ ಮೂಲಕ ಮಾಡುವ ಕಲಾ ರಾಧನೆ ಅತ್ಯಂತ ಶ್ರೇಷ್ಠ ಕಾರ್ಯ' ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ 'ಮುಂಬೈಯಲ್ಲಿ ಹುಟ್ಟಿ ಬೆಳೆದ ನೂರಾರು ಮಂದಿ ಸ್ತ್ರೀ ಪುರುಷ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸಿ ಮಹಾನಗರದಲ್ಲಿ ಅಪಾರ ಯಕ್ಷಾಭಿಮಾನಿಗಳನ್ನು ಬೆಳೆಸಿದ ಅಜೆಕಾರು ಬಾಲಕೃಷ್ಣ ಶೆಟ್ಟರ ಕಲಾ ಸೇವೆ ಅನುಪಮ' ಎಂದು ಶ್ಲಾಘಿಸಿದರು.
ಕಲಾ ತ್ರಿವಳಿ' ಸಮ್ಮಾನ:
ಈ ವೇಳೆ ಬಯಲಾಟ ರಂಗಸ್ಥಳದ ಮೇಲೆ ಜರಗಿದ ಸಭಾ ಕಾರ್ಯಕ್ರಮದಲ್ಲಿ ಕಲಾ ತ್ರಿವಳಿಗಳನ್ನು ಸನ್ಮಾನಿಸಲಾಯಿತು. ಕಟೀಲು ಮೇಳದ ಭಾಗವತ ದೇವಿ ಪ್ರಸಾದ್ ಆಳ್ವ ತಲಪಾಡಿ, ಮೇಳದ ಪ್ರಬಂಧಕ ಹಾಗೂ ಹಿರಿಯ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ ಮತ್ತು ಖ್ಯಾತ ಬಣ್ಣದ ವೇಷಧಾರಿ ಹರಿನಾರಾಯಣ ಭಟ್ ಎಡನೀರು ಅವರನ್ನು ಶಾಲು- ಸ್ಮರಣಿಕೆ, ಮಾನಪತ್ರ ಹಾಗೂ ಗೌರವ ನಿಧಿಯೊಂದಿಗೆ ಗಣ್ಯರು ಸನ್ಮಾನಿಸಿದರು. ಮುಂಬೈ ಚಿನ್ನರ ಬಿಂಬದ ಅಧ್ಯಕ್ಷ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ಉದ್ಯಮಿ ಅಜೆಕಾರ್ ವಿಜಯಶೆಟ್ಟಿ ಅತಿಥಿಗಳಾಗಿದ್ದರು.
ಯಕ್ಷಗಾನ ಅರ್ಥಧಾರಿ ಮತ್ತು ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯಕ್ರಮದ ಸಂಘಟಕ ಮತ್ತು ಮುಂಬೈ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ವಂದಿಸಿದರು. ಆಶಾ ಬಾಲಕೃಷ್ಣ ಶೆಟ್ಟಿ,ಅನಿಷಾ ಮತ್ತು ಅನುಷಾ ಅತಿಥಿಗಳನ್ನು ಗೌರವಿಸಿದರು. ಬಳಿಕ ಕಟೀಲು ಮೇಳದಿಂದ 'ಶ್ರೀದೇವಿ ಮಹಾತ್ಮೆ' ಯಕ್ಷಗಾನ ಬಯಲಾಟ ಜರಗಿತು.
'ಜಾಂಬವತಿ ಕಲ್ಯಾಣ' ತಾಳಮದ್ದಳೆ:
ಗೃಹಪ್ರವೇಶದ ಅಂಗವಾಗಿ ಮೇ 5ರಂದು ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ 'ಜಾಂಬವತಿ ಕಲ್ಯಾಣ' ಯಕ್ಷಗಾನ ತಾಳಮದ್ದಳೆ ಜರಗಿತು. ಕಾವ್ಯಶ್ರೀ ಆಜೇರು, ಡಾ.ಪ್ರಖ್ಯಾತ್ ಶೆಟ್ಟಿ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಅವರ ಹಿಮ್ಮೇಳದಲ್ಲಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಹರೀಶ್ ಭಟ್ ಬೊಳಂತಿಮೊಗರು ಮತ್ತು ಸದಾಶಿವ ಆಳ್ವ ತಲಪಾಡಿ ಅರ್ಥಧಾರಿಗಳಾಗಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ