- ಡಾ. ಎಲ್. ಸುಧಾ, ಬೆಂಗಳೂರು
ಭೂಮಿಯಲ್ಲಿ ಅವತರಿಸಿದ ಮೇಲೆ ಮಾನವರಂತೆ ನಡೆದುಕೊಳ್ಳಬೇಕಾದುದು ಅವಶ್ಯವಷ್ಟೆ. ಹಾಗೆಯೇ ಭಗವಂತನಾದರೂ, ಶ್ರೀ ರಾಮಚಂದ್ರ ಸಾಮಾನ್ಯ ಮನುಷ್ಯನಂತೆ ಚರಿಸುತ್ತ ಭೂಮಿಯಲ್ಲಿ ಐಕ್ಯಳಾದ ಸೀತೆಯನ್ನು ನೆನೆದು ಅತೀವ ದು:ಖತಪ್ತನಾದಂತೆ ತೋರಿಸುತ್ತಾನೆ. ಆಗ ಅವನ ಶೋಕವನ್ನು ಕಂಡು ಬ್ರಹ್ಮದೇವರು ಬಂದು ಅವನನ್ನು ಕುರಿತು "ಪ್ರಭೋ ಸೀತೆಯು ಭೂಮಿಗೆ ಬಂದ ಕಾರ್ಯ ಸಮಾಪ್ತಿಯಾಯಿತು ಆದ್ದರಿಂದ ಆಕೆ ತನ್ನ ತಪೋಬಲದಿಂದ ಸುಖವಾಗಿ ನಾಗಲೋಕದ ಮೂಲಕ ಪರಂಧಾಮಕ್ಕೆ ಹೊರಟು ಹೋಗಿದ್ದಾಳೆ. ನೀನು ಬಂದ ಉದ್ದೇಶವೂ ಪೂರ್ಣವಾಗಿದೆ ಹಾಗಾಗಿ ನೀನೂ ಪರಂಧಾಮಕ್ಕೆ ತಿರುಗಿ ಬಂದು ನಮ್ಮನ್ನು ಉದ್ದರಿಸು" ಎಂದು ಬೇಡುತ್ತಾರೆ. ಅದರಿಂದ ರಾಮನ ದು:ಖವು ಕಡಿಮೆಯಾಗಿ ಸಮಾದಾನ ಚಿತ್ತದಿಂದ ರಾಜ್ಯವನ್ನು ಆಳುತ್ತಿರುತ್ತಾನೆ.
ಕೆಲವು ಕಾಲದ ಬಳಿಕ ಶ್ರೀರಾಮ ಭೂಮಿಯ ಮೇಲೆ ಇರಬೇಕಾದ ಸಮಯ ಮುಗಿಯಿತೆಂದು ತಿಳಿಸಲು ಕಾಲನೇ ತಪಸ್ವಿಯ ರೂಪದಲ್ಲಿ ಅರಮನೆಗೆ ಬರುತ್ತಾನೆ. ಲಕ್ಷ್ಮಣನನ್ನು ಕಂಡು "ನಾನು ಮಹರ್ಷಿ ಅತಿಬಲನ ದೂತ. ಒಂದು ಅವಶ್ಯ ಕಾರ್ಯದ ಸಲುವಾಗಿ ರಾಮನನ್ನು ನೋಡಬೇಕು" ಎನ್ನುತ್ತಾನೆ. ಲಕ್ಷ್ಮಣ ಬಂದು ದೂತನ ವಿಷಯ ರಾಮನಿಗೆ ತಿಳಿಸಿದಾಗ ಶ್ರೀರಾಮ ಶ್ರೇಷ್ಠ ತಪಸ್ವಿಗಳ ದೂತ ಯಾರೇ ಆದರೂ ಪೂಜನೀಯರು ಹಾಗಾಗಿ ಗೌರವದಿಂದ ಬರಮಾಡು" ಎಂದು ಹೇಳುತ್ತಾನೆ. ನಂತರ ಆ ಋಷಿಗಳಿಗೆ ಅರ್ಘ್ಯ ಪಾದ್ಯಾದಿಗಳನ್ನು ಕೊಟ್ಟು ಬಂದವರು ಯಾರೆಂದು ಚೆನ್ನಾಗಿ ತಿಳಿದಿದ್ದರೂ ಅವರನ್ನು ಕುರಿತು ಬಂದ ಕಾರ್ಯವೇನೆಂದು ಕೇಳುತ್ತಾನೆ. ಆಗ ಆ ಋಷಿಯು " ಹೇ ರಾಮಚಂದ್ರ ನಾನೀಗ ಹೇಳುವ ಮಾತು ಅತ್ಯಂತ ರಹಸ್ಯವಾಗಿದ್ದು ಯಾವ ಮನುಷ್ಯನೂ ಕೇಳಿಸಿಕೊಳ್ಳುವಂತಿಲ್ಲ. ಯಾವ ಮನುಷ್ಯ ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಾನೋ ಅವನನ್ನು ನೀನೇ ವಧಿಸುತ್ತೀನಿ ಎಂದು ಮಾತು ಕೊಡು" ಎಂದು ಕೇಳುತ್ತಾನೆ. ಶ್ರೀರಾಮ ಹಾಗೇ ಆಗಲಿ ಎಂದು ಲಕ್ಷ್ಮಣನನ್ನು ಕರೆದು "ಸೌಮಿತ್ರಿ, ನ್ನ ಮತ್ತು ಈ ಋಷಿಶ್ರೇಷ್ಠರ ಮಾತನ್ನು ಯಾರೊಬ್ಬರೂ ಕೇಳುವಂತಿಲ್ಲ. ನಮ್ಮ ಮಾತನ್ನು ಯಾರೇ ಕೇಳಿಸಿಕೊಂಡರೂ ಅವರನ್ನು ವಧಿಸಲಾಗುವುದೆಂದು ನೀನು ಘೋಷಣೆ ಮಾಡಬೇಕು ಮತ್ತು ನಮ್ಮ ಮಾತು ಮುಗಿಯುವರೆಗೆ ನೀನೆ ದ್ವಾರಪಾಲಕನಾಗಿದ್ದು ಯಾರನ್ನು ಒಳಗೆ ಬರದ ಹಾಗೆ ನೋಡಿಕೋ ಎಂದು ಆಜ್ಞೆ ಮಾಡುತ್ತಾನೆ. ನಂತರ ಸರ್ವಜ್ಞನಾದರೂ ಸಾಮಾನ್ಯ ಮಾನವನಂತೆ ಋಷಿಗಳನ್ನು ಕುರಿತು "ನೀವು ಯಾರ ಸಂದೇಶ ತಂದಿರುವಿರಿ ನನ್ನಿಂದ ಏನಾಗಬೇಕಾಗಿದೆ" ಎಂದು ಕೇಳುತ್ತಾನೆ. ಆಗ ಆ ಮುನಿಯು "ಹೇ ಮಹಾಬಾಹೋ ನಾನು ಬ್ರಹ್ಮದೇವರ ದೂತನಾಗಿ ಬಂದಿದ್ದೇನೆ. ಹಿಂದೆ ಹಿರಣ್ಯಗರ್ಭದ ಉತ್ಪತ್ತಿ ಸಮಯದಲ್ಲಿ ನಾನು ನಿನ್ನಿಂದಲೇ ಉತ್ಪನ್ನವಾದವನು. ಹಾಗಾಗಿ ನಾನು ನಿನ್ನ ಮಗನಂತೆ. ನನ್ನನ್ನು ಸರ್ವಸಂಹಾರಕ ಕಾಲ ಎನ್ನುತ್ತಾರೆ. ಲೋಕವನ್ನು ಸಂರಕ್ಷಿಸಲು ನೀನು ಮಾಡಿದ ಪ್ರತಿಜ್ಞೆ ಈಗ ಪೂರ್ಣವಾಗಿದೆ. ಭೂಮಿಯ ಮೇಲಿನ ಅವಧಿಯನ್ನು ನಿನಗೆ ನೀನೆ ನಿಶ್ಚಯಿಸಿ ಕೊಂಡಿರುವೆ. ಹಾಗಾಗಿ ನಿನ್ನ ಲೋಕಕ್ಕೆ ನೀನು ಹಿಂತಿರುಗಿ ಬಂದರೆ ದೇವತೆಗಳು ಸನಾಥರಾಗಿ ನಿಶ್ಚಿಂತರಾಗುತ್ತಾರೆ" ಎನ್ನುತ್ತಾನೆ,
ಕಾಲನು ಹೇಳಿದ ಮಾತನ್ನು ಕೇಳಿ ಶ್ರೀರಾಮನು ನಗುತ್ತ ಅವನ್ನು ಕುರಿತು "ಕಾಲನೆ ನಿನ್ನಿಂದ ನಾನು ಬ್ರಹ್ಮನ ಸಂದೇಶ ಕೇಳಿದಂತಾಯಿತು. ಮೂರು ಲೋಕಗಳ ಪ್ರಯೋಜನಕ್ಕಾಗಿಯೇ ನಾನು ಬಂದಿರುವುದು. ಆ ಉದ್ದೇಶ ಪೂರ್ಣವಾಗಿದೆ ಹಾಗಾಗಿ ನಾನು ಎಲ್ಲಿಂದ ಬಂದೆನೋ ಅಲ್ಲಿಗೆ ಹೋಗಲು ಸಿದ್ದನಿದ್ದೇನೆ" ಎಂದು ಹೇಳೀ ತನ್ನ ಅವತಾರ ಸಮಾಪ್ತಿ ಮಾಡುವ ನಿರ್ಧಾರ ಮಾಡುತ್ತಾನೆ. ಅದಕ್ಕೂ ಮುಂಚೆ ಲಕ್ಷ್ಮಣನನ್ನು ಅವನ ಸ್ವಸ್ಥಾನಕ್ಕೆ ಕಳಿಸಬೇಕಾಗಿರುತ್ತದೆ. ಅದಕ್ಕೂ ಭಗವಂತ ಸರಿಯಾದ ವ್ಯವಸ್ಥೆ ಮಾಡುತ್ತಾನೆ. ಶ್ರೀರಾಮ ಕಾಲನೊಂದಿಗೆ ಮಾತನಾಡುತ್ತಿದ್ದಾಗ ವಿಧಿಯೋ ಎಂಬಂತೆ ದೂರ್ವಾಸರು ಅಲ್ಲಿಗೆ ಬರುತ್ತಾರೆ. ಬಾಗಿಲಲ್ಲಿದ್ದ ಲಕ್ಷ್ಮಣನನ್ನು ಕುರಿತು ತಾನು ಈಗ್ಗಿಂದೀಗ್ಗೆ ಶ್ರೀರಾಮಚಂದ್ರನ್ನು ನೋಡಬೇಕು ಆದ್ದರಿಂದ ತಕ್ಷಣ ಅವನ ಬೇಟಿ ಮಾಡಿಸು ಎನ್ನುತ್ತಾರೆ. ಆಗ ಲಕ್ಷ್ಮಣ ಅತಿ ವಿನಯದಿಂದ ಶ್ರೀರಾಮನು ಈಗಷ್ಟೆ ಮತ್ತೊಂದು ಮುಖ್ಯವಾದ ಕೆಲಸದಲ್ಲಿ ತೊಡಗಿರುವುದರಿಂದ ದಯಮಾಡಿ ಎರಡು ಗಳಿಗೆ ಪ್ರತೀಕ್ಷೆ ಮಾಡಬೇಕೆಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿ ದುರ್ವಾಸರು ಕೆರಳಿ "ನಾನು ಈ ತಕ್ಷಣದಲ್ಲಿ ರಾಮನನ್ನು ನೋಡದಿದ್ದರೆ ಈ ಇಡೀ ರಾಜ್ಯವನ್ನು, ಭರತನನ್ನು ಹಾಗೂ ಎಲ್ಲರನ್ನೂ ಶಪಿಸಿಬಿಡುತ್ತೇನೆ ಎಂದು ಘರ್ಜಿಸುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಕ್ಷ್ಮಣ ವ್ಯಾಕುಲನಾಗಿ ಇಡೀ ರಾಜ್ಯ ಅವರ ಶಾಪದಿಂದ ಬಳಲುವ ಬದಲು ತಾನು ಪ್ರಾಣ ತ್ಯಾಗ ಮಾಡುವುದೇ ಸರಿಯೆಂದು ನಿರ್ಧರಿಸಿ ರಾಮ ಹಾಗೂ ಕಾಲನ ಮಧ್ಯೆ ಮಾತುಕತೆ ನಡೆಯುತ್ತಿದ್ದಾಗಲೇ ಒಳಗೆ ಹೋಗಿ ರಾಮನಿಗೆ ಋಷಿಗಳ ಆಗಮನದ ವಿಷಯ ತಿಳಿಸುತ್ತಾನೆ. ಆಗ ರಾಮಚಂದ್ರ ಕಾಲನನ್ನು ಬೀಳ್ಕೊಟ್ಟು ಬಂದು ದುರ್ವಾಸರನ್ನು ಆಧರಿಸಿ ಸತ್ಕರಿಸಿ ತನ್ನಿಂದ ಎನಾಗಬೇಕು ಎಂದು ಕೇಳುತ್ತಾನೆ. ಆಗ ಆ ಋಷಿಗಳು "ಹೇ ರಾಮಚಂದ್ರ ನಾನು ಸಾವಿರ ವರ್ಷದಿಂದ ಉಪವಾಸ ವ್ರತ ಕೈಗೊಂಡಿದ್ದು ಅದೀಗ ಸಮಾಪ್ತಿಯಾಗಿರುವುದರಿಂದ ನೀನು ನನಗೆ ಭೋಜನವನ್ನು ನೀಡಿ ತ್ರಪ್ತಿಪಡಿಸಬೇಕು" ಎಂದು ಕೇಳುತ್ತಾರೆ. ಆಗ ಶ್ರೀರಾಮ ಹಾಗೇ ಆಗಲಿ ಎಂದು ಅವರಿಗೆ ಭೋಜನದ ವ್ಯವಸ್ಥೆ ಮಾಡಿ ಅವರನ್ನು ತ್ರಪ್ತಿಪಡಿಸಿ ಅವರ ಆಶ್ರಮಕ್ಕೆ ಹಿಂದಿರುಗಿ ಕಳಿಸುತ್ತಾನೆ.
ಇದಾದ ನಂತರ ಶ್ರೀರಾಮ ಕಾಲನ ಮಾತನ್ನು, ಅವನಿಗೆ ತಾನು ಕೊಟ್ಟ ಮಾತನ್ನು ನೆನೆದು ಅತ್ಯಂತ ದು:ಖತಪ್ತನಾಗುತ್ತಾನೆ. ಶ್ರೀರಾಮ ಆ ರೀತಿ ಧೀನನಾದದ್ದನ್ನು ನೋಡಿ ಲಕ್ಷ್ಮಣ ಅವನನ್ನು ಸಮಾದಾನ ಪಡಿಸುತ್ತ "ಮಹಾಬಾಹೋ ನೀನು ನನ್ನನ್ನು ತ್ಯಜಿಸಲು ಇಷ್ಟು ಸಂತಾಪ ಪಡಬಾರದು. ಪೂರ್ವಜನ್ಮದ ಕರ್ಮಬಂದನದಿಂದ ನಾವು ಇಷ್ಟು ದಿನ ಜೊತೆಯಾಗಿರಬೇಕೆಂದು ನಿಶ್ಚಯವಾಗಿರುತ್ತದೆ. ಅದು ಈಗ ಮುಗಿಯುತ್ತ ಬಂದಿದೆ. ಮಾಹಾರಾಜನಾದ ನೀನು ವಚನ ಭ್ರಷ್ಠನಾದರೆ ರಾಜ್ಯಕ್ಕೆ ಕೇಡಾಗುತ್ತದೆ ಆದ್ದರಿಂದ ನೀನು ನನ್ನನ್ನು ವಧಿಸಿ ನಿನ್ನ ಧರ್ಮವನ್ನು ವೃದ್ದಿಗೊಳಿಸು" ಎಂದು ಸಮಾಧಾನ ಮಾಡುತ್ತಾನೆ. ಲಕ್ಷ್ಮಣ ಹೀಗೆ ಸಮಾಧಾನ ಮಾಡಿದರೂ ರಾಮಚಂದ್ರ ವ್ಯಾಕುಲನಾಗಿ ತನ್ನ ಮಂತ್ರಿಗಳು ಮತ್ತು ಪುರೋಹಿತರನ್ನು ಕರೆಸಿ ತನ್ನ ಮನದ ಅಳಲನ್ನು ಅವರಲ್ಲಿ ತೋಡಿಕೊಳ್ಳತ್ತಾನೆ. ಆಗ ವಸಿಷ್ಠರು ಅವನನ್ನು ಕುರಿತು "ರಾಮಚಂದ್ರ ನಾನು ನನ್ನ ತಪೋಬಲದಿಂದ ಮುಂದೆ ನಡೆಯುವುದೆಲ್ಲವನ್ನು ತಿಳಿದಿರುವೆ. ಇದರಲ್ಲಿ ನಿನ್ನ ಪಾತ್ರವೇನೂ ಇಲ್ಲ. ಎಲ್ಲವೂ ಕಾಲನ ಸಂಕಲ್ಪದಂತೆ ನಡೆಯುತ್ತದೆ. ಈಗ ಕಾಲ ಬಹಳ ಪ್ರಭಲವಾಗಿದೆ. ಧರ್ಮದ ಲೋಪವಾದಾಗ ಚರಾಚರ ಪ್ರಾಣಿಗಳ, ದೇವತೆಗಳ ಮತ್ತು ಋಷಿಗಳ ಸಹಿತ ಸಮಸ್ತ ತ್ರಿಲೋಕಗಳು ನಾಶವಾಗಿ ಹೋಗುವವು. ಆದ್ದರಿಂದ ನೀನು ತ್ರಿಭುವನಗಳ ರಕ್ಷಣೆಯನ್ನು ಗಮನಿಸಿ ಲಕ್ಷ್ಮಣನನ್ನು ತ್ಯಜಿಸಿಬಿಡು ಮತ್ತು ಧರ್ಮಪೂರ್ವಕ ಸ್ಥಿತನಾಗಿ ಸಂಪೂರ್ಣ ಜಗತ್ತನ್ನು ಸುಖಿಯಾಗಿಸು" ಎಂದು ಹೇಳುತ್ತಾರೆ. ಆಗ ಶ್ರೀರಾಮನು ಲಕ್ಷ್ಮಣನನ್ನು ಕುರಿತು "ಸಾಧು ಪುರುಷರನ್ನು ತ್ಯಜಿಸುವುದು ಅವರನ್ನು ವಧಿಸಿದಂತೆಯೇ ಸರಿ ಆದ್ದರಿಂದ ನಾನು ನಿನ್ನನ್ನು ತ್ಯಜಿಸಲೇಬೇಕಾಗಿದೆ" ಎಂದು ಭಾರವಾದ ಮನಸ್ಸಿನಿಂದ ಲಕ್ಷ್ಮಣನನ್ನು ತ್ಯಜಿಸಿ ಬಿಡುತ್ತಾನೆ.
ನಂತರ ಲಕ್ಷ್ಮಣ ಬಹು ಖಿನ್ನನಾಗಿ ಸರಯೂ ನದಿ ತೀರಕ್ಕೆ ಹೋಗಿ ಆಚಮನ ಮಾಡಿ ಇಂದ್ರಿಯಗಳನ್ನು ವಶ ಮಾಡಿಕೊಂಡು ಪ್ರಾಣವಾಯುವನ್ನು ತಡೆದುಬಿಡುತ್ತಾನೆ. ಅದನ್ನು ಕಂಡು ಸಮಸ್ತ ದೇವತೆಗಳು, ಋಷಿಗಳು, ಅಪ್ಸರ ಸ್ತ್ರೀಯರು ಅವನ ಮೇಲೆ ಹೂಮಳೆಗರೆಯುತ್ತಾರೆ. ಆಗ ಲಕ್ಷ್ಮಣ ಸಶರೀರವಾಗಿ ಜನರ ದೃಷ್ಠಿಯಿಂದ ಅದೃಶ್ಯನಾಗುತ್ತಾನೆ. ದೇವೇಂದ್ರ ಬಂದು ಅವನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾನೆ. ಲಕ್ಷ್ಮಣ ಬಂದದ್ದನ್ನು ನೋಡಿ ದೇವತೆಗಳು ಹರ್ಷಗೊಂಡು ಅವನನ್ನು ಸ್ವಾಗತಿಸುತ್ತಾರೆ.
ಹೀಗೆ ಲಕ್ಷ್ಮಣನನ್ನು ತ್ಯಜಿಸಿದ ಮೇಲೆ ಶ್ರೀರಾಮ ತಾನು ತನ್ನ ಅವತಾರ ಸಮಾಪ್ತಿ ಮಾಡಲು ಭರತನಿಗೆ ಪಟ್ಟಕಟ್ಟಿ ವನಕ್ಕೆ ಹೋಗಲು ಸಿದ್ದನಾಗುತ್ತಾನೆ. ಆದರೆ ಭರತ ರಾಮನಿಂದ ದೂರವಾಗಲು ಬಯಸದೆ ಅವನನ್ನು ಕುರಿತು " ಶ್ರೀರಾಮ ನೀನಿಲ್ಲದೆ ನನಗೆ ರಾಜ್ಯವಾಗಲೀ ಸ್ವರ್ಗವಾಗಲೀ ಬೇಕಾಗಿಲ್ಲ ನೀನು ಈ ಲವಕುಶರಿಗೆ ದಕ್ಷಿಣ ಕೋಸಲ ಮತ್ತು ಉತ್ತರ ಕೋಸಲದ ರಾಜ್ಯಾಭಿಷೇಕ ಮಾಡಿ ರಾಜರನ್ನಾಗಿಸು. ನಾನು ನಿನ್ನೊಂದಿಗೆ ಬರುತ್ತೇನೆ" ಎಂದು ಅವನ ಜೊತೆಗೇ ಹೊರಡಲು ನಿಶ್ಚಯಿಸುತ್ತಾನೆ. ಇದನ್ನು ತಿಳಿದ ಅಯೋಧ್ಯಾವಾಸಿಗರು ಅತ್ಯಂತ ದು:ಖಿತರಾಗುತ್ತಾರೆ. ಆಗ ವಸಿಷ್ಟರು ನಿನ್ನನ್ನೆ ನಂಬಿರುವ ಈ ಜನರನ್ನು ನೋಡು ರಾಮ ಅವರ ಇಚ್ಛೆಗೆ ವಿರುದ್ದವಾಗಿ ನಡೆಯಬೇಡ ಎನ್ನುತ್ತಾರೆ. ಆಗ ರಾಮ ನಗರವಾಸಿಗಳನ್ನು ಕಂಡು ನಿಮಗಾಗಿ ನಾನು ಏನು ಮಾಡಲಿ ಎಂದಾಗ ಅವರೆಲ್ಲರು ಶ್ರೀರಾಮ ನೀನು ಹೋಗುವೆಡೆಗೆ ನಮ್ಮನ್ನು ಕರೆದೊಯ್ಯಿ ಎಂದು ಬೇಡುತ್ತಾರೆ. ಅವರ ಭಕ್ತಿಗೆ ಮೆಚ್ಚಿ ಶ್ರೀರಾಮ ಹಾಗೆಯೇ ಆಗಲಿ ಎಂದು ಎಲ್ಲರನ್ನು ತನ್ನೊಂದಿಗೆ ಕರೆದೊಯ್ಯಲು ನಿಶ್ಚಯ ಮಾಡುತ್ತಾನೆ. ನಂತರ ರಾಮ ತನ್ನ ಮಕ್ಕಳಿಗೆ ರಾಜ್ಯಗಳ ಅಭಿಷೇಕ ಮಾಡಿ ಅವರನ್ನು ಮತ್ತೆ ಮತ್ತೆ ಆಲಂಗಿಸಿ ಆಶೀರ್ವದಿಸಿ ಅವರವರ ರಾಜ್ಯಗಳಿಗೆ ಕರುಹಿಸಿಕೊಡುತ್ತಾನೆ.
ನಂತರ ಶ್ರೀರಾಮಚಂದ್ರ ತನ್ನ ನಿರ್ಣಾಯದ ವಿಷಯವನ್ನು ಶತೃಘ್ನನಿಗೆ ತಿಳಿಸಲು ದೂತರನ್ನು ಮದುರೆಗೆ ಕಳಿಸುತ್ತಾನೆ. ಶ್ರೀರಾಮನ ನಿರ್ಧಾರ, ಲಕ್ಷ್ಮಣನ ಪರಿತ್ಯಾಗ, ಮಕ್ಕಳ ಅಭಿಷೇಕ ಮತ್ತು ಪುರವಾಸಿಗಳೆಲ್ಲ ರಾಮನೊಂದಿಗೆ ಹೋಗುತ್ತಿರುವ ವಿಷಯವನ್ನು ಕೇಳಿ ಶತೃಘ್ನ ಅತ್ಯಂತ ವ್ಯಾಕುಲನಾಗಿ ತನ್ನ ಸಮಸ್ತ ಪ್ರಜೆಗಳು ಮತ್ತು ಪುರೋಹಿತರನ್ನು ಕರೆಸಿ ಎಲ್ಲ ವಿಷಯಗಳನ್ನು ಅವರಿಗೆ ತಿಳಿಸಿ ತಾನೂ ರಾಮನೊಂದಿಗೆ ಪ್ರಸ್ಥಾನ ಮಾಡುವ ನಿರ್ಣಯವನ್ನು ಕೈಗೊಳ್ಳುತ್ತಾನೆ. ನಂತರ ತನ್ನ ಮಕ್ಕಳಾದ ಸುಭಾಹುವನ್ನು ಮದುರೆಗೂ ಹಾಗೂ ಶತೃಘಾತಿಯನ್ನು ವಿದಿಶಾ ನಗರಕ್ಕು ರಾಜ್ಯಾಭಿಷೇಕ ಮಾಡಿ ಸೈನ್ಯ ಮತ್ತು ಧನಕನಕಾದಿಗಳನ್ನು ಸಮಭಾಗ ಮಾಡಿಕೊಟ್ಟು ಅಯೋಧ್ಯೆಗೆ ಹೊರಡಲು ಸನ್ನದ್ಧನಾಗುತ್ತಾನೆ. ಅಲ್ಲಿಗೆ ಹೋಗಿ ಶ್ರೀರಾಮನ್ನು ಕಂಡು "ಮಹಾತ್ಮಾ ನಾನು ನನ್ನ ಎರಡೂ ಪುತ್ರರಿಗೆ ಪಟ್ಟಾಭಿಷೇಕ ಮಾಡಿ ನನ್ನ ಕರ್ತವ್ಯಗಳನ್ನು ಮುಗಿಸಿಬಂದಿದ್ದೇನೆ. ಇನ್ನು ನಿನ್ನೊಂದಿಗೆ ಹೊರಡಲು ಸಿದ್ದನಿದ್ದೇನೆ. ನೀನು ನನ್ನನ್ನು ಜೊತೆಗೆ ಕರೆದೊಯ್ಯಬೇಕು ಮತ್ತೇನು ವಿಪರೀತವಾಗಿ ಹೇಳಬೇಡ" ಎಂದು ಬೇಡುತ್ತಾನೆ. ಅವನ ದೃಢ ನಿರ್ಧಾರವನ್ನು ಕೇಳಿ ರಾಮಚಂದ್ರ ಹಾಗೆಯೇ ಆಗಲೆಂದು ಒಪ್ಪುತ್ತಾನೆ. ಅಷ್ಟು ಹೊತ್ತಿಗೆ ಅವನ ಅನುಚರರಾದ ವಾನರರು, ಕರಡಿಗಳು, ರಾಕ್ಷಸ ಸಮುದಾಯ ಎಲ್ಲರು ಶ್ರೀರಾಮ ಸಾಕೇತ ನಗರಕ್ಕೆ ಹೋಗುತ್ತಿರುವುದನ್ನು ತಿಳಿದು ಸುಗ್ರೀವನ ನೇತೃತ್ವದಲ್ಲಿ ಅವನ ದರ್ಶನ ಪಡೆಯಲು ಅಲ್ಲಿಗೆ ಬರುತ್ತಾರೆ. ಅವರೆಲ್ಲರು ರಾಮಚಂದ್ರನ ದರುಶನ ಪಡೆದು ಅವರ ಪರವಾಗಿ ಸುಗ್ರೀವನು "ಪ್ರಭು ನೀನಿಲ್ಲದೆ ನಾವು ಈ ಲೋಕದಲ್ಲಿ ಖಂಡಿತ ಇರಲಾರೆವು ನೀನು ನಮ್ಮನ್ನು ನಿನ್ನೊಂದಿಗೆ ಕರೆದೊಯ್ಯದೆ ಹೋದರೆ ನೀನು ನಮ್ಮನ್ನು ಕೊಂದೆ ಎಂದೇ ಭಾವಿಸುತ್ತೇವೆ. ನಾನು ಈಗಾಗಲೆ ಅಂಗದನಿಗೆ ಪಟ್ಟಕಟ್ಟಿ ಬಂದಿದ್ದೇನೆ. ನಿನ್ನೊಂದಿಗೆ ಬರಲು ನಾವು ದೃಢ ನಿಶ್ಚಯ ಮಾಡೆದ್ದೇವೆ." ಎಂದನು. ಅದನ್ನು ಕೇಳಿ ಶ್ರೀ ರಾಮನು ಹಾಗೆಯೇ ಆಗಲೆಂದು ಅನುಮೋದಿಸಿದನು. ನಂತರ ವಿಭೀಷಣನನ್ನು ಕುರಿತು "ಪರಾಕ್ರಮಿಯೆ ನೀನು ಪೃಥಿವಿ ಇರುವತನಕ ಹಾಗೂ ನನ್ನ ಕಥೆ ಪ್ರಚಲಿತವಿರುವ ತನಕ ಈ ಭೂಮಿಯ ಮೇಲಿದ್ದು ನಮ್ಮ ಇಕ್ಷ್ವಾಕು ಕುಲದ ದೇವತೆ ಜಗನ್ನಾಥನ ನಿರಂತರ ಆರಾಧನೆ ಮಾಡುತ್ತ ಇರು" ಎಂದನು. ಅದನ್ನು ಕೇಳಿ ವಿಭೀಷಣನು ಹಾಗೆಯೇ ಆಗಲೆಂದು ಅವನ ಆಜ್ಷೆಯನ್ನು ಸ್ವೀಕರಿಸಿದನು. ನಂತರ ಹನುಮಂತನನ್ನು ಕುರಿತು ಚಿರಂಜೀವಿಯಾಗಿ ಪ್ರಳಯ ಕಾಲದವರೆಗೆ ನಿರಂತರವಾಗಿ ನನ್ನ ಜಪ ಮಾಡುತ್ತ ಇರು ಎಂದು ಅನುಗ್ರಹಿಸುತ್ತಾನೆ. ಜಾಂಬುವಂತನನ್ನು ಕುರಿತು ಕಲಿಗಾಲ ಇರುವವರೆಗು ಇಲ್ಲಿಯೇ ಇದ್ದು ನಂತರ ಉನ್ನತ ಲೋಕಕ್ಕೆ ಹೋಗಬೇಕೆಂದು ಹೇಳುತ್ತಾನೆ.
ಇಷ್ಟು ಹೇಳಿ ರಾಮಚಂದ್ರ ವಸಿಷ್ಠರ ಸಮಕ್ಷಮದಲ್ಲಿ ಮಹಾಪ್ರಸ್ಥಾನಕ್ಕೆ ಮಾಡಬೇಕಾದ ವಿಧಿಗಳನ್ನೆಲ್ಲ ಸಾಂಗವಾಗಿ ಅನುಷ್ಠಾನ ಮಾಡುತ್ತಾನೆ. ನಂತರ ಸೂಕ್ಷ್ಮ ಬಟ್ಟೆಗಳನ್ನು ಧರಿಸಿ ಕೈಯಲ್ಲಿ ದರ್ಭೆ ಹಿಡಿದು ಮೌನ ವ್ರತ ಸ್ವೀಕರಿಸಿ ವೇದಮಂತ್ರಗಳನ್ನು ಉಚ್ಚರಿಸುತ್ತ ಸರಯೂ ನದಿ ತೀರಕ್ಕೆ ಬರುತ್ತಾನೆ. ಲೌಕಿಕ ಸುಖಗಳನ್ನು ತ್ಯಾಗ ಮಾಡಿ ದೇವೀಪ್ಯಮಾನವಾಗಿ ಬೆಳಗುತ್ತ ಗಂತವ್ಯ ದಾರಿಯಲ್ಲಿ ನಡೆಯುತ್ತಾನೆ. ನಾನಾಪ್ರಕಾರದ ಬಾಣಗಳು, ಶಸ್ತ್ರಾಸ್ತಗಳು ಪುರುಷ ರೂಪದಿಂದ ಅವನೊಡನೆ ಸಾಗುತ್ತವೆ. ನಾಲ್ಕು ವೇದಗಳು ಬ್ರಾಹ್ಮಣ ರೂಪದಿಂದ ಜೊತೆಗೆ ನಡೆಯುತ್ತವೆ. ಎಲ್ಲರನ್ನು ರಕ್ಷಿಸುವ ಗಾಯತ್ರಿದೇವಿ, ಓಂಕಾರ, ವಷಟ್ಕಾರಗಳು ಭಕ್ತಿಭಾವದಿಂದ ರಾಮನನ್ನು ಅನುಸರಿಸುತ್ತವೆ. ತನ್ನ ಎಡಬಲದಲ್ಲಿ ಶ್ರೀದೇವಿ, ಭೂದೇವಿಯರ ಸಹಿತ ನಡೆದ ರಾಮನ ಹಿಂದೆ ಸಮಸ್ತ ಋಷಿಗಳು, ಬ್ರಾಹ್ಮಣರು ನಡೆಯುತ್ತಾರೆ. ಭರತ ಶತೃಜ್ಞರು ತಮ್ಮ ಹೆಂಡತಿಯರೊಂದಿಗೆ ನಡೆಯುತ್ತಾರೆ. ಶ್ರೀರಾಮನ ಈ ಯಾತ್ರೆಯನ್ನು ನೋಡಿ ಅಯೋಧ್ಯೆಯಲ್ಲಿನ ಪ್ರಾಣಿ ಪಕ್ಷಿಗಳು, ತಿರ್ಯಗ್ ಯೋನಿಗಳು ಸಮಸ್ತ ಜೀವಿಗಳು ಅವನನ್ನು ಹಿಂಬಾಲಿಸುತ್ತವೆ. ಸಮಸ್ತ ಮಂತ್ರಿಗಳು, ಭೃತ್ಯುವರ್ಗ ತಮ್ಮ ಪತ್ನೀ ಪುತ್ರರ ಸಮೇತವಾಗಿ ಶ್ರೀರಾಮನನ್ನು ಹಿಂಬಾಲಿಸಿದರು. ಎಲ್ಲ ಜನರು ಪಶು ಪ್ರಾಣಿಗಳ ಮನಸ್ಸಿನಲ್ಲಿ ಪ್ರಸನ್ನತೆ ಇದ್ದು ಎಲ್ಲರೂ ಪಾಪರಹಿತರಾಗಿದ್ದರು. ಅವರಲ್ಲಿ ದೀನರು, ದು:ಖಿಗಳು, ಲಜ್ಜಿತರು ಯಾರೂ ಇರಲಿಲ್ಲ. ಆ ಯತ್ರೆಯನ್ನು ನೋಡಲು ಬಂದಿದ್ದವರು ಕೂಡ ಆ ಮಹ ಸಮಾರೋಹ ನೋಡಿ ತಾವೂ ಭಗವಂತನ ಜೊತೆಗೆ ಹೊರಡಲು ಸಿದ್ದರಾದರು. ಆಗ ಅಯೋಧ್ಯೆಯಲ್ಲಿ ಉಸಿರಾಡುವ ಯಾವುದೇ ಚಿಕ್ಕ ಜೀವಿಯೂ ಉಳಿಯದೆ ಅಯೋಧ್ಯೆ ಬರಡಾಯಿತು.
ನಂತರ ಶ್ರೀರಾಮ ಸರಯೂ ನದಿಯ ಬಳಿ ಒಂದು ಉತ್ತಮ ಸ್ಥಾನವನ್ನು ಸೇರಿದಾಗ ಬ್ರಹ್ಮದೇವರು ಸಮಸ್ತ ದೇವತೆಗಳೊಡನೆ ಬಂದು ಅತ್ಯಂತ ಭಕ್ತಿಯಿಂದ ಪೂಜಿಸಿ ಸ್ವಸ್ಥಾನಕ್ಕೆ ಬರಬೇಕೆಂದು ಬೇಡುತ್ತಾರೆ. ಆಗ ನೂರಾರು ವಾದ್ಯಗಳು ಮೊಳಗಿ ಪುಷ್ಪವೃಷ್ಟಿಯಾಗುತ್ತದೆ. ಆಕಾಶ ಮಂಡಲವೆಲ್ಲ ದಿವ್ಯ ತೇಜಸ್ಸಿನಿಂದ ವ್ಯಾಪ್ತವಾಗಿ ಅತ್ಯಂತ ಜ್ಯೋತಿರ್ಮಯವಾಗುತ್ತಿತ್ತು. ಆಗ ನೂರಾರು ವಾದ್ಯಗಳು ಮೊಳಗಿದವು. ಗಂದರ್ವರು ಅಪ್ಸರೆಯರಿಂದ ಆ ಜಾಗವು ತುಂಬಿ ಹೋಯಿತು. ನಂತರ ಶ್ರೀರಾಮನು ನಿದಾನವಾಗಿ ಸರಯೂ ಜಲವನ್ನು ಪ್ರವೇಶಿಸಲು ಮುಂದಡಿಯಿಟ್ಟನು. ಆಗ ಬ್ರಹ್ಮದೇವರು "ಶ್ರೀ ವಿಷ್ಣುಸ್ವರೂಪನಾದ ರಾಮಚಂದ್ರನೆ ನೀನು ಪರಂಧಾಮಕ್ಕೆ ತಿರುಗಿ ಬರುತ್ತಿರುವುದು ನಮಗೆ ಬಹಳ ಸಂತೋಷವಾಗಿದೆ. ಬಾ" ಎಂದು ಸ್ವಾಗತ ಕೋರಿದನು.
ಶ್ರೀರಾಮನು ತನ್ನ ಸಹೋದರರೊಂದಿಗೆ ಶರೀರ ಸಮೇತನಾಗಿ ತನ್ನ ವೈಷ್ಣವ ತೇಜಸ್ಸನ್ನು ಪ್ರವೇಶಿಸಿದನು. ನಂತರ ಬ್ರಹ್ಮನನ್ನು ಕುರಿತು ತನ್ನೊಡನೆ ಬಂದವರಿಗೆಲ್ಲ ಉತ್ತಮ ಲೋಕವನ್ನು ನೀಡಬೇಕೆಂದು ಹೇಳುತ್ತಾನೆ. ಬ್ರಹ್ಮದೇವರು ಹಾಗೆಯೇ ಆಗಲಿ ಎಂದು ಬ್ರಹ್ಮಲೋಕದ ನಿಕಟವಾಗಿರುವಂತ "ಸಂತಾನಕ" ಎಂಬ ಲೋಕಕ್ಕೆ ಎಲ್ಲರನ್ನು ಕರೆದೊಯ್ಯುತ್ತಾರೆ. ಎಲ್ಲ ವಾನರರು, ದೇವತೆಗಳು ಯಾವ ಯಾವ ದೇವತೆಗಳಿಂದ ಉತ್ಪನ್ನವಾಗಿದ್ದರೋ ಅವರಲ್ಲಿ ಸೇರಿಕೊಳ್ಳುತ್ತಾರೆ. ಬ್ರಹ್ಮದೇವರ ಆಜ್ಞೆಯಂತೆ ಎಲ್ಲ ಜನರು ಸರಯೂ ನದಿಯಲ್ಲಿ ಮುಳುಗುತ್ತಿರುವಂತೆ ತಮ್ಮ ಶರೀರಗಳನ್ನು ತ್ಯಜಿಸಿ ಉತ್ತಮ ಲೋಕಸೇರುತ್ತಾರೆ. ಈ ಪ್ರಕಾರ ಭಗವಾನ್ ಶ್ರೀರಾಮ ಮೊದಲಿನಂತೆ ವಿಷ್ಣು ರೂಪದಿಂದ ಪರಂಧಾಮದಲ್ಲಿ ಪ್ರತಿಷ್ಠಿತನಾಗುತ್ತಾನೆ.
|| ಶ್ರೀ ಕೃಷ್ಣಾರ್ಪಣಮಸ್ತು ||
- ಡಾ.ಎಲ್ ಸುಧಾ ,
ಹರಿದಾಸ ಸಾಹಿತ್ಯ ಸಂಶೋಧಕರು , ಬೆಂಗಳೂರು
ಲೇಖಕರ ಸಂಕ್ಷಿಪ್ತ ಪರಿಚಯ
ತಂದೆ ತಾಯಿಯ ಹೆಸರು ದಿ. ದೇಶಮುಖ್ ಲಕ್ಷ್ಮಣರಾವ್ ಮತ್ತು ದಿ.ನಾಮಗಿರಿಯಮ್ಮ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಮಲ್ಲೇಶ್ವರದ ಎಮ್.ಈ.ಎಸ್.ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದ ಪದವೀಧರೆಯಾಗಿ ಸಿಂಡಿಕೇಟ್ ಬ್ಯಾಂಕ್ನಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸ್ವಯಂ ನಿವೃತ್ತಿ ತೆಗೆದುಕೊಂಡು ನಂತರ ಸುಮಾರು 15 ವರ್ಷಗಳ ಕಾಲ ಆದಿತ್ಯ ಬಿರ್ಲಾ ವಿಮಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪದವಿ ಪಡೆದು 40 ವರ್ಷಗಳ ನಂತರ ಬಹುಕಾಲದ ಆಸೆಯಂತೆ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯಿಂದ ಹರಿದಾಸ ಸಾಹಿತ್ಯದಲ್ಲಿ ಎಂ.ಎಸ್. ಮುಗಿಸಿ, ನಂತರ ಹರಿದಾಸ ಸಾಹಿತ್ಯದಲ್ಲಿ ಅಪಾರ ಜ್ಞಾನವನ್ನು ಪಡೆದಿರುವ ಡಾ. ಗೋಕುಲನಾಥ್ ಅವರ ಮಾರ್ಗದರ್ಶನದಲ್ಲಿ "ಹರಿದಾಸ ಸಾಹಿತ್ಯದ ಪಾಠ ಪರಿಷ್ಕರಣ" ಎಂಬ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇದುವರೆಗೂ "ಹರಿದಾಸರು ಚಿತ್ರಿಸಿರುವ ವಿನಾಯಕ" ಮತ್ತು "ಹರಿದಾಸ ಸಾಹಿತ್ಯದ ಪಾಠ ಪರಿಷ್ಕರಣ" ಎಂಬ ಎರಡು ಪುಸ್ತಕಗಳು ಪ್ರಕಟವಾಗಿವೆ. 17 ವರ್ಷಗಳಿಂದ "ಮಹತಿ ಭಜನಾ ಮಂಡಲಿ"ಯನ್ನು ಸ್ಥಾಪಿಸಿ ನಡೆಸಿಕೊಂಡು ಬರುತ್ತಿದ್ದು ಹಲವಾರು ಮಹಿಳೆಯರಿಗೆ ದೇವರನಾಮಗಳನ್ನು ಹೇಳಿಕೊಟ್ಟು ಬೆಂಗಳೂರು ಹಾಗೂ ಸುತ್ತ ಮುತ್ತಲಿನ ಬೇರೆ ಬೇರೆ ಊರುಗಳಲ್ಲಿ 150ಕ್ಕು ಹೆಚ್ಚು ಭಜನಾ ಕಾರ್ಯಕ್ರಮಗಳನ್ನು ನಡಸಿಕೊಟ್ಟಿದ್ದಾರೆ. ದಾಸ ಸಾಹಿತ್ಯಕ್ಕೆ ಸಂಬಂಧ ಪಟ್ಟ ಹಾಗೆ ಸೆಮಿನಾರ್ಗಳಲ್ಲಿ ಪ್ರಬಂಧಗಳ ಮಂಡನೆ ಹಾಗೂ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಈ-ಮ್ಯಾಗಜಿನ್ಗೆ ಲೇಖನಗಳನ್ನು ಬರೆದಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ