ಪುತ್ತೂರು: ಇಲ್ಲಿಯ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಶಿವರಾಮ ಕಾರಂತ ಅಧ್ಯಯನ ಕೇಂದ್ರದಿಂದ ನೀಡುವ ನಿರಂಜನ ಪ್ರಶಸ್ತಿಯನ್ನು ಈ ವರ್ಷ ನಿವೃತ್ತ ಪ್ರಾಧ್ಯಾಪಕರು ಮತ್ತು ಸಾಹಿತಿ ಪ್ರೊ. ವಿ. ಬಿ. ಅರ್ತಿಕಜೆ ಅವರಿಗೆ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ.) ಇವರಿಗೆ ಮೇ 9 ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿರುವ ಕರ್ಯಕ್ರಮದಲ್ಲಿ ನೀಡುವುದೆಂದು ಕಾಲೇಜಿನ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ನಿರಂಜನ ಸಾಹಿತ್ಯ ಪ್ರಶಸ್ತಿ:
ಪ್ರೊ. ವಿ. ಬಿ. ಅರ್ತಿಕಜೆ ಅವರು ಪುತ್ತೂರು ಬಳಿಯ ಈಶ್ವರಮಂಗಲದ ಅರ್ತಿಕಜೆ ಶ್ಯಾಮ ಭಟ್ಟ ಹಾಗೂ ಸಾವಿತ್ರಿ ದಂಪತಿಯ ಪುತ್ರರಾಗಿ 1943 ಜೂನ್ 29ರಂದು ಜನಿಸಿದರು. ಇವರ ಆಸಕ್ತಿಯ ಕ್ಷೇತ್ರ ಅಧ್ಯಾಪನ, ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಸಂಘಟನೆ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ 33 ವರ್ಷಗಳ ಕಾಲ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ ಇವರು ಪ್ರೌಢಶಾಲಾ ದಿನಗಳಲ್ಲಿ ನವೋದಯ, ಸುಪ್ರಭಾತ ಮತ್ತು ನವರಸ ಹಸ್ತಪತ್ರಿಕೆಗಳನ್ನು ಆರಂಭಿಸಿದವರು. ತನ್ನ ಆಡುಭಾಷೆ ಹವ್ಯಕವನ್ನು ಅಂಕಣದಲ್ಲಿ ಉಪಯೋಗಿಸಿದ, ಆ ಭಾಷೆಯಲ್ಲೇ ಸಾಹಿತ್ಯ ಸೃಷ್ಟಿಸಿದ ಹಿರಿಮೆ ಇವರದು.
ವರದಿಗಾರಿಕೆ ಹಾಗೂ ವಿಪುಲ ಅಂಕಣ ಬರೆಹಗಳ ಮೂಲಕ ಚಿರಪರಿಚಿತರಾಗಿ . ಪುತ್ತೂರಿನ ಸಾಹಿತ್ಯಕ, ಸಾಂಸ್ಕೃತಿಕ ಸಂಸ್ಥೆಗಳಲ್ಲೂ ಸಕ್ರಿಯರಾಗಿ ಸಂಘಟನ ಕೌಶಲವನ್ನು ಸಾಬೀತುಪಡಿಸಿರುವ ಇವರು ಅನೇಕ ಪ್ರತಿಭಾಶಾಲಿಗಳಿಗೆ ಪ್ರೋತ್ಸಾಹಿಸಿದವರು. ಅವರು ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ ಹೆಗ್ಗಳಿಕೆಯೂ ಇವರದು. ಇವರು ನಾದಪೂಜೆ, ಅಪರೂಪ, ಅನನ್ಯ ಸಾಧಕ, ಜೇನಹನಿ, ಪುಸ್ತಕ ಪ್ರೀತಿಗೆ ರೂಪಕ: ಬೋಳಂತಕೋಡಿ ಈಶ್ವರ ಭಟ್ಟ, ಹಾಸ್ಯೋಲ್ಲಾಸ, ನಗೆಮಿಂಚು, ಪತ್ರಿಕಾ ರಂಗ ಪ್ರವೇಶ ಮೊದಲಾದ ಪ್ರಮುಖ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ನೂರೆಂಟು ನೆನಪು' ಆತ್ಮಕಥನ ಉದಾರ ವ್ಯಕ್ತಿತ್ವದ ಪ್ರತಿಕೃತಿಯಾಗಿದೆ.
ಶಂಕರ ಸಾಹಿತ್ಯ ಪ್ರಶಸ್ತಿ :
ಪುತ್ತೂರು ಸೀಮೆಯ ಹಿರಿಯ ವೈದಿಕ ವಿದ್ವಾಂಸರೂ ಪುರೋಹಿತರೂ ಆದ ದಿವಂಗತ ಮಿತ್ತೂರು ತಿಮ್ಮಯ್ಯ ಭಟ್ಟರ ಹೆಸರಿನಲ್ಲಿ ಅವರ ಮರಣಾನಂತರ ಅವರ ಶಿಷ್ಯವರ್ಗದವರೂ ಬಂಧುಗಳೂ ಸೇರಿ 1993ರಲ್ಲಿ ಸ್ಥಾಪಿಸಿದ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನವೆಂಬ ನೋಂದಾಯಿತ ಸಂಸ್ಥೆಗೆ ಈಗ ಮೂವತ್ತನೆಯ ವರ್ಷ. ಸಂಸ್ಕೃತ ಭಾಷೆ, ವೈದಿಕ ವಿಷಯಗಳು ನಮ್ಮ ಸಂಸ್ಕೃತಿ- ಪರಂಪರೆ- ಇವುಗಳ ಅಧ್ಯಯನ ಮತ್ತು ಪ್ರಸಾರದೊಂದಿಗೆ ಸಾಮಾಜಿಕ ಸಮುನ್ನತಿಯ ಧೈರ್ಯಗಳನ್ನೂ ಹೊಂದಿರುವ ಸಂಸ್ಥೆಯು ಕಳೆದ ಮೂವತ್ತು ವರ್ಷಗಳಿಂದ ಪರಿಸರದ ಶಾಲಾ ಕಾಲೇಜುಗಳಲ್ಲಿ ಸಂಸ್ಕೃತಾಧ್ಯಯನದಲ್ಲಿ ತರಗತಿಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರೋತ್ಸಾಹಧನ ಪ್ರದಾನದೊಂದಿಗೆ ನಡೆಸುತ್ತಿದೆ. ಕನ್ನಡ ಸಂಧ್ಯಾಭಾಷ್ಯ, ಆದಿತ್ಯಾದಿ ನವಗ್ರಹ ಪೂಜಾವಿಧಿ, ಶಾರದಾರಾಧನಮ್, ಗೋದಾನಾದಿ ವಿಧಾನಮ್, ವೇದವೇದಾಂಗ ಪರಿವಾರ, ಶಿವಯೋಗದೀಪಿಕಾ ಮೊದಲಾದ ಸತ್ಕೃತಿಗಳನ್ನು ಪ್ರಕಟಿಸಿದೆ. ಗ್ರಂಥಗಳು ತಪ್ಪಿಲ್ಲದೆ ಪ್ರಕಟಗೊಳ್ಳಬೇಕೆಂದು ಸಂಪ್ರತಿಷ್ಠಾನವು ಹೆಚ್ಚು ಕಾಳಜಿ ವಹಿಸುತ್ತಿದ್ದು, ಈ ವರ್ಷ ತನ್ನ ಚಟುವಟಿಕೆಗಳಿಗಾಗಿ ಸ್ವಂತ ಕಾರ್ಯಭವನನ್ನು ಹೊಂದಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ವಹಿಸಲಿದ್ದು, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿಯ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಹಾಗೂ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಭಾಗವಹಿಸಲಿದ್ದಾರೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ