ಮಂಗಳೂರು: ರಾಮಮಂದಿರದ ವಿಷಯದಲ್ಲಿ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯಾದ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನೇ ಬದಲಿಸಲು ರಾಹುಲ್ ಗಾಂಧಿ ಚಿಂತನೆ ನಡೆಸಿದ್ದರು ಎಂದು ಮಾಜಿ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ರವರು ಹೇಳಿಕೆ ನೀಡಿದ್ದು ಕಾಂಗ್ರೆಸ್ ಅದೆಷ್ಟು ಹಿಂದೂ ವಿರೋಧಿ ಮನಸ್ಥಿತಿಯನ್ನು ಹೊಂದಿದೆ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಗೈರಾಗಿ ರಾಮಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿದೆ ಎಂಬುದನ್ನು ಕಾಂಗ್ರೆಸ್ ನೇರವಾಗಿ ಸೂಚಿಸಿತ್ತು. ಇದೀಗ ರಾಹುಲ್ ಗಾಂಧಿ ಅಮೆರಿಕದ ತಮ್ಮ ಹಿತೈಷಿಗಳ ಸಲಹೆ ಹಾಗೂ ಆಪ್ತರೊಂದಿಗೆ ನಡೆಸಿದ ಚರ್ಚೆಯ ನಂತರ ಮುಂದಿನ ದಿನಗಳಲ್ಲಿ ತಾವು ಅಧಿಕಾರಕ್ಕೆ ಬಂದಲ್ಲಿ, ಶಾಬಾನೋ ಪ್ರಕರಣದಲ್ಲಿ ರಾಜೀವ್ ಗಾಂಧಿ ಸರ್ಕಾರ ಸೂಪರ್ ಪವರ್ ಆಯೋಗವನ್ನು ರಚಿಸಿ ಸುಪ್ರೀಂ ಕೋರ್ಟ್ ತೀರ್ಪನ್ನೇ ಬದಲಿಸಿದ್ದ ಮಾದರಿಯಲ್ಲೇ ರಾಮಮಂದಿರ ತೀರ್ಪನ್ನು ಬದಲಿಸುವ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದರು, ಎಂದು ಕಾಂಗ್ರೆಸ್ ನಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ಇದ್ದ ಆಚಾರ್ಯರು ತಿಳಿಸಿರುವುದು ಶತ ಕೋಟಿ ರಾಮಭಕ್ತರ ಪಾಲಿಗೆ ಆಘಾತಕಾರಿ ಸಂಗತಿಯಾಗಿದೆ. ಇದೇ ವೇಳೆ ಕಾಂಗ್ರೆಸ್ ನಾಯಕಿ ರಾಧಿಕಾ ಖೇರಾರವರು ಅಯೋಧ್ಯೆಗೆ ಭೇಟಿ ನೀಡಿದ ಕಾರಣಕ್ಕೆ ಪಕ್ಷದೊಳಗೆ ತೀವ್ರ ಟೀಕೆಗೆ ಒಳಗಾಗಿ ಬೇಸರದಿಂದ ಪಕ್ಷ ತೊರೆದಿದ್ದರು. ಮೋದಿಯವರನ್ನು ವಿರೋಧಿಸುವ ಭರದಲ್ಲಿ ಶತಕೋಟಿ ಭಾರತೀಯರ ಆರಾಧ್ಯ ದೈವ ಶ್ರೀರಾಮನನ್ನು ವಿರೋಧಿಸುವ ಮಟ್ಟಕ್ಕೆ ತಲುಪಿರುವುದು ಕಾಂಗ್ರೆಸ್ಸಿನ ಅಂತಿಮ ದಿನಗಳು ಸಮೀಪಿಸುತ್ತಿರುವುದರ ಸಂಕೇತವೆಂದು ಶಾಸಕರು ಹೇಳಿದರು.
ಈ ದೇಶದ ಅಸ್ಮಿತೆಯಾದ ಸನಾತನ ಹಿಂದೂ ಸಂಸ್ಕೃತಿ ತನ್ನ ಗತವೈಭವದತ್ತ ಮರಳಿದೆ. ಹಿಂದೂ ಸಮಾಜ ಹಿಂದೆಂದಿಗಿಂತಲೂ ಜಾಗೃತವಾಗಿದೆ. ಹೀಗಿರುವಾಗ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಕನಸಿನ ಮಾತು. ಇನ್ನು ರಾಮ ಮಂದಿರವನ್ನು ಮುಟ್ಟುವುದು ಬಿಡಿ, ಅದರತ್ತ ಕೆಟ್ಟ ಉದ್ದೇಶದಿಂದ ಕಣ್ಣು ಹಾಯಿಸಲೂ ಸಾಧ್ಯವಿಲ್ಲ ಎಂದು ಹೇಳಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ