ಸನಾತನ ಭಾರತದ ಸಾಂಸ್ಕ್ರತಿಕ ಇತಿಹಾಸದ ಕಾಲಘಟ್ಟದಲ್ಲಿ ಕ್ರಿ.ಶ. ಎಂಟನೇ ಶತಮಾನದಿಂದ ಹದಿನಾರನೇ ಶತಮಾನದವರೆಗೂ ವಿಭಿನ್ನ, ವೈಶಿಷ್ಟ್ಯ ಪೂರ್ಣ ಮತ್ತು ವೈವಿಧ್ಯಮಯವಾದಂತ ಹ ಘಟನೆಗಳು ನಡೆದಿವೆ. ಅಂತಹ ಕಾಲಘಟ್ಟದಲ್ಲಿ ವಿವಿಧ ರೀತಿಯ ಸಾಮಾಜಿಕ ಧಾರ್ಮಿಕ ವ್ಯವಸ್ಥೆಯಲ್ಲಿ ವಿವಿಧ ರೀತಿಯ ಅನಿಷ್ಟ ಪದ್ಧತಿಗಳು ಒಂದಲ್ಲಾ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಭಾರತದಲ್ಲಿ ಧಾರ್ಮಿಕ ಸುಧಾರಣಾ ಚಳುವಳಿಗಳ ಕಾಲಘಟ್ಟದಲ್ಲಿ ಭಕ್ತಿಪಂಥದ ಸುಧಾರಕರು ಕಾಣಿಸಿಕೊಂಡರು. ಇವರು ಸಮಾಜ ಮತ್ತು ಧರ್ಮವನ್ನು ಅತ್ಯಂತ ಸೂಕ್ಷ್ಮ ದೃಷ್ಟಿಯಿಂದ ಅವಲೋಕಿಸಿದಾಗ ಕೆಲವೊಂದು ನ್ಯೂನ್ಯತೆಗಳು ಇರುವುದು ಕಂಡು ಬಂದವು. ಸಾಮಾಜಿಕ ಅನಿಷ್ಟಗಳನ್ನು ಭಕ್ತಿಪಂಥದ ಸುಧಾರಕರು ಖಂಡಿಸಿದರು. ಯಾಗಗಳಲ್ಲಿ ನಡೆಸುತ್ತಿದ್ದ ಕರ್ಮಕಾಂಡಗಳನ್ನು ಮತ್ತು ಮತಾಂತರಗಳನ್ನು ಅನೇಕ ಹಿಂದೂ ಸುಧಾರಕರು ವಿರೋಧಿಸಿದರು. ಸರಳವಾದ ಮಾರ್ಗದಲ್ಲಿ ಜೀವನದಲ್ಲಿ ಮುಕ್ತಿ ಪಡೆಯುವುದು ಹೇಗೆಂದು ತಿಳಿಸಿಕೊಟ್ಟರು. ಜ್ಞಾನಮಾರ್ಗ, ಕರ್ಮಮಾರ್ಗ ಮತ್ತು ಭಕ್ತಿ ಮಾರ್ಗಗಳ ಮೂಲಕ ಮೋಕ್ಷವನ್ನು ಸಂಪಾದಿಸುವ ಸರಳ ಮಾರ್ಗಗಳನ್ನು ತಿಳಿಸುವ ಮೂಲಕ ಧಾರ್ಮಿಕ ಪುನರುತ್ಥಾನಕ್ಕೆ ಕಾರಣಕರ್ತರಾದರು. ಅಂತಹ ಧಾರ್ಮಿಕ ಸುಧಾರಕರಲ್ಲಿ ಧ್ರುವ ನಕ್ಷತ್ರದಂತೆ ಪ್ರಕಾಶಮಾನರಾಗಿರುವ ಮಹಾಪುರುಷರಲ್ಲಿ ಶ್ರೀ ಶಂಕರಾಚಾರ್ಯರು ಪ್ರಮುಖರೆನಿಸಿದ್ದಾರೆ.
ಶಂಕರಾಚಾರ್ಯರು: [ಕ್ರಿ.ಶ. 789- ಕ್ರಿ.ಶ. 820] ಅದೈತ ತತ್ತ್ವ ಪ್ರತಿಪಾದಕರಲ್ಲಿ ಅಗ್ರಗಣ್ಯರಾದ ಶ್ರೀ ಶಂಕರಾಚಾರ್ಯರು ಕೇರಳ ರಾಜ್ಯದ ಕಾಲಟಿ ಎಂಬ ಹಳ್ಳಿಯ ಒಂದು ಬಡ ನಂಬೂದರಿ ಬ್ರಾಹ್ಮಣ ಕುಟುಂಬದಲ್ಲಿ ವಿಭವ ಸಂವತ್ಸರದ ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮೀ ತಿಥಿಯಂದು ಜನಿಸಿದರು. ಇವರ ತಂದೆ ಶಿವಗುರು, ತಾಯಿ ಆರ್ಯಾಂಬೆ. ಸತಿ-ಪತಿಯರಿ ಬ್ಬರೂ ವಿದ್ವಾಂಸರು ಮತ್ತು ದ್ಯೆವಭಕ್ತರು. ಆದರೆ ಅವರಿಗೆ ಮಕ್ಕಳಿಲ್ಲವೆಂಬ ಚಿಂತೆ ಕಾಡುತ್ತಿತ್ತು. ಎಲ್ಲ ದೇವರಿಗೂ ಹರಕೆ ಹೊತ್ತದ್ದಾಯಿತು. ಕೊನೆಗೆ ಆಪ್ತೇಷ್ಟರ ಸಲಹೆಯಂತೆ ದಂಪತಿಗಳು ವೃಷಭಾಚಲ ಕ್ಷೇತ್ರಕ್ಕೆ ಹೋದರು. ಅಲ್ಲಿ ಅಚಲವಾದ ಭಕ್ತಿ ಮತ್ತು ನಿಷ್ಠೆಯಿಂದ ವೃಷಭಾಚಲೇಶ್ವರನ ಸೇವೆಯೇ ಏಕೈಕ ಮಾರ್ಗ ಎನ್ನುವ ಭಾವದಿಂದ ಹಲವು ದಿನಗಳನ್ನು ಕಳೆದರು.
ಒಂದು ರಾತ್ರಿ ದಂಪತಿಗಳ ಕನಸಿನಲ್ಲಿ ವೃಷಭಾಚಲೇಶ್ವರನು ಕಾಣಿಸಿಕೊಂಡು ಪ್ರಶ್ನಿಸಿದನು. "ನಿಮ್ಮ ನಿಷ್ಠೆ- ಭಕ್ತಿಗೆ ಮೆಚ್ಚಿದ್ದೇನೆ. ನಿಮ್ಮ ಆಸೆಯನ್ನು ಈಡೇರಿಸುತ್ತೇನೆ. ಆದರೆ ಒಂದು ಪ್ರಶ್ನೆ; ನಿಮಗೆ ದೀರ್ಘಾಯುಷ್ಯವುಳ್ಳ ದಡ್ಡ ಮಗು ಬೇಕೋ ಅಥವಾ ಅಲ್ಪಾಯುಷ್ಯವುಳ್ಳ ಲೋಕ ಗುರುವೆನಿಸುವ ಸರ್ವಜ್ಞನಾದ ಒಬ್ಬ ಮಗ ಸಾಕೊ?" "ಭಗವಂತನಲ್ಲಿ ಆಪಾರ ವಿಶ್ವಾಸವುಳ್ಳ ದಂಪತಿಗಳು ಅಲ್ಪಾಯುಷಿಯಾದರೂ ಸರ್ವಜ್ನನೂ, ವಿಶ್ವವಿಖ್ಯಾತನೂ ಆಗುವ ಮಗನು ತಮಗೆ ಬೇಕು ಎಂದು ಬೇಡಿಕೊಂಡರು. ಪ್ರಸನ್ನನಾದ ಸ್ವಾಮಿಯು "ಶಿವಾಂಶಸಂಭೂತನಾಗಿ ನಿಮ್ಮ ಕುಮಾರ ಲೋಕ ಗುರುವಾಗುತ್ತಾನೆ" ಎಂದು ಹೇಳಿ ಅಂತರ್ಧನನಾದನು. ಅವರಿಗೆ ಇದೊಂದು ವಿಶೇಷ ಅನುಭವವಾಗಿ ಬಹು ಸಂತೋಷಪಟ್ಟ ಶಿವಗುರು ಆರ್ಯಾಂಭೆಯರು ಈಶ್ವರನ ಸೇವೆ ಮಾಡಿ ತಮ್ಮ ಊರಿಗೆ ಹಿಂತಿರುಗಿದರು.
ದೈವಕೃಪೆಯಿಂದ ಆರ್ಯಾಂಬೆಯ ಗರ್ಭದಲ್ಲಿ ಜನಿಸಿದ ಶಿಶುವಿಗೆ ಶಂಕರನೆಂದೇ ನಾಮಕರಣ ಮಾಡಿದರು. ಮುಂದೆ ಆದಿ ಶಂಕರನೆಂದೆನಿಸಿ ಶಂಕರಾಚಾರ್ಯರು ಎನ್ನಿಸಿಕೊಂಡರು. ಇವರಿಗೆ ಎಲ್ಲಾ ಮಹಿಳೆಯರೂ ಮಾತೃ ಸಮಾನರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಸನ್ಯಾಸತ್ವವನ್ನು ಸ್ವೀಕರಿಸುವತ್ತ ಒಲವು ತೋರಿದರು. ಆದರೆ ಒಬ್ಬನೇ ಮಗನಾಗಿದ್ದ ಶಂಕರರನ್ನು ಸನ್ಯಾಸಿಯಾಗಿ ನೋಡಲು ತಾಯಿಗೆ ಮನಸ್ಸಿರಲಿಲ್ಲ. ಹಾಗಾಗಿ ತಾಯಿಯ ಮನವೊಲಿಸಲು ಶಂಕರರು ಬಹಳ ಕಷ್ಟಪಡಬೇಕಾಯಿತು. ಆಕೆಯ ಅಂತಿಮ ಕ್ಷಣಗಳಲ್ಲಿ ತಾನು ಎಲ್ಲಿದ್ದರೂ ಆಕೆಯ ಎದುರು ಬಂದು ನಿಲ್ಲುವುದಾಗಿ ಮಾತು ಕೊಟ್ಟ ಶಂಕರರು ಸೂಕ್ತ ಗುರುವಿಗಾಗಿ ಹುಡುಕುತ್ತಾ ತಮ್ಮ ಪ್ರಯಾಣವನ್ನಾರಂಭಿಸಿದರು. ತಾಯಿಗೆ ಕೊಟ್ಟ ಮಾತಿನ ಪ್ರಕಾರ ಆಕೆಯ ಕೊನೆಗಾಲದಲ್ಲಿ ಕಾಲಟಿಗೆ ಹಿಂದಿರುಗಿದ ಶಂಕರರು ಆಕೆಯ ಅಂತಿಮ ವಿಧಿಗಳನ್ನು ಪೂರೈಸಿದರು.
ನರ್ಮದಾ ನದಿ ತೀರದಲ್ಲಿ ಗೋವಿಂದ ಭಗವತ್ಪಾದರನ್ನು ಭೇಟಿಯಾದ ಶಂಕರರು ಅವರನ್ನು ತನ್ನ ಗುರುಗಳನ್ನಾಗಿ ಸ್ವೀಕರಿಸಿದರು. ಅವರಿಂದ ಯೋಗ, ವೇದ, ಉಪನಿಷತ್, ವೇದಾಂತಗಳನ್ನು ಅಭ್ಯಸಿಸಿದರು. ನಂತರ ಕಾಶಿಗೆ ತೆರಳಿ ಅಲ್ಲಿ ಕೆಲವರನ್ನು ತಮ್ಮ ಶಿಷ್ಯರನ್ನಾಗಿಸಿಕೊಂಡು ಅವರಿಗೂ ವೇದಾಂತದ ಪಾಠ ಹೇಳಿಕೊಟ್ಟರು. ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಶಂಕರರು ಅನೇಕರನ್ನು ಅಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿದರು. ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ (ಮಠ) ಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿದರು. "ಅದ್ವೈತ" ಸಿದ್ಧಾಂತವನ್ನು ಜನಪ್ರಿಯಗೊಳಿಸಿದರು. ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞ ಪೀಠವನ್ನೇರಿದರು.
ಶ್ರೀ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳು:
ಉತ್ತರದಲ್ಲಿ: ಜ್ಯೋತಿರ್ ಮಠ - ಬದರಿ ಪೀಠ.
ದಕ್ಷಿಣದಲ್ಲಿ: ದಕ್ಷಿಣ ಶಾರದಾ ಮಠ- ಶೃಂಗೇರಿ ಪೀಠ. ಪೂರ್ವದಲ್ಲಿ: ಗೋವರ್ಧನ ಮಠ- ಪುರಿ ಪೀಠ. ಪಶ್ಚಿಮದಲ್ಲಿ ಕಾಳಿಕಾ ಪೀಠ- ದ್ವಾರಕಾ ಪೀಠ- ಈ ನಾಲ್ಕೂ ಮಠಗಳು ತಮ್ಮ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದು ಅಸಂಖ್ಯಾತ ಮಂದಿ ಅನುಯಾಯಿಗಳನ್ನು ಹೊಂದಿವೆ.
ಸಂಸ್ಕೃತದಲ್ಲಿ "ದೈತ " ಎಂದರೆ ಎರಡು ಎಂದರ್ಥ. ಹಾಗಾಗಿ "ಅ" + "ದ್ವೈತ" ಅಂದರೆ "ಎರಡಲ್ಲದ್ದು" "ಒಂದೆ" ಎಂದು ಅರ್ಥೈಸಬಹುದು. ಅದ್ವೈತ ಸಿದ್ಧಾಂತದ ಮೂಲ ತಿರುಳೇ ಇದು. "ಆತ್ಮ (ಜೀವಾತ್ಮ)" ಮತ್ತು "ಪರಮಾತ್ಮ" ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಇವೆರಡೂ ಒಂದೇ. ಆತ್ಮನೇ ಪರಮಾತ್ಮನು. ಪರಮಾತ್ಮನೇ ಆತ್ಮನು. "ನಾನೇ ಬ್ರಹ್ಮ" "ಅಹಂ ಬ್ರಹ್ಮಾಸ್ಮಿ" (ನನ್ನೊಳಗಿರುವ ಆತ್ಮವೇ ಪರಂಬ್ರಹ್ಮ), "ತತ್ ತ್ವಮ್ ಅಸಿ" (ನೀನು ಅದೇ ಆತ್ಮದಿಂದ ಆಗಿರುವೆ) ಎಂಬುದು ಅದ್ವೈತ ತತ್ವದ ಮೂಲ ಮಂತ್ರ. ಇದಲ್ಲದೇ ಆದಿ ಶಂಕರಾಚಾರ್ಯರು ಪರಮಾತ್ಮ, ಅಂದರೆ "ಆತ್ಮ", ಅದು ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ ಈ ಜಗತ್ತು ಮಾಯೆಯಿಂದ ಆವರಿಸಿದೆ. ಭಕ್ತಿ ಮತ್ತು ಜ್ಞಾನದ ಮೂಲಕ ಮಾಯೆಯ ಪೊರೆಯನ್ನು ಸರಿಸಿದರೆ ಬ್ರಹ್ಮಸಾಕ್ಷಾತ್ಕಾರವಾಗುತ್ತದೆ. "ಸರ್ವಂ ಬ್ರಹ್ಮಮಯಂ ಜಗತ್" (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ತಮ್ಮ ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದರು.
ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳ ಮೇಲೆ ಆಳವೂ ಮೌಲಿಕವೂ ಆದ ಭಾಷ್ಯಗಳನ್ನು ಬರೆದಿದ್ದಾರೆ. ಇವರ ಅದ್ವೈತವು ಬಹಳ ವಿಚಾರಪರವೂ ಮತ್ತು ತರ್ಕನಿಷ್ಠವೂ ಆದ ಸಿದ್ಧಾಂತವೆನಿಸಿದೆ. ಅದು ಒಂದು ಕಲಾಕೃತಿಯಂತೆ ಪರಿಪೂರ್ಣವಾಗಿದೆ. ಭಾರತೀಯ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಮೆಚ್ಚುಗೆ ಪಡೆದಿದೆ. ಶಂಕರರು ತತ್ತ್ವಜ್ಞರಲ್ಲದೆ ಕವಿಗಳೂ ಹೌದು. ಸ್ತೋತ್ರ ಸಾಹಿತ್ಯದಲ್ಲಿ ಇವರ ಹೆಸರು ಚಿರಸ್ಥಾಯಿಯಾಗಿದೆ. ಭಜಗೋವಿಂದಂ, ಸೌಂದರ್ಯಲಹರಿ, ಆನಂದ ಲಹರಿ, ಅನ್ನಪೂರ್ಣೇಶ್ವರೀ ಸ್ತೋತ್ರ, ನರಸಿಂಹ ಕರಾವಲಂಬನ ಸ್ತೋತ್ರ, ದಕ್ಷಿಣಾಮೂರ್ತಿ ಸ್ತೋತ್ರ, ಹರಿಮೀಡೆ ಸ್ತೋತ್ರ, ಸೋಹಮುದ್ಧರ, ದಶಶ್ಲೋಕೀ, ಅಪರೋಕ್ಷಾನುಭೂತಿ, ಆಪ್ತವಜ್ರಸೂಚಿ, ವಿಷ್ಣುಸಹಸ್ರನಾಮ, ಭಾಷ್ಯ, ಸನತ್ಸುಜಾತ-ಇವು ಇತರ ಕೆಲವು ಮುಖ್ಯ ಕೃತಿಗಳಾಗಿವೆ. ಶಂಕರಾಚಾರ್ಯರು ತಮ್ಮ ಕಾಲದಲ್ಲಿ ಪ್ರಚಾರದಲ್ಲಿದ್ದ ಎಲ್ಲ ಮತಗಳಲ್ಲೂ ಆಸಕ್ತಿ ತೋರಿಸಿ ಅವುಗಳಲ್ಲಿ ಕಂಡುಬಂದ ಲೋಪದೋಷಗಳನ್ನು ನಿವಾರಿಸಿದರು. ಭಗವದ್ಗೀತೆಯ ಭಾಷ್ಯದಲ್ಲಿ ಭಕ್ತಿ, ಕರ್ಮ, ಜ್ಞಾನ ಮಾರ್ಗಗಳನ್ನು ಒಂದಕ್ಕೊಂದು ಪುಷ್ಟಿಕೊಡುವ ರೀತಿಯಲ್ಲಿ ತೆರೆದಿಟ್ಟರು. ಇವರು ಷಣ್ಮತಸ್ಥಾಪನಾಚಾರ್ಯರೆಂದು ಪ್ರಸಿದ್ಧರಾಗಿದ್ದಾರೆ. ಶಂಕರಾಚಾರ್ಯರ ಜೀವನದ ಕೆಲವಷ್ಟು ವಿಚಾರಧಾರೆಗಳನ್ನು ನಮ್ಮ ಜ್ಞಾನ ಸಾಗರಕ್ಕೆ ಸೇರಿಸಿಕೊಳ್ಳೋಣ.
- ಕೆ. ಎನ್. ಚಿದಾನಂದ, ಹಾಸನ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ