- ಮಧುರಾ ಕರ್ಣಮ್
ಪೌಲಸ್ತ್ಯನ ವಂಶಜನಾದ ವಿಭೀಷಣನು ರಾವಣ ಮತ್ತು ಕುಂಭಕರ್ಣರ ತಮ್ಮ. ರಾಮಾಯಣದಲ್ಲಿ ವಿಭೀಷಣನ ಪಾತ್ರ ವಿಶಿಷ್ಟವಾಗಿ ಚಿತ್ರಿತವಾಗಿದೆ. ಅಧರ್ಮದ ಮಧ್ಯೆ ಇದ್ದು ಧರ್ಮವನ್ನು ಉಳಿಸಲು ಒದ್ದಾಡುವ ಪಾತ್ರ. ಲಂಕೆಯನ್ನು ಉಳಿಸಲು ತನ್ನಿಂದಾದಷ್ಟು ಪ್ರಯತ್ನ ಪಡುವ ವ್ಯಕ್ತಿತ್ವ. ಅಧರ್ಮದ ನಾಶಕ್ಕಾಗಿ ಲಂಕೆಯ ಮಹಾರಾಜನಾದ ಅಣ್ಣ ರಾವಣನ ವಿರುದ್ಧವೇ ತಿರುಗಿ ನಿಲ್ಲುತ್ತಾನೆ ವಿಭೀಷಣ. ಸೀತೆಯನ್ನು ಅಪಹರಿಸಿ ತಂದಾಗಿನಿಂದ ಅದು ಮಹಾ ತಪ್ಪೆಂದೂ... ಪರನಾರಿಯನ್ನು ಗೌರವಾದರಗಳಿಂದ ಅವಳ ಪತಿಗೆ ಒಪ್ಪಿಸುವಂತೆ ಬೇಡಿಕೊಳ್ಳುತ್ತಾನೆ. ಹಿತವಚನ ಹೇಳುತ್ತಾನೆ. ಆದರೆ ರಾವಣ ಕೇಳುವ ಪರಿಸ್ಥಿತಿಯಲ್ಲಿರುವುದಿಲ್ಲ. ರಾವಣನ ಕಣ್ಣಿಗೆ ಸೀತೆಯ ಸೌಂದರ್ಯ ಕಂಡರೆ ವಿಭೀಷಣನಿಗೆ ಲಂಕೆಯ ವಿನಾಶ ಕಾಣುತ್ತದೆ. ಅಣ್ಣನಿಗೆ ಬ್ರಹ್ಮನ ಶಾಪದ ಬಗ್ಗೆ ನೆನಪಿಸುತ್ತಾನೆ. ಬ್ರಹ್ಮನ ಮಾನಸಪುತ್ರಿ ಪುಂಜಿಕಸ್ಥಲೆಯನ್ನು ರಾವಣ ಬಲವಂತವಾಗಿ ವಶಪಡಿಸಿಕೊಳ್ಳಲು ಹೋದಾಗ ಬ್ರಹ್ಮ ಕೋಪಗೊಂಡು "ಪರನಾರಿಯನ್ನು ಅವಳ ಇಷ್ಟಕ್ಕೆ ವಿರುದ್ಧವಾಗಿ ಬಲಾತ್ಕರಿಸಲು ಹೋದರೆ ನಿನ್ನ ತಲೆ ಒಡೆದು ಸಹಸ್ರ ಹೋಳಾಗುವುದು" ಎಂದು ಶಾಪ ಕೊಟ್ಟಿರುತ್ತಾನೆ. ಅದಕ್ಕೆ ಹೆದರಿ ರಾವಣ ಸೀತೆಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ. ಅವಳನ್ನು ಒಲಿಸಲು ರಾಕ್ಷಸಿಯರಿಗೆ ಆದೇಶ ನೀಡಿರುತ್ತಾನೆ. ಅವರು ಹಗಲಿರುಳು ರಾವಣನ ಐಶ್ವರ್ಯ, ಶೌರ್ಯ, ಪರಾಕ್ರಮಗಳ ಗುಣಗಾನ ಮಾಡುತ್ತ ಓಲೈಸಲು ಯತ್ನಿಸುತ್ತಾರೆ. ವಿಭೀಷಣ ಶಾಪವನ್ನು ನೆನಪಿಸಿ ಸೀತೆಯನ್ನು ಹಿಂದಿರುಗಿಸಲು ಕೇಳಿಕೊಂಡಾಗ ರಾವಣನಿಗೆ ಕೋಪ ಬರುತ್ತದೆ. "ರಣಹೇಡಿ" ಎಂದು ತೆಗಳುತ್ತಾನೆ. ಇಂದ್ರಜಿತ್ತು "ಚಿಕ್ಕಪ್ಪ, ನಿನಗೆ ಯುದ್ಧದ ಭಯವಿದ್ದರೆ ನೀನು ರಣರಂಗಕ್ಕೇ ಬರಬೇಡ. ನಾವೇ ವಿಜಯಮಾಲೆ ಧರಿಸಿ ನಿನ್ನ ಬಳಿ ಬರುತ್ತೇವೆ" ಎಂದು ವ್ಯಂಗ್ಯವಾಗಿ ಮೂದಲಿಸುತ್ತಾನೆ. ಅಪಾರವಾಗಿ ನೊಂದ ವಿಭೀಷಣ ನಿರುಪಾಯನಾಗಿ ಮನೆಗೆ ಹಿಂದಿರುಗುತ್ತಾನೆ.
ವಿಭೀಷಣನಂತೆ ಅವನ ಪತ್ನಿ ಸರಮೆಯ ಪಾತ್ರವೂ ಅನುರೂಪವಾದದ್ದು. ಸೀತೆಯ ಪರಿಸ್ಥಿತಿಗೆ ನೊಂದ ಸರಮೆ ನಿತ್ಯ ಅವಳನ್ನು ಸಮಾಧಾನಿಸುತ್ತಾಳೆ. ಸೀತೆ ರಾವಣನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಒಂದು ಹುಲ್ಲುಕಡ್ಡಿಯನ್ನು ಮಧ್ಯವರ್ತಿಯಾಗಿಟ್ಟುಕೊಂಡು ಅವನೊಂದಿಗೆ ಸಂಭಾಷಿಸುತ್ತಿದ್ದಳು. ರಾಕ್ಷಸರು ಕೊಡುವ ಆಹಾರ ಸ್ವೀಕರಿಸಲು ನಿರಾಕರಿಸಿದಳು. ವಿಭೀಷಣನ ಮನೆಯಲ್ಲಿ ನಿತ್ಯ ಧರ್ಮಕಾರ್ಯಗಳು, ಹೋಮ ಹವನಗಳು ನಡೆಯುತ್ತಿದ್ದವು. ನೈವೇದ್ಯರೂಪವಾದ ಪಾಯಸವನ್ನೂ, ಪ್ರಸಾದವನ್ನೂ ಸರಮೆ ನಿತ್ಯ ಸೀತೆಗೆ ಕೊಂಡೊಯ್ಯುತ್ತಿದ್ದಳು. ಸೀತೆ ಅದನ್ನು ನಿರಾಳವಾಗಿ ಸೇವಿಸುತ್ತಿದ್ದಳು. ರಾಕ್ಷಸರ ಮಾಯಾವಿದ್ಯೆಯಿಂದ, ರಾವಣನ ಮಾಯಾಜಾಲದಿಂದ ವಿಚಲಿತಳಾಗುತ್ತಿದ್ದ ಸೀತೆಗೆ ನಿಜ ಸ್ಥಿತಿಯನ್ನು ತಿಳಿಸಿ ಸಂತೈಸುತ್ತಿದ್ದುದು ಸರಮೆಯೇ. ಎಷ್ಟೇ ಜಾಗರೂಕರಾಗಿದ್ದರೂ ಒಮ್ಮೊಮ್ಮೆ ಪರಿಸ್ಥಿತಿ ಕೈಮೀರುತ್ತಿತ್ತು. ಒಮ್ಮೆ ಅಶೋಕವನಕ್ಕೆ ಬಂದ ರಾವಣ "ಸೀತೆ, ಯುದ್ಧ ಮುಗಿಯಿತು. ರಾಮ, ಲಕ್ಷ್ಮಣರು ಎಷ್ಟೇ ಪರಾಕ್ರಮದಿಂದ ಕಾದಿದರೂ ನನ್ನ ಶೌರ್ಯದ ಮುಂದೆ ಸೋತು ಸಾವನ್ನಪ್ಪಿದರು. ಇನ್ನು ನನ್ನ ರಾಣಿಯಾಗಲು ನಿನಗೆ ಯಾವ ಅಡ್ಡಿಯೂ ಇಲ್ಲ. ಇಗೋ ನೋಡು, ಅವರಿಬ್ಬರ ತಲೆಗಳು" ಎಂದಾಗ ರಕ್ತ ಸೋರುತ್ತಿದ್ದ ತಲೆಗಳನ್ನು ಬಂಟನೊಬ್ಬ ತೋರಿಸುತ್ತಾನೆ. ಅದೇ ನೀಳ ನಾಸಿಕ, ಜಟೆ, ಅಗಲವಾದ ಹಣೆ.. ನೋಡುತ್ತಲೇ "ಹಾ! ರಾಮಾ, ಲಕ್ಷ್ಮಣಾ" ಎಂದು ಕೂಗಿದ ಸೀತೆ ಬಿದ್ದು ಮೂರ್ಛಿತಳಾಗುತ್ತಾಳೆ. ರಾವಣ ಹೊರಡುತ್ತಿದ್ದಂತೆ ಓಡಿ ಬಂದ ಸರಮೆ ಸೀತೆಯನ್ನು ಉಪಚರಿಸಿ "ಸೀತೆ, ಅವು ಮಾಯಾ ತಲೆಗಳು. ರಾವಣ ಹೊರಡುತ್ತಿದ್ದಂತೆಯೇ ಮಾಯವಾದವು. ವಿದ್ಯುಜ್ಜಿಹ್ವನೆಂಬ ಮಾಯಾವಿ ರಾವಣನ ಆದೇಶದ ಮೇರೆಗೆ ಮಾಡಿದವು. ರಾಮ, ಲಕ್ಷ್ಮಣರು ಸುರಕ್ಷಿತವಾಗಿದ್ದು ಸಾಗರತೀರದಲ್ಲಿ ವಾನರ ಸೈನ್ಯದೊಂದಿಗೆ ಬೀಡು ಬಿಟ್ಟಿದ್ದಾರೆ" ಎಂದು ಸಂತೈಸುತ್ತಾಳೆ. ಸರಮೆ, ತ್ರಿಜಟೆ ಇಬ್ಬರೂ ಅಶೋಕವನದಲ್ಲಿ ಸೀತೆಯನ್ನು ಸಂತೈಸುವ ಹೊಣೆ ಹೊತ್ತಿರುತ್ತಾರೆ.
ವಿಭೀಷಣ ತನ್ನ ಧರ್ಮಬುದ್ಧಿಯನ್ನು ಒರೆಗೆ ಹಚ್ಚುವ ಸಂದರ್ಭ ಬೇಗದಲ್ಲೇ ಬರುತ್ತದೆ. ನೀತಿವಂತರಾದ ಆವಿದ್ದ ಮತ್ತು ಮಾಲ್ಯವಂತರೆಂಬ ಮಂತ್ರಿಗಳನ್ನು ಸೇರಿಕೊಂಡು ರಾವಣನ ಬಳಿ ಬರುತ್ತಾನೆ ವಿಭೀಷಣ. ಧರ್ಮಿಷ್ಠನಾದ ರಾಮನಿಗೆ ಸೀತೆಯನ್ನು ಹಿಂದಿರುಗಿಸಿ ಲಂಕೆಯನ್ನು ಉಳಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಕೋಪಗೊಂಡ ರಾವಣ "ಶತ್ರುವನ್ನು ಹೊಗಳುವವನು ಶತ್ರುವಿನ ಬಳಿಗೇ ಹೋಗು..ತೊಲಗು" ಎಂದು ಗರ್ಜಿಸುತ್ತಾನೆ. ದಿಗ್ಬ್ರಮೆಯಿಂದ ಹಿಂದಿರುಗಿದವ ಸರಮೆಗೆ ಎಲ್ಲವನ್ನೂ ಹೇಳುತ್ತಾನೆ. "ಸ್ವಾಮಿ, ಸೀತೆಯನ್ನು ನಾವು ಗಮನಿಸಿಕೊಳ್ಳುತ್ತೇವೆ. ನೀವು ಧರ್ಮದ ದಾರಿಯಲ್ಲಿ ಸಾಗಿ ರಾಮನ ಬಳಿಗೆ ಹೋಗಿ. ನಮ್ಮ ಬಗ್ಗೆ ಚಿಂತೆ ಬೇಡ. ಉಳಿದದ್ದನ್ನು ಶಿವ ನೋಡಿಕೊಳ್ಳುತ್ತಾನೆ" ಎಂದು ದೃಢವಾದ ಧರ್ಮ ಮಾರ್ಗವನ್ನು ತೋರುತ್ತಾಳೆ ಸರಮೆ. ಆದರೂ ಅವನಿಗೆ ಕಳವಳ. "ಶತ್ರುವಿನ ತಮ್ಮನಾದ ನನ್ನನ್ನು ರಾಮ ಸ್ವೀಕರಿಸಬಹುದೆ? ನಿರಾಕರಿಸಿದರೆ?" ಎಂಬ ಸಂಶಯವನ್ನು ಪತ್ನಿಯ ಮುಂದೆ ಹೇಳಿಕೊಳ್ಳುತ್ತಾನೆ. ಸರಮೆ "ಸ್ವಾಮಿ, ರಾಮ ದೀನರಕ್ಷಕನೆಂದೂ, ಕರುಣಾಮಯಿಯೆಂದೂ ಕೇಳಿದ್ದೇನೆ. ನೀವು ಹೋಗಿ ಅವನಿಗೆ ಶರಣಾಗತರಾಗಿ. ನಿಮಗೆ ಆಶ್ರಯ ಖಂಡಿತ ದೊರಕುತ್ತದೆ" ಎಂದು ಗಟ್ಟಿಯಾಗಿ ಹೇಳುತ್ತಾಳೆ. ಆಗ ವಿಭೀಷಣನ ನಿರ್ಧಾರ ದೃಢವಾಗುತ್ತದೆ. ತನ್ನ ನಂಬಿಗೆಯ ನಾಲ್ವರು ಅನುಚರರೊಂದಿಗೆ ಲಂಕೆಯನ್ನು ಬಿಟ್ಟು ಆಕಾಶಮಾರ್ಗದಲ್ಲಿ ಹಾರುತ್ತಾ ಹೊರಡುತ್ತಾನೆ.
ಅಪರಿಚಿತ ಆಕಾಶ ಕಾಯಗಳನ್ನು ನೋಡುತ್ತಲೇ ವಾನರರು ಚುರುಕಾಗುತ್ತಾರೆ. ಲಕ್ಷ್ಮಣ ಬಿಲ್ಲು ಹಿಡಿದರೆ ಸುಗ್ರೀವ ಗದೆ ಹಿಡಿಯುತ್ತಾನೆ. ರಾಮ ಅವರನ್ನು ತಾಳ್ಮೆಯಿಂದ ಇರುವಂತೆ ಹೇಳಿ "ಬಂದವರು ಯಾರು? ಅವರ ಉದ್ದೇಶವೇನು ಎಂಬುದನ್ನು ಅರಿತುಕೊಳ್ಳೋಣ" ಎಂದು ಸುಗ್ರೀವನನ್ನು ದೂತನಾಗಿ ಕಳಿಸುತ್ತಾನೆ. ವಿಭೀಷಣ ನಿಜಸಂಗತಿ ತಿಳಿಸುತ್ತಾ "ನಾನು ರಾವಣನ ತಮ್ಮ ವಿಭೀಷಣ. ಸೀತೆಯನ್ನು ಹಿಂದಿರುಗಿಸುವಂತೆ ರಾವಣನಿಗೆ ಹಿತವಚನ ಹೇಳಿ ಸೋತು ಅಧರ್ಮದ ದಾರಿ ಹಿಡಿಯಲಾಗದೇ ರಾಮನಲ್ಲಿ ಶರಣಾಗತನಾಗಲು ಬಂದಿದ್ದೇನೆ" ಎಂದು ಹೇಳುತ್ತಾನೆ. ರಾಮನ ಪಾಳಯದಲ್ಲಿ ಗೊಂದಲ. "ಶತ್ರುವಿನ ತಮ್ಮ. ನಮ್ಮ ಬಲಾಬಲಗಳನ್ನು ಗಮನಿಸಲು, ನಮ್ಮಲ್ಲಿ ಒಡಕು ಮೂಡಿಸಲು ಬಂದಿರಬಹುದು. ಸೇರಿಸಿಕೊಳ್ಳುವುದು ಬೇಡ" ಎಂಬ ಅಭಿಪ್ರಾಯ ಹಲವರದಾದರೆ "ಅಣ್ಣನ ವಿರುದ್ಧವೇ ಬಂಡೆದ್ದು ಬಂದಿದ್ದಾನೆ. ಆಸರೆ ನೀಡಬೇಕು" ಎಂಬ ಅಭಿಪ್ರಾಯ ಕೆಲವರದು. ಲಕ್ಷ್ಮಣನಿಗೂ ಅವನನ್ನು ಸೇರಿಸಿಕೊಳ್ಳುವುದು ಇಷ್ಟವಾಗುವುದಿಲ್ಲ.
ದೂತನಾದ ಸುಗ್ರೀವ ಮೊದಲು ತನಗೆ ಅವನನ್ನು ಹೋಲಿಸಿಕೊಳ್ಳುತ್ತಾನೆ. ತಾಪಸಿಯಾದ ರಾಮನನ್ನು ಕಂಡು ಇವನು ವಾಲಿಯನ್ನು ಕೊಲ್ಲಬಹುದೆ? ಎಂದು ಸಂಶಯಿಸಿರುತ್ತಾನೆ ಸುಗ್ರೀವ. ರಾಮನೊಂದಿಗೆ ಅವನ ಸ್ನೇಹಸಂಬಂಧ ಏರ್ಪಟ್ಟಿದ್ದು ವಾಲಿಯನ್ನು ಕೊಲ್ಲುವ ಶರತ್ತಿನ ಮೇಲೆ. ಇಲ್ಲಿ ಯಾವದೂ ಇಲ್ಲ. ಸೀದಾ ಅನನ್ಯಭಾವದ ಶರಣಾಗತಿ. ಹನುಮಂತ "ಲಂಕೆಯ ರಾಜಸಭೆಯಲ್ಲಿ ವಿಭೀಷಣ ರಾವಣನಿಗೆ ಸೀತೆಯನ್ನು ಹಿಂದಿರುಗಿಸುವಂತೆ ವಿಭೀಷಣ ಹಿತವಚನ ಹೇಳುತ್ತಿದ್ದ. ಅವನ ಪತ್ನಿ ಸರಮೆ ಸೀತೆಯ ಯೋಗಕ್ಷೇಮವನ್ನು ಬಹುವಾಗಿ ನೋಡಿಕೊಳ್ಳುತ್ತಾಳೆ" ಎಂದು ಜ್ಞಾಪಿಸಿಕೊಂಡ. ರಾಮನ ನಿರ್ಧಾರ ಅಚಲವಾಗಿರುತ್ತದೆ. "ನನ್ನಲ್ಲಿ ಶರಣಾಗತಿ ಕೋರಿ ಬಂದವನು ಯಾರೇ ಆಗಿರಲಿ ಅವನಿಗೆ ಆಶ್ರಯ ಕೊಡುವುದು ನನ್ನ ಧರ್ಮ. ರಾವಣನ ತಮ್ಮನಲ್ಲ... ಸಾಕ್ಷಾತ್ ರಾವಣನೇ ಬಂದು ಶರಣಾಗತನಾದರೆ ಪುರಸ್ಕರಿಸಲು ನಾನು ಬದ್ಧ" ಎಂದು ಘೋಷಿಸಿದ. ಎಲ್ಲರೂ ಹರ್ಷೋದ್ಗಾರಗಳಿಂದ ಅದನ್ನು ಸ್ವಾಗತಿಸಿದರು. ವಿಭೀಷಣನ ಕಣ್ಣಿನಿಂದ ಆನಂದ ಬಾಷ್ಪಗಳು ಉದುರಿದವು. ತಾನು ಆರಾಧಿಸಿದ ಧರ್ಮಮೂರ್ತಿಯ ಪಾದಗಳಲ್ಲಿ ತಲೆ ಇರಿಸಿದ. ರಾಮ ಅವನನ್ನೆತ್ತಿ ಆಲಿಂಗಿಸಿಕೊಂಡು "ಇಷ್ಟು ದಿನ ನಾವು ನಾಲ್ವರು ಅಣ್ಣತಮ್ಮಂದಿರಿದ್ದೆವು. ನೀನು ಈಗ ಐದನೆಯವನಾದೆ" ಎಂದು ತನ್ನ ಭಾತೃವರ್ಗಕ್ಕೇ ಸೇರಿಸಿಕೊಂಡ. ಅಷ್ಟೇ ಅಲ್ಲ "ರಾವಣನನ್ನು ಕೊಂದು ನಿನ್ನನ್ನು ಲಂಕೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡುತ್ತೇನೆ" ಎಂದು ಘೋಷಿಸಿದ. ಇದು ವಿಭೀಷಣನಿಗೆ ಸಮ್ಮತವಾಗುವುದಿಲ್ಲ. "ರಾಮಾ, ಇನ್ನೂ ನ್ಯಾಯದ ದಾರಿ ಮುಚ್ಚಿಲ್ಲ. ಸೀತೆಯನ್ನು ಗೌರವದಿಂದ ಹಿಂದಿರುಗಿಸಿ ಅಣ್ಣನೇ ರಾಜ್ಯಭಾರ ಮಾಡಲಿ. ನಾನು ಅವನನ್ನು ಸೇವಿಸಿಕೊಂಡಿರುತ್ತೇನೆ" ಎಂದು ವಿನಯದಿಂದ ಹೇಳಿಕೊಂಡ. ರಾಮ "ಹಾಗಾದರೆ ನಮಗೂ ಸಂತೋಷವೇ. ಇಲ್ಲವಾದಲ್ಲಿ ನೀನೇ ಲಂಕೆಯ ಭವಿಷ್ಯದ ರಾಜ" ಎಂದು ಪವಿತ್ರ ಜಲವನ್ನು ತರಿಸಿ ಅವನಿಗೆ ಪಟ್ಟಾಭಿಷೇಕ ಮಾಡಿದ.
ವಿಭೀಷಣ ಲಂಕೆಯ ಬೀಗದ ಕೈಯಾಗಿ ರಾಮನಿಗೆ ದೊರೆತಿದ್ದ. ಲಂಕೆಯ ನಾಲ್ಕೂ ದ್ವಾರಗಳು, ಅವನ್ನು ಕಾಯುವ ರಾವಣನ ಮಕ್ಕಳು, ಸೇನಾಧಿಪತಿಗಳು, ಸೇನೆಯ ಬಲಾಬಲ ಎಲ್ಲವನ್ನೂ ರಾಮನಿಗೆ ವಿವರವಾಗಿ ಹೇಳಿದ. ಸಾಗರವನ್ನು ದಾಟುವ ಸಮಸ್ಯೆ ಬೃಹದಾಕಾರವಾಗಿ ನಿಂತಾಗ ವಿಭೀಷಣನೇ ಸಮುದ್ರರಾಜ ಸಗರನನ್ನು ಕುರಿತು ತಪಸ್ಸು ಮಾಡಿ ಪರಿಹಾರ ಕಂಡುಕೊಳ್ಳಲು ರಾಮನಿಗೆ ಹೇಳಿದ. ರಾಕ್ಷಸರ ವಿವಿಧ ರೀತಿಯ ವಿಶೇಷ ಶಕ್ತಿಗಳು, ಅವರನ್ನು ಕೊಲ್ಲಲು ಬಳಸುವ ಅಸ್ತ್ರಗಳು ಇತ್ಯಾದಿಗಳ ಬಗ್ಗೆ ಹೇಳಿದ. ಮುಖ್ಯವಾಗಿ ಇಂದ್ರಜಿತ್ತುವಿನ ಮಾಯಾಯುದ್ಧವನ್ನು ಬಿಡಿಸಿ ಹೇಳಿದ. ಪ್ರತಿಯೊಬ್ಬ ಸೇನಾಧಿಪತಿ ಯುದ್ಧಭೂಮಿಗೆ ಬಂದಾಗ ಅವನ ವಿಶೇಷ ಶಕ್ತಿಗಳು, ವರಗಳು, ಬಲಾಬಲಗಳ ಕುರಿತು ವಿಭೀಷಣ ಹೇಳುತ್ತಾ ಅವನನ್ನು ಸೋಲಿಸುವ ರೀತಿಯನ್ನೂ ತಿಳಿಸಿಕೊಡುತ್ತಾನೆ. ತಾನು ತನ್ನವರ ವಿರುದ್ಧ ಶಸ್ತ್ರ ಹಿಡಿಯುವುದಿಲ್ಲ. ಯುದ್ಧದ ಕೊನೆಯ ಹಂತದಲ್ಲಿ ಇಂದ್ರಜಿತ್ತು 'ನಿಕುಂಭಿಳಾ' ಎಂಬ ಯಜ್ಞ ಮಾಡಲು ಯಾಗಭೂಮಿಗೆ ತೆರಳುತ್ತಾನೆ. ಅದು ಪೂರ್ಣವಾದಲ್ಲಿ ಅವನನ್ನು ಸೋಲಿಸಲು ಸಾಧ್ಯವೇ ಇರುವುದಿಲ್ಲ. ಹದಿನಾಲ್ಕು ವರ್ಷಗಳವರೆಗೆ ನಿದ್ರೆಯನ್ನು ತ್ಯಜಿಸಿ ಬ್ರಹ್ಮಚರ್ಯವನ್ನು ಪಾಲಿಸಿದವನಿಗೆ ಮಾತ್ರ ಅವನನ್ನು ಸೋಲಿಸಲು ಸಾಧ್ಯ. ಅದಕ್ಕೆ ವಿಭೀಷಣ ಲಕ್ಷ್ಮಣನನ್ನು ಇಂದ್ರಜಿತ್ತುವಿನ ಮೇಲೆ ಯುದ್ಧಕ್ಕೆ ಕಳಿಸುತ್ತಾನೆ. ಲಕ್ಷ್ಮಣ ಇಂದ್ರಜಿತ್ತುವನ್ನು ವಧಿಸಿದ ನಂತರ ರಾವಣನ ಸಂಹಾರವಾಗುತ್ತದೆ. ಆಗ ಅಣ್ಣನಿಗಾಗಿ ಶೋಕ ಸಂತಪ್ತನಾಗುವ ವಿಭೀಷಣನನ್ನು ರಾಮ ಸಂತೈಸುತ್ತಾನೆ.
ಲಂಕೆಗೆ ವಿಭೀಷಣ ರಾಜನಾದ ನಂತರ ಕಾಯುತ್ತಿರುವ ಭರತನನ್ನು, ಅಯೋಧ್ಯೆಯನ್ನು ಸೇರಿಕೊಳ್ಳಲು ರಾಮ ತವಕಿಸುತ್ತಾನೆ. ಆಗ ಪುಷ್ಪಕ ವಿಮಾನದಲ್ಲಿ ವಿಭೀಷಣ ಅವರೊಂದಿಗೆ ತಾನೂ ಸೇರಿಕೊಂಡು ಶೀಘ್ರವಾಗಿ ಅಯೋಧ್ಯೆಗೆ ಬರುತ್ತಾನೆ. ಅಯೋಧ್ಯೆಯಲ್ಲಿ ಅವನಿಗೆ ಸಂಭ್ರಮದ ಸ್ವಾಗತ ದೊರೆಯುತ್ತದೆ. ಎಲ್ಲರೂ ಅವನನ್ನು ಆದರಿಸುತ್ತಾರೆ. ರಾಕ್ಷಸರ ಮಾಯಾಜಾಲವನ್ನೂ, ಇಂದ್ರಜಿತ್ತುವಿನ ಇಂದ್ರಜಾಲದ ವಿದ್ಯೆಯನ್ನೂ ಅರಿಯದ ರಾಮನ ಸೈನ್ಯಕ್ಕೆ ವಿಭೀಷಣನ ನೆರವಿಲ್ಲದಿದ್ದರೆ ಗೆಲುವು ಕಷ್ಟಸಾಧ್ಯವಾಗುತ್ತಿತ್ತು. ಧರ್ಮಕ್ಕಾಗಿ ಅಣ್ಣನನ್ನೇ ಎದುರಿಸಿ ನಿಂತು ಧರ್ಮದ ವಿಜಯವನ್ನು ಸಾರಿದ ವಿಭೀಷಣ "ಧರ್ಮೊ ರಕ್ಷತಿ ರಕ್ಷಿತಃ" ಎಂಬ ಮಾತಿಗೆ ಮಾದರಿಯಾಗಿದ್ದಾನೆ. ಕೆಡುಕಿನ ಪಾಳಯದಲ್ಲೂ ಸದ್ಗುಣಗಳ ಗಣಿಯಾಗಿ ರಾಮಾಯಣದ ಮುಖ್ಯ ಪಾತ್ರಗಳಲ್ಲೊಂದಾಗಿ ಚಿರಸ್ಮರಣೀಯವಾಗಿದ್ದಾನೆ.
- ಮಧುರಾ ಕರ್ಣಮ್
ನಂ, 27, ಮಾತೃಸ್ಪೂರ್ತಿ,
8ನೇ ಮೇನ್, ಶಂಕರ ನಗರ
ಬೆಂಗಳೂರು - 560096
ದೂ: 080-23371789 , ಮೊ: 9900523340
madhurakarnam@yahoo.in
ಲೇಖಕರ ಸಂಕ್ಷಿಪ್ತ ಪರಿಚಯ:
ಬೆಳಗಾವಿಯಲ್ಲಿ ಜನಿಸಿ ವಿಜ್ಞಾನದಲ್ಲಿ ಬಿ.ಎಸ್ಸಿ. ಮತ್ತು ಎಲ್.ಎಲ್.ಬಿ. ಪದವಿ ಪಡೆದರು. ತಂದೆ ಸುರೇಶರಾವ್ ಮನೋಳಿ ಮತ್ತು ತಾಯಿ ಕಮಲಾ ಮನೋಳಿಯವರ ಪ್ರೋತ್ಸಾಹದಿಂದ ಸಾಹಿತ್ಯದ ಸೆಳೆತವಿತ್ತು. ಮಹೇಶ ಕರ್ಣಮ್ರನ್ನು ಮದುವೆಯಾದ ನಂತರ ದೆಹೆಲಿಯಲ್ಲಿ ವಾಸವಾಗಿದ್ದಾಗ ದೆಹೆಲಿ ಕರ್ನಾಟಕ ಸಂಘದ 'ಅಭಿಮತ' ಮಾಸಪತ್ರಿಕೆಯ ಮೂಲಕ ಅವರ ಕತೆಗಳು ಪ್ರಕಟವಾಗತೊಡಗಿದವು. ಬೆಂಗಳೂರಿಗೆ ಬಂದ ಮೇಲೆ ಸಾಹಿತ್ಯಾಸಕ್ತಿ ಇನ್ನೂ ಬೆಳೆದು ಕಥೆ, ಹಾಸ್ಯ ಬರಹಗಳನ್ನೊಳಗೊಂಡು ಸುಮಾರು ಇನ್ನೂರಕ್ಕಿಂತಲೂ ಹೆಚ್ಚು ಕತೆ ಮತ್ತು ಲೇಖನಗಳು ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿ ಅನೇಕ ಬಹುಮಾನಗಳನ್ನೂ ಪಡೆದವು. ಇವೆಲ್ಲ 16 ಕೃತಿಗಳಾಗಿ ಮೂಡಿ ಬಂದಿವೆ. ಅವುಗಳಲ್ಲಿ ಹನ್ನೊಂದು ಕಥಾಸಂಕಲನಗಳು, ಮೂರು ಹಾಸ್ಯ ಲೇಖನ ಮತ್ತು ಪ್ರಬಂಧಗಳ ಸಂಕಲನ, ಒಂದು ಕವನ ಸಂಕಲನವೂ ಸೇರಿವೆ. ಎರಡು ಮಿನಿ ಕಾದಂಬರಿಗಳು ನಾಲ್ಕು ಜೀವನಚರಿತ್ರೆಗಳೂ ಚಿಕ್ಕದಾಗಿ ಬಂದಿವೆ. ಅವರ ಕಥೆಗಳು ಕರ್ಮವೀರ ದೀಪಾವಳಿ ಕಥಾಸ್ಪರ್ಧೆ, ಉತ್ಥಾನ ಕಥಾಸ್ಪರ್ಧೆ, ವಿದ್ಯಾಧರ ಪ್ರತಿಷ್ಠಾನದ ಕಥಾಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿವೆ. ಬೆಳಗಾವಿಯಲ್ಲಿ ನಡೆದ ಕಥಾಕಮ್ಮಟದಲ್ಲೂ ಭಾಗವಹಿಸಿದ್ದಾರೆ. ಅವರ ಕಥೆಗಳು ತೆಲಗು ಭಾಷೆಗೂ ಅನುವಾದಗೊಂಡು ತೆಲಗು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನೇಕ ಕವಿಗೋಷ್ಠಿಗಳಲ್ಲಿ ಕವಿತಾವಾಚನವನ್ನೂ ಮಾಡಿದ್ದಾರೆ. ಲಂಡನ್ನಲ್ಲಿ ವಾಸವಿದ್ದಾಗ ಅಲ್ಲಿನ ಅನುಭವಗಳು ಕಥೆ, ಹಾಸ್ಯ ಮತ್ತು ಲೇಖನಗಳ ರೂಪ ಪಡೆದಿವೆ. ಆಕಾಶವಾಣಿಯಲ್ಲೂ ಅನೇಕ ಕಥೆ ಮತ್ತು ಹಾಸ್ಯದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ದೂರದರ್ಶನದಲ್ಲೂ ಅಡಿಗೆಯ ಕಾರ್ಯಕ್ರಮಗಳೂ ಆಗಿವೆ. ರಂಗೋಲಿ ಬಿಡಿಸುವುದರಲ್ಲೂ ಅವರು ನಿಪುಣರಾಗಿದ್ದು ಅನೇಕ ರಾಜ್ಯಮಟ್ಟದ ಬಹುಮಾನಗಳನ್ನು ಪಡೆದಿದ್ದಾರೆ. ಪ್ರತಿ ವರ್ಷ ಗಣೇಶನ ಮೂರ್ತಿಯನ್ನು ಕೂಡಾ ನಿರ್ಮಿಸುತ್ತಾರೆ. ಪ್ರಸ್ತುತ ಲೇಖಿಕಾ ಸಾಹಿತ್ಯ ವೇದಿಕೆಯ ಸಕ್ರಿಯ ಸದಸ್ಯರಾಗಿದ್ದು "ಸಾಹಿತ್ಯ ಸಖಿ" ತ್ರೈಮಾಸಿಕ ಪತ್ರಿಕೆಯ ಉಪ ಸಂಪಾದಕರಾಗಿದ್ದಾರೆ. ತಮ್ಮ ಸಾಹಿತ್ಯ ಕೃಷಿಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳೊಂದಿಗೆ ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ಪ್ರಶಸ್ತಿ ಮತ್ತು ನಿರುಪಮಾ ಕಥಾಪ್ರಶಸ್ತಿ, ಮುಂಬೈನ ಸುಶೀಲಾಬಾಯಿ ಶೆಟ್ಟಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ.ಇAದಿರಾ ಪ್ರಶಸ್ತಿ, ಉತ್ತರ ಕರ್ನಾಟಕ ಸಂಘ..ಧಾರವಾಡದ ಶಾಂತಾದೇವಿ ಕಣವಿ ಕಥಾಪ್ರಶಸ್ತಿ-2022 ಮತ್ತು ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸೇವಾರತ್ನ ಪ್ರಶಸ್ತಿಯೂ ಸೇರಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ