ಶ್ರೀರಾಮ ಕಥಾ ಲೇಖನ ಅಭಿಯಾನ-111: ಗೊಂಡರ ರಾಮಾಯಣ- ಕೆಲವು ಪ್ರಸಂಗಗಳು

Upayuktha
0

- ಡಾ. ಎಸ್. ಪಾರಿಜಾತ, ಬೆಂಗಳೂರು

ಹ್ಯಾದ್ರಿ ಶ್ರೇಣಿಯ ಪಶ್ಚಿಮದ ತಪ್ಪಲುಗಳಲ್ಲಿನ ದಟ್ಟವಾದ ಅರಣ್ಯಗಳಲ್ಲಿ ವಾಸಿಸುತ್ತಿರುವ ಗೊಂಡರು ತಮ್ಮ ವಿಶಿಷ್ಟ ಜೀವನ ಕ್ರಮಕ್ಕೆ ಹೆಸರಾದವರು. ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲ್ಲೂಕಿನ ಹಲ್ಯಾಣಿಯ, ಗೊಂಡ ಸಮುದಾಯದ ಮುಖಂಡರಾದ ಶ್ರೀ ತಿಮ್ಮಪ್ಪಗೊಂಡ ಅವರು "ಗೊಂಡರ ರಾಮಾಯಣ" ಕಾವ್ಯವನ್ನು ಅವರದೇ ಆದ ಶೈಲಿಯಲ್ಲಿ ಹಾಡಿದ್ದಾರೆ. ಕನ್ನಡ ವಿಶ್ವವಿದ್ಯಾಲದ ವಿಶ್ರಾಂತ ಕುಲಪತಿಗಳಾದ ಡಾ. ಹಿ.ಚಿ.ಬೋರಲಿಂಗಯ್ಯ ಅವರು ಗೊಂಡರ ರಾಮಯಣವನ್ನು ಸಂಪಾದಕರಾಗಿ ಸಂಗ್ರಹಿಸಿದ್ದಾರೆ. ನಮ್ಮ ಕರ್ನಾಟಕದ ಅನೇಕ ಬುಡಕಟ್ಟುಗಳಲ್ಲಿ ಒಂದಾದ ಗೊಂಡ ಬುಟಕಟ್ಟಿನವರ ಈ ಕಾವ್ಯವು ಒಂದು ಬಗೆಯಲ್ಲಿ ನಮಗೆ ವಿಶಿಷ್ಟವಾಗಿ ಕಂಡುಬರುತ್ತದೆ. ಈ ಕಿರು ಲೇಖನಲ್ಲಿ ಭಾರತದಾದ್ಯಂತ ಸಿಕ್ಕಿರುವ ಅಥವಾ ಹಾಡಿರುವ ಅಥವಾ ಹೇಳಿರುವ ರಾಮಾಯಣಗಳನ್ನು ಪ್ರಸ್ತಾಪಿಸದೇ, ಅವುಗಳನ್ನು ಹೊರತುಪಡಿಸಿ, ನಮ್ಮ ಕರ್ನಾಟಕದಲ್ಲಿ ತಿಮ್ಮಪ್ಪಗೊಂಡ ಅವರು ಹಾಡಿರುವ ಕಾವ್ಯದಲ್ಲಿ ಕೆಲವು ಪ್ರಸಂಗಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲು ಇಚ್ಚಿಸುತ್ತೇನೆ.


"ಚಣ್ಣಾ ಗುಂಡೀನ ಕೋವಿಯಲೋವೀಗಿನ್ನು

ಮದ್ದು ಗುಂಡೊಂದೆ ತುಂಬಿದನೋವಿನ್ನು

ಹಂಡಾ ನಾಯೊಂದೆ ಕರಕೊಂಡಾಳ

ಹುಂಡಾ ನಾಯೊಂದೆ ಕರಕೊಂಡಾ"


ಗೊಂಡರ ರಾಮಾಯಣದ ಆರಂಭದಲ್ಲಿ ಗೊಂಡರ ಬೇಟೆಗಾರನೊಬ್ಬ ಸಹಜವಾಗಿ ಬೇಟೆಗೆ ಹೋಗುವಂತೆ ದಶರಥನು ಕೋವಿ ಹಿಡಿದು ಬೇಟೆಯಾಡಲು ಹೋಗುತ್ತಾನೆ. ಕೆರೆಯಲ್ಲಿ ನೀರು ಕುಡಿಯುತ್ತಿದ್ದ ಆನೆಯೊಂದಕ್ಕೆ ಗುಂಡುಹಾರಿಸಿ ಸಾಯಿಸುತ್ತಾನೆ. ಅದು ಸಾಯುವ ಮೊದಲು 'ನಿನ್ನ ಪುತ್ರನಿಂದಲೇ ನೀನು ಸಾಯುತ್ತೀಯ' ಎಂದು ಶಾಪಕೊಟ್ಟಾಗ 'ನನಗೆ ಇನ್ನೂ ಪುತ್ರನೇ ಹುಟ್ಟಿಲ್ಲ. ಸಾಯುವುದೆಲ್ಲಿ ಬಂತು' (ಗೊಂಡರ ರಾಮಾಯಣ, ಪು,ಸಂ-6, ಸಂ-ಡಾ.ಹಿ.ಚಿ.ಬೋರಲಿಂಗಯ್ಯ) ಎಂದು ಉದಾಸೀನದ ಮಾತುಗಳನ್ನಾಡಿ ಹಿಂತಿರುಗುವುದು ಈ ಕಾವ್ಯದ ಮೂಲಕ ತಿಳಿಯುತ್ತದೆ.

ದಶರಥ ಕೈಕೆಗೆ ವರ ಕೊಡುವ ಸಂದರ್ಭವೂ ಕೂಡ ಈ ಕಾವ್ಯದಲ್ಲಿ ಭಿನ್ನವಾಗಿ ಬರುತ್ತದೆ. ದಶರಥನಿಗೆ ಇಂದ್ರ ಲೋಕ, ಚಂದ್ರ ಲೋಕಗಳನ್ನೊಮ್ಮೆ ನೋಡಿಕೊಂಡು ಬರಬೇಕೆಂದು ಆಸೆಯಾದಾಗ, ಮಾಯದ ರಥವೊಂದನ್ನು ಮಾಡಿಸಿ ಅದರಲ್ಲಿ ಹೊರಡುತ್ತಾನೆ. ಆತನು ಆನಂದದ ವಿಹಾರದಲ್ಲಿದ್ದಾಗ ರಥದ ಚಕ್ರದಲ್ಲಿ ತೊಂದರೆ ಉಂಟಾದಾಗ ಕೈಕೆ ತನ್ನ ಚಾಣಾಕ್ಷತೆಯಿಂದ ಅಪಾಯವನ್ನು ತಪ್ಪಿಸುತ್ತಾಳೆ. ಆದ್ದರಿಂದ ದಶರಥ ಕೈಕೆಗೆ ವರಗಳನ್ನು ನೀಡುವ ಪ್ರಸಂಗ ಬರುತ್ತದೆ. 


"ಹಸು ನೀರು ಬಿಸು ಮಾಡಿ ಹುಯ್ದರಾಲಾ

ಎಣ್ಣಿಲು ಬೆಣ್ಣೇಲಿ ಉಜ್ಜರಾಲಾ

ಉದ್ದು ದೊಡ್ಡಾನೆ ಮಾಡರಾಲಾ

ಬುದ್ದು ಬಲವಾಗು ಬಂದರಲಾ

 ಇದ್ದಿ ಬುದ್ದೀನೆ ಕಲುಸರಾಲಾ...."


ದಶರಥ ಮತ್ತು ಆತನ ಮಡದಿಯರು ಸುಖವಾಗಿ ಕಾಲ ಕಳೆಯುತ್ತಿರುವಾಗ ಕೌಸಲ್ಯ, ಕೈಕೆ, ಸೌಮಿತ್ರೆಯರಿಗೆ ನಾಲ್ಕು ಜನ ಮಕ್ಕಳು ಜನಿಸುತ್ತಾರೆ. ಈ ಕಾವ್ಯದಲ್ಲಿ ತಮ್ಮ ಮಕ್ಕಳನ್ನು ಸಾಕಿ ಬೆಳೆಸುವ ರೀತಿ ವರ್ಣಮಯವಾಗಿ ಕೂಡಿರದೇ, ಕೇವಲ ಸ್ಥಳೀಯ ಜ್ಞಾನದ ಪರಂಪರೆಯಲ್ಲಿ ಮಕ್ಕಳನ್ನು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡುತ್ತಾರಯೋ ಅದೇ ರೀತಿ ದಶರಥ ಪುತ್ರರನ್ನು ದೊಡ್ಡವರನ್ನಾಗಿ ಮಾಡಿ, ಅವರಿಗೆ ವಿದ್ಯಾಬುದ್ಧಿಯನ್ನು ಸಾಮಾನ್ಯ ಜನರಂತೆ ಕಲಿಸಿದ ರೀತಿಯಲ್ಲಿಯೇ ಕಲಿಸಿದರು ಎಂಬುದಾಗಿ ವಿವರಿಸಿದ್ದಾರೆ. ಇಲ್ಲಿ ಬರುವ ಮತ್ತೊಂದು ಭಿನ್ನವಾದ ಪ್ರಸಂಗವೆಂದರೆ, ರಾಮ-ಲಕ್ಷ್ಮಣರ ವನವಾಸದ ಪ್ರಸಂಗ. ಅಂದರೆ, ಈ ಕಾವ್ಯದಲ್ಲಿ ರಾಮನ ವಿವಾಹದ ನಂತರ ಬರದೇ, ರಾಮನ ವಿವಾಹಕ್ಕಿಂತ ಮೊದಲೇ ದಶರಥ ರಾಮನಿಗೆ ಪಟ್ಟ ಕಟ್ಟುವ ಯೋಚನೆಯನ್ನು ಮಾಡುತ್ತಾನೆ. ಕೈಕೆ ಅದನ್ನು ತಡೆದು ತನಗೆ ದಶರಥನು ಕೊಟ್ಟಿದ್ದ ವರಗಳನ್ನು ಬಳಸಿಕೊಂಡು ರಾಮ-ಲಕ್ಷ್ಮಣರನ್ನು ಆರು ವರ್ಷ ವನವಾಸ ಮತ್ತು ಆರು ತಿಂಗಳು ಅಜ್ಞಾತವಾಸ ಮಾಡಬೇಕೆಂದು ಕೇಳಿಕೊಳ್ಳುತ್ತಾಳೆ. ರಾಮ-ಲಕ್ಷ್ಮಣರ ಆರು ವರ್ಷಗಳ ವನವಾಸ ಮುಗಿದು, ಇನ್ನೂ ಆರು ವರ್ಷಗಳ ಕಾಲ ಅಜ್ಞಾತವಾಸ ಉಳಿದಿರುವಾಗ ಸೀತೆಯ ವಿವಾಹದ ಪ್ರಸ್ತಾಪ ಬರುತ್ತದೆ. ಈ ಕಾವ್ಯದಲ್ಲಿ ಜನಕ ರಾಜನಲ್ಲದೆ, ಒಬ್ಬ ರೈತನಾಗಿ ಕಂಡುಬರುತ್ತಾನೆ. ಆತನು ಹೊಲ ಉಳುತ್ತಿರುವಾಗ ನೇಗಿಲಿಗೆ ಸೀತೆ ಸಿಕ್ಕಿರುತ್ತಾಳೆ. ಹೀಗೆ ಸಿಕ್ಕ ಭೂಮಿತಾಯಿಯ ಮಗಳಿಗೆ 'ಸೀತಿ' ಎಂದು ಹೆಸರಿಡುತ್ತಾನೆ.


"ಭೂಮಿ ತೂಕದ ಬಿಲ್ಲು

ಆಕಾಸು ತೂಕದ ಬಾಣ

ಇಡೀ ಭೂಮಿನೇ ಎತ್ತು ಬೇಕು

ಇಡೀ ಆಕಾಸನೆ ನೆಗಿಸಬೇಕು

ಆಕಾಸು ಕಾಕಿನೆ ಕೊಲುಬೇಕು"


 ಜನಕನು ನಿತ್ಯವೂ ಕಲ್ಲಿನ ಮೇಲೆ ಕುಳಿತು ಮಾಡುತ್ತಿದ್ದ ಜಪವನ್ನು ಕಾಗೆಯೊಂದು ಹೇತು ಹೊಲಸು ಮಾಡಿ ತನ್ನ ಜಪವನ್ನು ಕೆಡೆಸುತ್ತಿದ್ದ ಆ ಕಾಗೆಯನ್ನು ಕೊಲ್ಲಿಸಲು ಬಿಲ್ಲಿನ ಹಬ್ಬವನ್ನು ಏರ್ಪಡಿಸುತ್ತಾನೆ. ಅದನ್ನು ತಿಳಿದ ಲಕ್ಷ್ಮಣ ತನ್ನ ಅಣ್ಣನಿಗೆ ತಿಳಿಸುತ್ತಾನೆ. ಆದರೆ, ಅದಕ್ಕಿಂತ ಮೊದಲೇ ರಾಮನಿಗೂ ತಿಳಿದಿರುತ್ತದೆ. ಇಬ್ಬರೂ ಬಿಲ್ಲಿನ ಹಬ್ಬದಲ್ಲಿ ಭಾಗವಹಿಸುತ್ತಾರೆ. ಹನ್ನೆರಡು ವರ್ಷಗಳ ಕಾಲ ಹಣ್ಣು ಆಹಾರಾದಿಗಳನ್ನು ತ್ಯಜಿಸಿದ ತಪಸ್ಸಿಯಿಂದ ಮಾತ್ರ ಈ ಕಾಗೆಯನ್ನು ಕೊಲ್ಲಲು ಸಾಧ್ಯವಾಗುತ್ತದೆಯಂತೆ. ಈ ಕಟ್ಟುನಿಟ್ಟಿನ ಕ್ರಮದಲ್ಲಿ ಲಕ್ಷ್ಮಣನೇ ಅರ್ಹನಾಗಿರುತ್ತಾನೆ. ಕಾರಣ ಅವರು ಕಾಡಿನಲ್ಲಿ ಇದ್ದಷ್ಟು ದಿನ ಅರಿಗೆ ಪ್ರತಿ ದಿನ ಎರಡು ಹಣ್ಣುಗಳು ಮಾತ್ರ ಸಿಗುತ್ತವೆಯಂತೆ, ಲಕ್ಷ್ಮಣ ಒಂದು ಹಣ್ಣನ್ನು ತನ್ನ ಅಣ್ಣನಿಗೆ ಮತ್ತು ಮತೊಂದು ಹಣ್ಣನ್ನು ದೇವರಿಗೆ ಅರ್ಪಿಸಿ ಸುಮ್ಮನಿದ್ದುಬಿಡುತ್ತಿದ್ದನಂತೆ.


ಲಕ್ಷ್ಮಣ ನಿಯಮದಂತೆ ಆಕಾಶದ ಕಾಗೆಯನ್ನು ಕೊಂದು ಸೀತೆಯನ್ನು ಗೆದ್ದು ರಾಮನಿಗೆ ವಿವಾಹ ಮಾಡಿಸುವುದು ಇಲ್ಲಿ ವಿಶೇಷವಾಗಿ ಕಂಡು ಬರುತ್ತದೆ. ಈ ಕಾವ್ಯದಲ್ಲಿ ರಾಮ-ಸೀತೆಯರ ವಿವಾಹ ಮಾತ್ರ ನಡೆಯುತ್ತದೆ. ಇಲ್ಲಿ ದಶರಥನ ನಾಲ್ಕು ಜನ ಮಕ್ಕಳ ವಿವಾಹವಾಗಲೀ ಅಥವಾ ಅವರ ರಾಣಿಯರ ವಿವರವಾಗಲೀ ಬರುವುದಿಲ್ಲ.


ಸೀತೆಯ ವಿವಾಹವಾದ ನಂತರ, ರಾಮ-ಲಕ್ಷö್ಮಣರಿಬ್ಬರೂ ವನವಾಸಕ್ಕೆ ಹೊರಡುತ್ತಾರೆ. ಅವರು ಇನ್ನು ಕಳೆಯಬೇಕಾದ ಆರು ವರ್ಷಗಳ ಅಜ್ಞಾತ ವಾಸವನ್ನು ಮುಗಿಸಿ ಬಂದು ಆನಂತರ ಸೀತೆಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದರೂ ಆಕೆ ಕೇಳುವುದಿಲ್ಲ, 'ಅಲ್ಲಿ ತಿನ್ನಲು ಆಹಾರವಿಲ್ಲ, ಕುಡಿಯಲು ಹಾಲಿಲ್ಲ'(ಅದೇ ಪುಸ್ತಕ,ಪು-13) ಎಂದು ಪರಿಪರಿಯಾಗಿ ಹೇಳಿದರೂ, ಸೀತೆ ನಿಮಗೆ ಆದದ್ದೇ ನನಗೂ ಆಗಲಿ ಎಂದು ಕಾಡಿಗೆ ಹೋಗಲು ಸಿದ್ಧಳಾಗುತ್ತಾಳೆ. ರಾಮನು, ಸೀತೆಯನ್ನೊಡಗೂಡಿ ಲಕ್ಷ್ಮಣನೊಂದಿಗೆ ಅರಣ್ಯಕ್ಕೆ ಹೋಗುತ್ತಾರೆ. 


ಇನ್ನೂ ರಾಜ್ಯವನ್ನು ಆಳ್ವಿಕೆ ಮಾಡುವ ಪ್ರಸ್ತಾಪ ಈ ಕಾವ್ಯದಲ್ಲಿಯೂ ಬರುತ್ತದೆ. ಅಂದರೆ, ಭರತ ಮತ್ತು ಶತೃಘ್ನರು ರಾಮನನ್ನು ಹುಡುಕುತ್ತಾ ಕಾಡಿಗೆ ಬಂದು, ರಾಮನುನ್ನು ತಮ್ಮ ರಾಜ್ಯಕ್ಕೆ ಹಿಂದುರುಗುವಂತೆ ಕೇಳಿಕೊಂಡಾಗ, ರಾಮ ಹಿಂದಕ್ಕೆ ಬರಲು ಒಪ್ಪದೇ ಇದ್ದಾಗ ಅವನ ಪಾದುಕೆಗಳನ್ನು ಪಡೆದು, ಹನ್ನೆರಡು ವರ್ಷಗಳೊಳಗಾಗಿ ಮರಳಿ ಬಾರದಿದ್ದರೆ 'ಕೊಂಡ ತೆಗೆದು, ಕೆಂಡ ಮಾಡಿ ಅದರಲ್ಲಿ ಹಾರುತ್ತೇವೆ' ಎಂಬುದಾಗಿ ಷರತ್ತನ್ನು ವಿಧಿಸಿ ಅವರು ತಮ್ಮ ರಾಜ್ಯಕ್ಕೆ ಹಿಂದಿರುಗಿ ಸುಖವಾಗಿಯೇ ರಾಜ್ಯವಾಳುತ್ತಾರೆಂಬುದು ತಿಳಿಯುತ್ತದೆ.


ವಾಲಿ-ಸುಗ್ರೀವರ ಪ್ರಸ್ತಾಪದಲ್ಲಿ ಸುಗ್ರೀವನ ಹೆಂಡತಿಯ ವಿಚಾರ ಗೊಂಡರ ರಾಮಾಯಣದಲ್ಲಿ ಆರಂಭದಲ್ಲಿಯೇ ಬರುತ್ತದೆಯೇ ಹೊರತು ವಾಲಿಯ ವಧೆಯ ನಂತರ ಅವನ ಹೆಂಡತಿ ಏನಾದಳು ಎಂಬ ವಿಚಾರ ಎಲ್ಲಿಯೂ ಬರುವುದಿಲ್ಲ.


ಮುಂದುವರೆದು ಹೇಳುವುದಾದರೆ, ಜನಕನು ಏರ್ಪಡಿಸಿದ್ದ ಬಿಲ್ಲಿನ ಹಬ್ಬದಲ್ಲಿ ಸೀತೆಯನ್ನು ಗೆಲ್ಲಲು ಭಾಗಿಯಾಗಿದ್ದ ರಾವಣನು ಗೆಲ್ಲಲಾರದೇ ಅಸಮಾಧಾನಗೊಂಡಿದ್ದ ಅವನು ಸೀತೆಯನ್ನು ಅಪಹರಿಸಿ ಮೂರು ದಿನಗಳಾದರೂ ಆಳುತ್ತೇನೆಂದು ಅಂದುಕೊಂಡಿದ್ದ. ಕಾಡಿನಲ್ಲಿ ಸುಖವಾಹಿಯೇ ಕಾಲ ಕಳೆಯುತ್ತಿದ್ದ ಸಂದರ್ಭದಲ್ಲಿ ಸೀತೆಯನ್ನು ಅಪಹರಿಸುವ ಪ್ರಸಂಗ ಈ ಕಾವ್ಯದಲ್ಲಿಯೂ ಬರುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಶೂರ್ಪಣಖಿಯ ಪ್ರಸ್ತಾಪವಿರುವಂತೆ, ಗೊಂಡರ ರಾಮಾಯಣದಲ್ಲಿಯೂ ಬರುತ್ತದೆ. ಅಣ್ಣನ ಮಾತಿನಂತೆ ರಾಮನನ್ನು ಒಲಿಸಿಕೊಳ್ಳಲು ಸುಂದರ ರೂಪ ತಾಳಿ ಬಂದ ಶೂರ್ಪಣಖಿಯನ್ನು ರಾಮ ತಿಸ್ಕರಿಸಿ ಲಕ್ಷ್ಮಣನಲ್ಲಿಗೆ ಕಳುಹಿಸಿಸುತ್ತಾನೆ. ಅಷ್ಟೇ ಅಲ್ಲದೇ ಅವಳಿಗೆ ಮಾನಭಂಗ ಮಾಡುವಂತೆ ತಮ್ಮನಾದ ಲಕ್ಷ್ಮಣನಿಗೆ ಆಜ್ಞಾಪಿಸುತ್ತಾನೆ. 


"ಅವ್ಳ ಮೂಗು ಮೊಲಿನೇ ಕೊಯ್ಯಬೇಕಾ

ಮೂಗು ಮೊಲಿನೊಂದೆ ಕೊಯ್ಯಬೇಕಾ ಈಗಿನ್ನು

ಮಾನು ಭಂಗನೆ ಕಳಿಬೇಕಾ

ಕೋಪಾದಲ್ಲವಳ ಬಿಡಬೇಕಾ"


ವಾಲ್ಮೀಕಿ ರಾಮಾಯಣದಲ್ಲಿ ರಾವಣನ ಸಹೋದರಿಯಾದ ಶೂರ್ಪಣಖಿಯ ಮೂಗನ್ನು ಕತ್ತರಿಸಿ ಭಂಗಮಾಡಿದ್ದರೆ, ಈ ರಾಮಾಯಣದಲ್ಲಿ ಮೂಗು ಮತ್ತು ಮೊಲೆಯನ್ನು ಕತ್ತರಿಸುತ್ತರಿಸುವುದರ ಮೂಲಕ ರಾವಣನ ಮತ್ತಷ್ಟು ಕೋಪಕ್ಕೆ ರಾಮ-ಲಕ್ಷ್ಮಣರು ಗುರಿಯಾಗಿ ತಮಗೆ ತಾವೇ ಮತ್ತಷ್ಟು ಕಷ್ಟಗಳನ್ನು ಆಹ್ವಾನಿಕೊಳ್ಳುತ್ತಾರೆ ಎಂಬುದನ್ನು ತಿಳಿಯಬಹುದು. ಇಲ್ಲಿಯೂ ಸುಂದರ ಜಿಂಕೆಯ ವರ್ಣನೆಯೂ ಬರುತ್ತದೆ. ಅಷ್ಟೇ ಅಲ್ಲದೇ, ಸೀತೆ ಬರೀ ಆ ಸುಂದರ ಜಿಂಕೆಯನ್ನು ಮಾತ್ರ ಬಯಸದೇ ತನಗೆ ಕುಪ್ಪಸ ಹೊಲಿಸಿಕೊಳ್ಳಲು ಅದರ ಚರ್ಮವನನು ಬಯಸುತ್ತಾಳೆ. ರಾವಣನೊಂದಿಗೆ ಜಟಯುವಿನ ಯುದ್ಧವೂ ನಡೆಯುತ್ತದೆ. ನಂತರ ಏಳು ಸಮುದ್ರಗಳನ್ನು ದಾಟಿ ಲಂಕೆಯನ್ನು ಸೇರುವ ರಾವಣನು ಅಶೋಕವನದ ಬದಲು ಮಾವಿನ ತೋಪಿನಲ್ಲಿ ಇರಿಸುತ್ತಾನೆಂಬುದು ಗೊಂಡರ ರಾಮಯನದಲ್ಲಿ ಪ್ರಸ್ತಾಪವಾಗುತ್ತದೆ. ರಾಮ, ರಾವಣರ ನಡುವೆ ಯಾವುದೇ ವೈಭವೀಕರಣವಿಲ್ಲದೆ ಯುದ್ಧವೂ ನಡೆಯುತ್ತದೆ. ರಾವಣನ ಸಾವಿನ ನಂತರ ವಿಭೀಷಣನ ಪಟ್ಟಾಭಿಷೇಕವಾಗುತ್ತದೆ. ನಂತರ ರಾಮ-ಸೀತೆ, ಲಕ್ಷ್ಮಣರು ಅಯೋಧ್ಯೆಗೆ ಬರುತ್ತಾರೆ. ಈ ರಾಮಯಣದಲ್ಲಿ ಸೀತೆಯ ಅಗ್ನಿಪ್ರವೇಶದ ಪ್ರಸಂಗ ಬರುವುದೇ ಇಲ್ಲ. ಬದಲಾಗಿ ರಾಮನು ಸೀತೆಗೆ ನಿನಗೆ ಇಚ್ಛೆಬಂದ ಕಡೆಗೆ ಹೊರಟು ಹೋಗು ನನ್ನ ಕಣ್ಣಿಗೆ ಕಾಣಿಸಬೇಡವೆಂದು ಕಳುಹಿಸಿಬಿಡುತ್ತಾನೆ. ಹೀಗೆ ಗೊಂಡರ ರಾಮಾಯಣ ಕಾವ್ಯದಲ್ಲಿ ವಾನರರು, ಲಂಕೆಯ ರಾಕ್ಷಸರನ್ನು ಒಳಗೊಂಡಂತೆ ಅನೇಕ ಪ್ರಸಂಗಗಳು ಬರುತ್ತವೆ.


ಒಟ್ಟಿನಲ್ಲಿ ಹೇಳುವುದಾದರೆ, ವಾಲ್ಮೀಕಿ ರಾಮಯಣದಲ್ಲಿ ಬರುವ ಪಾತ್ರಗಳೆಲ್ಲವೂ ಗೊಂಡರ ಬುಡಕಟ್ಟು ರಾಮಾಯಣದಲ್ಲಿ ಬರುತ್ತವೆ. ಬುಡಕಟ್ಟು ಸಮುದಾಯಗಳು ಎಷ್ಟೇ ಆಧುನಿಕತೆಯ ಗಾಳಿ ಬೀಸಿದರೂ ತಮ್ಮದೇ ಹಾಡಿ, ಹಟ್ಟಿ, ವಾಸಸ್ಥಳಗಳನ್ನು ನಿರ್ಮಾಸಿಕೊಂಡು, ಊರನ್ನು ಬಿಟ್ಟು ಇಂದಿಗೂ ಕಾಡಿನಲ್ಲಿಯೋ, ಕಾಡಿನ ಹಂಚಿನಲ್ಲಿಯೋ ಪ್ರತ್ಯೇಕವಾಗಿ ವಾಸಿಸುತ್ತಾರೆಯೋ ಅದೇ ರೀತಿ ದಶರಥ ಮತ್ತು ಆತನ ರಾಣಿಯರಾದಿಯಾಗಿ ಪ್ರತಿಯೊಂದು ಪಾತ್ರದ ಚಿತ್ರಣವೂ ಬುಡಕಟ್ಟು ಜನರ ಜೀವನದ ಕ್ರಮದಂತೆ ಮುಖ್ಯವಾಗಿ ಕಂಡುಬರುತ್ತೆ.




- ಡಾ. ಎಸ್. ಪಾರಿಜಾತ, ಬೆಂಗಳೂರು


ಲೇಖಕಿಯ ಕಿರು ಪರಿಚಯ:

ಡಾ. ಎಸ್. ಪಾರಿಜಾತ ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೋನಸಾಗರ ಗ್ರಾಮದ ಕುಂಟೋ ಓಬಯ್ಯನ ಹಟ್ಟಿಯಲ್ಲಿ  ಸೋಮಶೇಖರ ನಾಯಕ ಮತ್ತು ರೇವಮ್ಮ ದಂಪತಿಗಳಿಗೆ ಮೂರನೇ ಮಗಳಾಗಿ ಜನಿಸಿದರು. ಇವರು ದಾವಣಗೆರೆ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತ್ತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ "ಮೊಳಕಾಲ್ಮೂರು ಸಾಂಸ್ಕೃತಿಕ ಸಂಕಥನ" ಎಂಬ ವಿಷಯದ ಕುರಿತು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಇವರು ರಾಜ್ಯ, ರಾಷ್ಟ್ರ ಮಟ್ಟದ ಹಲವಾರು ಕಮ್ಮಟ, ಶಿಬಿರ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಕೆಲವು ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಹದಿನೈದಕ್ಕಿಂತ ಹೆಚ್ಚು ಲೇಖನಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಪ್ರಸ್ತುತ ರಾಷ್ಟ್ರೋತ್ಥಾನ ಪರಿಷತ್, ಸಂವಿತ್ ಸಂಶೋಧನಾ ಕೇಂದ್ರ, ಬೆಂಗಳೂರು. ಇಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top