ಅಭಿನವ ಶಂಕರಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ

ಮೈಸೂರು: ಭಾರತೀಯ ಸನಾತನ ಧರ್ಮ, ಸಂಸ್ಕೃತಿ ಮತ್ತು ಯತಿ ಪರಂಪರೆಗೆ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿಯವರ ಕೊಡುಗೆ ಅನನ್ಯ ಎಂದು ಎಂದು ಶೃಂಗೇರಿಯ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.
ಶತಮಾನೋತ್ಸವದ ಸವಿ ನೆನಪಿಗಾಗಿ ನೂತನವಾಗಿ ನಿರ್ಮಿಸಿರುವ ‘ಶ್ರೀ ಸಚ್ಚಿದಾನಂದ ವಿಲಾಸ’ ಗುರುಭವನದಲ್ಲಿ ಪಾದಪೂಜೆ, ಭಿಕ್ಷಾ ವಂದನೆ ಸ್ವೀಕರಿಸಿ ಅವರು ಅನುಗ್ರಹಸಂದೇಶ ನೀಡಿದರು.
ನಮ್ಮ ಶಾರದಾ ಪೀಠದ 33ನೇ ಯತಿಗಳಾಗಿದ್ದ ನೃಸಿಂಹ ಭಾರತೀ ಸ್ವಾಮೀಜಿಯವರು ಮಹಾ ತಪಸ್ವಿಗಳು. ಅಖಂಡ ಭಾರತವನ್ನು ಸಂಚರಿಸಿದ ಅವರು, ವಿಸ್ತಾರವಾಗಿ ಧರ್ಮ ಪ್ರಚಾರ ಮಾಡಿದರು. ಸತಾತನ ಧರ್ಮದ ಉಳಿವಿಗೆ ಅವಿರತವಾಗಿ ಶ್ರಮಿಸಿದರು. ಅವರಿಗೆ ಇದ್ದ ವಿಶಾಲ ದೃಷ್ಟಿಯಿಂದಲೇ ದೇಶದ ಅನೇಕ ಕಡೆ ಸಂಸ್ಕೃತ, ವೈದಿಕ ವಿದ್ಯಾಶಾಲೆಗಳು ಆರಂಭಗೊಂಡವು. ಅಂಥವರ ಸ್ಮರಣೆಯಿಂದಲೇ ನಮ್ಮೆಲ್ಲರ ಬದುಕು ಪಾವನವಾಗುತ್ತದೆ ಎಂದರು.
ನಿರಂತರ ಚಟುವಟಿಕೆ:
ಶತಮಾನೋತ್ಸವ ಅಂಗವಾಗಿ ನಿರ್ಮಿಸಿರುವ ‘ಶ್ರೀ ಸಚ್ಚಿದಾನಂದ ವಿಲಾಸ’ ಗುರುಭವನದಲ್ಲಿ ಇನ್ನು ಮುಂದೆಯೂ ನಿರಂತರವಾಗಿ ವಿದ್ವಾಂಸರ ವಿಚಾರಧಾರೆ ಪ್ರಸಾರವಾಗಲಿದೆ. ವೇದ ಸತ್ರ, ಜ್ಞಾನ ಸತ್ರ, ಗೋಷ್ಠಿ ಮತ್ತು ಸಮ್ಮೇಳನಗಳು, ಗುರುಗಳ ಜಯಂತ್ಯುತ್ಸವಗಳು ನಡೆಯಲಿವೆ. ಅದಕ್ಕೆ ಬೇಕಾದ ಸಕಲ ಸೌಲಭ್ಯವನ್ನೂ ಮಠ ಕಲ್ಪಿಸಲಿದೆ ಎಂದು ಜಗದ್ಗುರುಗಳು ಭರವಸೆ ಇತ್ತರು.
ಮಠದ ಪರಂಪರಾಗತ ಶಿಷ್ಯರು ಸಂಭ್ರಮದಿಂದ ಶತಮಾನ ಉತ್ಸವ ಆಚರಣೆಯಲ್ಲಿ ಭಾಗವಹಿಸಿದ್ದಾರೆ. ಸದ್ಯ ಪೀಠದಲ್ಲಿ ವಿರಾಜಮಾನರಾಗಿರುವ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಅವರು ಸನ್ಯಾಸ ಸ್ವೀಕಾರ ಮಾಡಿದ 50ನೇ ವರ್ಷಾಚರಣೆ ನಡೆಯುತ್ತಿದೆ. ಎಲ್ಲ ಯೋಗಾಯೋಗಗಳೂ ನಮಗೆ ಒಟ್ಟಿಗೆ ಪ್ರಾಪ್ತಿಯಾಗಿರುವುದು ದೊಡ್ಡ ಪುಣ್ಯ. ಗುರು ಸ್ಮರಣೆಯಿಂದಲೇ ಜೀವನ ಪಾವನವಾಗಲಿ. ಎಲ್ಲರಿಗೂ ಶ್ರೀಶಾರದಾ, ಚಂದ್ರಮೌಳೇಶ್ವರರ, ಗುರುಗಳ ಅನುಗ್ರಹ ಸದಾ ಇರಲಿ ಎಂದು ಶ್ರೀಗಳು ಹೇಳಿದರು.ನೂರಾರು ಭಕ್ತರು ಉಪಸ್ಥಿತರಿದ್ದರು.
ನವಗ್ರಹ ಪ್ರತಿಷ್ಠಾಂಗ ಹೋಮ:
ಶೃಂಗೇರಿಯ ವಿದ್ವಾನ್ ನರಹರಿ ಭಟ್ ನೇತೃತ್ವದಲ್ಲಿ ಶತ ಚಂಡಿ ಪಾರಾಯಣ, ನವಗ್ರಹ ಪ್ರತಿಷ್ಠಾಂಗ ಹೋಮ 3 ತಾಸುಗಳ ಕಾಲ ನೆರವೇರಿತು. ನೂರಾರು ಋತ್ವಿಜರು, ಪಂಡಿತರು, ಅದ್ವೈತ ವಿದ್ವಾಂಸರು, ಸುಮಂಗಲಿಯರ ಸಮ್ಮುಖ ಪೂರ್ಣಾಹುತಿ ಸಮರ್ಪಣೆ ನೆರವೇರಿತು. ಸಂಜೆ ನಗರದ ವಿವಿಧ ದೇವಾಲಯಗಳಿಗೆ ಜಗದ್ಗುರುಗಳು ಭೇಟಿ ನೀಡಿದರು. ರಾತ್ರಿ 8. 30ಕ್ಕೆ ಶ್ರೀ ಮಠದಲ್ಲಿ ಚಂದ್ರಮೌಳೇಶ್ವರ ಪೂಜೆ ನೆರವೇರಿಸಿದರು. ಸಂಜೆ 7ಕ್ಕೆ ಮಠದ ಆವರಣದಲ್ಲಿ ವಿದ್ವಾನ್ ಕೃಷ್ಣಮೂರ್ತಿ ತಂಡದವರು ನಾಗಸ್ವರ ಕಛೇರಿ ನೀಡಿ ರಂಜಿಸಿತು.
ಬಂಗಾರ ಲೇಪಿತ ಕಂಚಿನ ಕಳಸ ಸಿದ್ಧ:
ಏ.5ರ ಬೆಳಗ್ಗೆ 8ಕ್ಕೆ ಶ್ರೀ ಶಾರದಾಂಬಾ ಹಾಗೂ ಶ್ರೀ ನೃಸಿಂಹ ಭಾರತೀ ಶ್ರೀಗಳ ಸನ್ನಿಧಿಗೆ ಶಿಖರ ಕುಂಭಾಭಿಷೇಕ ಆಯೋಜನೆಗೊಂಡಿದೆ. ಇದೇ ಸಂದರ್ಭ ದೇಗುಲಕ್ಕೆ ನೂತನ ಕಳಸ ಪ್ರತಿಷ್ಠಾಪನೆ ನೆರವೇರಲಿದೆ. ಅದಕ್ಕಾಗಿ 7 ಅಡಿ ಎತ್ತರದ ಬಂಗಾರ ಲೇಪಿತ ಕಂಚಿನ ಕಳಸ ಈಗಾಗಲೇ ಸಿದ್ಧಗೊಂಡಿದೆ.
ವಿಶ್ವೇಶ್ವರ ದೇವಸ್ಥಾನದಲ್ಲಿ ಕುಂಭಾಭಿಷೇಕ ಇಂದು
ಏ. 3ರ ಬೆಳಗ್ಗೆ 9ಕ್ಕೆ ನಗರದ ಗೀತಾ ರಸ್ತೆಯ ಶ್ರೀ ಪ್ರಸನ್ನ ವಿಶ್ವೇಶ್ವರ ದೇವಸ್ಥಾನದಲ್ಲಿ ಆಯೋಜನೆ ಗೊಂಡಿರುವ ಕುಂಭಾಭಿಷೇಕದ ಸಾನ್ನಿಧ್ಯವನ್ನು ಶ್ರೀ ಜಗದ್ಗುರುಗಳು ವಹಿಸಲಿದ್ದಾರೆ. ಪಾದಪೂಜೆ ಮತ್ತು ಭಿಕ್ಷಾವಂದನೆಯನ್ನು ಜಗದ್ಗುರುಗಳು ಸ್ವೀಕರಿಸಲಿರುವುದು ವಿಶೇಷ. ಸಂಜೆ 4.30 ರಿಂದ 7 ರವರೆಗೆ ನಗರದ ವಿವಿಧ ದೇವಾಲಯ ಹಾಗೂ ಸಂಘ-ಸಂಸ್ಥೆಗಳಿಗೆ ಪೂಜ್ಯರು ಭೇಟಿ ನೀಡಿ ಭಕ್ತರನ್ನು ಅನುಗ್ರಹಿಸಲಿದ್ದಾರೆ.
ದ್ವಂದ್ವ ಗಾಯನ:
ಏ. 3 ರಂದು ಸಂಜೆ 7ಕ್ಕೆ ಮಠದ ಆವರಣದಲ್ಲಿ ವಿದ್ವಾನ್ ಶ್ರೀನಾಥ ಮತ್ತು ಅಮೋಘ ಅವರ ದ್ವಂದ್ವ ಶಾಸ್ತ್ರೀಯ ಗಾಯನವಿದೆ. ವಿದ್ವಾನ್ ಶ್ರೀಧರ (ಮೃದಂಗ) ಮತ್ತು ರಮೇಶ್ (ಘಟ) ಪಕ್ಕವಾದ್ಯ ಸಹಕಾರ ವಿಜೃಂಭಿಸಲಿದೆ.
---
ಚಿತ್ರಗಳ ವಿವರ:
* ಮೈಸೂರಿನ ಶಂಕರ ಮಠದ ಆವರಣದಲ್ಲಿ ಶತಮಾನೋತ್ಸವ, ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಮಂಗಳವಾರ ಶೃಂಗೇರಿಯ ಋತ್ವಿಜರಿಂದ ಪ್ರತಿಷ್ಠಾಂಗ ಹೋಮ ನೆರವೇರಿತು.
* ಮೈಸೂರಿನ ಶಂಕರಮಠದಲ್ಲಿ ವಿದ್ವಾನ್ ನರಹರಿ ಭಟ್ ನೇತೃತ್ವದಲ್ಲಿ ಮಂಗಳವಾರ ಶತಚಂಡಿ ಪಾರಾಯಣ ನೆರವೇರಿತು.
* ಮೈಸೂರಿನ ಶಂಕರಮಠದಲ್ಲಿ ಮಂಗಳವಾರ ಶಾರದಾಂಬೆಗೆ ಶ್ರೀ ಲಕ್ಷ್ಮೀ ಅಲಂಕಾರ ಮಾಡಲಾಗಿತ್ತು.
* ಮೈಸೂರಿನ ಶಂಕರ ಮಠದಲ್ಲಿ ಮಂಗಳವಾರ ಭಕ್ತರು ಗುರು ಪಾದುಕಾ ಪೂಜೆ ನೆರವೇರಿಸಿದರು.
* ಮೈಸೂರಿನ ವಿಜಯನಗರದ ಶ್ರೀ ಸಪ್ತಮಾತೃಕಾ ದೇವಾಲಯಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಭೇಟಿ ನೀಡಿ ಪೂಜೆ ಸಮರ್ಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ