ಮಂಗಳೂರು: ಕಲಾಭಿ(ರಿ.) ಮಂಗಳೂರು ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಯ ಜಂಟಿ ಆಶ್ರಯದಲ್ಲಿ ಮೂಡಿಬಂದ ,ಏಪ್ರಿಲ್ 11 ರಂದು ಪ್ರಾರಂಭಗೊಂಡ ''ಅರಳು 2024' ಎಂಬ ಮಕ್ಕಳ ರಂಗಭೂಮಿಯ ವಿಶೇಷ ಕಾರ್ಯಾಗಾರವು 'ಮಕ್ಕಳ ನಾಟಕೋತ್ಸವ'ವಾಗಿ , ಸಮಾರೋಪ ಕಾರ್ಯಕ್ರಮದೊಂದಿಗೆ ಏಪ್ರಿಲ್ 21, 2024 ರಂದು ಕೆನರಾ ಪದವಿ ಪೂರ್ವ ಕಾಲೇಜು, ಮಂಗಳೂರು ಇಲ್ಲಿನ ಬಯಲು ರಂಗಮಂದಿರದಲ್ಲಿ ಸಂಪನ್ನವಾಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಟ್ಟದ ಜಾದೂಗಾರರು ಶ್ರೀ ಕುದ್ರೋಳಿ ಗಣೇಶ್ ರವರು ಸಮಾರೋಪ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕರು ಹಾಗೂ ನಟರಾಗಿರುವ ಶ್ರೀ ರಾಹುಲ್ ಅಮೀನ್ ಆಗಮಿಸಿದ್ದರು. ಶ್ರೀಮತಿ ಅಶ್ವಿನಿ ಕಾಮತ್ ( ಸದಸ್ಯೆ, ಆಡಳಿತ ಮಂಡಳಿ, CHS ಅಸೋಸಿಯೇಶನ್ ), ಶ್ರೀ ಗೋಪಾಲ್ ಶೆಟ್ಟಿ ( Dean, ಕೆನರಾ ಪದವಿ ಪೂರ್ವ ಕಾಲೇಜು), ಶ್ರೀಮತಿ ಕವಿತಾ ಮೌರ್ಯ ( ಮುಖ್ಯೋಪಾಧ್ಯಾಯಿನಿ,ಕೆನರಾ ಹಿರಿಯ ಪ್ರಾಥಮಿಕ ಶಾಲೆ), ಶ್ರೀ ಸುರೇಶ್ ವರ್ಕಾಡಿ (ಗೌರವಾಧ್ಯಕ್ಷರು, ಕಲಾಭಿ (ರಿ.)) , ಡಾ. ಮೀನಾಕ್ಷಿ ರಾಮಚಂದ್ರ ( ಅಧ್ಯಕ್ಷರು, ಕಲಾಭಿ (ರಿ.)) - ಈ ಎಲ್ಲಾ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ಶಿಬಿರದ ಮಕ್ಕಳು, ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಅರಳು ಕಾರ್ಯಗಾರದಲ್ಲಿ ಭಾಗವಹಿಸಿದ ಕಲಾವಿದರು ಒಟ್ಟಾಗಿ ಹಾಡಿದ ರಂಗ ಸಂಗೀತಗಳೊಂದಿಗೆ ಶುರುವಾಯಿತು. ನಂತರ ಸಭಾಕಾರ್ಯಕ್ರಮದೊಂದಿಗೆ ಮುಂದುವರೆಯಿತು. ಶ್ರೇಯಸ್ ಸಾಲಿಯಾನ್ ಕಾರ್ಯಕ್ರಮದ ನಿರೂಪಣೆ ಮಾಡಿದರು, ಕಾರ್ಯಗಾರ ಸಂಯೋಜಕರಾದ ಉಜ್ವಲ್ ಯು.ವಿ ಎಲ್ಲರನ್ನೂ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ನಾಟಕೋತ್ಸವದ ಮುಖ್ಯ ಭಾಗವಾಗಿದ್ದ ಎರಡು ನಾಟಕಗಳಾದ, ರಾಜು ಮಣಿಪಾಲ್ ನಿರ್ದೇಶನದ 'ಹಾಕ್ಕಿಹಾಡು' ಹಾಗೂ ರಮೇಶ್ ಕೆ ನಿರ್ದೇಶನದ 'ಕಪಟ ಸನ್ಯಾಸಿ ಮಾರ್ಜಾಲ ಮತ್ತು ಮೂಷಕ ಕುಲ' ಎಂಬ ನಾಟಕಗಳನ್ನು ಕಾರ್ಯಗಾರದಲ್ಲಿ ಭಾಗವಹಿಸಿದ್ದ 30 ಮಕ್ಕಳು ಸೇರಿ ನಿರ್ದೇಶಕರ ಮಾರ್ಗದರ್ಶನದಲ್ಲಿ ತಮ್ಮ ಹೆತ್ತವರು ಹಾಗೂ ಪ್ರೇಕ್ಷಕರ ಮುಂದೆ ಪುಟ್ಟ ಕಲಾವಿದರಾಗಿ ಪ್ರಸ್ತುತಪಡಿಸಿದರು.
ಎರಡೂ ನಾಟಕಗಳು ಅದ್ಬುತವಾಗಿ ಮೂಡಿ ಬಂದಿತು.
ಹೀಗೆ ಕಾರ್ಯಗಾರ ಸಂಯೋಜಕರಾದ ಉಜ್ವಲ್ ಯು.ವಿ, ಕಾರ್ಯಾಗಾರದ ನಿರ್ದೇಶಕರಾದ ಭುವನ್ ಮಣಿಪಾಲ್ , ಸಹಾಯಕ ನಿರ್ದೇಶಕರು ಹಾಗೂ ಪೂರ್ತಿ ತಂಡದವರ ಶ್ರಮದಿಂದಾಗಿ 'ಅರಳು 2024' ಯಶಸ್ವಿಯಾಗಿ ನಡೆಯಿತು.
ನನ್ನ ಮಗಳು 10 ದಿನಗಳ "ಅರಳು 2024' ಮಕ್ಕಳ ರಂಗಭೂಮಿ ಕಾರ್ಯಗಾರವನ್ನು ತುಂಬಾ ಆನಂದಿಸಿದಳು. ನಟನೆಗಿಂತ ಹೆಚ್ಚಾಗಿ ಇದು ಅದ್ಭುತವಾದ ಜೀವನ ಕೌಶಲ್ಯ ಹಾಗೂ ಇತರ ವಿಷಯಗಳನ್ನು ಕಲಿಯಲು ಒಂದು ಒಳ್ಳೆಯ ಅವಕಾಶವಾಗಿತ್ತು.ಇಂತಹ ಮತ್ತಷ್ಟು ಚಟುವಟಿಕೆ ಭರಿತ, ಮಕ್ಕಳನ್ನು ಚುರುಕುಗೊಳಿಸುವ ಶಿಬಿರಗಳು ನಡೆಯಬೇಕೆಂದು ಆಶಿಸುತ್ತೇನೆ ಹಾಗೂ ಕಾಯುತ್ತಾ ಇರುತ್ತೇನೆ.. ಮಕ್ಕಳ ನಾಟಕ ಪ್ರದರ್ಶನ ಒಂದು ಅದ್ಭುತ ಚತುರ ಪ್ರದರ್ಶನವಾಗಿತ್ತು. ಬರೀ 10 ದಿನಗಳಲ್ಲಿ ಪುಟ್ಟ ಮಕ್ಕಳನ್ನು ಮಾರ್ಗದರ್ಶನದೊಂದಿಗೆ ಸಜ್ಜುಮಾಡಿ ವೇದಿಕೆಯಲ್ಲಿ ಅತ್ಯದ್ಭುತವಾಗಿ ನಾಟಕ ಪ್ರದರ್ಶಿಸುವಂತೆ ಮಾಡೋದು ಕಠಿಣ ಕಾರ್ಯವೇ ಸರಿ. ಮಕ್ಕಳಿಗೆ ಈ ರೀತಿಯ ಒಳ್ಳೆಯ ಅವಕಾಶವನ್ನು ಕಲ್ಪಿಸಿದ ಕಲಾಭಿ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಯ ತಂಡದವರೆಲ್ಲರಿಗೂ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.
- ಶಶಿಕಲಾ ಅಶ್ವತ್ಥ್ (M/O ಅನಿಶ)
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ