ಉಡುಪಿ: ಒಂಟೆ ನೋಡಬೇಕೇ? ಗೋಶಾಲೆಗೆ ಬನ್ನಿ. ಉಡುಪಿ ಜಿಲ್ಲೆಯ ನೀಲಾವರವದಲ್ಲಿ ಶ್ರೀ ಪೇಜಾವರ ಶ್ರೀಗಳ ನೇತೃತ್ವದ ಗೋವರ್ಧನಗಿರಿ ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ಗೋಶಾಲೆಗೆ ಇದೀಗ 5 ಒಂಟೆಗಳು ಅತಿಥಿಗಳಾಗಿ ಬಂದಿವೆ.
ಆದರೆ ಅವುಗಳು ಗೋಶಾಲೆ ಸೇರಿದ ಕಥೆ ಮಾತ್ರ ಕರುಣಾಜನಕವಾಗಿದೆ! ಭಟ್ಕಳದ ಕಾರಗದ್ದೆ ಎಂಬಲ್ಲಿ ಹಾಶಿಮ ಅವರ ತೋಟದಲ್ಲಿ ಸಮಾನ್ ಮತ್ತು ಇಮ್ರಾನ್ ಎಂಬ ಇಬ್ಬರು 5 ಒಂಟೆಗಳಿಗೆ ನೀರು ಹುಲ್ಲು ಹಾಗೂ ಯಾವುದೇ ಆಹಾರವನ್ನು ನೀಡದೇ ಚಿತ್ರಹಿಂಸೆ ನೀಡುತ್ತಿದ್ದರು. ಈ ಮಾಹಿತಿ ಪಡೆದ ಭಟ್ಕಳ ಪೋಲೀಸರು ಸ್ಥಳಕ್ಕೆ ಧಾಳಿ ನಡೆಸಿ ಕಟುಕರ ಕೈಯಿಂದ ಒಂಟೆಗಳನ್ನು ರಕ್ಷಿಸಿ ಬಳಿಕ ನ್ಯಾಯಾಲಯದ ಸೂಚನೆಯಂತೆ ಮುಂದಿನ ಆದೇಶದ ವರೆಗೆ ನೀಲಾವರ ಗೋಶಾಲೆಗೆ ಒಪ್ಪಿಸಿದ್ದಾರೆ.
ಇವುಗಳನ್ನು ಅಕ್ರಮವಾಗಿ ವಧೆಗಾಗಿ ಈ ಆರೋಪಿಗಳು ಭಟ್ಕಳಕ್ಕೆ ತಂದಿರುವ ಶಂಕೆ ಇದ್ದು ತನಿಖೆ ನಡೆಸಲಾಗುತ್ತಿದೆ. ಆದರೆ ಕಟುಕರ ಕೈಯಿಂದ ತಾತ್ಕಾಲಿಕವಾಗಿಯಾದರೂ ಬಚಾವ್ ಆದ ಒಂಟೆಗಳು ಸದ್ಯಕ್ಕೆ ಗೋಶಾಲೆಯ ಅತಿಥಿಗಳಾಗಿ ಗೋವುಗಳೊಂದಿಗೆ ಸುತ್ತಾಡಿಕೊಂಡು ಯಥೇಚ್ಛ ಹುಲ್ಲು ನೀರು ಮತ್ತು ಇತರೆ ಆಹಾರಗಳನ್ನು ಉಂಡು ಕುಡಿದುಕೊಂಡು ಹಾಯಾಗಿವೆ.
ಒಂಟೆಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಪೇಜಾವರ ಶ್ರೀಗಳು ಗೋಶಾಲೆಯ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ. ಒಂಟೆಗಳನ್ನು ನೋಡುವ ಅಥವಾ ತಮ್ಮ ಮಕ್ಕಳಿಗೆ ತೋರಿಸಲು ಆಸಕ್ತಿ ಇರುವ ಮಂದಿ ಗೋಶಾಲೆಗೆ ಒಂದು "ವೀಕೆಂಡ್ ವಿಸಿಟ್' ಇಟ್ಟುಕೊಳ್ಳಬಹುದು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment