`ಮರ್ಯಾದಾ ಪುರುಷೋತ್ತಮನ ವಿಚಾರವಾಗಿ ಅನೇಕ ಮಹನೀಯರುಗಳು ತಮ್ಮ ತಮ್ಮ ಬೌದ್ಧಿಕಮಟ್ಟವನ್ನು ಅನುಸರಿಸಿ ಕಥಾರೂಪವಾಗಿ ಪ್ರಸ್ತುತ ಪಡಿಸಿರುವರು. ಕನ್ನಡದಲ್ಲಿಯೇ ಶ್ರೀರಾಮನನ್ನು ಕುರಿತು 18ಕ್ಕೂ ಹೆಚ್ಚು ಮಹನೀಯರುಗಳು ಗುಣಗಾನವನ್ನು ಮಾಡಿರುವರು. ಅಲ್ಲದೇ ಭಾರತೀಯ ಇತರ ಭಾಷೆಗಳಲ್ಲಿಯೂ ಅಷ್ಟೇ ಪ್ರಮಾಣದಲ್ಲಿ ಶ್ರೀರಾಮಚರಿತ್ರೆಯನ್ನು ದಾಖಲಿಸಿರುವರು. ವಿದೇಶಗಳಲ್ಲಿ ಇರುವ ರಾಮಾಯಣವು ಸಾಂಸ್ಕೃತಿಕ ದೃಷ್ಟಿಯಿಂದ ಮಹತ್ವವನ್ನು ಪಡೆದಿದೆ. ಶ್ರೀವಾಲ್ಮೀಕಿ ರಾಮಾಯಣವಂತೂ ಎಲ್ಲರ ಹೃದಯವನ್ನು ತಟ್ಟುವಂತಹ ಮಹಾಕಾವ್ಯವಾಗಿದೆ.
ಇಂತಹ ವೈಶಿಷ್ಟ್ಯಗಳ ಶ್ರೀರಾಮಚಂದ್ರ ದೇವರು ದಶರಥ ಮತ್ತು ಕೌಸಲ್ಯಾದೇವಿ ಗರ್ಭದಲ್ಲಿ ಪುತ್ರಕಾಮೇಷ್ಠಿಯಿಂದ ಪ್ರಸಾದರೂಪವಾಗಿ, ಇಕ್ಷ್ವಾಕು ಕುಲ ಚಂದ್ರಮನಾಗಿ, ಆದಿತ್ಯವಂಶಜನಾಗಿ ಶ್ರೀರಾಮಚಂದ್ರನು, ಚೈತ್ರಮಾಸದ ಶುಕ್ಲಪಕ್ಷದ ಪುಣ್ಯಕರವಾದ ಪುನರ್ವಸು ನಕ್ಷತ್ರದಲ್ಲಿ ಕರ್ಕಾಟಕ ಲಗ್ನದಲ್ಲಿ ಮತ್ತು ಆತ್ಮಕಾರಕ ರವಿಯು ಮೇಷರಾಶಿಯಲ್ಲಿ ಉಚ್ಚನಾಗಿರುವಾಗ ಮಧ್ಯಾಹ್ನದ ಸಮಯದಲ್ಲಿ ಬುಧವಾರ ಅವತರಿಸಿದನು ಎಂದು ಶಾಸ್ತ್ರಕಾರರು ಉಲ್ಲೇಖಿಸಿರುತ್ತಾರೆ.
ಅಹ್ನೋ ಮಧ್ಯೇ ವಾವನೋ ರಾಮಾರಾಮೌ
ಎಂಬ ಪ್ರಮಾಣದಂತೆ ರಾಮಚಂದ್ರದೇವರು ಮಧ್ಯಾಹ್ನದಲ್ಲಿ ಆವತರಿಸಿದ ಕಾರಣ ಶ್ರೀರಾಮನವಮಿಯು ಮಧ್ಯಾಹ್ನ ವ್ಯಾಪಿನೀ ತಿಥಿಯಾಗಿರಬೇಕು. ಪುನರ್ವಸು ನಕ್ಷತ್ರವಿದ್ದರಂತೂ ಮತ್ತೂ ವಿಶೇಷ ಫಲದಾಯಕವಾಗಿದೆ. ದಶಮಿಯಿಂದ ವಿದ್ದವಾದ ನವಮಿ ತಿಥಿಯಂದು ಶ್ರೀರಾಮನವಮಿಯನ್ನು ಆಚರಿಸಬೇಕು. ಅಷ್ಟಮಿಯುಕ್ತ ನವಮಿಯು ರಾಮ ನವಮಿಗೆ ಪ್ರಶಸ್ತವಲ್ಲ.
ಏಕೋಪಿ ಗುಣವಾನ್ ಪುತ್ರೋ ನಿರ್ಗುಣೈನ ಶರೈರಪಿ
ಏಕ ಚಂದ್ರಸ್ತ ಮೋಹಂತಿ ನಕ್ಷತ್ರಂ ಕಿಂ ಪ್ರಯೋನವಮ್ ||
ಎಂಬುದು ಶಾಸ್ತ್ರಕಾರರ ಹೇಳಿಕೆ. ಸದ್ಗುಣಭರಿತನಾದ, ಸಕಲ ಗುಣಗಳ ಒಡೆಯನಾದ ಶ್ರೀರಾಮನಂತಹ ಒಬ್ಬ ಪುತ್ರ ಇದ್ದರೆ ಸಾಕು. ಗುಣರಹಿತರಾದ ನೂರು ಮಕ್ಕಳಿದ್ದರೇನು? ರಾತ್ರಿಯ ಕತ್ತಲನ್ನು ನಿವಾರಿಸಲು ಒಬ್ಬ ಪೂರ್ಣಚಂದ್ರನಿದ್ದರೆ ಸಾಕು. ಒಳ್ಳೆಯ ಮಕ್ಕಳು ಜನಿಸುವುದು ಒಂದು ಸೌಭಾಗ್ಯವೇ ಸರಿ. ಇಂತಹ ಸತ್ಕುಲ ಪ್ರಸೂತನಾದ ಶ್ರೀರಾಮಚಂದ್ರನು ಚೈತ್ರಮಾಸದ ವಸಂತ ಋತುವಿನಲ್ಲಿ ಅವತರಿಸಿದವ. ವಸಂತ ಋತುವಿನಲ್ಲಿ ಮರಗಿಡಗಳು ಚಿಗುರಿ ಹೂ ಬಿಡುವುದಕ್ಕೆ ಆರಂಭವಾಗುವುದು. ಇದೇ ರೀತಿ ಮನುಷ್ಯನ ಶರೀರದಲ್ಲೂ ಸಹ ಕೆಲವು ಬದಲಾವಣೆಗಳಾಗುತ್ತವೆ. ಶಿಶಿರ ಋತುವಿನಲ್ಲಿ ಶರೀರದ ಚರ್ಮವು ಸಣ್ಣಸಣ್ಣ ಹುರುಪು [ಹೊಟ್ಟು]ಗಳ ಮೂಲಕ ಉದುರುತ್ತದೆ. ವಸಂತ ಋತು ಶುರುವಾಗುತ್ತಿದ್ದಂತೆಯೇ ಹೊಸ ಚರ್ಮ ಬೆಳೆದು ಚರ್ಮಕ್ಕೆ ನವ ಚೈತನ್ಯವು ಉಂಟಾಗುವುದು. ಹಾಗೇಯೇ ಗಿಡಗಳ ಹಣ್ಣೆಲೆಗಳು ಉದುರಿ ಹೊಸದಾಗಿ ಚಿಗುರುವ ಹಾಗೆ ಇದು ಪ್ರಕೃತಿ ನಿಯಮ. ಈ ದೃಷ್ಟಿಯಿಂದಲೆ 'ಋತೂನಾಂ ಕುಸುಮಾಕರ' ಎಂದು ಗೀತಾಚಾರ್ಯರು ಹೇಳಿರುವರು.
ಶ್ರೀರಾಮ ನವಮಿ
ಮರ್ಯಾದಾ ಪುರುಷೋತ್ತಮ ಶ್ರೀರಾಮ, ನವಮಿಯಂದು ಅವತರಿಸಿದ ಎಂದು ಪುರಾಣ ಇತಿಹಾಸಗಳು ತಿಳಸುತ್ತವೆ. ಶ್ರೀರಾಮ ನವಮಿ ತಿಥಿಯಂದೇ ಅವತರಿಸಲು ಕಾರಣವೇನು ಎಂಬುದಾಗಿ ಪ್ರಶ್ನೆ ಮೂಡುವುದು ಸಹಜ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಚಂದ್ರರ ನಡುವಿನ ಅಂತರ 12 ಡಿಗ್ರಿ ಇದ್ದಾಗ ಒಂದು ತಿಥಿ ಆಗುವುದು. ನವಮಿ ತಿಥಿ ಎಂದರೆ 12x9 ಡಿಗ್ರಿ = 108 ಡಿಗ್ರಿ ಆಗುವುದು. ಅಂದರೆ ಸೂರ್ಯನಿಂದ ಚಂದ್ರ 97 ಡಿಗ್ರಿಯಿಂದ 108 ಡಿಗ್ರಿ ಒಳಗೆ ಇದ್ದರೆ ನವಮಿ ತಿಥಿ ಎಂದು ಹೇಳುತ್ತೇವೆ. ನಾವು ಸಾಮಾನ್ಯವಾಗಿ ಯಾವುದೇ ಮಂತ್ರ ಜಪಿಸಲು 108 ಬಾರಿ ಎಂದು ಹೇಳುತ್ತೇವೆ. ಸಂಖ್ಯಾ ಶಾಸ್ತ್ರದ ಪ್ರಕಾರ 108ನ್ನು ಒಂದು ಸಂಖ್ಯೆಗೆ ತಂದಾಗ 9 ಆಗುವುದು. ಹಾಗಾಗಿ ಶ್ರೀರಾಮರು ನವಮಿ ತಿಥಿಯಲ್ಲಿ ಅವತರಿಸಿರುವುದು.
ಇನ್ನು ಶ್ರೀರಾಮರ ಅವತಾರ 7ನೇ ಅವತಾರ. ರಾಮ ದೇವರ ಜನ್ನ ನಕ್ಷತ್ರ ಪುನರ್ವಸು ನಕ್ಷತ್ರ ಈ ನಕ್ಷತ್ರವು ಅಶ್ವಿನಿಯಿಂದ 7 ನೇ ನಕ್ಷತ್ರವಾಗುವುದು. ಸಂಖ್ಯಾ ಶಾಸ್ತ್ರದಂತೆ `ರಾ' ಎಂಬ ಅಕ್ಷರವು 2 ಸಂಖ್ಯೆಯನ್ನು `ಮ' ಎಂಬ ಅಕ್ಷರವು 5 ಸಂಖ್ಯೆಯನ್ನು ಪ್ರತಿನಿಧಿಸುವುದು. ರಾ+ಮ= ಅಂದರೆ 2+5=7 ಆಗುವುದು. ಇನ್ನು ಪನರ್ವಸು ನಕ್ಷತ್ರವು ಗುರುವಿನ ನಕ್ಷತ್ರವಾಗಿದ್ದು, ಗುರುವು ಶ್ರೀರಾಮರ ಕುಂಡಲಿಯಲ್ಲಿ ವರ್ಗೋತ್ತಮದಲ್ಲಿರುವರು ಹಾಗಾಗಿ ಜಗತ್ತಿನ ಎಲ್ಲಾ ಗುರುಗಳ ಗುರುವಾಗಿ ಶ್ರೀರಾಮಚಂದ್ರರು ಶೋಭಿಸುತ್ತಿರುವರು.
ಶ್ರೀರಾಮಚಂದ್ರರ ಅವತಾರ ಅಭಿಜಿನ್ ಮುಹೂರ್ತದಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಗೆ. ಮುಹೂರ್ತದ ಪ್ರಕಾರ ದಿನದ 15 ಮುಹೂರ್ತಗಳಲ್ಲಿ 8ನೇ ಮುಹೂರ್ತ ವಿರಿಂಚಿ ಮುಹೂರ್ತ. ಈ ಮಹೂರ್ತವನ್ನೇ ಅಭಿಜಿನ್ ಮಹೂರ್ತ ಎಂದು ಕರೆಯುತ್ತೇವೆ. ಇದು ವಿಷ್ಣುದೇವತಾಕವಾದ್ದರಿಂದ ಈ ಮುಹೂರ್ತದಲ್ಲಿ ಶ್ರೀರಾಮರ ಅವತಾರವಾಗಿದೆ.
ಶ್ರೀರಾಮನವಮಿ-ಕೋಸಂಬರಿ-ಪಾನಕ
ಸಾಮಾನ್ಯವಾಗಿ ಶ್ರೀರಾಮನವಮಿಯ ಸಂದರ್ಭದಲ್ಲಿ ಜಗತ್ಚಕ್ಷುವಾದ ಸೂರ್ಯನು ಮೇಷರಾಶಿಯಲ್ಲಿ ಸಂಚರಿಸುವನು. ಆಗ ಬಿಸಿಲಿನ ಪ್ರಖರತೆಯಿಂದ ಮನುಜನು ಅಧಿಕ ಬೆವರುವನು. ಹೆಚ್ಚಿನ ಕೆಲಸ ಮಾಡಲು ನಿಶ್ಯಕ್ತನಾಗುವನು. ಹವಾ ಬದಲಾವಣೆಯಿಂದ ಮನುಷ್ಯನ ಶರೀರಕ್ಕೆ ಉಷ್ಣಸಂಬಂಧವಾದ ಉಪದ್ರವಗಳು ಉಂಟಾಗುವುದು. ದೇಹದ ಉಷ್ಣತೆಯನ್ನು ಸಮತ್ವಕ್ಕೆ ತರಲು ಹೆಸರುಬೇಳೆ [ಬುಧಗ್ರಹದ ಧಾನ್ಯ] ಹೆಸರುಬೇಳೆ ತಂಪು. ಕಡಲೆಬೇಳೆ [ಗುರುಗ್ರಹದ ಧಾನ್ಯ] ಶ್ರೀರಾಮಚಂದ್ರನು ವಿಷ್ಣುವಿನ ಅವತಾರ. ಆತನನ್ನು ಬುಧಗ್ರಹ ತಿಳಿಸುವುದು. ಶ್ರೀರಾಮಚಂದ್ರನ ಆಶೀರ್ವಾದ ಪಡೆಯಲು ಮತ್ತು ಗುರುವಿನ ಅನುಗ್ರಹ ಪಡೆಯಲು ಕೋಸಂಬರಿ ನಿವೇದನ ಮಾಡಿ ಸೇವಿಸುವ ಪರಿಪಾಠವಿದೆ.
ಇನ್ನು ಬಿಸಲ ಬೇಗೆಗೆ ಮನುಜ ದಣಿಯುತ್ತಾನೆ. ಶರೀರದಲ್ಲಿ ಗ್ಲುಕೋಸ್ನ ಅಂಶ ಕಡಿಮೆ ಆಗುವುದು. ಹಾಗಾಗಿ ಆ ಸಂದರ್ಭದಲ್ಲಿ ಬೆಲ್ಲದ ಪಾನಕ ಸೇವಿಸಿದರೆ ನವ ಚೈತನ್ಯವುಂಟಾಗುವುದು. ಬೆಲ್ಲ ಆಯುರ್ವೇದ ಪ್ರಕಾರ ಪಿತ್ತಹರ. ಆಂತೆಯೇ ನಮ್ಮ ಪ್ರಾಚೀನ ಹಿರಿಯರು ಮನೆಗೆ ಬಂದ ಅತಿಥಿಗಳಿಗೆ ತಿನ್ನಲು ಬೆಲ್ಲವನ್ನು ಕುಡಿಯಲು ನೀರನ್ನು ಕೊಡುತ್ತಿದ್ದರು.
ಶ್ರೀರಾಮ ನವಮಿ ಉಪವಾಸವಿಲ್ಲ:
ಶ್ರೀರಾಮ ನವಮಿಯಂದು 'ಶ್ರೀರಾಮ ಜಯಂತೀ' ಪ್ರಯುಕ್ತ ಶ್ರೀಕೃಷ್ಣ ಜನ್ಮಾಷ್ಟಮಿಯಂತೆ ಉಪವಾಸವನ್ನು ಮಾಡಬಾರದು. ಕಲಿಯುಗಕ್ಕೆ ಸಮೀಪವಾದ ಯಾವ ಯುಗದಲ್ಲಿ ಭಗವಂತನು ಅವತರಿಸಿರುವನೋ ಅಂದು ಮಾತ್ರ ಪುವಾಸ ಮಾಡಬೇಕು. ಈ ಕಲಿಯುಗಕ್ಕೆ ಸಮೀಪವಾದ ಶ್ರೀಕೃಷ್ಣಾವತಾರ ಇರುವುದರಿಂದ ಅಂದು ಮಾತ್ರ ಉಪವಾಸ ಮಾಡಬೇಕು.
ಶ್ರೀರಾಮ ಪೂಜಾ ವಿಧಾನ:
ವೇದಿಕೆಯಲ್ಲಿ ಅಷ್ಟದಳದ ಕಮಲವನ್ನು ಬರೆಯಬೇಕು. ಮಧ್ಯದಲ್ಲಿ ಕಲಶಸ್ಥಾಪನವನ್ನು ಮಾಡಿ ಅಗ್ನ್ಯತ್ತಾರಣ ಪೂರ್ವಕವಾಗಿ ಶ್ರೀರಾಮ ಪ್ರತಿಮೆಯನ್ನು ಕಲಶದೊಳಗೆ ಹಾಕಬೇಕು. 'ಓಂ ರಾಂ ರಾಮಾಯ ನಮಃ ಓಂ' ಎಂಬ ಮಂತ್ರದಿಂದ ಹಾಗೂ ವಿಷ್ಣು ಸೂಕ್ತದಿಂದ ಶ್ರೀರಾಮದೇವರನ್ನು ಆವಾಹಿಸಬೇಕು. ಅನಂತರ ವಸ್ತ್ರಾದಿ ಷೋಡೋಪಚಾರ ಪೂಜೆಯಿಂದ ಪೂಜಿಸಬೇಕು.
ಇದೇ ರೀತಿಯಾಗಿ ಶ್ರೀರಾಮ ಜನನಿಯಾದ ಕೌಸಲ್ಯೆಯನ್ನು ಮತ್ತು ದಶರಥನನ್ನು ಪೂಜಿಸಬೇಕೆಂದು ಶಾಸ್ತ್ರಕಾರರು ತಿಳಿಸಿರುತ್ತಾರೆ.
ರಾಮಸ್ಯ ಜನನೀ ಚಾಸಿ ರಾಮಾತ್ಮಕಮಿದಂ ಜಗತ್ |
ಅತಸ್ತಾಂಪೂಜಯಿಷ್ಯಾಮಿ ಲೋಕಮಾತರ್ನಮೋಸ್ತುತೇ ||
ಈ ಮೇಲಿನ ಮಂತ್ರದಿಂದ ಕೌಸಲ್ಯೆಯನ್ನು 'ಓಂ ನಮೋ ದಶರಥಾಯ' ಎಂದು ಶ್ರೀರಾಮನ ತಂದೆಯನ್ನು ಆವಾಹಿಸಿ ಪೂಜಿಸಬೇಕು. ಕಲಶದಲ್ಲಿ ತತ್ವನ್ಯಾ-ಮಾತೃಕಾನ್ಯಾಸ, ಆವರಣ ಪೂಜೆಗಳನ್ನು ಮಾಡಿ ವಿಶೇಷ ಸಾನ್ನಿಧ್ಯತೆಗಾಗಿ ಚತುರ್ವೇದ ಪಾರಾಯಣವನ್ನು ಮಾಡಿ ಪೂಜಿಸಬೇಕು. ಪೂಜೆಗಾಗಿ ತುಲಸಿ ಪತ್ರಗಳು, ಪುಷ್ಪಗಳು ವಿಶೇಷವಾಗಿ ದವನದಿಂದ ಪೂಜಿಸಬೇಕು. ಪಾನಕ ಕೋಸಂಬರಿ, ಬೇಲದ ಹಣ್ಣು, ನೀರು ಮಜ್ಜಿಗೆ ಫಲತಾಂಬೂಲಗಳನ್ನು ಶ್ರೀರಾಮನಿಗೆ ನಿವೇದಿಸಿ ಬ್ರಾಹ್ಮಣರಿಗೆ ಭೋಜನ ಮಾಡಿಸಿ ಪಾನಕಿ ನೀರುಮಜ್ಜಿಗೆ ಇವುಗಳಿಂದ ತೃಪ್ತಿ ಪಡಿಸಬೇಕು. ಜಲಘಟವನ್ನು, ಉದಕಪಾತ್ರೆಯನ್ನು ದಾನ ಮಾಡಬೇಕು. ವಿಷ್ಣು ಸಹಸ್ರನಾಮ ಪಠನ ರಾಮಾಯಣ ಪಾರಾಯಣ ಇತ್ಯಾದಿಗಳನ್ನು ಮಾಡಬೇಕು.
ವಿಷ್ಣು ಸಹಸ್ರನಾಮ ಪಾರಾಯಣ ಮಾಡಲು ಆಗದೇ ಇದ್ದವರು ಕೊನೆಪಕ್ಷ 'ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ| ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ|| ಎಂದು ಸಾಕ್ಷಾತ್ ಪರಮೇಶ್ವರನೇ ಪಾರ್ವತಿಯನ್ನು ಕುರಿತು ರಾಮನಾಮದ ಮಹತ್ವವನ್ನು ಸಾರಿರುವನು. ಆದ್ದರಿಂದ ಈ ಶ್ಲೋಕವನ್ನು ಹೇಳಬಹುದು. ರಾಮಮಂತ್ರವ ಜಪಿಸೋ ಹೇ ಮನುಜ ಆ ಮಂತ್ರ ಈ ಮಂತ್ರ ಎಂದು ನೆಚ್ಚಿ ನೀ ಕೆಡಬೇಡ ಎಂದು ದಾಸರು ಹಾಡಿದ್ದಾರೆ.
ಶ್ರೀರಾಮ ಜಯ ರಾಮ ಜಯ ಜಯ ರಾಮ - ಇದು 13 ಅಕ್ಷರದ ರಾಮತಾರಕ ಮಂತ್ರ. ಇದರ ದ್ರಷ್ಟಾರ ಸಾಕ್ಷಾತ್ ಆಂಜನೇಯ. ಈ ಮಂತ್ರದ ಚೇತನವೇ ಶ್ರೀರಾಮ. ಎಲ್ಲಿ ಹನುಮನೋ ಅಲ್ಲಿ ರಾಮನು ಎಂಬಂತೆ ಆಂಜನೇಯನನ್ನು ಆತನ ಭಕ್ತಾದಿಗಳು ಶನಿವಾರ ಪೂಜಿಸಿ ಫಲ ಪಡೆಯುವರು. ಅಂತೆಯೇ ಆಂಜನೇಯನ ಹೃದಯ ಕಮಲದಲ್ಲಿ ವಾಸವಾಗಿರುವ ಪ್ರಭು ಶ್ರೀರಾಮಚಂದ್ರನ ಪೂಜೆಯನ್ನು ಭಕ್ತಾದಿಗಳು ಮಾಡುವರು. ಆ ದಿನ ವಿಶೇಷವಾಗಿ ಸಪಾದ ಭಕ್ಷ್ಯವನ್ನು ಶ್ರೀರಾಮಚಂದ್ರನಿಗೆ ನಿವೇದನೆ ಮಾಡಿ ಶ್ರೀರಾಮ ಕಥೆಯನ್ನು ಓದುವ ಪರಿಪಾಠ ಶನಿವಾರ ದಿನ ಇಟ್ಟುಕೊಂಡಿರುವರು.
`ಶ್ರೀರಾಮ ಜಯ ರಾಮ ಜಯ ಜಯ ರಾಮ' ಇದು ರಾಮತಾರಕ ಮಂತ್ರ. ರಾಮತಾರಕ ಮಂತ್ರದಲ್ಲಿ ಒಂದು ಶ್ರೀಕಾರ ಮೂರು ಜಯಕಾರ ಮೂರು ರಾಮಗಳಿವೆ. ಶ್ರೀಕಾರಕ್ಕೆ ಶ್ರೇಯಸ್ಸು, ಯಶಸ್ಸು, ಅಗ್ನಿ, ಶಾಂತಿ, ತೇಜಸ್ಸು, ಸಂಪತ್ತು, ಐಶ್ವರ್ಯ ಲಕ್ಷ್ಮೀ ಎಂಬ ಮೊದಲಾದ ಅರ್ಥಗಳಿವೆ. ತಾರಕದ ಮೂರು ರಾಮನಾಮಗಳಲ್ಲಿ ಮೊದಲನೆಯದು ಧರ್ಮರೂಪವಾದ ಜೀವಭಾವ, ಮತ್ತೊಂದು ಸತ್ಯ ಸ್ವರೂಪವಾದ ಪರಬ್ರಹ್ಮಭಾವ, ಮತ್ತೊಂದು ರಾಮ ಪದವು ಸತ್ಯ ಸ್ವರೂಪವಾದ ರಾಮನನ್ನು ಜೀವರೂಪವಾದ ರಾಮನನ್ನು ಸೇರುವ ಪ್ರಜ್ಞಾಮಾರ್ಗ ಮೊದಲ ಜಯ ಧರ್ಮಕ್ಕೆ ಜಯ, ಎರಡನೆಯ ಜಯ ಇಹಲೋಕದ ಜಯ, ಮೂರನೆಯದು ಪಾರಾಮಾರ್ಥಕ ಜಯವಾಗಿದೆ.
ಶ್ರೀರಾಮ ತಾರಕ ಹೋಮ:
ಮೊದಲು ಪ್ರಾಣಾಯಮ ಸಂಕಲ್ಪವನ್ನು ಮಾಡಿ, ಸರ್ವತೋಭದ್ರ ಮಂಡಲದಲ್ಲಿ ಕಳಶ ಸ್ಥಾಪನೆ ಮಾಡಿ, ಶ್ರೀರಾಮತಾರಕ ಮಹಾಮಂತ್ರ ಹೋಮಾಖ್ಯಂ ಕರ್ಮ ಕರಿಷ್ಯೆ ಎಂದು ಪ್ರಾರ್ಥನೆ ಕಳಶಗಳಲ್ಲಿ ರಾಮ, ಸೀತಾ, ಲಕ್ಷ್ಮಣ, ಭರತ ಶತ್ರುಘ್ನ ಹಾಗೂ ಆಂಜನೇಯರ ಮಂತ್ರವನ್ನು ಹೇಳುತ್ತಾ ಪ್ರಾಣ ಪ್ರತಿಷ್ಠೆ ಮಾಡಬೇಕು.
ಈ ರಾಮತಾರಕ ಮಂತ್ರದಲ್ಲಿ 13 ಅಕ್ಷರಗಳಿದ್ದು, ಅಕ್ಷರ ಲಕ್ಷ ಅಂದರೆ 13 ಲಕ್ಷ ಮಂತ್ರ ಜಪಿಸಬೇಕು. ಕನಿಷ್ಠ 1008 ಬಾರಿಯಾದರೂ ಶ್ರೀರಾಮ ತಾರಕ ಮಂತ್ರ ಜಪಿಸಿ, ಅದರ ದಶಾಂಶ ಆಹುತಿಯನ್ನು ಹಾಕಬೇಕು. ಈ ಹೋಮದಲ್ಲಿ ತುಪ್ತ ಭತ್ತದ ಅರಳು ಮತ್ತು ಅರಳಿಮರದ ಸಮಿತ್ತುಗಳನ್ನು ಉಪಯೋಗಿಸಿ ಆಹುತಿಯನ್ನು ಹಾಕಬೇಕು. ನಂತರ ಹೋಮ ಮಾಡಿಸಿದ ಋತ್ವ್ರಿಕರಿಗೆ ದಕ್ಷಿಣೆ, ಫಲ ತಾಂಬೂಲ ಕೊಟ್ಟು ಅವರ ಆಶೀರ್ವಾದ ಪಡೆಯುವುದರಿಂದ ಶ್ರೀರಾಮಚಂದ್ರ ದೇವರ ಅನುಗ್ರಹವಾಗುವುದು.
ಆಚಾರ್ಯಮಧ್ವರ ತಂತ್ರಸಾರ ಗ್ರಂಥದ ಪ್ರಕಾರ :
ಶ್ರೀರಾಮಚಂದ್ರ ದೇವರ ಕುರಿತು 3 ಪ್ರಮುಖ ಮಂತ್ರಗಳನ್ನು ಉಲ್ಲೇಖಿಸಿದ್ದಾರೆ.
1. ರಾಮಷಡಾಕ್ಷರ ಮಂತ್ರ - ಓಂ ರಾಂ ರಾಮಾಯನಮಃ
2. ಅಷ್ಟಾಕ್ಷರ ರಾಮ ಮಂತ್ರ - ಓಂ ರಾಂ ರಾಘವಾಯನಮಃ
3. ಏಕಾಕ್ಷರ ರಾಘವ ಮಹಾಮಂತ್ರ - ಓಂ ರಾಂ ಓಂ.
ಒಂದು ಮಂತ್ರದ ಜಪ ಮಾಡಬೇಕೆಂದರೆ ಮೊಟ್ಟಮೊದಲು ಆ ಮಂತ್ರಸಿದ್ದಿಗಾಗಿ ದ್ವಾದಶ ಗುರುಗಳಿಗೆ ನಮಸ್ಕಾರ ಮಾಡಬೇಕು. ನಂತರ ಪ್ರಾಣಾಯಾಮ, ಅಂಗನ್ಯಾಸ-ಕರನ್ಯಾಸ- ವರ್ಣನ್ಯಾಸ - ಅಂಗುಲಿನ್ಯಾಸಗಳನ್ನು ಮಾಡಿಕೊಳ್ಳಬೇಕು. ಆನಂತರ ಆ ಮಂತ್ರದ ಋಷಿ ಛಂದಸ್ಸು ಮತ್ತು ದೇವತೆಗಳನ್ನು ಸ್ಮರಿಸಿ ಮಂತ್ರದೇವತೆಯ ಧ್ಯಾನ ಮಾಡಬೇಕು. ಮಂತ್ರ ಜಪ ಮಾಡಿದ ನಂತರ ಹಿಂದಿನಂತೆ ಪ್ರಾಣಾಯಾಮ, ನ್ಯಾಸಾದಿಗಳನ್ನು ಮಾಡಿ ಜಪವನ್ನು ಸಮಾಪ್ತಿ ಮಾಡಬೇಕು. ಇಲ್ಲಿ ಕೇವಲ ರಾಮಷಡಕ್ಷರಿ ಮಂತ್ರದ ಕ್ರಮವನ್ನು ಬರೆಯಲಾಗಿದೆ.
ಷಡಕ್ಷರದಾಶರಥಿರಾಮಮಹಾಮಂತ್ರಃ
ಶ್ರೀಗುರುಭ್ಯೋನಮಃ|ಎಕಾದಶಸ್ಥಾನೇ ಶ್ರೀದಾಶರಥಿರಾಮಾಯನಮಃ || ಓಂರಾರಾಮಾಯ ನಮಃಓಂ| ಇತಿ ಮಂತ್ರೇಣಾ ಪ್ರಾನಾಯಮಃ| ಓಂ ರಾಂ ಹೃದಯಾಯನಮಃ | ಓಂ ರಾಂ ಶಿರಸೇಸ್ವಾಹಾ | ಓಂ ಮಾಂ ಶಿಖಾಯೈವೌಷಟ್| ಓಂ ಯಂ ಕವಚಾಯ ಹುಂ | ಓಂ ನಂನೇತ್ರಾಭ್ಯಾಂ ವಷಟ್ | ಓಂ ಮಃ ಅಸ್ತ್ರಾಯ ಫಟ್ | ಓಂ ಭೂರ್ಭುವಸ್ವರೋಂ ಇತಿ ದಿಗ್ಭಂಧಃ || ಅಸ್ಯ ಷಡಕ್ಷರದಾಶರಥಿರಾಮ ಮಹಾಮಂತ್ರಸ್ಯ ಬ್ರಾಹ್ಮಾಋಷಿಃ | ದೈವೀ ಗಾಯತ್ರೀ ಛಂದಃ ಮುಖೇ | ಶ್ರೀದಾಶರಥಿರಾಮೋ ದೇವತಾ ಹೃದಯೇ | ಜಪೇವಿನಿಯೋಗಃ | ಧ್ಯಾನಂ- ಶ್ಯಾಮಂ ರವೀಂದ್ವಮಿತದೀಧಿತಿಕಾಂತಿಯುಕ್ತಂ ಜ್ಞಾನಂ ಶರಂಚ ದಧತಂ ಪ್ರಿಯಯಾ ಸಮೇತಂ | ಸ್ವಾತ್ಮಸ್ವರೂಪಮಮಿತಂ ಹನುಮನ್ಮುಖೇಷು ಸಂದರ್ಶಯಂತಮಮಿತಂ ಸ್ಮರತೋರು ಗೀರ್ಭಿಃ|| ಮುಖ್ಯಪ್ರಾಣಾಂತರ್ಗತ ಶ್ರೀದಾಶರಥಿ ರಾಮ ಪ್ರೇರಣಯಾ ಶ್ರೀದಾಶರಥಿರಾಮ ಪ್ರೀತ್ಯರ್ಥಂಷಡಕ್ಷರರಾಮಮಹಾಮಂತ್ರಜಪಂಕರಿಷ್ಯೇ | ಓಂರಾಂರಾಮಾಯನಮಃ ಓಂ| ಇತಿ ಮಂತ್ರಜಪಃ | ಪುನಃ ಮಂತ್ರೇಣ ಪ್ರಾಣಾಯಾಮಃ | ಷಡಂಗನ್ಯಾಸಃ | ಋಷ್ಯಾದಿನ್ಯಾಸಃ| ಧ್ಯಾನಂಚಃ ಮುಖ್ಯಪ್ರಾಣಾಂತರ್ಗತ ದಾಶರಥಿರಾಮಪ್ರೇರಣಯಾ ಶ್ರೀದಾಶರಥಿರಾಮಪ್ರೀತ್ಯರ್ಥಂ ಷಡಕ್ಷರ ದಾಶರಥಿ ರಾಮಮಹಾಮಂತ್ರಜಪಃಸಂಪೂರ್ಣಂ| ಓಂರಾಂ ರಾಮಾಯನಮಃ ಓಂ| ದಾಶರಥಿರಾಮಂ ತರ್ಪಯಾಮಿ| ಇತಿ ಷಡಕ್ಷರೋ ದಾಶರಥಿರಾಮಮಂತ್ರಃ||15||
ಶ್ರೀರಾಮಚಂದ್ರನ ಬಗ್ಗೆ ಇರುವಷ್ಟು ಮಂತ್ರವು ಬೇರೆ ಯಾರಿಗೂ ಇಲ್ಲ. ರಾಮಮಂತ್ರಗಳ ವಿಸ್ತೃತತೆ, ಆಶ್ಚರ್ಯ ಹುಟ್ಟಿಸುತ್ತದೆ. ಏಕಾಕ್ಷರೀ 'ರಾಂ' ಎಂಬ ಮಂತ್ರದಿಂದ ದ್ವಾತ್ರಿಂಶತಿ [32] ಅಕ್ಷರವುಳ್ಳ 'ರಾಮಾಯ ರಾಮಭದ್ರಾಯ..... ಎಂಬ ಮಂತ್ರವು ಜಗತ್ತಿನಲ್ಲಿ ಪ್ರಚುರಗೊಂಡಿದೆ. ಒಂದು ವಿಶೇಷವೆಂದರೆ ಪ್ರತಿಯೊಬ್ಬ ವ್ಯಕ್ತಿಯು ಎದುರುಗಡೆ ಭೇಟಿ ಆದಾಗ 'ರಾಂ ರಾಂ' ಎಂತಲೇ ಉತ್ತರ ಭಾರತದ ಜನ ಶ್ರೀರಾಮನನ್ನು ಹೃದಯ ಮಂದಿರದಲ್ಲಿ ಸ್ಥಾಪಿಸಿದ್ದಾರೆ. ಒಂದು ಕೆಟ್ಟ ಘಟನೆ ನಡೆದರೂ ಅಯ್ಯೋ ರಾಮ... ಎಂತಲೇ ನಾವು ತಲೆಯನ್ನು ಕೈಯಿಂದ ಒತ್ತಿಕೊಳ್ಳುತ್ತೇವೆ. ಶ್ರೀಮಹಾತ್ಮ ಗಾಂಧೀಜಿಯವರು ಶ್ರೀರಾಮನ ಪರಮ ಭಕ್ತರಾಗಿ ಅಂತ್ಯಕಾಲದಲ್ಲಿ ರಾಮನನ್ನೆ ಸ್ಮರಿಸಿದ್ದಾರೆ.
ಒಟ್ಟಾರೆಯಾಗಿ ಶ್ರೀರಾಮನೆಂದರೆ ನಮ್ಮ ಹೃದಯ ಸಿಂಹಾಸನದಲ್ಲಿ ವಿರಾಜಿತನಾಗಿರುವ ಚೈತನ್ಯ ಪ್ರಜ್ಞೆ. ಸರ್ವವ್ಯಾಪಕನಾದ ಪರಮಾತ್ಮನು ಒಂದು ಜೀವಕೋಶದಲ್ಲಿ ಅಂತರ್ಯಾಮಿಯಾಗಿ ಸಂಭವಿಸಿದಾಗ ಪರಮಾತ್ಮನ 'ಅವತಾರ' ಎನ್ನಬಹುದು. 'ರಾಮ' ಎಂಬ ನಾಮದ ಶಕ್ತಿಯು ಅತ್ಯದ್ಭುತವಾದದ್ದು. 'ರಾ' ಎಂಬ ಅಕ್ಷರವು ನಾರಾಯಣ ಎಂಬುದರ ದ್ಯೋತಕವಾಗಿಯೂ, 'ಮ' ಎಂಬ ಅಕ್ಷರವು ಶಿವನ ಸಂಕೇತವಾಗಿಯೂ ಇದ್ದು, ರಾಮ ಎಂಬ ನಾಮವು ಹರಿಹರರಿಬ್ಬರ ಏಕತ್ವದ ಸಂಕೀತವಾಗಿದೆ.
ಚರಿತಂ ರಘುನಾಥಸ್ಯ ಶತಕೋಟಿಪ್ರವಿಸ್ತರಂ
ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾಶನಂ
ಎಂದು ಶ್ರೀ ವಾಲ್ಮೀಕಿ ಋಷಿಗಳು ಹೇಳುವಂತೆ ರಘುನಾಥನೂ, ರಘುವಂಶ ಪ್ರದೀಪನೂ, ರಘೂಕುಲೋದ್ಭವನೂ, ರಘುವಂಶ ತಿಲಕನು, ಮರ್ಯಾದಾ ಪುರುಷೋತ್ತಮ ಆದ ಶ್ರೀರಾಮಚಂದ್ರನ ಕುರಿತು ಬರೆಯುತ್ತಾ/ ಹೇಳುತ್ತಾ ಹೋದರೆ ಶತಕೋಟಿಯಷ್ಟು ವಿಸ್ತಾರವಾಗುವುದು. ಆದರೂ ರಾಮಪದದ ಒಂದೇ ಒಂದು ಅಕ್ಷರವನ್ನು ಮಾನವನು ಅನುಸಂಧಾನ ಮಾಡಿದರೂ ಸಾಕು. ಮಹಾಪಾತಕಗಳು ನಾಶವಾಗಿ ಪುಣ್ಯಲೋಕವನ್ನು ಹೊಂದುವರು. ಅಂತಹ ಶ್ರೀರಾಮಚಂದ್ರನು ನಮ್ಮನ್ನು ರಕ್ಷಿಸಲಿ. / ಆಶೀರ್ವದಿಸಲಿ.
ಜೈಶ್ರೀರಾಮ್
- ಡಾ. ಸಿ.ಕೆ. ಆನಂದತೀರ್ಥಾಚಾರ್, ದಾವಣಗೆರೆ
ಲೇಖಕರ ಸಂಕ್ಷಿಪ್ತ ಪರಿಚಯ
ಡಾ. ಸಿ.ಕೆ. ಆನಂದತೀರ್ಥಾಚಾರ್ ರವರು 22-02-1962ರಲ್ಲಿ ಶ್ರೀಮತಿ ಲಕ್ಷ್ಮೀಬಾಯಿ ಮತ್ತು ಶ್ರೀ ಸಿ.ಕೆ. ನಾರಾಯಣಮೂರ್ತಾಚಾರ್ರ ಪುತ್ರನಾಗಿ ಜನಿಸಿರುತ್ತಾರೆ. ಇವರು ಡಿಪ್ಲೋಮಾ ಸಿವಿಲ್ ಇಂಜಿನಿಯರಿಂಗ್ ಮಾಡಿಕೊಂಡು ವಂಶಪಾರಂಪರ್ಯದಿಂದ ಬಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಅಧ್ಯಯನ ನಡೆಸಿ ಅನೇಕ ಪ್ರಶಸ್ತಿ-ಬಿರುದುಗಳನ್ನು ಪಡೆದಿರುವರು. 2016ರಲ್ಲಿ ಯೋಗ ಸಂಸ್ಕೃತ ವಿಶ್ವವಿದ್ಯಾಲಯ ಫ್ಲೋರಿಡಾದಿಂದ ``ಅವುತ್ರಸ್ಯ ಗತಿರ್ನಾಸ್ತಿ'' ಎಂಬ ವಿಷಯ ಮಂಡನೆಗೆ ಡಾಕ್ಟರೇಟ್ ಪದವಿ ಪಡೆದಿರುವರು.
ಇವರು ಸಂಸ್ಕಾರ ಸೌರಭ, ಗಜಕೇಸರಿ ಯೋಗ, ಭಾಗವತ ಮತ್ತು ಪುಷ್ಪವತೀ ಭವ, ಹುಟ್ಟುಹಬ್ಬದ ಆಚಾರ ವಿಚಾರಗಳು ಎಂಬ ಪುಸ್ತಕಗಳನ್ನು ಬರೆದಿರುವರು. ಸ್ಥಳೀಯ ಮತ್ತು ರಾಷ್ಟ್ರೀಯ ಪತ್ರಿಕೆಗಳಿಗೆ ಆಗಾಗ್ಗೆ ಲೇಖನಗಳು ಬರೆಯುತ್ತಿರುವರು. ಪ್ರಸ್ತುತ ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿಯಾಗಿಯೂ ಮತ್ತು ದಾವಣಗೆರೆ ತಾಲ್ಲೂಕು ಬ್ರಾಹ್ಮಣ ಸಮಾಜದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವರು.
ವಿಳಾಸ :
ಡಾ. ಸಿ.ಕೆ. ಆನಂದತೀರ್ಥಾಚಾರ್
ಪ್ರೊಫೆಸರ್ ಇನ್ ವೇದಾಂಗ ಜ್ಯೋತಿಷ್ಯ ಮತ್ತ ವಾಸ್ತು ತಜ್ಞರು
# 361, ಮೊದಲ ಮಹಡಿ, 2ನೇ ಮುಖ್ಯರಸ್ತೆ, 4ನೇ ತಿರುವು,
ದೀಕ್ಷಿತ್ ರಸ್ತೆ, ಕೆ.ಬಿ. ಬಡಾವಣೆ, ದಾವಣಗೆರೆ - 577 002.
ಮೊ: 94489 24239 / 80735 37647
E-mail: ckachar62@gmail.com
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ