ಮಾರ್ಚ್ 8: ಅಂತರರಾಷ್ಟ್ರೀಯ ಮಹಿಳಾ ದಿನ

Upayuktha
0



ಇಂದಿನ ಸಮಕಾಲೀನ ಜಗತ್ತು ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಆದ್ಯತೆಯನ್ನು ನೀಡುತ್ತದೆ. ಸಾಮಾಜಿಕ, ಆರ್ಥಿಕ, ರಾಜಕೀಯ, ಐತಿಹಾಸಿಕ, ಸಾಂಸ್ಕೃತಿಕ, ವೈಚಾರಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಇಪ್ಪತ್ತೊಂದನೇ ಶತಮಾನದ ಜಗತ್ತು ಸ್ಪರ್ಧಾತ್ಮಕಯ ಯುಗವೆನಿಸಿದ್ದು, ಆಧುನಿಕ ಮಹಿಳೆ ಕಾಲಿಡದ ಕ್ಷೇತ್ರಗಳೇ ಇಲ್ಲವೆನ್ನಬಹುದು. ಒಂದೆಡೆ ಮಹಿಳೆಯ ಸ್ಥಾನಮಾನಗಳು ಉತ್ತುಂಗ ಶಿಖರಕ್ಕೆ ಏರುತ್ತಿದೆ, ಆದರೆ ಮತ್ತೊಂದೆಡೆ ಶೋಚನೀಯ ಸ್ಥಿತಿಯಲ್ಲೂ ಇದೆ ಎಂದರೆ ತಪ್ಪಾಗಲಾರದು. 



ಪುರುಷ ಇಡೀ ಹಗಲು ಒಂದಲ್ಲಾ ಒಂದು ಉದ್ಯೋಗದಲ್ಲಿ ತೊಡಗಿದರೆ ಮಹಿಳೆ ಹಗಲಿರುಳೂ ಒಂದಲ್ಲಾ ಒಂದು ಉದ್ಯೋಗದಲ್ಲಿ ತೊಡಗಿರುತ್ತಾಳೆ. ಮಹಿಳೆಯೂ ಹಲವು ಉಪಯುಕ್ತ ಆರ್ಥಿಕ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಕುಟುಂಬದ ಪೋಷಣೆಗೆ ಆಧಾರ ಸ್ತಂಭವಾಗಿದ್ದಾಳೆ. ಮನೆಯ ಹೊರಗೂ ಮತ್ತು ಒಳಗೂ ದುಡಿಮೆ ಮಾಡುತ್ತ ಕುಟುಂಬವನ್ನು ಬಿಗಿಯಾಗಿ ಹಿಡಿದಿಡುವಲ್ಲಿ ಮಹಿಳೆಯರ ಪಾತ್ರವೇ ಹೆಚ್ಚಾಗಿದೆ. ಇಂತಹ ಹೆಣ್ಣು ಆಗಾಗ ಅಲ್ಲಲ್ಲಿ ಅವಮಾನ, ದೌರ್ಜನ್ಯ, ನಿಂದನೆಗಳಿಗೆ ಒಳಗಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಅದಕ್ಕಾಗಿಯೇ ಕವಿಯತ್ರಿ ಸಂಚಿಯ ಹೊನ್ನಮ್ಮ ಹೀಗೆಂದಿದ್ದಾರೆ.


ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ

ಪೆಣ್ಣಲ್ಲವೆ ಪೊರೆದವಳು

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು

ಕಣ್ಣು ಕಾಣದ ಗಾವಿಲರು?

ನಮ್ಮೆಲ್ಲರನ್ನು ಹಡೆದವಳು ಹೆಣ್ಣಲ್ಲವೆ? ಕಾಪಾಡಿದವಳು ಹೆಣ್ಣಲ್ಲವೆ? ಹೀಗಿರುವಾಗ ಹೆಣ್ಣು ಹೆಣ್ಣು ಎಂದು ಯಾಕೆ ನಿಕೃಷ್ಟರಾಗಿ ಕಾಣುತ್ತಾರೋ ಕಣ್ಣು ಕಾಣದ ಈ ಮೂರ್ಖರು, ಎಂಬ ಮಾತನ್ನು ಸಂಚಿಯ ಹೊನ್ನಮ್ಮ ತನ್ನ ಕೃತಿ 'ಹದಿಬದೆಯ ಧರ್ಮ' ಎಂಬುದರಲ್ಲಿ ಹೇಳಿದ್ದಾರೆ. ಮುಖ್ಯವಾಗಿ ಈ ಮಾತುಗಳಲ್ಲಿ ಗಂಡಸರನ್ನು ತರಾಟೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಪರಂಪರಾಗತವಾಗಿ ಹೆಣ್ಣಿನ ಬಗ್ಗೆ ಒಂದು ಬಗೆಯ ಕೀಳು ಭಾವನೆಯನ್ನು ಬೆಳೆಯಿಸಿದ ಮನೋಧರ್ಮವನ್ನು ಹೊನ್ನಮ್ಮ ಖಂಡಿಸಿದ ಈ ಮಾತು ಹೊಸತಾಗಿದೆ. ಪ್ರತಿ ಪುರುಷನ ಯಶಸ್ಸಿನ ಅವಿಭಾಜ್ಯ ಅಂಗ ಹೆಣ್ಣು ಎಂಬುದನ್ನು ಮರೆಯುವಂತಿಲ್ಲ.




ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ

ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ||


ಈ ಸಂಸ್ಕೃತ ಸಾಲುಗಳ ಅರ್ಥವೇನೆಂದರೆ ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಎಲ್ಲಿ ಸ್ತ್ರೀಯರು ಅವಮಾನಗೊಳಿಸಲ್ಪಡುತ್ತಾರೊ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂದು. ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ. ಪ್ರಕೃತಿಯನ್ನು, ಭೂಮಿಯನ್ನು, ನದಿಗಳನ್ನು, ಪರ್ವತಗಳನ್ನು ಅಷ್ಟೇ ಅಲ್ಲ ಈ ಪ್ರಪಂಚದ ಅತ್ಯಂತ ಶ್ರೇಷ್ಠ ಸಂಗತಿಗಳೆಲ್ಲವನ್ನೂ ಹೆಣ್ಣೆಂದು ಭಾವಿಸಿಯೇ ಗೌರವಿಸುವುದು ಭಾರತೀಯ ಪರಂಪರೆಯ ಶ್ರೇಷ್ಠತೆ. ಈ ಪ್ರಕೃತಿ ಮಾತೆ ಹೆಣ್ಣು. ಈ ಭೂಮಿ ಹೆಣ್ಣು. ನಮ್ಮ ಭಾರತ ಮಾತೆ ಹೆಣ್ಣು. ನಮ್ಮ ಕನ್ನಡ ಮಾತೆ ಹೆಣ್ಣು ಎಂದು ಹೋಲಿಕೆಗಳನ್ನು ಮಾಡಿ ಯಾವಾಗಲೂ ಹೇಳುತ್ತೇವೆ. ಹೆಣ್ಣು ಸಂಸಾರದ ಕಣ್ಣು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ. ಏಕೆಂದರೆ ವಿಶ್ವದ ಅಧಿದೇವತೆ ಹೆಣ್ಣು, ವಿಶ್ವ ಮಾತೆ ಹೆಣ್ಣು.




ಪ್ರತೀ ವರ್ಷ ಮಾರ್ಚ್ ಎಂಟನೇ ದಿನಾಂಕದಂದು ಜಗತ್ತಿನಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ವಿಶ್ವದೆಲ್ಲೆಡೆ ಈ ದಿನದಂದು ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಮೊಳಗಿಸಿದರು. ಈ ದಿನದಂದು ವಿಶ್ವದ ಎಲ್ಲೆಡೆ ಮಹಿಳಾ ಸಂಘ ಸಂಸ್ಥೆಗಳು ಅಂತರರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸುವ ವಿಶೇಷ ಸಂದರ್ಭವಾಗಿದೆ. ಏಕೆಂದರೆ ಈ ಭೂಮಿಯ ಮೇಲಿನ ಜೀವ ರಾಶಿಗಳಲ್ಲಿ ಸ್ತ್ರೀ ಅಂದರೆ ಮಹಿಳೆ ಓರ್ವ ಮಹಾನ್ ಚೇತನ. ಸೃಷ್ಟಿ , ಸ್ಥಿತಿ, ಲಯ ಅಂದರೆ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಪಾಲಿಸುವವಳು. ತ್ರಿಮೂರ್ತಿಗಳನ್ನೂ ಮೀರಿದ ಶಕ್ತಿ ಹೊಂದಿರುವವಳು. ಋಷಿ ಮುನಿಗಳು, ಸಾಧು ಸಂತರು, ವರ್ಧಮಾನ ಮಹಾವೀರ, ಗೌತಮ ಬುದ್ಧ, ಯೇಸು ಕ್ರಿಸ್ತ, ಮಹಮ್ಮದ್ ಪೈಗಂಬರ್, ತತ್ವ ಜ್ಞಾನಿಗಳು, ಆಚಾರ್ಯತ್ರಯರು, ಶಿವಶರಣರು, ದಾಸವರೇಣ್ಯರು, ಸಮಾಜ ಸುಧಾರಕರು ಅಷ್ಟೇ ಏಕೆ ಇಡೀ ವಿಶ್ವದ ಮಾನವ ಸಂಕುಲದ ಮೂಲ ಮಹಿಳೆಯೇ ಆಗಿದ್ದಾಳೆ. ಹಾಗಾಗಿ ಜಾಗತಿಕ ಮಟ್ಟದಲ್ಲಿ ಮಹಿಳೆಯ ಮಹತ್ವವನ್ನು ಕುರಿತು ಸರ್ವರೂ ತಿಳಿದುಕೊಳ್ಳಲು ಹಾಗೂ ಮಹಿಳಾ ಹಕ್ಕುಗಳ ಸಂರಕ್ಷಣೆ, ಪೋಷಣೆ ಮಾಡಲು ವಿಶ್ವ ಸಂಸ್ಥೆಯು ಕ್ಯಾಲೆಂಡರ್ ವರ್ಷದಲ್ಲಿನ ದಿನಾಂಕವೊಂದನ್ನು ನಿಗದಿಮಾಡಿದೆ, ಅದೇ ಮಾರ್ಚ್ ಎಂಟು. 




ಈ ಪ್ರಕೃತಿ ಮಾತೆ ಹೆಣ್ಣು. ವಿಶ್ವ ಕುಟುಂಬದ ಸಕಲ ಜೀವಸಂಕುಲಗಳನ್ನು ಸಾಕುವವಳು ಹೆಣ್ಣು ಈ ವಿಶ್ವ ಮಾತೆ. ಆದ್ದರಿಂದಲೇ ಹೆಣ್ಣನ್ನು ಭೂಮಿಗೆ ಹೋಲಿಸಲಾಗಿದೆ. ಏಕೆಂದರೆ ಭೂಮಿಯಷ್ಟು ತಾಳ್ಮೆ ಹೊಂದಿರುವವಳು ಈ ಸಹನಾಮೂರ್ತಿ. ಭೂಮಿ ತೂಕದ ಹೆಣ್ಣು ಎಂದು ಹೇಳಲಾಗುತ್ತದೆ. ಮಾರ್ಚ್ ಎಂಟರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಯೂರೋಪ್ ಖಂಡದಾದ್ಯಂತ ಕಾರ್ಮಿಕರ ಹೋರಾಟದ ಜೊತೆ ಜೊತೆಗೇ ಮಹಿಳೆಯರ ಸಮಾನತೆಯ ಬೇಡಿಕೆಯ ಧ್ವನಿಯೂ ಮೊಳಗಿತು. ಮಹಿಳಾ ಚಳುವಳಿಯ ಮೊಟ್ಟಮೊದಲ ನಾಯಕಿ ಕ್ಲಾರಾ ಜೆಟ್‌ ಕಿನ್ ರವರು ಕ್ರಿ.ಶ.1889 ರಲ್ಲಿ ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ನಡೆದ ಅಂತರರಾಷ್ಟ್ರೀಯ ಕಾರ್ಮಿಕರ ಸಮಾವೇಶದಲ್ಲಿ ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ನೀಡಬೇಕೆಂಬ ಬೇಡಿಕೆಯನ್ನು ಮಂಡಿಸಿದರು. ಜಾಗತಿಕ ಮಟ್ಟದ ವೇದಿಕೆ ಯೊಂದರಲ್ಲಿ ಮಹಿಳೆಯರ ಹಕ್ಕುಗಳ ಕುರಿತು ಬಹಿರಂಗವಾಗಿ ಮಾತನಾಡಿದ್ದು ಅದೇ ಮೊದಲ ಬಾರಿಯಾಗಿತ್ತು. ನಂತರ ಕ್ರಿ.ಶ. 1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು. 




ಅಮೆರಿಕಾ ನ್ಯೂಯಾರ್ಕ್ ನ ಜವಳಿ ಉದ್ಯಮಗಳಲ್ಲಿ ಪುರುಷರು ಮತ್ತು ಮಹಿಳೆಯರು ಸರಿಸಮಾನವಾಗಿ ದುಡಿಯುತ್ತಿದ್ದರು. ಆದರೆ ಪುರುಷರಿಗೆ ನೀಡುವಷ್ಟು ಸಮಾನ ವೇತನವನ್ನು ಮಹಿಳೆಯರಿಗೆ ನೀಡುತ್ತಿರಲಿಲ್ಲ. ಮಹಿಳೆಯರಿಗೆ ಕಡಿಮೆ ಕೂಲಿ ನೀಡಲಾಗುತ್ತಿತ್ತು. ಕ್ರಿ.ಶ.1908 ರ ಮಾರ್ಚ್ 8 ರಂದು ಸಮಾನ ವೇತನಕ್ಕಾಗಿ ಹೋರಾಟ ಪ್ರಾರಂಭವಾಯಿತು. ಕ್ರಿ.ಶ.1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ಜೈಲು ಸೇರಿದರು. ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಕೆಲಸಗಾರರನ್ನು ಬಿಡಿಸಿಕೊಂಡರು. ನಿಗಧಿತ ಅವಧಿಯ ಕೆಲಸ ಮತ್ತು ಮತ ಚಲಾಯಿಸುವ ಹಕ್ಕುಗಳಿಗಾಗಿ ಪ್ರಬಲ ಹೋರಾಟವೇ ಪ್ರಾರಂಭವಾಯಿತು. ಆಡಳಿತ ವರ್ಗವು ಮಹಿಳೆಯರ ಹೋರಾಟವನ್ನು ದಮನಗೊಳಿಸಲು ಅದೆಷ್ಟೇ ಪ್ರಯತ್ನಿಸಿದರೂ, ಕ್ರೂರ ಮತ್ತು ಅಮಾನವೀಯ ಕ್ರಮಗಳನ್ನು ಕೈಗೊಂಡರೂ ಮಹಿಳೆಯರು ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳಲಿಲ್ಲ. 




ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದರು. ಕ್ರಿ.ಶ. 1910 ರ ಆಗಸ್ಟ್‌ ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದರು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು. ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ಕ್ರಿ.ಶ.1911 ರಲ್ಲಿ ನಿರ್ಣಯ ಮಂಡಿಸಿದರು. 




ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್‌ಕಿನ್‌ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.ಕ್ರಿ.ಶ.1911ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ "ಅಂತರಾಷ್ಟ್ರೀಯ ಮಹಿಳೆಯರ ದಿನ" ವನ್ನು ಆಚರಿಸುತ್ತಾರೆ. ಕ್ರಿ.ಶ.1936 ರ ಮಾರ್ಚ್ 8 ರಂದು ಸ್ಪೇನ್‌ ನಲ್ಲಿ ಸುಮಾರು ಎಂಭತ್ತು ಸಾವಿರ ಮಹಿಳೆಯರು ಫ್ರಾನ್ಸ್ ನ ಸರ್ವಾಧಿಕಾರಿ ದೊರೆ ಮತ್ತು ಅವನ ಆಡಳಿತವನ್ನು ವಿರೋಧಿಸಿ ಮೆರವಣಿಗೆ ನಡೆಸಿದರು. ಇರಾನ್ ನಲ್ಲೂ ಜವಳಿ ಉದ್ಯಮದ ಸುಮಾರು ಐವತ್ತು ಸಾವಿರ ಮಹಿಳೆಯರು ತೈಲೋದ್ಯಮವನ್ನು ರಾಷ್ಟ್ರೀಕರಣ ಮಾಡಬೇಕೆಂದು ಒತ್ತಾಯ ಮಾಡಿ ಹೋರಾಟ ನಡೆಸಿದರು. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ಕ್ರಿ.ಶ.1975 ರ "ಅಂತರಾಷ್ಟ್ರೀಯ ಮಹಿಳೆಯರ ದಿನ"ದ ಸಮಯದಲ್ಲಿ, ಮಾರ್ಚ್ 8 ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದವು. 




ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ , ಅದು ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲದರಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. 1993 ರಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಆಕರ್ಷಕವಾಗಿ ಹಾಗೂ ಪ್ರಭಾವಯುತವಾಗಿ ಆಚರಿಸಲಾಯಿತು. ಹೀಗಿರುವಾಗ ಮಹಿಳೆಯರಿಗೆ ಸಮಸ್ಯೆಗಳು ಪ್ರಪಂಚದ ಯಾವುದೋ ಒಂದು ಕಡೆ ಮಾತ್ರ ಇರದೆ ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ಇವೆ. ಅವುಗಳ ನಿವಾರಣೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಹರಿಸಬೇಕಾಗುತ್ತದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಬೇಕಾಗುತ್ತದೆ. ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯನ್ನು ಕಟ್ಟುನಿಟ್ಟಾಗಿ, ಕಾನೂನಾತ್ಮಕವಾಗಿ ನಿಷೇಧಿಸಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಮಹಿಳೆಯರು ಶಿಕ್ಷಿತರಾಗಿ ತಿಳಿವಳಿಕೆಯುಳ್ಳವರಾಗಬೇಕು.




 ಆಶೆ ಆಮಿಷಗಳಿಗೆ ಒಳಗಾಗಿ ತಮ್ಮ ಜೀವ ಮತ್ತು ಜೀವನಕ್ಕೆ ಸಂಚಕಾರ ತಂದುಕೊಳ್ಳದಂತೆ ಸ್ವತಃ ಮಹಿಳೆಯರೇ ಎಚ್ಚರಿಕೆ ವಹಿಸಬೇಕು. ವರದಕ್ಷಿಣೆಯಂತಹ ಹೇಯ ಆಚರಣೆಗಳನ್ನು ದೂರ ಮಾಡಲು ದೃಢ ಸಂಕಲ್ಪ ಮಾಡಬೇಕು. ಪುರುಷ ಸಮಾಜವು ವರದಕ್ಷಿಣೆ ನಿಷೇಧಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು. ಮಹಿಳೆಯರ ಆರೋಗ್ಯ ಸುಧಾರಣೆಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿ, ವಿವಿಧ ರೀತಿಯ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಮಾಜದ ಸರ್ವರೂ ಕೈಜೋಡಿಸೋಣ. ಮಹಿಳೆಯರ ಸ್ಥಾನಮಾನಗಳಿಗೆ ಕುಂದುಂಟಾಗದಂತೆ ನಡೆದುಕೊಳ್ಳೋಣ. ಹೆಣ್ಣಿಗೆ ಹೆಣ್ಣೇ ಶತೃ ಎಂಬ ಹೇಳಿಕೆಗಳು ದೂರವಾಗಬೇಕಾದರೆ ಮಾನಸಿಕ ಬದಲಾವಣೆ ಅವಶ್ಯಕ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಮಹಿಳಾ ಸಮಾನತೆಗೆ ಜಗತ್ತಿನ ಜನರೆಲ್ಲರೂ ಕೈಜೋಡಿಸಬೇಕಿದೆ. ಮಹಿಳೆಯರ ಸ್ಥಾನಮಾನ ಸುಧಾರಣೆಯ ದೃಷ್ಟಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಪ್ರತಿವರ್ಷವೂ ಒಂದೊಂದು ಘೋಷವಾಕ್ಯವನ್ನು ನೀಡುವ ಮುಖೇನ ವಿಶ್ವದ ಎಲ್ಲಾ ರಾಷ್ಟ್ರಗಳು ಆ ಘೋಷವಾಕ್ಯವನ್ನು ಅನುಪಾಲನೆ ಮಾಡಲು ಸೂಚಿಸುತ್ತದೆ. 




ಇಂದು ನಾವು ಆಧುನಿಕ ವೈಜ್ಞಾನಿಕ ತಂತ್ರಜ್ಞಾನದ ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಇಪ್ಪತ್ತೊಂದನೇ ಶತಮಾನದ ಸಂಕೀರ್ಣ ಜಗತ್ತು ವಿಶ್ವ ಗ್ರಾಮವೆನಿಸಿದೆ. ಶಿಕ್ಷಣ ತಜ್ಞರಾದ ರಾಧಾಕೃಷ್ಣನ್ ರವರು ಹೇಳುವಂತೆ " ಮಾನವ ಇಂದು ಆಕಾಶದಲ್ಲಿ ಹಕ್ಕಿಯಂತೆ ಹಾರುವುದನ್ನು ಕಲಿತ, ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ. ಆದರೆ ಮೌಲ್ಯಗಳುಳ್ಳ ಮಾನವನಾಗಿ ಬದುಕುವುದನ್ನು ಕಲಿಯಲಿಲ್ಲ. 




ಎಂಬ ಮಾತು ಮಾನವನ ಇಂದಿನ ಬದುಕನ್ನು ಪ್ರಶ್ನಿಸುತ್ತದೆ. ಸಂಕೀರ್ಣ ಜಗತ್ತಿನ ಹೆಣ್ಣು ಮಗಳು ಇಂದು ಸಂಕಷ್ಟದಲ್ಲಿದ್ದಾಳೆ. ಶೋಷಣೆಗೆ ಒಳಗಾಗುವವಳಿದ್ದಾಳೆ. ವಿವಿಧ ರೀತಿಯ ಕಿರುಕುಳಗಳನ್ನು ಅನುಭವಿಸುತ್ತಿದ್ದಾಳೆ. ಮುಖ್ಯವಾಗಿ ಸಮಾನತೆ ಸ್ವಾತಂತ್ರ್ಯ ಇದ್ದರೂ ಬಳಸಲು ಸಾಧ್ಯವಾಗದಿರುವುದು. ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಕಿರುಕುಳ, ಹೆಣ್ಣಿನ ಮೇಲಾಗುತ್ತಿರುವ ಶೋಷಣೆಯನ್ನು ತಪ್ಪಿಸಲು ಭಾರತ ಸರ್ಕಾರ 2008 ರಲ್ಲಿ ಜನವರಿ 24 ನ್ನು ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸುವ ಮೂಲಕ ಹೆಣ್ಣು ಮಕ್ಕಳಿಗಿರುವ ಸಮಸ್ಯೆಗಳ ನಿವಾರಣೆಯಲ್ಲಿ ಎಲ್ಲರೂ ಭಾಗವಹಿಸಿ ಪರಿಹಾರ ಒದಗಿಸುವ ಸಲುವಾಗಿ ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಘೋಷಿಸಿ, ಉದ್ಘಾಟಿಸಿತು. ಅಂದಿನಿಂದ ಜನವರಿ 24, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಹೆಣ್ಣು ಮಕ್ಕಳ ರಕ್ಷಣೆ, ಅಭಿವೃದ್ಧಿ, ಬೆಳವಣಿಗೆ ವಿಚಾರದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಪುರುಷನ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಪ್ರಮುಖ ಪಾತ್ರ ವಹಿಸುತ್ತಿರುವ ಹೆಣ್ಣನ್ನು ಗೌರವಿಸುವುದಕ್ಕಾಗಿ ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಅದುವೇ ಜನವರಿ 24ರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. 




ಮಹಾಕಾವ್ಯ ರಾಮಾಯಣದ ಸನ್ನಿವೇಶವೊಂದರಲ್ಲಿ ಸೀತೆಯ ಆಸೆ ಪೂರೈಸಲೆಂದು ಪತಿ ಶ್ರೀರಾಮನು ಮಾಯಾ ಜಿಂಕೆಯನ್ನು ಬೆನ್ನತ್ತಿ ಹೋಗಿದ್ದನು. ಮಹಾಕಾವ್ಯ ಮಹಾಭಾರತ ಸನ್ನಿವೇಶವೊಂದರಲ್ಲಿ ಭೀಮನು ದ್ರೌಪದಿಯ ಆಜ್ಞೆಯ ಕಾರಣದಿಂದಾಗಿ ದುಶ್ಯಾಸನನ ಎದೆ ಬಗೆದು ರಕ್ತವನ್ನು ಆಕೆಯ ಮುಡಿಗೆ ನೇವರಿಸಿ ತಾನು ಮಾಡಿದ ಪ್ರಮಾಣವನ್ನು ಪೂರ್ಣಗೊಳಿಸಿದ್ದನು. ವೇದಗಳ ಕಾಲದಲ್ಲಿ ಅಪಲಾ , ಸುಭದ್ರ, ಗಾರ್ಗಿ, ಮೈತ್ತೇಯಿ, ಸಿಕತಾ, ಘೋಷ, ವಿಶ್ವಾವರ , ನಿವಾವರಿ , ಲೋಪಾಮುದ್ರ, ಮುಂತಾದ ಮಹಿಳೆಯರು ವಿದ್ವತ್ತಿನಲ್ಲಿ ಸರ್ವ ಸ್ವತಂತ್ರವನ್ನು ಪಡೆದಿದ್ದರು. ಒಂದು ಕಾಲದಲ್ಲಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ವಿಚಾರಗಳಲ್ಲಿ ಸ್ತ್ರೀಯರೂ ಪರಿಗಣಿಸಲ್ಪಡುತ್ತಿದ್ದರು. ಮಹಾಕಾವ್ಯಗಳ ಕಾಲದಲ್ಲಿ ಅನೇಕ ಸ್ತ್ರೀಯರು ರಾಜಮಾತೆ ಎಂಬ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. 




ಇತಿಹಾಸದಲ್ಲಿ ಕಂಡುಬರುವ ರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ , ಮಾತೆ ಜೀಜಾಬಾಯಿ, ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ, ವಿಶ್ವಮಾತೆ ಮದರ್ ತೆರೇಸಾ ಸೇರಿದಂತೆ ಅನೇಕ ವೀರ ಮಾತೆಯರು, ಸಮಾಜ ಸೇವಕರು ನಮಗೆ ಸಾಕ್ಷಿಯಾಗಿದ್ದಾರೆ. ಇಂದು ನಮ್ಮ ಕಣ್ಣೆದುರಿಗೇ ಅದೆಷ್ಟೋ ಆದರ್ಶ ವನಿತೆಯರು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸರಳ ಸಜ್ಜನಿಕೆಯನ್ನು ಮೆರೆದಿದ್ದಾರೆ. ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ , ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾ ಮೂರ್ತಿ ಇವರ ಕಾರ್ಯವೈಖರಿ ಇಡೀ ವಿಶ್ವವೇ ಮೆಚ್ಚಿದೆ.




ಇಪ್ಪತ್ತೊಂದನೇ ಶತಮಾನದ ಆರಂಭದಲ್ಲಿ ಹೆಣ್ಣು ಕಾಲಿಡದ ಕ್ಷೇತ್ರಗಳೇ ಇಲ್ಲವೆನ್ನಬಹುದು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ, ವೈಜ್ಞಾನಿಕ, ವೈಮಾನಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದಾಳೆ. ಸೈನಿಕಳಾಗಿ, ಆರಕ್ಷಕಳಾಗಿ, ಅಧಿಕಾರಿಯಾಗಿ , ಚಾಲಕಳಾಗಿ, ಮಾಧ್ಯಮ ಮಿತ್ರಳಾಗಿ, ಶಿಕ್ಷಕಿಯಾಗಿ, ವೈದ್ಯಳಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾಳೆ. ಅಷ್ಟೇ ಅಲ್ಲದೆ ಮನೆಯಲ್ಲಿ ಮಗಳಾಗಿ ಸಹಧರ್ಮಿಣಿಯಾಗಿ, ಸೊಸೆಯಾಗಿ, ಅತ್ತಿಗೆ-ನಾದಿನಿಯಾಗಿ, ಅಕ್ಕಾ- ತಂಗಿಯಾಗಿ, ಎಲ್ಲರನ್ನೂ , ಎಲ್ಲವನ್ನೂ ಸಹಿಸುವ ಅಮ್ಮನಾಗಿ ಅಭೂತಪೂರ್ವ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸುತ್ತಿರುವ ಮಹಿಳೆ ಸರ್ವಶ್ರೇಷ್ಠಳು. ' ಕಾರ್ಯೇಷು ದಾಸಿ, ಕರಣೇಷು ಮಂತ್ರಿ , ಭೋಜ್ಯೇಷು ಮಾತಾ, ರೂಪೇಷು ಲಕ್ಷ್ಮೀ, ಕ್ಷಮಯಾ ಧರಿತ್ರಿ , ಶಯನೇಷು ರಂಭಾ..' ಎಂಬ ಸಂಸ್ಕೃತ ಮಾತಿನಂತೆ ಪತ್ನಿಯಾದವಳು ಪತಿಯ ಅಗತ್ಯಕ್ಕೆ, ಸಮಯಕ್ಕೆ ತಕ್ಕಂತೆ ನಾನಾ ಸೇವೆಯ ಪಾತ್ರ ವಹಿಸಬೇಕೆಂಬ ಪ್ರಾಚೀನ ಅಘೋಷಿತ ಪದ್ಧತಿಗೆ ಅನುಗುಣವಾಗಿ ಮಹಿಳೆಯೊಬ್ಬಳು ಪತಿಯ ಸೇವೆಯಲ್ಲಿ ಆದರ್ಶ ಮೆರೆದಿದ್ದಾಳೆ. 



ಇಂತಹ ಮಹಿಳೆಗೆ ವರ್ಷದಲ್ಲಿ ಒಂದು ದಿನವೇನು, ವರ್ಷಪೂರ್ತಿ ಮೀಸಲಿಟ್ಟರೂ ತಪ್ಪಲ್ಲ. ಸಾಮಾನ್ಯವಾಗಿ ಚೆಲುವೆಯ ಅಂದದ ಮೊಗಕೆ ಕಣ್ಣು ಹೇಗೆ ಭೂಷಣವೋ ಹಾಗೆ ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ ಎಂಬುದನ್ನು ಅರಿತು ವಿಶ್ವ ಸಂಸ್ಥೆ ಪ್ರತೀ ವರ್ಷ ಮಾರ್ಚ್ 8 ನ್ನು ಅಂತರರಾಷ್ಟ್ರೀಯ ಮಹಿಳಾ ದಿನವನ್ನಾಗಿ ಘೋಷಿಸಿರುವುದು ಅರ್ಥಪೂರ್ಣ ವಿಚಾರವಾಗಿದೆ.



-ಕೆ.ಎನ್. ಚಿದಾನಂದ. ಹಾಸನ .





ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top