ಮಂಗಳೂರು: ಅಗಲಿದ ನಾಡಿನ ಖ್ಯಾತ ಪತ್ರಿಕೆ ಉದಯವಾಣಿಯ ಹಿರಿಯ ಸಂಪಾದಕರು, ಲೇಖಕರು, ಸಂಶೋಧಕರು, ಹಾಗೂ ಜ್ಞಾನ ಭಂಡಾರವಾಗಿದ್ದ ಮನೋಹರ್ ಪ್ರಸಾದ್ ಅವರ ನಿವಾಸಕ್ಕೆ ತೆರಳಿ ಶಾಸಕ ವೇದವ್ಯಾಸ ಕಾಮತ್ ಅವರು ಪಾರ್ಥಿವ ಶರೀರಕ್ಕೆ ಗೌರವಪೂರ್ಣ ಅಂತಿಮ ನಮನವನ್ನು ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳಿದರು.
ನಂತರ ತಮ್ಮ ಹಾಗೂ ಮನೋಹರ್ ಪ್ರಸಾದ್ ಅವರ ಒಡನಾಟದ ಬಗ್ಗೆ ಮೆಲುಕು ಹಾಕಿ, ಸಾಮಾಜಿಕ ಜೀವನದ ಆರಂಭಿಕ ದಿನಗಳಲ್ಲಿ ನಾಡಿನ ಸಂಸ್ಕೃತಿ ಇತಿಹಾಸಗಳ ಬಗ್ಗೆ ತಿಳಿದುಕೊಳ್ಳುವ ಹಂತದಲ್ಲಿ ಗುರುವಿನ ಸ್ಥಾನದಲ್ಲಿದ್ದುಕೊಂಡು ಮಾರ್ಗದರ್ಶನ ನೀಡಿದ್ದ ಅವರು ತಮ್ಮ ಪಾಲಿಗೆ ಸದಾ ಸ್ಮರಣೀಯ. ಕರಾವಳಿ ಹಾಗೂ ತುಳುನಾಡು ಭಾಗದ ವಿಷಯದಲ್ಲಂತೂ ಅವರ ಜ್ಞಾನ ವಿದ್ವತ್ತಿಗೆ ಅವರೇ ಸಾಟಿಯಾಗಿದ್ದರು. ಇವರು ಕರಾವಳಿ ಮಾತ್ರವಲ್ಲದೇ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಅನೇಕ ಮಹನೀಯರ ಸಂದರ್ಶನವನ್ನು, ಪ್ರಮುಖ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ನಾಡಿನ ಅಸಂಖ್ಯಾತ ಪ್ರಶಸ್ತಿಗಳಿಗೆ ಅವರು ಭಾಜನರಾಗಿ ಉನ್ನತ ಮಟ್ಟಕ್ಕೇರಿದ್ದರೂ ತಮ್ಮ ಪತ್ರಿಕಾರಂಗದ ಸಹೋದ್ಯೋಗಿಗಳಿಗೆ ಎಂದಿಗೂ ಗುರುವಿನ ಸ್ಥಾನದಲ್ಲಿದ್ದುಕೊಂಡು ಮಾರ್ಗದರ್ಶನ ನೀಡುತ್ತಿದ್ದದ್ದು ಅವರ ಸರಳತೆಗೆ ಸಾಕ್ಷಿ ಎಂದು ಸ್ಮರಿಸಿಕೊಂಡರು.
ಮಾಧ್ಯಮ ಕ್ಷೇತ್ರ ಮಾತ್ರವಲ್ಲದೇ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ಹೀಗೆ ಯಾವುದೇ ಕ್ಷೇತ್ರದಲ್ಲಿಯೂ ಅವರು ತೋರುತ್ತಿದ್ದ ಆಸಕ್ತಿಯೇ ಅವರೊಳಗಿನ ಒಂದು ಅಸಾಧಾರಣ ವ್ಯಕ್ತಿತ್ವಕ್ಕೆ ಉದಾಹರಣೆ. ಅವರೊಬ್ಬ ವ್ಯಕ್ತಿ ಎನ್ನುವುದಕ್ಕಿಂತ ಒಂದು ವಿಶ್ವಕೋಶವೇ ಆಗಿದ್ದರು. ಹಾಗಾಗಿ ಈ ಅಗಲಿಕೆ ಸಮಾಜದ ಎಲ್ಲಾ ಕ್ಷೇತ್ರಗಳಿಗೂ ತುಂಬಲಾರದ ಬಹುದೊಡ್ಡ ನಷ್ಟವಾಗಿದ್ದು, ಅವರ ಕುಟುಂಬ ಹಾಗೂ ಅಪಾರ ಬಂಧು ಮಿತ್ರ ವರ್ಗಕ್ಕೆ ಆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ" ಎಂದು ಸಂತಾಪ ವ್ಯಕ್ತಪಡಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ