ಅಯೋಧ್ಯೆ: ಸೈದ್ಧಾಂತಿಕ ಭಿನ್ನತೆಗಳನ್ನು ಮೀರಿ ಸಮಾನ ಆಶಯಗಳನ್ನು ಕೊಂಡಿಯಾಗಿಟ್ಟುಕೊಂಡು ದೇಶದ ಎರಡು ಪ್ರಾಚೀನ ಸಂಸ್ಥಾನಗಳು ದಶಕಗಳಿಂದ ಬೆಳೆಸಿ ಉಳಿಸಿಕೊಂಡ ನಂಟನ್ನು ವಿವರಿಸುವ ಅಮೂಲ್ಯ ಕೃತಿಯೊಂದು ಗುರುವಾರ ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಂಡಿತು.
ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಕಂಚಿ ಕಾಮಕೋಟಿ ಪೀಠ ಮತ್ತು ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನ ಶ್ರೀ ಪೇಜಾವರ ಮಠಗಳ ನಡುವೆ ದೃಢವಾಗಿರುವ ಆತ್ಮೀಯ ಭಾಂಧವ್ಯ ಮತ್ತು ಅಯೋಧ್ಯೆ ಶ್ರೀ ರಾಮಮಂದಿರ ಆಂದೋಲನದಲ್ಲಿ ಎರಡೂ ಸಂಸ್ಥಾನಗಳ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಜಯೇಂದ್ರ ಸರಸ್ವತೀ ಮಹಾಸ್ವಾಮೀಜಿ ಮತ್ತು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ವಹಿಸಿದ ದಿವ್ಯ ನೇತೃತ್ವ ಮತ್ತು ಪಾತ್ರಗಳನ್ನು ವಿವರಿಸುವ ಆಂಗ್ಲಭಾಷೆಯಲ್ಲಿರುವ ಸಚಿತ್ರ ಕೃತಿಯನ್ನು ಗುರುವಾರದಂದು ಶ್ರೀ ಕಂಚಿ ಪೀಠದ ಈಗಣ ಯತಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರ 58ನೇ ಜನ್ಮ ವರ್ಧಂತಿ ಮಹೋತ್ಸವದ ಸದವಸರದಲ್ಲಿ ಅಯೋಧ್ಯೆ ಕಂಚಿ ಮಠದ ಶಾಖೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥಶ್ರೀಪಾದರು ಬಿಡುಗಡೆಗೊಳಿಸಿದರು.
ಅಯೋಧ್ಯೆ ಕಂಚಿ ಮಠದ ವ್ಯವಸ್ಥಾಪಕ ವಿದ್ವಾನ್ ರಾಮಚಂದ್ರ ಭಟ್ಟರು ಕೃತಿಯನ್ನು ರಚಿಸಿದ್ದಾರೆ.
ಸಮಾರಂಭದಲ್ಲಿ ಆನ್ ಲೈನ್ನಲ್ಲಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರೂ ಭಾಗವಹಿಸಿ ಉಭಯ ಮಠಗಳ ಬಾಂಧವ್ಯವನ್ನು ಮತ್ತು ಶ್ರೀ ಪೇಜಾವರ ಶ್ರೀಗಳು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮತ್ತು 48 ದಿನಗಳ ಕಾಲ ಮಂಡಲೋತ್ಸವವನ್ನು ನಡೆಸುತ್ತಿರುವ ಬಗ್ಗೆ ಅತೀವ ಸಂತಸವನ್ನು ವ್ಯಕ್ತಪಡಿಸಿದರು.
ಶ್ರೀ ಪೇಜಾವರ ಶ್ರೀಗಳೂ ತಮಿಳು ಭಾಷೆಯಲ್ಲಿ ಸಂದೇಶವನ್ನು ನೀಡಿ ಕಂಚಿ ಶ್ರೀಗಳಿಗೆ ಜನ್ಮದಿನದ ಶುಭಾಶಯವನ್ನು ಕೋರಿ ದಶಕಗಳಿಂದ ಬೆಳೆದಿರುವ ಉಭಯ ಮಠಗಳ ನಂಟು ಮುಂದೆಯೂ ದೃಢವಾಗಿರುವಂತೆ ಆಶಿಸಿ, ಕೃತಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಶ್ರೀ ಮಠದ ಗುರುಕುಲದ ವಿದ್ಯಾರ್ಥಿಗಳು ಪೇಜಾವರ ಶ್ರೀಗಳಿಗೆ ಗೌರವ ಸೂಚಿಸಿ ಸಾಮೂಹಿಕ ವೇದಘೋಷಗೈದರು. ಉಭಯ ಮಠಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ