ಶ್ರೀರಾಮ ಕಥಾ ಲೇಖನ ಅಭಿಯಾನ-67: 'ವಚನ ರಾಮಾಯಣ' ಗ್ರಂಥದ ಕಿರು ಪರಿಚಯ

Upayuktha
0


-ಶೀಲಾ ಅರಕಲಗೂಡು


ದೇ 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಯಾಯಿತು. ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ  ನೆರವೇರಿತು. ಇಡೀ ಭಾರತದ ಜನರಷ್ಟೇ ಅಲ್ಲ, ಪ್ರಪಂಚದ ನಾನಾ ಭಾಗಗಳ ಜನರು ಈ ಐತಿಹಾಸಿಕ ಕ್ಷಣಕ್ಕಾಗಿ ಕಾದಿದ್ದರು. 


ಶ್ರೀರಾಮ ನಮಗೆ ಅಷ್ಟೊಂದು ಪ್ರಿಯ ಏಕೆಂದರೆ ಧರ್ಮೋ ವಿಗ್ರಹವಾನ್ ರಾಮಃ ಎನ್ನುವ ಹಾಗೆ ಶ್ರೀರಾಮ ಧರ್ಮದ ಪ್ರತೀಕ. ಅವನ ಕಥೆಯೇ ರಾಮಾಯಣ. ಅನೇಕ ಸಾವಿರ ವರುಷಗಳಿಂದ ಅವನ ಕಥೆ ಪರಿಪರಿಯಾಗಿ ನಮ್ಮತನಕ ಹರಿದು ಬಂದಿದೆ. ಹಲವಾರು ಬಗೆಯ ರಾಮಾಯಣದ ಗ್ರಂಥಗಳು ನಮಗೆ ಓದಲು ಸಿಗುತ್ತವೆ. 


ಮೂಲದಲ್ಲಿ ವಾಲ್ಮೀಕಿ ಮಹರ್ಷಿಗಳಿಂದ ಸಂಸ್ಕೃತದಲ್ಲಿ ರಚಿತವಾದ ರಾಮಾಯಣವೆಂಬ ಆದಿಕಾವ್ಯ ನಂತರದಲ್ಲಿ ಹಲವಾರು ಕವಿಗಳಿಗೆ ಪ್ರೇರಕವಾಗಿ ಅವರುಗಳೂ ಕೂಡ ರಾಮಾಯಣ ಕಾವ್ಯವನ್ನು ತಮ್ಮ ತಮ್ಮ ವಿಶಿಷ್ಟ ಶೈಲಿಯಲ್ಲಿ ರಚಿಸಿದ್ದಾರೆ. ಮಧ್ವ ರಾಮಾಯಣ, ರಾಮಚರಿತ ಮಾನಸ, ತೊರವೆ ರಾಮಾಯಣ, ಪಂಪ ರಾಮಾಯಣ, ಕಂಬ ರಾಮಾಯಣ, ಥಾಯ್ ರಮ್ಕೀನ್ ಇತ್ಯಾದಿ ಅವುಗಳಲ್ಲಿ ಕೆಲವು. ನಮ್ಮ ರಾಷ್ಟ್ರಕವಿ ಕುವೆಂಪು ವಿರಚಿತ 'ಶ್ರೀ ರಾಮಾಯಣ ದರ್ಶನಂ' ಕಾವ್ಯವಂತೂ ಅವರಿಗೆ 'ಜ್ಞಾನಪೀಠ ಪ್ರಶಸ್ತಿ' ಯನ್ನೇ ತಂದುಕೊಟ್ಟಿತು. 


ನಾನು ನನ್ನ ಬಾಲ್ಯದಲ್ಲಿ ಓದಿದ್ದು ಹಾಗೂ ಮತ್ತೊಮ್ಮೆ ಓದಲು ತೊಡಗಿರುವ ರಾಮಾಯಣ ಗ್ರಂಥದ  ಹೆಸರು ವಚನ ರಾಮಾಯಣ. ಬಾಲ್ಯದಲ್ಲಿ ನಾನು ಓದಿದ್ದು ಅದೊಂದೇ.  ನನ್ನನ್ನು ಪ್ರಭಾವಿಸಿದ ರಾಮಾಯಣವಾಗಿತ್ತು ಅದು. ಹಾಗಾಗಿ, ನಾನು ಆ ಗ್ರಂಥದ ಬಗ್ಗೆಯೇ  ಕೆಲವು ವಿಷಯಗಳನ್ನು ಈ ಲೇಖನದ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ. 


ವಚನ ರಾಮಾಯಣವು ತ. ಸು ಶಾಮರಾಯರಿಂದ ರಚಿತವಾಗಿದೆ. ಅದರ ಮೊದಲ ಮುದ್ರಣ 1962 ರಲ್ಲಿ ಆಗಿದ್ದು, ಆಗ ಅದರ ಬೆಲೆ ಕೇವಲ ರೂ. 4.50 ಆಗಿತ್ತು. ನನ್ನ ಬಳಿ ಇರುವ ಪ್ರತಿ ಸಾಕಷ್ಟು ಜೀರ್ಣವಾಗಿದ್ದರೂ ಕೇವಲ ಮುಖಪುಟವಷ್ಟೇ ಕಣ್ಮರೆಯಾಗಿದೆ. ನಾನು ಮತ್ತೊಂದು ಪ್ರತಿ ಪಡೆಯಲು ಎಷ್ಟೆಲ್ಲಾ ಪುಸ್ತಕದ ಮಳಿಗೆಗಳನ್ನು ವಿಚಾರಿಸಿದರೆ, ಪ್ರತಿ ಲಭ್ಯವಿಲ್ಲ ಎಂದು ತಿಳಿಯಿತು. ಅರೇ, ಇಷ್ಟೊಂದು ಸರಳವಾಗಿ ಮನ ಮುಟ್ಟುವ ಹಾಗೆ, ಹಾಗೂ ಆಬಾಲರಿಂದ  ವೃದ್ಧರವರೆಗೂ ಇಷ್ಟವಾಗುವಂತಹ ಈ ಕೃತಿ ಎಲ್ಲೂ ಸಿಗುತ್ತಿಲ್ಲವಲ್ಲ ಎಂದು ಪರಿತಪಿಸಿದೆ. ಕಡೆಗೆ ತ. ಸು. ಶಾಮರಾಯರ ಅಣ್ಣನ ಮೊಮ್ಮಗಳಾದ ಸಾಹಿತಿ ಶ್ರೀಮತಿ ಶ್ರವಣಕುಮಾರಿಯವರ ಪರಿಶ್ರಮದಿಂದ ಒಂದು ಪ್ರತಿ ನನ್ನ ಕೈ ಸೇರಿತು. ಅದು ಮೂರನೆಯ ಮುದ್ರಣವಾಗಿದ್ದು ಬೆಲೆ ರೂ. 100 ಎಂದು ನಮೂದಿಸಲಾಗಿತ್ತು.  ಆನಂತರದಲ್ಲಿ ಮತ್ತೊಂದು ಮುದ್ರಣ ಆಗಿದೆಯೋ ಇಲ್ಲವೋ ನನಗೆ ತಿಳಿಯದು. ಆದರೆ ಖಂಡಿತ ಮುದ್ರಣವಾಗಲೇಬೇಕೆಂದು ಅನಿಸುವ ಕೃತಿಯಿದು. 


ಈಗ ವಚನ ರಾಮಾಯಣದ ಬಗ್ಗೆ ಒಂದೆರಡು ಮಾತು. ಮೊದಲ ಮುದ್ರಣದಲ್ಲಿ ಮುನ್ನುಡಿಯನ್ನು ಬರೆದವರು, ಅಂದಿನ ಮೈಸೂರು ರಾಜ್ಯದ (ಇಂದು ಕರ್ನಾಟಕ)  ಶಿಕ್ಷಣ ಮಂತ್ರಿ ಆಗಿದ್ದ ಶ್ರೀ ಶಿ. ರು. ಕಂಠಿಯವರು. ಅವರು ಮುನ್ನುಡಿಯಲ್ಲಿ ತುಂಬಾ ವಿನೀತ ಭಾವದಿಂದ ಹೀಗೆ ಬರೆದಿದ್ದಾರೆ.


'ರಾಮಾಯಣಕ್ಕೆ ಮುನ್ನುಡಿ ಬೇಕೇ? ರಾಮಾಯಣದ ಹೆಸರನ್ನು ಕೇಳದವರೂ, ಕಥೆಯನ್ನು ತಿಳಿಯದವರೂ ನಮ್ಮ ಭರತ ಖಂಡದಲ್ಲಿ ಯಾರಾದರೂ ಉಂಟೇ? ತಲತಲಾಂತರದಿಂದಲೂ ರಾಮಾಯಣವು ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದೇ ಮುನ್ನುಡಿಯಲ್ಲವೆ? ರಾಮಾಯಣಕ್ಕೆ ಮುನ್ನುಡಿ ಬರೆಯುವ ಶಕ್ತಿ ನನಗಿಲ್ಲ. ಆದರೆ, ನನ್ನ ಅಭಿಪ್ರಾಯ ಸೂಚಿಸಲು ಅಭ್ಯಂತರವಿಲ್ಲ. ಈಗಿನ ಅಂತರ್ಗ್ರಹ ಯಾನದ ಯುಗದಲ್ಲಿ ಬೃಹತ್ ಕಾವ್ಯಗಳನ್ನು ಓದುವುದಕ್ಕೆ ಅವಕಾಶವಿಲ್ಲ. ಮಾನವನ ಮನಶ್ಯಾಂತಿಗೆ ರಾಮಾಯಣ, ಭಾರತಗಳಿಗಿಂತಲೂ ಉತ್ತಮವಾದ ಗ್ರಂಥಗಳು ಬೇರೆ ಇಲ್ಲ. ಅನೇಕ ರಾಮಾಯಣ ಗ್ರಂಥಗಳು ಪ್ರಕಟವಾಗಿವೆ. ಅವು ಪಂಡಿತರಿಗೋಸ್ಕರ ಬರೆದುವುಗಳೇ ವಿನಾ ಪಾಮರರಿಗೆ ಅರ್ಥವಾಗುವಂತೆ ಸುಲಭ ಶೈಲಿಯಲ್ಲಿ ಇಲ್ಲ. ಈ ಕೊರತೆಗಳನ್ನು ನೀಗಿಸಲು ಈ 'ವಚನ ರಾಮಾಯಣ' ವನ್ನು ಸುಲಭ ಸುಂದರ ಕನ್ನಡ ಗದ್ಯದಲ್ಲಿ ತಂದಿರುವುದು ಶ್ಲಾಘನೀಯ. ಇದೇ ರೀತಿ ಭಾರತ ಇತ್ಯಾದಿ ಗ್ರಂಥಗಳನ್ನೂ ಇಷ್ಟೇ ಉತ್ತಮ ಮುದ್ರಣದಲ್ಲಿಯೂ ಆಕರ್ಷಣೀಯವಾಗಿಯೂ ಕನ್ನಡಿಗರಿಗೆ ದೊರೆಯುವಂತೆ ಮಾಡಲೆಂದೂ, ಕನ್ನಡಿಗರು ಇವರ ಉದ್ಯಮಕ್ಕೆ ಪ್ರೋತ್ಸಾಹ ನೀಡಲೆಂದೂ ಹಾರೈಸುತ್ತೇನೆ.' 



ನಾನೇಕೆ ಈ ಮುನ್ನುಡಿಯನ್ನು ಹೀಗೆ ವಿವರವಾಗಿ ಬರೆದೆ ಎಂದರೆ, ನನಗೆ ದೊರೆತ ಮೂರನೆಯ ಮುದ್ರಣದಲ್ಲಿ ಈ ಪುಟ ಇಲ್ಲ. ಅದನ್ನು ತೆಗೆಯಬಾರದಿತ್ತು ಎನಿಸಿತು. ಶಿಕ್ಷಣ ಮಂತ್ರಿಯಾಗಿ ಮಾನ್ಯ ಶಿ. ರು. ಕಂಠಿಯವರು ಎಷ್ಟೊಳ್ಳೆಯ ಮಾತುಗಳನ್ನಾಡಿದ್ದಾರೆ ಅಲ್ಲವೇ?



ತ. ಸು. ಶಾಮರಾಯರು 'ಗ್ರಂಥಕರ್ತನ ಬಿನ್ನಹ' ಎಂದು ಆರಂಭದಲ್ಲಿ ತಾವು ಈ ಗ್ರಂಥ ರಚನೆ ಮಾಡಿದ ಬಗ್ಗೆ ವಿವರವಾಗಿ ತಿಳಿಸುತ್ತಾರೆ. ಅವರು ತಮ್ಮ ನಿವೃತ್ತಿಯಾದ ನಂತರ, ಅವರ ಗೆಳೆಯರೂ ಹಾಗೂ 'ಸ್ಟ್ಯಾಂಡರ್ಡ್ ಬುಕ್ ಡಿಪೋ ದ ಮಾಲೀಕರೂ ಆದ ಶ್ರೀ ಕಮಲನಾಥರು ಕನ್ನಡದಲ್ಲಿ ಸುಲಭವಾಗಿ ಸರಳ ಶೈಲಿಯಲ್ಲಿ ಒಂದು ರಾಮಾಯಣವನ್ನು ಬರೆದುಕೊಡುವಂತೆ ಪ್ರೇರೇಪಿಸಿದ್ದನ್ನು ನೆನೆಯುತ್ತಾರೆ. ಆ ನಿರ್ಮಲ ಮನಸ್ಸಿನ ಪ್ರೋತ್ಸಾಹದ ಕಾರಣದಿಂದಾಗಿ ಅವರು ಸುಮಾರು ಒಂದು ತಿಂಗಳ ಅವಧಿಯಲ್ಲೇ ಗ್ರಂಥವನ್ನು ಬರೆದು ಮುಗಿಸುತ್ತಾರೆ. ಇಷ್ಟು ಬೇಗ ಇಷ್ಟೊಳ್ಳೆಯ ಗ್ರಂಥವನ್ನು ಬರೆಯಲು ಹೇಗೆ ಸಾಧ್ಯವಾಯಿತು ಎಂದರೆ, ಅದಕ್ಕೆ ತಮ್ಮ ತಾತ ವೆಂಕಣ್ಣಯ್ಯನವರ ಕಾಲದಿಂದ ಹಿಡಿದು, ನಂತರ ಅವರ  ಮಗ  ಶ್ರೀಯುತ ಸುಬ್ಬಣ್ಣನವರು(ತ. ಸು. ಶಾಮರಾಯರ ತಂದೆ) ಹಾಗೂ ತಮ್ಮ ಹಿರಿಯ ಅಣ್ಣನವರಾದ ಶ್ರೀಯುತ ಟಿ. ಎಸ್. ವೆಂಕಣ್ಣಯ್ಯನವರಿಂದ ಹರಿದು ಬಂದ ರಾಮಾಯಣ ಪಾರಾಯಣ ಕಥೆಯನ್ನು ತುಂಬಾ ವಿವರವಾಗಿ ತಿಳಿಸುತ್ತಾರೆ. ಅಲ್ಲದೆ, ಇವರು ಕೂಡ ತಮ್ಮ ಜೀವಿತಕಾಲದಲ್ಲಿ ಸುಮಾರಿ 25 ವರ್ಷಗಳಷ್ಟು ಕಾಲ ರಾಮಾಯಣ ಪಾರಾಯಣ ಮಾಡಿಕೊಂಡು ಬಂದಿರುತ್ತಾರೆ. ಹಾಗಾಗಿ, ರಾಮಾಯಣ ಕಥೆ ರಕ್ತಗತವಾಗಿದ್ದು, ಮನಸ್ಸನ್ನೆಲ್ಲ ಅಕ್ರಮಿಸಿಕೊಂಡಿದ್ದುದರಿಂದ ಬಹಳ ಸುಲಭವಾಗಿ ಸುಮಾರು ಒಂದೇ ತಿಂಗಳ ಅವಧಿಯಲ್ಲಿ ಗ್ರಂಥ ರೂಪವಾಗಿ ಹೊರ ತರಲು ಸಾಧ್ಯವಾಯಿತು ಎನ್ನುತ್ತಾರೆ ಶಾಮರಾಯರು. ಈ ಕಾರ್ಯದಲ್ಲಿ  ಸಹಕರಿಸಿದ ತಮ್ಮ ವಿದ್ಯಾರ್ಥಿ ಮಿತ್ರ ಡಾಕ್ಟರ್ ಪ್ರಭುಶಂಕರ್ ಅವರನ್ನು ಕೂಡ ನೆನೆಯುತ್ತಾರೆ. ಮತ್ತೊಬ್ಬ ವಿದ್ಯಾರ್ಥಿ ಮಿತ್ರ ಶ್ರೀ ಅನಂತರಾಮ ಅವರು ಫ್ರೂಫುಗಳನ್ನು ತಿದ್ದುವ ಕಾರ್ಯದಲ್ಲಿ ನೆರವಾಗಿದ್ದನ್ನು ನೆನೆಯುತ್ತಾರೆ. ಅವರು ಕಡೆಯಲ್ಲಿ ವಿನೀತರಾಗಿ ಹೇಳುವ ಮಾತು, 'ಇದು ಶಾಮರಾಯನ ರಾಮಾಯಣವಲ್ಲ. ವಾಲ್ಮೀಕಿಯ ರಾಮಾಯಣ. ಭಕ್ತಿಯಿಂದ ಓದಿ. ಓದಿ ಧನ್ಯರಾಗಿ.' ಎಂದು. ಈ ಗ್ರಂಥವನ್ನು  ಅವರು ತಮ್ಮ ಅಣ್ಣನವರಾದ ಶ್ರೀ ಟಿ. ಎಸ್. ರಾಮಸ್ವಾಮಯ್ಯನವರಿಗೆ ಭಕ್ತಿಯಿಂದ ಕಾಣಿಕೆಯಾಗಿ ಅರ್ಪಿಸಿದ್ದಾರೆ. 


ಇನ್ನು ಗ್ರಂಥದ ಬಗ್ಗೆ ಹೇಳುವುದಾದರೆ, ವಚನ ರಾಮಾಯಣ ಎಂದಾಗ ತುಂಬಾ ಜನರು ಶೀರ್ಷಿಕೆಯ ಹೆಸರು ಕೇಳಿ, ಇದು ಬಸವಣ್ಣನವರ ವಚನಗಳಂತೆ ಇರಬಹುದೆ? ಎಂದುಕೊಳ್ಳುತ್ತಾರೆ. ಆದರೆ ಹಾಗಲ್ಲ. ತಂದೆಗೆ ಕೊಟ್ಟ ವಚನದ ಪರಿಪಾಲನೆ ಮಾಡುವ ಕಥಾನಕ ಇದಾದುದರಿಂದ ಶೀರ್ಷಿಕೆ ಬಹಳ ಸೂಕ್ತವಾಗಿದೆ. ತ. ಸು. ಶಾಮರಾಯರು ರಾಮಾಯಣವನ್ನು ಆರು  ಅಧ್ಯಾಯಗಳನ್ನಾಗಿ ವಿಂಗಡಿಸಿ ಬರೆದಿದ್ದಾರೆ. ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ ಕಿಷ್ಕಿಂಧಾಕಾಂಡ, ಸುಂದರಕಾಂಡ ಹಾಗೂ ಯುದ್ಧ ಕಾಂಡ ಎಂದು ಹೆಸರಿಸಿದ್ದಾರೆ. ವಾಲ್ಮೀಕಿಯಿಂದ  ರಚಿತವಾದ ಸಂಸ್ಕೃತ ರಾಮಾಯಣದಲ್ಲಿ ಹೇಗಿದೆಯೋ ಅದರ ಪ್ರಕಾರವಾಗಿಯೇ ಕಥೆ ಸಾಗುತ್ತದೆ. ಭಾಷೆ ಮಾತ್ರ ಇವರ ಮನಸ್ಸಿನದೆ. ಸರಳವಾಗಿ ಸುಂದರವಾಗಿ ಬರೆದಿದ್ದಾರೆ. 


ಪರಿವಿಡಿಯಲ್ಲಿ ಪ್ರತಿಯೊಂದು ಅಧ್ಯಾಯದಡಿಯಲ್ಲಿ ಅನೇಕ ಸಣ್ಣ ಸಣ್ಣ ಕಿರು ಅಧ್ಯಾಯಗಳನ್ನು ಹೆಸರಿಸಿದ್ದಾರೆ. ಉದಾಹರಣೆಗೆ, ಮೊದಲ ಅಧ್ಯಾಯವಾದ ಬಾಲಕಾಂಡದಲ್ಲಿ ಏಳು ಕಿರು ಅದ್ಯಾಯಗಳಿವೆ. ಅವು ಯಾವುವೆಂದರೆ, ಶ್ರೀ ರಾಮಾಯಣಾವತರಣ, ಶ್ರೀರಾಮ ಜನನ, ವಿಶ್ವಾಮಿತ್ರರ ಅನುಗ್ರಹ(೧), ವಿಶ್ವಾಮಿತ್ರರ ಅನುಗ್ರಹ (2), ವಿಶ್ವಾಮಿತ್ರ ಕಥಾಕಥನ, ಜನಕಸುತಾ ಪ್ರಾಣಿಗ್ರಹಣ ಹಾಗೂ ಭಾರ್ಗವ ಗರ್ವಭಂಗ.


ಇದೇ ರೀತಿ ಅಯೋಧ್ಯಾಕಾಂಡದಲ್ಲಿ- 19 ಕಿರು ಅಧ್ಯಾಯಗಳು, ಅರಣ್ಯಕಾಂಡದಲ್ಲಿ, 12 ಕಿರು ಅಧ್ಯಾಯಗಳು, ಕಿಷ್ಕಿಂಧಾಕಾಂಡದಲ್ಲಿ 9 ಕಿರು ಅಧ್ಯಾಯಗಳು, ಸುಂದರಕಾಂಡದಲ್ಲಿ 15 ಕಿರು ಅಧ್ಯಾಯಗಳು ಹಾಗೂ ಯುದ್ಧಕಾಂಡದಲ್ಲಿ 24 ಕಿರು ಅಧ್ಯಾಯಗಳಿವೆ. ರಾಮಾಯಣದ ಯಾವುದೇ ಪ್ರಸಂಗವನ್ನು ಬೇಕೆಂದಾಗ ಆರಿಸಿ ಓದುವುದು ಇದರಿಂದ ತುಂಬಾ ಸುಲಭವಾಗಿದೆ. ಪ್ರಸಂಗಗಳನುಗುಣವಾಗಿ ವರ್ಗೀಕರಣ ಮಾಡಿರುವುದರಿಂದ ಕಥೆಯ ಓಟದ ಅನುಕ್ರಮಣಿಕೆ ಮನದಟ್ಟಾಗುತ್ತದೆ. 


ಇನ್ನು ಈ ಗ್ರಂಥದ ಭಾಷೆಯ ಬಗ್ಗೆ ಹೇಳುವುದಾದರೆ, ಭಾಷೆ ಸುಭಗ ಸುಂದರ ಎಂದೇ ಹೇಳಬಹುದು. ಸಂಸ್ಕೃತದ ವಾಲ್ಮೀಕಿ ರಾಮಾಯಣವನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟ. ಅದರ ಬದಲಾಗಿ ಎಲ್ಲರಿಗೂ  ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಬರೆದ ಇದನ್ನು ಓದಿದರೆ ಅಂತಹವರಿಗೆ ಆನಂದ ಹೆಚ್ಚು. . ಹಾಗಿದ್ದಾಗ್ಯೂ ಭಾಷೆಯಲ್ಲಿ ಬಿಗಿಯಿದೆ, ಸೊಬಗಿದೆ. ಅವರು ಬಳಸಿರುವ ಶಬ್ದ ಸಂಪತ್ತು ಓದುಗರ ಶಬ್ದ ಭಂಡಾರವನ್ನು ಹಿರಿದುಗೊಳಿಸುವುದರಲ್ಲಿ ಆಶ್ಚರ್ಯವಿಲ್ಲ. ರಾಮಾಯಣ ಕಥಾನಕವನ್ನು ಆರಂಭಿಸಿರುವ ರೀತಿಯಲ್ಲೇ ಒಂದು ಸೊಬಗಿದೆ. ಮೊದಲ ಅಧ್ಯಾಯದ ಪ್ರಾರಂಭಿಕ ಭಾಗವಾದ 'ಶ್ರೀರಾಮಾಯಣಾವತರಣ'ದ ಆರಂಭದಲ್ಲೇ ಶ್ರೀರಾಮನ ಮಹೋನ್ನತ ಗುಣಗಳ ಪರಿಚಯವಾಗುವ ಹಾಗೆ, ರಾಮಾಯಣ ಕಥಾಸಾರದ ಸ್ವಾದ ಸಿಗುವ ಹಾಗೆ ಮೊದಲ ಪ್ಯಾರಾ ಇದೆ. ಅದು ಹೀಗಿದೆ:


ವಾಲ್ಮೀಕಿ ಮಹರ್ಷಿಯು ನಾರದರನ್ನು  ಕುರಿತು ''ಅಯ್ಯಾ, ಭೂಲೋಕದಲ್ಲಿ ಈಗ ಇರುವವರೊಳಗೆ ಸಕಲಗುಣಸಂಪನ್ನನೂ ಮಹಾವೀರನೂ ಆದವನು ಯಾರು? ಧರ್ಮಜ್ಞನಾಗಿ ಸತ್ಯವನ್ನು ನುಡಿಯುತ್ತಾ ದೃಢವ್ರತಿಯಾಗಿರುವವನು ಯಾರು? ಸಚ್ಚಾರಿತ್ರ್ಯದಿಂದ ಕೂಡಿದವನಾಗಿ ಸಕಲ ಪ್ರಾಣಿಗಳಿಗೂ ಹಿತವನ್ನು ಬಯಸುತ್ತಿರುವ ಸಜ್ಜನನಾವನಿದ್ದಾನೆ? ಸಕಲ ವಿದ್ಯಾ ಪಾರಂಗತನೂ ಸರ್ವಕಾರ್ಯಧುರಂಧರನೂ ಆಗಿದ್ದು ಪ್ರಿಯದರ್ಶನನೂ ಜಿತಕ್ರೋಧನೂ ಅನಸೂಯಕನೂ ಆದ ಮಹಾಪುರುಷನಾರು? ಯಾರು ಕೋಪಗೊಂಡಾಗ ದೇವತೆಗಳೂ ಹೆದರುವರೋ ಅಂತಹ ಆತ್ಮವಂತನಾವನಿರುವನು? ಮೂರು ಲೋಕಗಳನ್ನೂ ಸಂಚರಿಸುವ ನೀನೇ ನನ್ನ ಪ್ರಶ್ನೆಗೆ ಉತ್ತರ ಹೇಳಲು ಸಮರ್ಥನು" ಎಂದು ಹೇಳಿದನು. ತ್ರಿಲೋಕಜ್ಞಾನಾದ ನಾರದಮುನಿಯು ಇಕ್ಷ್ವಾಕು ವಂಶದಲ್ಲಿ ಜನಿಸಿದ ಶ್ರೀರಾಮಚಂದ್ರನ ಹೆಸರನ್ನು ಹೇಳಿ, ಆತನು ಸಕಲ ಸದ್ಗುಣ ಸಂಪನ್ನನೆಂದೂ ಪರಮಾತ್ಮ ಸ್ವರೂಪನೆಂದೂ ತಿಳಿಸಿದನು. ಅಷ್ಟೇ ಅಲ್ಲ ; ಆ ರಾಮಚಂದ್ರನು ಹುಟ್ಟಿ, ಬೆಳೆದು, ಪಿತೃವಾಕ್ಯ ಪರಿಪಾಲನೆಗಾಗಿ ವನವಾಸವನ್ನು ಕೈಕೊಂಡು, ರಾವಣಾದಿ ಕ್ರೂರ ರಾಕ್ಷಸರನ್ನೆಲ್ಲಾ ತರಿದು ಮೂರು ಲೋಕಗಳನ್ನೂ ಸಂತೋಷಗೊಳಿಸಿದ 'ರಾಮಾಯಣ' ಕಥೆಯನ್ನೆಲ್ಲಾ ಸಂಕ್ಷೇಪವಾಗಿ  ತಿಳಿಸಿ ಹೇಳಿದನು. ಇದನ್ನು ಕೇಳಿದ ವಾಲ್ಮೀಕಿ ಅತ್ಯಂತ ಹರ್ಷಿತನಾಗಿ ನಾರದನನ್ನು ಉಚಿತ ರೀತಿಯಲ್ಲಿ ಸತ್ಕರಿಸಿ ಪೂಜಿಸಿದನು. 


ಎಷ್ಟು ಚೆನ್ನಾಗಿದೆಯಲ್ಲವೇ ಭಾಷೆ ಹಾಗೂ ಆರಂಭ? ಶ್ರೀ ರಾಮನ ಜೀವನ ಮೌಲ್ಯಯುತ ಜೀವನ. ಎಲ್ಲ ಜೀವನ ಮೌಲ್ಯಗಳನ್ನು  ಎತ್ತಿ ಹಿಡಿಯುವಂತೆ ಬರೆದಿದ್ದಾರೆ ಶಾಮರಾಯರು. ಶ್ರೀರಾಮನ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡುವ ಈ ವಚನ ರಾಮಾಯಣ ಅತ್ಯುಪಯುಕ್ತ. 


ನನಗೆ ಇತ್ತೀಚೆಗೆ ದೊರೆತದ್ದು 2002 ನೇ ಇಸವಿಯಲ್ಲಿ ಮುದ್ರಿತವಾದ ಮೂರನೇ ಮುದ್ರಣದ ಪ್ರತಿ. ಅದೂ ಕೂಡ ಈಗ ಅಂಗಡಿಗಳಲ್ಲಿ ಸಿಗುತ್ತಿರಲಾರದು. ಹಾಗಾಗಿ, ಈ ವಚನ ರಾಮಾಯಣ ಗ್ರಂಥವು ಮತ್ತೆ  ಮುದ್ರಿತವಾಗಿ ಇನ್ನೂ ಸಾವಿರಾರು ಲಕ್ಷಾಂತರ ಮನೆಗಳನ್ನು ಸೇರುವಂತಾಗಲಿ, ಜನರು ಓದಿ ಸಂತುಷ್ಟಗೊಳ್ಳಲಿ ಎಂದು ಹಾರೈಸುತ್ತೇನೆ.





-ಶೀಲಾ ಅರಕಲಗೂಡು

86185 04484


ಲೇಖಕರ ಸಂಕ್ಷಿಪ್ತ ಪರಿಚಯ

ಹುಟ್ಟಿದ್ದು ಮೈಸೂರಿನಲ್ಲಿ. ತಂದೆ  ಎ. ಅನಂತರಾಮಯ್ಯ ಹಾಗೂ ತಾಯಿ ಶ್ರೀಮತಿ ಶಾರದಮ್ಮನವರ ಏಳು ಮಕ್ಕಳಲ್ಲಿ ಮೂರನೆಯವಳಾಗಿ. ಬೆಳೆದದ್ದೆಲ್ಲಾ ದಾವಣಗೆರೆಯಲ್ಲಿ. ಓದಿದ ಶಾಲೆಯಾದ ಸೇಂಟ್ ಪಾಲ್ಸ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆಯಲ್ಲಿ 25 ವರ್ಷಗಳ ಕಾಲ ಶಿಕ್ಷಕಿಯಾಗಿದ್ದಲ್ಲದೆ ಜೊತೆ ಜೊತೆಗೆ ಐದು ವರ್ಷಗಳ ಕಾಲ ಎನ್.ಸಿ.ಸಿ. ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಿದೆ.

ಓದಿದ್ದು ಬಿ. ಎಸ್ಸಿ., ಎಮ್. ಎಡ್., ಡಿ. ಸಿ. ಎಸ್., ಎಂ. ಎಸ್. ಸಿ. ಪಿ. 

2002ರಲ್ಲಿ ಬೆಂಗಳೂರಿಗೆ ಸ್ಥಳ ಬದಲಾವಣೆ. ಪ್ರಾರ್ಥನಾ ಸ್ಕೂಲ್  ನಲ್ಲಿ 2002 ರಿಂದ ಕಳೆದ 2019 ಅಕ್ಟೋಬರ್ ವರೆಗೆ ಪ್ರಿನ್ಸಿಪಾಲ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.  ಇದೀಗ ನಿವೃತ್ತಿ ಜೀವನ. ಮನೆಯಲ್ಲೇ ಬೇಕೆಂದು ಬಂದವರಿಗೆ ಆಪ್ತ ಸಮಾಲೋಚನೆ. ಕನ್ನಡ ಸಾಹಿತ್ಯದ ಬಗ್ಗೆ ಕಲಿಯುವ, ತಿಳಿಯುವ ಪ್ರಯತ್ನ. 

ದೈವಾನುಗ್ರಹವೋ, ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದವೋ ಎಂಬಂತೆ ನಾನು ರಚಿಸಿದ  'ಕ' ಕಾರ ಕವನ  ವೈರಲ್ ಆಗಿದ್ದು, ಪ್ರಖ್ಯಾತರಿಂದ ಅದು ದೇಶ- ವಿದೇಶಗಳ ಕನ್ನಡಿಗರನ್ನು ತಲುಪುವಂತಾಗಿದ್ದು ನನ್ನ ಪುಣ್ಯವೇ ಸರಿ ಎಂದು ಲೇಖಕಿ ಹೇಳುತ್ತಾರೆ. 


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top