ಸ್ಟೇಟ್‌ಬ್ಯಾಂಕ್‌ ಬಸ್ ನಿಲ್ದಾಣ ಪರಿಸರದಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ

Upayuktha
0


  • ಐದನೇ ತಿಂಗಳ ಶ್ರಮದಾನ ಕಾರ್ಯಕ್ರಮ 
  • ದುರ್ವಾಸನೆ ಬೀರುತ್ತಿದ್ದ ಗೋಡೆಯ ಸ್ವಚ್ಛತೆ 
  • ಸ್ವಚ್ಛತೆಯಲ್ಲಿ ಫಿಲಿಪೈನ್ಸ್ ದೇಶದ ವಿದ್ಯಾರ್ಥಿಗಳು ಭಾಗಿ


ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಐದನೇ ತಿಂಗಳ ಶ್ರಮದಾನ ಕಾರ್ಯಕ್ರಮ ಇಂದು (ಫೆ.11), ಭಾನುವಾರ ಬೆಳಗ್ಗೆ 7.30 ರಿಂದ 10 ಗಂಟೆಯ ತನಕ ಸ್ಟೇಟ್ ಬ್ಯಾಂಕ್ ಬಳಿಯ ಸರ್ವೀಸ್ ಬಸ್ ಸ್ಟ್ಯಾಂಡ್ ಪರಿಸರದಲ್ಲಿ ಜರುಗಿತು.


ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರ ಸಾನಿಧ್ಯದಲ್ಲಿ, ಎಂ.ಆರ್.ಪಿ.ಎಲ್ ಸಂಸ್ಥೆಯ ಚೀಫ್ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್ ಮತ್ತು ಕ್ರೆಡಾಯ್ ಸಂಘದ ಅಧ್ಯಕ್ಷರಾದ ವಿನೋದ್ ಪಿಂಟೋ ಜಂಟಿಯಾಗಿ ಹಸಿರು ನಿಶಾನೆ ತೋರಿ, ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು, ಕ್ಯಾ. ಗಣೇಶ್ ಕಾರ್ಣಿಕ್ ಮತ್ತು ಡಾ. ಧನೇಶ್ ಕುಮಾರ್ ಉಪಸ್ಥಿತರಿದ್ದರು. 


ವಿನೋದ್ ಪಿಂಟೋ ಮಾತನಾಡಿ, "ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಲು ನನಗೆ ಹೆಮ್ಮೆಯಿದೆ. ಇಂತಹ ಅಭಿಯಾನ ಪ್ರತೀ ಮನೆಗಳಿಂದ ಪ್ರಾರಂಭವಾಗಬೇಕು. ಈ ಕಾರ್ಯಕ್ರಮದ ಮೂಲಕ ಯುವಕರು ನಿಸ್ವಾರ್ಥ ಸೇವೆಯನ್ನು ಸಾಕಾರಗೊಳಿಸಲು ಸಾಧ್ಯವಿದೆ" ಎಂದರು. 



ಮನೋಜ್ ಕುಮಾರ್ ಮಾತನಾಡಿ, "ನಾವು ಇತರರ ಸೇವೆಗಾಗಿ ಜೀವಿಸುವುದೇ ನಿಜವಾದ ಜೀವನ. ಈ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಅತ್ಯಂತ ಯಶಸ್ವಿ ಯೋಜನೆ. ಈ ಸಮಾಜಮುಖಿ ಕಾರ್ಯದಲ್ಲಿ ನಮ್ಮ ಎಂ.ಆರ್.ಪಿ.ಎಲ್ ಸಂಸ್ಥೆ ಸದಾ ಭಾಗಿಯಾಗಿರುತ್ತದೆ" ಎಂದು ಪ್ರಶಂಸಿಸಿದರು. 


ಗಣ್ಯರು ಸಾಂಕೇತಿಕವಾಗಿ sಸ್ಟೇಟ್ ಬ್ಯಾಂಕ್ ಸರ್ವೀಸ್ ಬಸ್ ಸ್ಟ್ಯಾಂಡ್ ರಸ್ತೆಯನ್ನು ಸ್ವಚ್ಛಗೊಳಿಸಿದರು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಪುರುಷೋತ್ತಮ, ಡಾ. ನೇಹಾ ಶೆಟ್ಟಿ ಮತ್ತು ಡಾ. ನಿತ್ಯಾಲ್ ಕುಮಾರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಅನಧಿಕೃತ ಬ್ಯಾನರ್ ಮತ್ತು ಕಸದ ರಾಶಿಗಳನ್ನು ತೆರವುಗೊಳಿಸಿದರು.


ಹಿರಿಯ ಸ್ವಯಂಸೇವಕರುಗಳಾದ ವಿಠ್ಠಲ್‍ದಾಸ್ ಪ್ರಭು, ಮೆಹಬೂಬ್, ಅವಿನಾಶ್, ಸತ್ಯನಾರಾಯಣ ಕೆ.ವಿ, ಶಿವರಾಂ, ಬಾಲಕೃಷ್ಣ ಭಟ್, ಅನಿರುಧ್ ನಾಯಕ್ ಮತ್ತಿತರರು ಫುಟ್‍ಪಾತ್ ಮತ್ತು ಒಳಚರಂಡಿಗಳಲ್ಲಿ ತುಂಬಿದ್ದ ಕಸದ ರಾಶಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡಿದರು.


ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ತಾತ್ಕಾಲಿಕ ಶೆಲ್ಟರ್ ತೆರವುಗೊಳಿಸುವುದರಲ್ಲಿ ಸ್ವಯಂಸೇವಕರುಗಳಾದ ಉಮಾನಾಥ್ ಕೋಟೆಕಾರ್, ವಸಂತಿ ನಾಯಕ್, ರಾಜೀವಿ ಚಂದ್ರಶೇಖರ, ಸುನಂದಾ ಶಿವರಾಂ, ನಾಗೇಶ್ ಸರಿಪಳ್ಳ, ಕಿರಣ್ ಫನಾರ್ಂಡಿಸ್, ತಾರಾನಾಥ್ ಆಳ್ವ ಕೈಜೋಡಿಸಿದರು. 


ದುರ್ವಾಸನೆ ಬೀರುತ್ತಿದ್ದ ಗೋಡೆಯ ಸ್ವಚ್ಛತೆ- ಜಾಗೃತಿ: 

ಸಾರ್ವಜನಿಕ ಮೂತ್ರ ವಿಸರ್ಜನೆಯಿಂದಾಗಿ ಮಲಿನಗೊಂಡು ದುರ್ವಾಸನೆ ಬೀರುತ್ತಿದ್ದ ಸರ್ವೀಸ್ ಬಸ್ ಸ್ಟ್ಯಾಂಡ್ ಗೋಡೆಯನ್ನು ಟ್ಯಾಂಕರ್ ಮೂಲಕ ನೀರು ಹಾಯಿಸಿ ಸ್ವಚ್ಛಗೊಳಿಸಲು ಸೌರಜ್ ಮತ್ತು ಬಾಲಕೃಷ್ಣ ಭಟ್ ಶ್ರಮವಹಿಸಿದರು.


ನಂತರ ಸ್ವಯಂಸೇವಕರಾದ ಕಮಲಾಕ್ಷ ಪೈ, ಡಾ. ಸದಾನಂದ, ಮುಕೇಶ್ ಆಳ್ವ, ಡಾ. ತನಿಷ್ಕಾ, ಬಬಿತಾ ಶೆಟ್ಟಿ, ಪ್ರಕಾಶ್ ಎಸ್. ಟಿ., ಶಾಯಿಲ್, ಕೇದಾರ್, ನೈತಿಕ್ ಶೆಟ್ಟಿ ಹಾಗೂ ಎ. ಜೆ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜೊತೆಗೂಡಿ ಸ್ವಚ್ಛಗೊಂಡ ಗೋಡೆಗೆ ಬಣ್ಣ ಬಳಿದು ಸುತ್ತಲು ಸ್ವಚ್ಚತೆಯನ್ನು ಮಾಡಲಾಯಿತು. ಮುಂದಿನ ದಿನಗಳಲ್ಲಿ ಈ ಗೋಡೆಯ ಮೇಲೆ ಜಾಗೃತಿ ಚಿತ್ರ ಸಂದೇಶಗಳನ್ನು ಬರೆಯಲಾಗುವುದು. 


ಸ್ವಚ್ಛತೆಯಲ್ಲಿ ಫಿಲಿಪೈನ್ಸ್ ದೇಶದ ವಿದ್ಯಾರ್ಥಿಗಳು:

ನಗರದ ನಿಟ್ಟೆ ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದ್ದ, ಫಿಲಿಪೈನ್ಸ್ ದೇಶದ 'ಯೂನಿವರ್ಸಿಟಿ ಆಫ್ ಸ್ಯಾಂಟೊ ತೋಮಸ್' ನ ಪ್ರೊಫೆಸರ್ ಚಾಲ್ರ್ನೆಸ್ ನೆರ್ಮಲ್ ವಿದ್ಯಾರ್ಥಿಗಳಾದ ಕರಿಜ್ ಏಂಜಲ್, ಮಿಸ್ ಜೈಸ್ಲ್ ರೇಇಸ್ ಮತ್ತು ಜೋಷುಅ ಮೆಂಡ್ರೆಸ್ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಹಿರಿಯ ಕಾರ್ಯಕರ್ತರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಇವರನ್ನು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು ಅಭಿನಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Advt Slider:
To Top