ಅದ್ಭುತ ಗಾಲಿ ನೃತ್ಯ ಪ್ರದರ್ಶನ, ಅದು ಪಾಶ ನೃತ್ಯ ನಿರ್ದೇಶನ

Upayuktha
0

ಬ್ಬಾ! ಅದೊಂದು ಅದ್ಭುತ ಗಾಲಿ ನೃತ್ಯ ಪ್ರದರ್ಶನ. ನಡೆದಿದ್ದು ಹಾಸನದ ಕಲಾಭವನದಲ್ಲಿ. ಹಾಸನಕ್ಕೆ ಪಾಶಾ ಅವರ ತಂಡ ಕರೆಸಿದ್ದವರು ನಮ್ಮ ಹಾಸನ ಚಾರಿಟಬಲ್ ಟ್ರಸ್ಟ್‌ನ ಹರೀಶ್ ಕೆ.ಆರ್. ಅದು ಅವರ ಟ್ರಸ್ಟ್‌ನ  3ನೇ ವರ್ಷದ ವಾರ್ಷಿಕೋತ್ಸವಕ್ಕೆ, ಆನೇಕಲ್‌ನ ಸಯ್ಯದ್ ಸಲ್ಲಾವುದ್ದಿನ್ ಪಾಶ ಮೂರು ದಶಕಗಳಿಗೂ ಹೆಚ್ಚು ಕಾಲ ವಿಕಲ ಚೇತನರಿಗೆ ನೃತ್ಯ ಕಲೆಯ ತರಬೇತಿ ನೀಡಿ ತಮ್ಮ ಕಲಾಸೇವೆಗೆ 2007ರಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ನೃತ್ಯಪಟು.


ಗಣಪತಿ ವಂದನ ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು ಪಾಶಾ ತಂಡದವರ ಶಾಸ್ತ್ರೀಯ ಭರತನಾಟ್ಯ, ಶಿವ ತಾಂಡವ ನೃತ್ಯದಲ್ಲಿ ಡಿಜಿಟಲ್ ಪರದೆಯ ಮೇಲೆ ಜಗದ ಅವಿಷ್ಕಾರ ದೃಶ್ಯ.! ಸುಮಾರು 25 ನಿಮಿಷಗಳ ಭಗವದ್ಗೀತೆ ನೃತ್ಯರೂಪಕದಲ್ಲಿ ಮಹಾಭಾರತ ಯುದ್ಧದ ದೃಶ್ಯಾವಳಿ. ದಕ್ಷಿಣ ಭಾರತದ ಭರತನಾಟ್ಯ ಉತ್ತರ ಭಾರತದ ಕಥಕ್ ನಡುವಣ ಜುಗಲ್ ಬಂದಿ. ಮಂಡ್ಯ ಭಾಗದಲ್ಲಿ ಹೆಸರಾದ ಜನಪದ ನೃತ್ಯ ಪ್ರಕಾರ ಪೂಜಾ ಪಟ ಕುಣಿತ, ಕನ್ನಡ ನಾಡು ನುಡಿ ಅಭಿಮಾನ ಉಕ್ಕಿಸುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸಿನಿಮಾ ಹಾಡಿಗೆ ನೃತ್ಯ, ಕಡೆಯಲ್ಲಿ ಭಾರತ ರಕ್ಷಕರು ವೀರ ಯೋಧರ ದೇಶ ಸೇವೆಯ ರ‍್ಮಿ ಇನ್ ವೀಲ್ಸ್.. ಎಲ್ಲವೂ ವಿಭಿನ್ನ ವೈಶಿಷ್ಟ್ಯ ನೃತ್ಯ ಪ್ರಕಾರಗಳ ಸಮಾಗಮ. 


ನಾಟ್ಯ ಶಾಸ್ತ್ರದ ಕಲೆಯನ್ನು ಕರಗತ ಮಾಡಿಕೊಳ್ಳಲು ಪಾಶಾ ಅವರು ಶ್ರೀಮತಿ ಮಾಯಾರಾವ್ ಅವರ ಮಾರ್ಗದರ್ಶನ ಪಡೆದರು. ನೃತ್ಯ ಸಂಯೋಜನೆಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪದವಿ ಪಡೆದವರು. ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿ ಸಂಸ್ಥೆಯಲ್ಲಿ 3 ವರ್ಷ ಡಿಪ್ಲೋಮ ಪದವಿ ಗಳಿಸಿದ್ದಾರೆ. ಮಾಯಾರಾವ್ ಸಂಯೋಜಿಸಿದ ಅನೇಕ ನೃತ್ಯ ರೂಪಕಗಳಲ್ಲಿ ಪ್ರಧಾನ ಭೂಮಿಕೆಯಲ್ಲಿ ನರ್ತಿಸಿರುವರು. ಇವುಗಳಲ್ಲಿ ಹೊಯ್ಸಳ ವೈಭವ, ವಿಜಯನಗರ ವೈಭವ, ಅಮಿರ್ ಖುಸ್ರೋ, ರಾಮಾಯಣ ದರ್ಶನಂ ಪ್ರಮುಖವಾಗಿವೆ. ಇಂದು ಇವರು ಅಂತಾರಾಷ್ಟ್ರೀಯ ಖ್ಯಾತಿವೆತ್ತ ನೃತ್ಯಪಟುವಾಗಿ ಬೆಳೆದಿರುವರು. ನೃತ್ಯ ಸಂಯೋಜಕರು. ವಿಶೇಷವಾಗಿ ವಿಕಲಚೇತನರ ಶಾಸ್ತ್ರೀಯ ನೃತ್ಯ ಅವಿಷ್ಕಾರದಲ್ಲಿ ಪ್ರಯೋಗಶೀಲತೆಯಿಂದ ಖ್ಯಾತಿವೆತ್ತರು.


ನಾನು ಒಂದು ಕಾಲು ಇಲ್ಲದವರಿಗೆ ವೀಲ್ ಚೇರ್ ಮೇಲೆ ನೃತ್ಯ ಕಲಿಸಲು ಸ್ವತ: ನಾನೇ ಕಾಲು ಮಡಚಿ ಬಟ್ಟೆ ಕಟ್ಟಿಕೊಂಡು ಅದನ್ನು ಕಲಿಯುವುದು ಎಷ್ಟು ಕಷ್ಟ ಎಂಬುದನ್ನು ಅಭ್ಯಾಸ ಮಾಡಿ ಅರಿತಿದ್ದೇನೆ ಎನ್ನುತ್ತಾರೆ ಅವರು. ತಮ್ಮ ವಿದ್ಯಾರ್ಥಿಗಳಿಗೆ ಇಷ್ಟೆಲ್ಲಾ ಕಲಿಸುವ ಸಾಹಸಿ ತಮ್ಮ ನಾಟ್ಯ ಗುರುಗಳ ಹೆಸರನ್ನು ಹೇಳಿದರು. ಭರತ ನಾಟ್ಯವನ್ನು ಶ್ರೀಮತಿ ನರ್ಮದಾ, ಶ್ರೀಮತಿ ಪದ್ಮಿನಿ ರಾವ್,  ಕಿಟ್ಟಪ್ಪ ಪಿಳ್ಳೈ, ಶ್ರೀಮತಿ ಮೀನಲ್ ಪ್ರಭು ಅವರಲ್ಲಿ ಪಡೆದಿರುವರು. ಅಭಿನಯ ಶಿಕ್ಷಣವನ್ನು ಪದ್ಮಭೂಷಣ ಶ್ರೀಮತಿ ಮಾಯಾರಾವ್ ಅವರಲ್ಲಿ ಕರ್ನಾಟಕ ಸಂಗೀತವನ್ನು ಶ್ರೀಮತಿ ರಮಾಮಣಿ ಅವರಲ್ಲಿ ಮತ್ತು ಮೃದಂಗವನ್ನು ಟಿ.ಎ.ಎಸ್.ಮಣಿ ಅವರಲ್ಲಿ ಕಲಿತಿರುವರು.


ಬಾಲ್ಯದಿಂದಲೇ ಸಂಸ್ಕೃತ ರಾಮಾಯಣ, ಮಹಾಭಾರತ, ಭಗವದ್ಗೀತಾ, ಯೋಗ ಶಾಸ್ತ್ರ ಅಧ್ಯಯನವನ್ನು ಆನೇಕಲ್ ಅಷ್ಟಾಕ್ಷರಮ್ ನಾರಾಯಣ ಅಯ್ಯಂಗಾರ್ ಮತ್ತು ವಿದ್ಯಾಲಂಕಾರ ಶಾಸ್ತ್ರ ಚೂಡಾಮಣಿ ಪ್ರೊ. ಎಸ್.ಕೆ. ರಾಮಚಂದ್ರರಾವ್, ಕಲಾ ಇತಿಹಾಸ ಸೌಂದರ್ಯ ಶಾಸ್ತ್ರವನ್ನು ಡಾ. ಚೂಡಾಮಣಿ ನಂದ ಗೋಪಾಲ್‌ರಲ್ಲಿ ಅಭ್ಯಾಸ ಮಾಡಿದ್ದಾರೆ. ಇವರು ಪ್ರಪಂಚದಲ್ಲೇ ಪ್ರಥಮ ಬಾರಿಗೆ ನಾಟ್ಯ ಶಾಸ್ತ್ರ ಆನ್ ವೀಲ್ಸ್ ಶೀರ್ಷಿಕೆಯಲ್ಲಿ ವಿಕಲಚೇತನ ಶಿಷ್ಯರಿಗೆ ಗಾಲಿ ಕುರ್ಚಿಯ ಮೇಲೆ ಭರತ ನಾಟ್ಯ ಸಂಯೋಜನೆಗಳನ್ನು ಸೃಷ್ಟಿಸಿ ದೇಶ ವಿದೇಶಗಳಲ್ಲಿ ಪ್ರದರ್ಶಿಸಿ ಬೆರಗುಗೊಳಿಸಿದ್ದಾರೆ. ಭರತನಾಟ್ಯ ಕೂಚಿಪುಡಿ ಕಲಾವಿದರಿಗೆ ನಟ್ಟುವಾಂಗ ಸಹಕಾರ ನೀಡಿದ್ದಾರೆ. ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ ಇವರು ಕನ್ನಡದಲ್ಲಿ ಅನೇಕ ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ. ಕುವೆಂಪು ಅವರ ರಾಮಾಯಣ ದರ್ಶನಂ ರೂಪಕವನ್ನು ಕುವೆಂಪು ಅವರ ಸಮ್ಮುಖದಲ್ಲೇ ಪ್ರದರ್ಶಿಸಿದ್ದಾರೆ. ಬಸವಣ್ಣನವರ ವಚನಗಳಿಗೆ ತಾವೇ ಏಕ ವ್ಯಕ್ತಿ ನೃತ್ಯ ರೂಪಕದಲ್ಲಿ ವಿಶ್ವಾದ್ಯಂತ ಸಂಚರಿಸಿದ್ದಾರೆ. ಬಸವಣ್ಣ, ಅಲ್ಲಮ ಪ್ರಭು, ಗಾನಯೋಗಿ ಪಂಚಾಕ್ಷರಿ ಗವಾಯಿ, ರಾಮ ಲಕ್ಷ್ಮಣ ರಾವಣ, ಹನುಮಂತ, ಕೃಷ್ಣ ಅರ್ಜುನ, ಶಿವ, ಭಸ್ಮಾಸುರ, ಹೊಯ್ಸಳ ವಿಷ್ಣುವರ್ಧನ, ಶ್ರೀ ಕೃಷ್ಣ ದೇವರಾಯ, ಭರತ ಬಾಹುಬಲಿ ಪಾತ್ರಗಳ ಪರಕಾಯ ಪ್ರವೇಶಿಸಿ ಮನೋಜ್ಞ ಅಭಿನಯದಿಂದ ಜೀವ ತುಂಬಿದ್ದಾರೆ. ವಿಶ್ವದಲ್ಲೇ ಪ್ರಥಮ ಬಾರಿಗೆ ಗಾಲಿ ಕುರ್ಚಿ ಮೇಲೆ ಏಳು ಭಾಷೆಗಳಲ್ಲಿ ಭಗವದ್ಗೀತಾ ನೃತ್ಯ ರೂಪಕ ಪ್ರದರ್ಶಿಸಿರುವುದು ಇವರ ಸಾಧನೆ. ವಿಕಲ ಚೇತನರಿಗೆ ಸಮರ ಕಲೆಗಳಲ್ಲಿ ತರಬೇತಿ ನೀಡಿ ಸಾಹಸಿ. ಇವರ ಗಾಲಿ ಕುರ್ಚಿಯ ಮೇಲೆ ಕುಳಿತ ದುರ್ಗಾ ಆನ್ ವೀಲ್ಸ್ ನೃತ್ಯ ಪರಿಕಲ್ಪನೆ ರೋಚಕ! ಎಂ.ಎಸ್. ಸತ್ಯು ಅವರ ಕೈರ್ ಹಿಂದಿ ಧಾರಾವಾಹಿಯಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರವಾದ ಈಶ್ವರ ಅಲ್ಲಾ ನೀನೆ ಎಲ್ಲಾ ಧಾರಾವಾಹಿಯಲ್ಲಿ ನೂರಕ್ಕೂ ಹೆಚ್ಚು ಕಂತುಗಳಲ್ಲಿ ಅಭಿನಯಿಸಿ ನರ್ತಿಸಿದ ಇವರ ಶಿಶುನಾಳ ಶರೀಫರ ಪಾತ್ರ ನಾಡಿನ ಜನಮನ ಸೆಳೆದಿದೆ.



- ಗೊರೂರು ಅನಂತರಾಜು, ಹಾಸನ. 

ಮೊ: 9449462879

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,

ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, 

ಹಾಸನ-573201


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top