ಆಧುನಿಕ ಭಾರತ ಅಥವ ಸ್ವತಂತ್ರ ಭಾರತವು ಮೈಪಡೆಯುವಾಗ ಅನೇಕ ಕಡೆಗಳಿಂದ ಆದಾನ-ಪ್ರದಾನಗಳಾದುವು. ನಮ್ಮ ಸಂಸ್ಕೃತಿ-ಸಮಾಜದ ನೆಲೆ-ಬೆಲೆಗಳನ್ನು ನಿರ್ಧರಿಸುವಾಗ ಪ್ರಾಚೀನ ಶಾಸ್ತ್ರ-ಸಾಹಿತ್ಯ, ಕಲೆ-ಮತಾಚರಣೆ, ಧ್ಯೇಯ-ದೃಷ್ಟಿ ಇವುಗಳನ್ನು ಸಾಂಘಿಕವಾಗಿ ರೂಪುಗೊಳಿಸಿಕೊಳ್ಳಲಾಯಿತು. ಇದು ಆಸೇತುಹಿಮಾಚಲ ಪರ್ಯಂತ ನಡೆದ `ಆಶಯ’ದ ಸಂಗತಿಗಳು! ಸ್ವಾತಂತ್ರ್ಯಪೂರ್ವ ಭಾರತವು ವ್ಯಾಸಮಹಾಭಾರತ ಮೇಲೆ ಅವಲಂಬಿತವಾಗಿ ಗೀತೆಯ ಮೂಲಕ ಸ್ಫೂರ್ತಿ ಪಡೆದಿದ್ದರೆ; ಸ್ವಾತಂತ್ರ್ಯೋತ್ತರ ಭಾರತವು ರಾಮಾಯಣದ ಮೂಲಕ ಸ್ಫೂರ್ತಿ ಪಡೆಯಿತು! ಸ್ವತಂತ್ರ ಭಾರತದ ಸಂರಚನೆಗೆ ಶ್ರೀಮದ್ವಾಲ್ಮೀಕಿರಾಮಾಯಣ ಅರ್ಥಾತ್ ರಾಮ ಕೇಂದ್ರಿತ ಪ್ರತಿಮೆಯಾಯಿತು. `ಸ್ವಾತಂತ್ರ್ಯೋತ್ತರ ಭಾರತದ ನಿರ್ಮಾಣ’ ಎಂಬುದು ಶೂನ್ಯದಿಂದ ಅವತರಿಸಲಿ. ಬ್ರಿಟೀಷರು ಭಾರತೀಯರಿಗೆ ಸ್ವಾತಂತ್ರ್ಯದ ಹಸ್ತಾಂತರಗೊಳಿಸಿದ್ದು ಒಂದು ದಿವ್ಯಸಂದರ್ಭವೇನೊ ನಿಜ. ಅದಾದ ನಂತರ ಗಾಂಧೀಜಿಯವರ ಹತ್ಯೆ ಆಯಿತು. ಅವರು `ಹೇರಾಮ್ ಹೇರಾಮ್’ ಎಂದು ಹೇಳುತ್ತ ಜೀವವನ್ನು ಬಿಟ್ಟರು. ಗಾಂಧೀಜಿ ಅವರು `ರಾಮರಾಜ್ಯ’ದ ಕಣಸನ್ನೂ ಹೊಂದಿದ್ದರು. ಭವಿತವ್ಯದ ಭಾರತಕ್ಕೆ `ರಾಮರಾಜ್ಯ’ವೊಂದೇ ಹೊಸತಂತ್ರವೆಂದು ಅಚಲವಾಗಿ ಅವರು ಕೊನೆಯವರೆಗೂ ನಂಬಿದ್ದರು.
ಸ್ವತಂತ್ರಭಾರತ ಘೋಷಣೆ ಆದ ನಂತರ ರಾಮಾಯಣಕೇಂದ್ರಿತಗಳಾದ ಕಾವ್ಯ, ನಾಟಕ, ಕತೆ, ಕಾದಂಬರಿ, ಕಲೆ, ಸಂಗೀತ, ಶಿಲ್ಪ, ವಾಸ್ತು-ಮುಂತಾದ ಪ್ರಕಾರಗಳು ಕ್ರಮಶಃ ನಮ್ಮಲ್ಲಿ ಕಾಣಿಸಿಕೊಂಡವು. `ಶ್ರೀಮದ್ವಾಲ್ಮೀಕಿರಾಮಾಯಣಂ’ ಸಂಸ್ಕøತದ ಆವೃತ್ತಿಯು ವಿವಿಧ ಬಗೆಗಳಲ್ಲಿ ಅನುವಾದ, ರೂಪಾಂತರ, ಭಾಷಾಂತರ, ಸಂಗ್ರಹ-ಹೀಗೆ ನಾನಾ ಆಕೃತಿಗಳನ್ನು ಪಡೆಯಿತು. ಇದು ನೂತನ ಭಾರತಕ್ಕೆ ಪ್ರಾಣವಾಯುವಾಗಿಯೂ ಪರಿಣಮಿಸಿತು. ಸ್ವಾತಂತ್ರ್ಯಾನಂತರ ಕನ್ನಡದಲ್ಲಿ ಕುವೆಂಪು ಅವರ `ಶ್ರೀರಾಮಾಯಣದರ್ಶನಂ’; ತೆಲುಗಿನಲ್ಲಿ ಮಹಾಕವಿ ವಿಶ್ವನಾಥಸತ್ಯನಾರಾಯಣರಿಂದ `ಶ್ರೀರಾಮಾಯಣ ದಿವ್ಯಕಲ್ಪವೃಕ್ಷಮು’, ಕೇರಳದ ಹಲವು ಕವಿಗಳಿಂದ ಬಿಡಿಬಿಡಿ ರಾಮಾಯಣಕ್ಕೆ ಸಂಬಂಧಿಸಿದ ಕವಿತೆಗಳು ಹೊರಬಂದುವು. ಇನ್ನು ತಮಿಳಿನಲ್ಲಿ ಭಾರತೀಯಾರ್ ಮುಂತಾದ ಕವಿಗಳು ರಾಮಾಯಣ ಕಥಾಪ್ರಸಂಗಗಳನ್ನು ಸೃಜಿಸಿದ್ದುಂಟು. ಶ್ರೀಮತಿ ರುಕ್ಷಿಣಿ ಅರುಂಡೇಲ್ `ಶ್ರೀಮದ್ವಾಲ್ಮೀಕಿ ರಾಮಾಯಣ’ದಿಂದ ಅನೇಕ ಕಥಾಪ್ರಸಂಗಗಳನ್ನು ಆಯ್ದುಕೊಂಡು ಮಹಾವಿದ್ವಾನ್ ಟೈಗರ್ ವರದಾಚಾರ್ಯ, ವಾಗ್ಗೇಯಕಾರ ವಾಸುದೇವಾಚಾರ್ಯರಿಂದ `ಶ್ರೀರಾಮಾಯಣ ನೃತ್ಯರೂಪಕ’ಗಳನ್ನು ರೂಪಿಸಿ-ಹೊಸ ಮನ್ವಂತರವನ್ನೇ ರೂಪಿಸಿದರು. ರಾಮಾಯಣ ಕೇವಲ ಒಂದು ಕಾವ್ಯವಲ್ಲ. ಅದೊಂದು ಸಂಸ್ಕೃತಿಯ ಮಹಾಪಾತ್ರೆ. ಕುವೆಂಪು ಅವರು ``ಕಥೆ ತಾಂ ನಿಮಿತ್ತಮಾತ್ರಂ ಆತ್ಮಕ್ಕೆ ಶರೀರದೋಲಂತೆ, ಮೈಯ್ವೆತ್ತುದಿಲ್ಲಿ ರಾಮನಕಥೆಯ ಪಂಜರದಿ ರಾಮರೂಪದ ಪರಾತ್ಪರನ ಲೋಕಲೀಲಾದರ್ಶನಂ’’ ಎಂದಿದ್ದಾರೆ. ಹೌದು ರಾಮಾಯಣ ಕಥೆ, ಒಂದು ನಿಮಿತ್ತ ಮಾತ್ರವೇ ಸರಿ. ಲೋಕಲೀಲೆಯ ತಂತ್ರವನ್ನು ರೂಪಿಸಲು ರಾಮನು ಅವತರಿಸಿದ್ದಾನೆಂಬ ಆಶಯ ಆಧುನಿಕ ಕಾಲಕ್ಕೆ ಸರಿಯಾದುದೇ.
ಶ್ರೀರಾಮ ಎಂಬುದು ಒಂದು ಮಂತ್ರ. ಆ ಮಂತ್ರವು ನಮ್ಮ ಬದುಕಿನ ನೈತಿಕತೆಗೆ ಬೆನ್ನೆಲುಬಾಗಿ ನಿಂತುಕೊಂಡಿದೆ! ಕುಟುಂಬ, ಸಮುದಾಯ, ಸಮಾಜ ಮತ್ತು ರಾಷ್ಟ್ರದ ಘನತೆಯ ಪ್ರತೀಕವಾಗಿ ಅದು ನೆಲೆಯೂರಿ ನಿಂತಿದೆ. ಶ್ರೀರಾಮ ನಮ್ಮೊಳಗಿನ ದಿವ್ಯಶಕ್ತಿಯ ಚೋದಯಿತೃ ಹೌದು; ದರ್ಶಯಿತೃ ಹೌದು! ಒಳಲೋಕದ `ರಾಮ’ ಇದ್ದಂತೆ ಹೊರಲೋಕದ ರಾಮನೂ ಉಂಟು! ಕುವೆಂಪು ಹೇಳುವಂತೆ `ರಾಮನಾಮದ ಮಹಿಮೆ ರಾಮಂಗೆ ಮಿಗಿಲೆಂಬವೋಲ್, ರಾಮಾವತಾರಕಿಂ ಗುರುತರಂ ತಾನೈಸೆ ರಾಮಾವತಾರಂ’’ ಎಂದು ಕೈವಾರಿಸಿದ್ದಾರೆ. ಒಬ್ಬ ಪುರುಷನ ಅವತರಣ ಮಾನುಷರೂಪವೇನೊ ಹೌದು; ಅನಂತರ ಅದು ದೈವೀರೂಪದ ಧಾರಣೆಯಲ್ಲಿ ನೆಲೆನಿಂತು ಬಿಡುತ್ತದೆ. ಸ್ವತಂತ್ರಪೂರ್ವ ಭಾರತದಲ್ಲಿ ಶ್ರೀಕೃಷ್ಣ ನಮ್ಮ ಸಂಸ್ಕøತಿಯನ್ನು ಕಟ್ಟುವ ನೇತಾರನಾಗಿದ್ದರೆ; ಸ್ವತಂತ್ರ ಭಾರತದಲ್ಲಿ ಶ್ರೀರಾಮ ನಮ್ಮ ಸಂಸ್ಕøತಿಯ ಆದರ್ಶಪುರುಷನಾಗಿ, ಮರ್ಯಾದಾಪುರುಷೋತ್ತಮನಾಗಿ, ಕೋದಂಡಧರನಾಗಿ ನಮ್ಮನ್ನು ಆವರಿಸಿಕೊಂಡಿದ್ದಾನೆ.
ನಾವು ಯಾವಾಗಲೂ `ಆದರ್ಶಪುರುಷ’ನನ್ನೇ ನೆಮ್ಮಿಕೊಳ್ಳುತ್ತೇವೆ. ಅವನು `ರಾಷ್ಟ್ರಸಂಕಲ್ಪ’ವನ್ನು ಧೀಮಂತವಾಗಿ ನಡೆಯಿಸಬೇಕೆಂದು ಮನಸಾ ಬಯಸುತ್ತೇವೆ. ``ರಾಮಾದಿವತ್ ಪ್ರವರ್ತಿತವ್ಯಂ, ನ ತು ರಾವಣಾದಿವತ್’’ ಎಂಬ ಮಾತು ರಾಷ್ಟ್ರದ ಜೀವಕೇಂದ್ರಿತ ಆಶಯವಾಗಿದೆ. ```ರಾಮೋ ಸತ್ಯಧರ್ಮಪರಾಕ್ರಮಃ’’ ಎಂಬ ಮಾತು ವಾಲ್ಮೀಕಿ ಹಲವೆಡೆ ಹೇಳಿದ್ದಾನೆ. ಒಂದು ರಾಷ್ಟ್ರ ಅಭಿವೃದ್ದಿಗೊಳ್ಳಬೇಕಾದರೆ ಒಂದು ಕಣ್ಣು ಧರ್ಮ; ಮತ್ತೊಂದು ಕಣ್ಣು ಸತ್ಯ! ಧರ್ಮವು ಆಚರಣೆಯಲ್ಲಿ ಕಂಡರೆ `ಸತ್ಯ’ವು ಒಳಗಿದ್ದು ನಿರ್ದೇಶಿಸುತ್ತಿರುತ್ತದೆ. "ಸತ್ಯವೇ ನಮ್ಮ ತಾಯಿತಂದೆ" ಎಂಬ ಗೋವಿನ ಹಾಡನ್ನು ಒಮ್ಮೆ ನೆನಪಿಸಿಕೊಳ್ಳಬಹುದು! ಸತ್ಯವು ಒಳತಿಳಿವಿನ ಬೆಳಕಷ್ಟೆ. ಆ ಬೆಳಕಿನ ಅಡಿಯಲ್ಲಿ `ಧರ್ಮ’ವು ವಿಕಸಿತಗೊಳ್ಳಬೇಕು. ಹೀಗಾದಾಗ"ಸತ್ಯಮೇವ ಜಯತೇ" ಎಂಬುದಕ್ಕೆ ಅರ್ಥ ಬರುತ್ತದೆ! ದಾಸರು ಹೇಳುವ "ಧರ್ಮವೇ ಜಯವೆಂಬ ನಿತ್ಯಮಂತ್ರ"ಕ್ಕೆ ಜೀವ ಬರುತ್ತದೆ. ನಮ್ಮ ರಾಷ್ಟ ಅಂದು -ಇಂದು-ಎಂದು ರಾಮನೆಂಬ ಆದರ್ಶಪುರುಷನನ್ನೆ ಬಯಸುತ್ತದೆ! `ಆದರ್ಶ’ ಎಂಬ ಮಾತಿಗೆ ಕನ್ನಡಿಯೆಂಬ ಅರ್ಥವೂ ಉಂಟು! ಆದರ್ಶಸ್ಥಿತಿಗೆ ಏರಿರುವಂಥ ವ್ಯಕ್ತಿ ಅನೇಕ ಬಾರಿ ತನ್ನ ನಡೆಯನ್ನು ಪುನಃ ಪುನಃ ನೋಡಿಕೊಳ್ಳುತ್ತಿರಬೇಕಾಗುತ್ತದೆ. ಶ್ರೀರಾಮ ತನ್ನ ಬದುಕಿನಲ್ಲಿ ಮರಳಿಮರಳಿ ನೋಡಿಕೊಂಡೇ ಹೊರಟವನು. ದಶರಥನು ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಬಯಸಿದಾಗ ಶ್ರೀರಾಮ `ಅನಸೂಯಕಃ’ ಎಂಬ ಮಾತನ್ನು ಹೇಳುತ್ತ, ಆಡುವ ಮಾತಿದು:
ಸ ತು ನಿತ್ಯಂ ಪ್ರಶಾಂತಾತ್ಮಾ ಮೃದುಪೂರ್ವಂ ಚ ಭಾಷತೇ |
ಉಚ್ಯಯಮಾನೋ„ಪಿ ಪರುಷಂ ನೋತ್ತರಂ ಪ್ರತಿಪದ್ಯತೇ
(ಅಯೋಧ್ಯಾಕಾಂಡ, 1-10)
"ರಾಮ ಯಾವಾಗಲೂ ಶಾಂತಸ್ವಭಾವದವನು. ಜನರೊಡನೆ ಅವನು ಮೃದುವಾಗಿ ಮಾತನಾಡುವವನು. ಅವನೊಡನೆ ಯಾರಾದರೂ ಕಠಿನವಾಗಿ ನುಡಿದರೆ ಪ್ರತಿಯಾಗಿ ನುಡಿಯುತ್ತಿರಲಿಲ್ಲ" ಇದು ಶ್ರೀರಾಮನ ವ್ಯಕ್ತಿತ್ವ. ಇಂಥ ವ್ಯಕ್ತಿತ್ವ ಪಡೆದವನು ರಾಷ್ಟ್ರವನ್ನು ಪ್ರೀತಿಸುತ್ತಾನೆ. ಅವನು ರಾಷ್ಟ್ರದ ಜೊತೆಗೆ ಜನರನ್ನೂ ಪ್ರೀತಿಸುತ್ತಲೇ ಹೋಗುತ್ತಾನೆ. "ಶ್ರೀರಾಮನಿಗೆ ಬಿಡುವು ದೊರೆತಾಗೆಲ್ಲ ಪರಿಶುದ್ಧಚಾರಿತ್ರರೂ ಜ್ಞಾನಿಗಳೂ ವಯೋವೃದ್ಧರೂ ಆದ ಸಜ್ಜನರೊಡನೆ ಸಂಭಾಷಣೆ ಮಾಡುತ್ತಿದ್ದನಂತೆ! ಇದು `ರಾಷ್ಟ್ರಕ’ನೊಬ್ಬನು ರೂಪಿತಗೊಳ್ಳುವ ಬಗೆ.
ಶ್ರೀರಾಮನು ಸದ್ಗುಣಗಳ ಗಣಿ. ರಾಷ್ಟ್ರವನ್ನು ಸಂರಕ್ಷಕನಾಗಿ ನೋಡಿಕೊಳ್ಳುವವನ ವ್ಯಕ್ತಿತ್ವ ಶ್ರೀರಾಮನಂಥ ಗುಣಗಳನ್ನು ಹೊಂದಿರಬೇಕು! ಸೂರ್ಯವಂಶವು ರಘು ದಿಲೀಪರಿಂದ ಪ್ರಾರಂಭಗೊಂಡ ಶ್ರೀರಾಮನ ಮೂಲಕ ಅಚಂದ್ರತಾರಕವಾಯಿತು! ಇದೇನು ಸಾಮಾನ್ಯ ಸಂಗತಿಯಲ್ಲ. ಶ್ರೀರಾಮ ಸಾತ್ವಿಕ ಸ್ವಭಾವ ಹೊಂದಿದ ಧೀರಪ್ರತಿಮೆ! ಅವನಲ್ಲಿ ಉಚಿತರೀತಿಯಿಂದ ರಾಜಸ ಸ್ವಭಾವ ಹದವಾಗಿ ಬೆರೆತುಕೊಂಡಿತ್ತು. ನಮ್ಮ ರಾಷ್ಟ್ರನಾಯಕರು ಸಾತ್ವಿಕ ಸ್ವಭಾವದ ಅಧಿಕ್ಯವನ್ನು ಹೊಂದಿದ ರಾಜಸ ಸ್ವಭಾವದ ಮಂತ್ರಪ್ರವೀಣರೇ ಆಗಿರುತ್ತಿದ್ದರು. ಆಗ ಆ ರಾಷ್ಟ್ರ ಘನತೆಯಿಂದ ತಲೆಯೆತ್ತಿ ನಿಲ್ಲಲು ಸಾಧ್ಯವಾಗುತ್ತಿತ್ತು. ಅಂಥವನು ನಡೆಸುವ ಆಡಳಿತ ಸುದೂರದೃಷ್ಟಿಯನ್ನು ಹೊಂದಿರುತ್ತದೆಂದು ಬೇರೆ ಹೇಳಬೇಕಿಲ್ಲವಷ್ಟೆ. `ಸರ್ವೋ ಧರ್ಮಪರೋ„ಭವತ್’ (ಯುದ್ಧಕಾಂಡ 131.99) ಎಂಬ ಮಾತೂ ಬಂದಿದೆ. ಅಂಥವನ ಅಂತರಂಗ ಪರಿಶುದ್ಧವಾಗಿಯೂ ಬಾಹ್ಯದ ನಡವಳಿಕೆ ಸಕಲಜನರೂ ಮೆಚ್ಚುವಂತಿರುತ್ತದೆ! ಇದು ರಾಮಾಯಣದ ಉದ್ದಕ್ಕೂ ನಮಗೆ ಕಂಡು ಬರುತ್ತದೆ! ಶ್ರೀರಾಮ ಮೇಧಾವಿ. ಅವನು ಯಾವಾಗಲೂ ಪ್ರಿಯವಾದ ಮಾತುಗಳನ್ನೆ ಆಡುತ್ತಿದ್ದನು. ಜನರನ್ನು ಕಂಡಾಗ ಆತನೇ ಮುಂದುವರಿದು ಮಾತನಾಡುತ್ತಿದ್ದನು. ಅವನು ಮಹಾಶೂರನಾದರೂ ಶೂರನೆಂಬ ಜಂಬ ಎಂದೂ ಇರುತಿರಲಿಲ್ಲ. ಆತನ ಬಳಿ ಸುಳ್ಳೆಂಬುದು ಸುಳಿಯದು. ( ನ ಚ ಅನೃಥತಕಥೋ) ಗುರುಹಿರಿಯರನ್ನು ಪೂಜಿಸತಕ್ಕವನು (ವೃದ್ಧಾನಾಂ ಪ್ರತಿಪೂಜಕಃ) ಪ್ರಜೆಗಳಿಗೂ ಅವನಲ್ಲಿ ತುಂಬಾ ಅನುರಾಗ. ಬಡಬಗ್ಗರಲ್ಲಿ ಅವನು ದಯಾಳು (ದೀನಾನುಕಂಪೀ). ಇಂಥ ವ್ಯಕ್ತಿತ್ವವನ್ನು ಶ್ರೀರಾಮ ಪಡೆದಿದ್ದರಿಂದ ಪ್ರಜೆಗಳ ಮನಸ್ಸಿನಲ್ಲಿ ಸದಾ ಕಾಲ ಇರಲು ಸಾಧ್ಯವಾಯಿತು. ಇಂಥವನನ್ನು ಜನ ಬಯಸುತ್ತಾರೆ. ಇಂಥವನು ತಮ್ಮ ರಾಜನಾಗಿರಬೇಕೆಂದು ಸಹಜವಾಗಿ ಬಯಸುತ್ತಾರೆ.
ಶ್ರೀರಾಮ ಜಿತಕ್ರೋಧ, ಧರ್ಮಜ್ಞ! ಇದು ಶ್ರೀರಾಮನಿಗೆ ಸಹಜವಾಗಿ ಬಂದಂಥ ಗುಣ. ಅವನು ಹದಿನಾಲ್ಕು ವರ್ಷ ವನವಾಸ ಮಾಡಿ-ಅಯೋಧ್ಯೆಗೆ ಮರಳಿದ ಮೇಲೆ ರಾಜ್ಯವನ್ನು ಸಂತೃಪ್ತಿಯಿಂದ ಪರಿಪಾಲಿಸುತ್ತಾನೆ. ಇದು ಪಟ್ಟಾಭಿಷೇಕ ಆಗುವ ಮೊದಲೆ ವಾಲ್ಮೀಕಿ ಕವಿಗಳು ಅವನ ಗುಣಗಳನ್ನು ಕೀರ್ತಿಸುತ್ತಾರೆ. ಇದು ವಾಲ್ಮೀಕಿಗಳ ಮಾತು: "ಆತನು ಸದಾ ಆರೋಗ್ಯಶಾಲಿ, ಕರುಣ; ವಾಗ್ಮಿ; ಬಲಿಷ್ಠವಾದ ಶರೀರವುಳ್ಳವನು. ದೇಶಕಾಲಗಳನ್ನು ತಿಳಿದು ವ್ಯವಹರಿಸತಕ್ಕವನು. ಜನರನ್ನು ನೋಡುತ್ತಿದ್ದಂತೆಯೇ ಅವರ ಯೋಗ್ಯತೆಯನ್ನು ತಿಳಿದುಕೊಳ್ಳಲು ಸಮರ್ಥನು. ಎಂತಹ ವಿಪತ್ತಿನಲ್ಲಿಯೂ ಕಂಗೆಡದ ಧೀರ. ಸತ್ಯವನ್ನೇ ನುಡಿಯತಕ್ಕವನು; ಋಜುಮಾರ್ಗದಲ್ಲಿಯೇ ನಡೆಯತಕ್ಕವನು; ಧರ್ಮಸೂಕ್ಷ್ಮಗಳನ್ನು ಚೆನ್ನಾಗಿ ತಿಳಿದವನು! ಅವನು ಧರ್ಮಾರ್ಥಕಾಮಗಳನ್ನು ಕಾಲೋಚಿತವಾಗಿ ಬಳಸುವ ರಹಸ್ಯವನ್ನು ಅರಿತಿದ್ದವನು. ಅವನಿಗೆ ಒಳ್ಳೆಯ ಸ್ಮರಣಶಕ್ತಿ ಇದ್ದಿತು. ಅವನು ಕೆಟ್ಟವರನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ; ಕೆಟ್ಟ ಮಾತನ್ನು ಆಡುತ್ತಿರಲಿಲ್ಲ. ಕೆಲಸದಲ್ಲಿ ಆಲಸ್ಯವೆಂಬುದು ಅವನಿಗೆ ಇರಲಿಲ್ಲ! ಅವನು ಇತರ ಜನರಲ್ಲಿರುವ ನ್ಯೂನತೆಗಳನ್ನು ಗಮನಿಸುತ್ತಿದ್ದನಲ್ಲದೆ; ತನ್ನಲ್ಲಿ ಇರಬಹುದಾದ ನ್ಯೂನತೆ ಯಾವುದೆಂಬುದನ್ನು ವಿಮರ್ಶಿಸಿಕೊಳ್ಳುತ್ತಿದ್ದನು." ನಾವು ಇಲ್ಲಿಯ ಮಾತುಗಳನ್ನು ಸಾವಧಾನದಿಂದ ಮೆಲುಕು ಹಾಕಿಕೊಳ್ಳಬೇಕು. ಶ್ರೀರಾಮನ ವ್ಯಕ್ತಿತ್ವ ರಾಷ್ಟ್ರದ ವ್ಯಕ್ತಿತ್ವಕ್ಕೆ ಪ್ರಮಾಣಿತವಾಗಿತ್ತು. ಅದು ರಾಷ್ಟ್ರದ ಮುನ್ನಡೆಗೆ ಕಾರಣವೂ ಆಗಿತ್ತು. "ಯಥಾ ರಾಜಾ ತಥಾ ಪ್ರಜಾ" ಎಂಬಂತಹ ಮಾತೇನೊ ಉಂಟು. ಒಡೆಯ ಸಬಲನಾಗಿದ್ದರೆ ಉಳಿದವರೂ ಸಬಲರಾಗಿರುತ್ತಾರೆ! ಅಲ್ಲಿ ಸ್ವಾರ್ಥವು ತಲೆ ಹಾಕಲು ಸಾಧ್ಯವೇ ಇಲ್ಲ. ಶ್ರೀರಾಮನು ಸದಾ `ಪ್ರಜಾವತ್ಸಲ’ನೇ ಆಗಿರುತ್ತಿದ್ದ. ಇದು ಪ್ರಜಾಪ್ರಭುತ್ವದ ಹಾದಿ! ಇದೇ ರಾಮರಾಜ್ಯ!
ನಾವಿಂದು ಅಯೋಧ್ಯೆಯ ದಿವ್ಯವಾದ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪಿಸಿದ್ದೇವೆ ; ಇಂಥ ಸಂದರ್ಭದಲ್ಲಿ ನಾವು ರಾಮನ ರಾಷ್ಟ್ರಮುಖವನ್ನೂ ಗಮನಿಸುವುದು ಅವಶ್ಯವಲ್ಲವೆ? ನಾವು ಶ್ರೀರಾಮನಂಥ ಗುಣಶಾಲಿ, ಧೈರ್ಯಶಾಲಿ, ಸತ್ಯಯುಕ್ತ, ಧರ್ಮಜ್ಞ, ಪ್ರಜಾಕಾಂಕ್ಷಿ, ಪರಾಕ್ರಮಿ, ಅನಸೂಯಕ, ಜಿತಕ್ರೋಧ, ಮೃದುಭಾಷಿ-ಇಂಥ ಗುಣಗಣಗಳನ್ನು ಉಳ್ಳವನೇ ನಮ್ಮ ರಾಷ್ಟ್ರಕ್ಕೆ ಎಂದಿಗೂ ಬೇಕು. ಇಂಥವನು ರಾಷ್ಟ್ರದ ಚುಕ್ಕಾಣಿ ಹಿಡಿದಾಗ, ದೇಶದ ಸಂರಕ್ಷಣೆ ಆಗುತ್ತದೆ; ಬಡವರು ಕಣ್ತೆರೆಯುತ್ತಾರೆ. ವಿದ್ಯೆಯು ಲಾಸ್ಯವಾಡುತ್ತದೆ; ಧೀರರು ಮುಂದೆ ಸಾಗುತ್ತಾರೆ. ನ್ಯಾಯಕ್ಕೆ ಬೆಲೆ ಸಿಗುತ್ತದೆ. ಧರ್ಮಕ್ಕೆ ಚ್ಯುತಿ ಇರುವುದಿಲ್ಲ. ರಾಷ್ಟ್ರ ಮೊದಲು ಎಂಬ ಧೀರಪ್ರವೃತ್ತಿ ಅಲ್ಲಿ ಬೆಳೆಯುತ್ತದೆ. ಮಾತು-ಮನಸ್ಸುಗಳು ಏಕೋಭಾವದಿಂದ ವಿರಾಜಮಾನವಾಗುತ್ತದೆ. ದೇಶ ಉಳಿದರೆ; ರಾಜ್ಯ ಉಳಿಯುತ್ತದೆ. ದೇಶದ ಜನ ನೆಮ್ಮದಿಯಿಂದ ನಿಟ್ಟುಸಿರು ಬಿಡುತ್ತಾರೆ. ರಾಷ್ಟ್ರಾಭಿಮಾನವು ಅಲ್ಲಿ ಕಣ್ತೆರೆಯುತ್ತದೆ. ರಾಷ್ಟ್ರವು ಇತರ ರಾಷ್ಟ್ರಗಳೊಡನೆ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕವಾಗಿ ತಲೆಯೆತ್ತಿ ನಿಲ್ಲಲು ಸಾಧ್ಯವಾಗುತ್ತದೆ. ಇದು ರಾಮರಾಜ್ಯ! ಇದೇ ನಮ್ಮೆಲ್ಲರ ರಾಮರಾಜ್ಯ ಆಗಬೇಕು. ವಾಲ್ಮೀಕಿಯು `ರಾಮೇ ರಾಜ್ಯೇ ಪ್ರಶಾಸತಿ’ ಎಂದು ಹೇಳಿದ್ದು ಇದನ್ನೇ.
ಮಹಾತ್ಮಗಾಂಧೀಜಿ ಅವರು ಶ್ರೀರಾಮನನ್ನು ರಾಷ್ಟ್ರಪುರುಷನನ್ನಾಗಿ ಕಂಡಿದ್ದರು. ಶ್ರೀರಾಮನಲ್ಲಿ ಕುಟುಂಬ ಪ್ರೇಮವನ್ನು ಕಂಡಿದ್ದರು. ಶ್ರೀರಾಮನು ಸಮುದಾಯದ ಎಲ್ಲ ಜನರಿಗೂ ಬೇಕಾದವನೇ. ಅವನ ಬಳಿಗೆ ಬಾಲಕರು, ತರುಣರು, ವೃದ್ಧರು, ಹೆಂಗಸರು, ಮಕ್ಕಳು ಮುಂತಾದವರೆಲ್ಲ ಬರುತ್ತಿದ್ದರು. ಅವನು ಸಮುದಾಯದ ವಾತ್ಸಲ್ಯ ಫಲಭರಿತ ಎಂಬುದಕ್ಕೆ ಹತ್ತಾರು ಉದಾಹರಣೆಗಳನ್ನು ವಾಲ್ಮೀಕಿ ಮುನಿಗಳು ನೀಡುತ್ತಾರೆ. ಬೇರೆಬೇರೆ ಭಾವಗಳನ್ನು ಒಂದುಗೂಡಿಸುವ ಭಾವಭರಿತ ಅವನಾಗಿದ್ದನು. ನ್ಯಾಯ-ಧರ್ಮ-ನೀತಿ-ಸತ್ಯ ಮುಂತಾದ ಮೌಲ್ಯಗಳ ಆರಾಧಕನಾಗಿದ್ದನು. ಇದು ಮಹಾತ್ಮಾ ಗಾಂಧೀಜಿ ಅವರ ಮನಸ್ಸನ್ನು ತುಂಬಿತ್ತು. ಹೀಗಾಗಿ, ಶ್ರೀರಾಮನು ಸದಾ ನ್ಯಾಯಮಾರ್ಗದಿಂದಲೇ ನಡೆಯುತ್ತಿದ್ದನು. ಇದು ರಾಮರಾಜ್ಯದ ಕಣಸು! ಒಬ್ಬ `ರಾಮ’ ನಮ್ಮೊಡನೆ ಇದ್ದಾನೆ. ಇಂಥ ರಾಮ ವಿಶ್ವದ ಯಾವುದೇ ದೇಶಗಳಲ್ಲೂ ನಾವು ಕಾಣಲು ಸಾಧ್ಯವಿಲ್ಲ. ಅವನು ವಿಶ್ವರೂಪಿ!! ವಾಲ್ಮೀಕಿ ಮುನಿಗಳು "ಶ್ರೇಷ್ಠಗುಣೈರ್ಯುಕ್ತಃ ಪ್ರಜಾನಾಂ ಪಾರ್ಥಿವಾತ್ಮಜಃ" ಎಂದು ಉದ್ಘೋಷಿಸಿದ್ದಾರೆ. ಇಂಥ ಉದ್ಘೋಷ ಶ್ರೇಯಸ್ಸಿನ ಪಾಲಿಗೆ ಸೇರಿದ್ದು.
ರಾಷ್ಟ್ರದ ಶ್ರೇಯಸ್ಸು ಯಾರು ಬಯಸುತ್ತಾರೋ ಅವರು ಶ್ರೀರಾಮರೇ ಆಗುತ್ತಾರೆ. ಅದು `ರಾಮರಾಜ್ಯ’ ಆಗದೇ ಇನ್ನೇನಾದೀತು ಹೇಳಿ? "ಶ್ರೀ ರಾಮಚಂದ್ರ ರಾಜ್ಯಭಾರ ಮಾಡುತ್ತಿರುವಾಗ ರಾಷ್ಟ್ರದಲ್ಲಿ ಸ್ತ್ರೀಯರು ವಿಧವೆಯರಾಗಿ ಶೋಕಿಸುವ ಪ್ರಸಂಗ ಒದಗಿಬರಲಿಲ್ಲ. ಪ್ರಜೆಗಳಿಗೆ ರೋಗಗಳ ಭಯವು ಸಂಭವಿಸಲಿಲ್ಲ. ದೇಶದಲ್ಲಿ ಕಳ್ಳಕಾಕರು ಸುಳಿಯಲಿಲ್ಲ. ಯಾರಿಗೂ ಯಾವ ವಿಪತ್ತೂ ಒದಗಲಿಲ್ಲ. ರಾಮರಾಜ್ಯದಲ್ಲಿ ಸಕಲವೂ ಸಂತೋಷದ ನೆಲೆಯಾಗಿತ್ತು. ಎಲ್ಲ ಜನರೂ ಧರ್ಮನಿಷ್ಠರಾಗಿ ಬಾಳುತ್ತಿದ್ದರು. ಎಲ್ಲರೂ ಶ್ರೀರಾಮನನ್ನು ಆದರ್ಶಪುರುಷನನ್ನಾಗಿ ತಿಳಿದು, ಆತನ ಮನಸ್ಸಿಗೆ ವಿಷಾದವಾದೀತೆಂದು ಎಣಿಸಿ, ಯಾವ ಸಂದರ್ಭದಲ್ಲಿಯೂ ಒಬ್ಬರಿಗೊಬ್ಬರು ತೊಂದರೆ ಕೊಡುತ್ತಿರಲಿಲ್ಲ. ಶ್ರೀರಾಮಭದ್ರನ ರಾಜ್ಯಭಾರದಲ್ಲಿ ಜನರು ಸಹಸ್ರಾರು ವರ್ಷಗಳ ವರೆಗೆ ದೀರ್ಘಾಯುಷ್ಕರಾಗಿ ಬಾಳಿದರು. ಶ್ರೀರಾಮಚಂದ್ರನು ರಾಜ್ಯವನ್ನು ಆಳುತ್ತಿರುವಾಗ ಪ್ರಜೆಗಳು ಎಲ್ಲೆಲ್ಲಿಯೂ ರಾಮ, ರಾಮ, ರಾಮ ಎಂದು ಕೊಂಡಾಡಿ ನಲಿಯುತ್ತಿದ್ದರು. ಜಗತ್ತೇ ರಾಮಮಯವಾಯಿತು." (ರಾಮೋ ರಾಮೋ ರಾಮ ಇತಿ ಪ್ರಜಾನಾಮಭವನ್ ಕಥಾಃ | ರಾಮಭೂತಂ ಜಗದಭೂದ್ರಾಮೇ ರಾಜ್ಯಂ ಪ್ರಶಾಸತಿ ಯುದ್ಧಕಾಂಡ 131.102) `ರಾಮರಾಜ್ಯ’ ಎಂಬುದೊಂದು `ಯುಟೋಪಿಯಾ’ ಎಂದು ನಾವು ತಿಳಿಯ ಬೇಕಿಲ್ಲ. ಶ್ರೀರಾಮನು ನಮ್ಮ ಸಂಸ್ಕøತಿಯ ಜೀವಪೋಷಕ ದ್ರವ್ಯ. ನಮ್ಮ ಭಾವಕೋಶದ ಐಂದ್ರಿಯ ಪ್ರಪಂಚವೂ ಹೌದು. ಹೀಗಾಗಿ, ನಿಸರ್ಗಾನುಸಂಧಾನವು ರಾಷ್ಟ್ರಾನುಸಂಧಾನದಲ್ಲಿ ಅಂತರ್ಗತಗೊಳ್ಳಬೇಕು. ಇದು ನಮ್ಮೆಲ್ಲರ ಮಣಿಹವೂ ಆಗಬೇಕಾಗಿದೆ. ಶ್ರೀರಾಮನು `ಕೋದಂಡ’ರಾಮನಾಗಿ ರಾಷ್ಟ್ರವನ್ನು ಮುನ್ನಡೆಸಬೇಕಾಗಿದೆ.
-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ವಿಶ್ರಾಂತ ಕುಲಪತಿಗಳು
ಮೊಬೈಲ್ ನಂ.: 9448291802
e-mail: mallepuram@gmail.com
ಲೇಖಕರ ಸಂಕ್ಷಿಪ್ತ ಪರಿಚಯ:
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ (1970-75) ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ, ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ ಮಾಡಿದರು. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿಂದ ಅದ್ವೈತ ವೇದಾಂತದ ಅನುಗ್ರಹ ಪಡೆದರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೆಯ ರ್ಯಾಂಕಿನೊಡನೆ ‘ಕುವೆಂಪು ಚಿನ್ನದ ಪದಕ’, ಸಂಸ್ಕೃತ ಎಂ.ಎ., ಉನ್ನತಶ್ರೇಣಿಯೊಂದಿಗೆ ತೇರ್ಗಡೆ. ಕನಕಪುರದಲ್ಲಿ ಕನ್ನಡ ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭ.
ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರವೇಶ. ಅಲ್ಲಿ ಪ್ರವಾಚಕ, ಅಧ್ಯಯನಾಂಗದ ನಿರ್ದೇಶಕ ಕುಲಸಚಿವ. 2001ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ. ಕನ್ನಡ ವಿಶ್ವವಿದ್ಯಾಲಯ ಹಂಪಿ, ಡೀನ್ ಮತ್ತು ಪ್ರಸಾರಾಂಗದ ನಿರ್ದೇಶಕ, ಕರ್ನಾಟಕ ಸಂಸ್ಕøತವಿಶ್ವವಿದ್ಯಾಲಯದ ವಿಶೇಷಾಧೀಕಾರಿಯಾಗಿ ನೇಮಕ. 2010 ರಲ್ಲಿ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ಪ್ರಥಮಕುಲಪತಿ. ನಿವೃತ್ತಿಯ ನಂತರ ಕಲಬುರಗಿಯ ಪಾಲಿ ಇನ್ಸ್ಟಿಟ್ಯೂಟ್ ಸಂಸ್ಥೆಯ ಗೌರವ ನಿರ್ದೇಶಕ. ತೊಂಬತ್ತೈದಕ್ಕೂ ಹೆಚ್ಚುಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧಿಸಿದಂತೆ ಪುಸ್ತಕಗಳ ಪ್ರಕಟಣೆ. ವಿಶೇಷವಾಗಿ ಕೆಳದಿ ಬಸವರಾಜ ಭೋಪಾಲನಶ್ರೀ ಶಿವತತ್ತ್ವರತ್ನಾಕರ ಮತ್ತು ಮೂರನೆಯ ಸೋಮೇಶ್ವರನ ಅಭಿಲಾಷಿತಾರ್ಥ ಚಿಂತಾಮಣಿ (ಮಾನಸೋಲ್ಲಾಸ) ಸಂಸ್ಕøತವಿಶ್ವಕೋಶಗಳ ಮೂಲ ಅನುವಾದ, ಟಿಪ್ಪಣಿಗಳೋಡನೆ ವಿದ್ವತ್ ಸಂಪಾದನೆ. ಕನ್ನಡದ ಅನುಭಾವಿ ಕವಿ ಮಹಲಿಂಗರಂಗನಅನುಭವಾಮೃತ ವೇದಾಂತ ಕಾವ್ಯವನ್ನು ಆಧರಿಸಿದ ‘ಬ್ರಹ್ಮಯಾನ’ ಬೃಹತ್ ಸಂಪುಟದ ರಚನೆ. ಎಂಬತ್ತೈದು ಸಂತರನ್ನುಒಳಗೊಂಡ ಭವದ ಬೆಳಗು, ಲೋಕದ ಬೆಡಗು, ಇಳೆಯ ಬೆರಗು ಕೃತಿಗಳ ಪ್ರಕಟಣೆ. ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ‘ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’. ಸಿದ್ಧಗಂಗಾ ಮಠದಿಂದ ‘ಸಿದ್ಧಗಂಗಾಶ್ರೀ ಪ್ರಶಸ್ತಿ’. ಶಾಸ್ತ್ರಚೂಡಾಮಣಿಯಾಗಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ನವದೆಹಲಿಯಿಂದ ಆಯ್ಕೆ.
2021ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ನೃಪತುಂಗ ಸಾಹಿತ್ಯಪ್ರಶಸ್ತಿ’, ಧರ್ಮಸ್ಥಳದ 89ನೆಯ ಅಧಿವೇಶನದಲ್ಲಿ ನಡೆದ `ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ನಮ್ಮ ನಡುವಿನ ಸರಳ ಸಹೃದಯಿ ಬಹುಮುಖ ಪ್ರತಿಭಾಸಂಪನ್ನರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



