ಪೆರಾಜೆ ಬಿಳಿಯಾರು ಬಳಿ ಒಂಟಿ ಸಲಗ ಕಾರಿನ ಮೇಲೆ ದಾಳಿ

Upayuktha
0



ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗ ಸುಳ್ಯದಲ್ಲಿ ಮತ್ತೆ ಕಾಡಾನೆ ಹಾವಾಳಿ ಕಾಣಿಸಿಕೊಂಡಿದೆ. ಪೆರಾಜೆ ಗ್ರಾಮದಲ್ಲಿ ಸುತ್ತಾಡಿ ಬಳಿಕ ಪಯಸ್ವಿನಿ ನದಿ ದಾಟಿ ಪೂಮಲೆ ಬೆಟ್ಟಕ್ಕೆ ತೆರಳುವ ಸಂದರ್ಭದಲ್ಲಿ ಒಂಟಿ ಸಲಗವು ಬಿಳಿಯಾರಿನಲ್ಲಿ ನಿಂತಿದ್ದ ಕಾರಿಗೆ ಹಾನಿ ಮಾಡಿದ  ಘಟನೆ ನಡೆದಿದೆ.



ಹಾನಿಗೀಡಾದ ಮಾರುತಿ ಒಮ್ನಿ ಕಾರು ಪೆರಾಜೆಯ ಉದ್ಯಮಿ ಉನೈಸ್ ಪೆರಾಜೆಯವರಿಗೆ ಸೇರಿದ್ದಾಗಿದೆ. ಚಾಲಕ ಅವಿನಾಶ್ ಗೂನಡ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಶಾಲೆಗೆ ಹೋಗುವ ಬಾಲಕ ಇದ್ದು ಅಪಾಯವಿಲ್ಲದೇ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.



ಇದಕ್ಕೂ ಮೊದಲು ಪೆರಾಜೆಯ ದಿವಾಕರ ರೈಯವರ ಗದ್ದೆಗೆ ಬಂದು ಬಳಿಕ ಅಲ್ಲಿಂದ ಬಿಳಿಯಾರು ರಸ್ತೆಗಾಗಿ ಪೂಮಲೆ ಕಾಡಿನತ್ತ ದಾಟಿದೆ. ಪೆರಾಜೆ ಗ್ರಾಮದ ಕಂಡಾಡು, ನಿಡ್ಯಮಲೆ, ಪೀಚೆ, ಮೂಲೆಮಜಲು– ದೇಶಕೋಡಿಯಾಗಿ ಕಾಡಾನೆ ಬಂದಿದೆ. ಮೂಲೆಮಜಲು ಧನಂಜಯ ಎಂಬವರು ಪೆರಾಜೆ ಪೇಟೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾಡಾನೆ ಎದುರಿಗೆ ಬಂದಿದೆ. ತಕ್ಷಣ ಅವರು ಬೈಕನ್ನು ಬಿಟ್ಟು ಓಡಿ ತಪ್ಪಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.



ಇದೇ ಒಂಟಿ ಸಲಗ ಕಳೆದ ಆರೇಳು ವರ್ಷಗಳಿಂದ ಪೆರಾಜೆ ಗ್ರಾಮದ ಮೂಲಕ ಕೋಳಕ್ಕಿ ಮಲೆ ಬೆಟ್ಟಕ್ಕೆ ಹೋಗಿ ಬರುತ್ತಿದ್ದು, ಒಂದು ವಾರದ ಬಳಿಕ ಮರಳಿ ಹೋಗುತ್ತದೆ. ಈ ವರ್ಷವೂ ಈ ಆನೆ ಬಂದಿದ್ದು ಪ್ರತಿ ವರ್ಷ ಬಂದಾಗಲೂ ಯಾವುದೇ ಹಾನಿ ಮಾಡದೇ ಹೋಗುತ್ತಿದ್ದು ಈ ಬಾರಿ ಇದೇ ಮೊದಲ ಸಲ ಕಾರು ಸೇರಿ ಕೆಲವೆಡೆ ಹಾನಿ ಮಾಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top