ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲೂಕಿನ ಅಮೀನಗಡ 16 ನೇ ಶತಮಾನದ ಆದಿಲ್ ಷಾಹಿಗಳು ತಮ್ಮ ಆಡಳಿತ ಒಳಪಟ್ಟಿದ್ದ, ಈ ಪಟ್ಟಣ ಸೇರಿದಂತೆ 260 ಹಳ್ಳಿಗಳ ಆಳ್ವಿಕೆ ಮಾಡಲು ರಕ್ಕಸಗಿ (ಹುಲಗಿನಾಳ, ಅಮರಾವತಿ) ದೇಸಾಯಿ ಮನೆತನದ ಕೆಂಚಪ್ಪಗೌಡ (ಸಂಗಪ್ಪ) ಎಂಬ ವೀರಯೋಧನಿಗೆ ಉಂಬಳಿಯಾಗಿ ಈ ಗ್ರಾಮ ಸಹಿತ ನೀಡಿದ ಆದಿಲ್ ಷಾಹಿಗಳು "ಅಮೀನ" ಎಂದು ಕರೆದು ಮುಂದೆ ಈ ಮನೆತನದ (ಸಂಗನಗೌಡ) ಅಮೀನಪ್ಪ ದೇಸಾಯಿಯಾಗಿ ಆಳ್ವಿಕೆ ಮಾಡಿದ.
ರೈತರರಿಂದ ಕಂದಾಯ ವಸೂಲಿ ಮಾಡಿ ಒಂದು ಭಾಗ ಬಿಜಾಪುರದ ಆದಿಲ್ ಷಾಹಿಗಳಿಗೆ ನೀಡುತ್ತಾ, ಉಳಿದ ಭಾಗವನ್ನು ಗ್ರಾಮಗಳ ಅಭಿವೃದ್ದಿಗೆ ಬಳಕೆ ಮಾಡುತ್ತಿದನಂತೆ, ಛತ್ರಪತಿ ಶಿವಾಜಿ ಮಹಾರಾಜ ಬಿಜಾಪೂರ ವಶಪಡಿಸಿಕೊಂಡ ನಂತರ ಅಮೀನಪುರ ಮರಾಠರ ಆಡಳಿತಕ್ಕೆ ಒಳಪಟ್ಟಿತು. ಅಮೀನಪ್ಪ ದೇಸಾಯಿಂದ ಸಮವಾಗಿ ಕಂದಾಯ ಕೊಡುವಂತೆ ಚೌಥಾಯಿ ವಸೂಲಿ ಮಾಡ ಹತ್ತಿದ, ಅಮೀನಪುರವನ್ನು ಸ್ವಾಧೀನ ಪಡೆದುಕೊಂಡು ತನ್ನ ಸೈನಿಕರ ಬಿಡಾರವನ್ನಾಗಿ ಮಾಡಿ ಅಮೀನಗಡ ಎಂದು ಕರೆದನು. ಆಗಿನ ಕಾಲದಲ್ಲಿ ಬಿಜಾಪುರದಿಂದ ಅಮೀನಗಡ- ಭೀಮನಗಡ- ಗಜೇಂದ್ರಗಡ ಹಿಂದಿನ ಕಾಲದಲ್ಲಿ ರಾಜ ಮಾರ್ಗಗಳು ಆಗಿದ್ದವು.
ಅಮೀನಗಡ ಕೋಟೆ:
ಗುಡ್ಡದ ಮೇಲೆ ವಿಶಾಲವಾದ ಜಾಗದಲ್ಲಿ ಸುಮಾರು 20-25 ಎಕರೆ ಜಾಗದಲ್ಲಿ ಕೋಟೆಯನ್ನು ಅಮೀನಪ್ಪ ದೇಸಾಯಿ (ಮರಾಠರ ಕಾಲ) ಚೌಕಾರದಲ್ಲಿ ನಾಲ್ಕು ದಿಕ್ಕುಗಳಲ್ಲಿ ಒಂದೊಂದು ಹುಡೆ ನಿರ್ಮಾಣ, 6-8 ಅಡಿಗಳವರೆಗೆ ಎತ್ತರ, ನೈರುತ್ಯ, ಈಶಾನ್ಯ, ವಾಯುವ್ಯ, ಈಶಾನ್ಯ ಭಾಗದಲ್ಲಿ ಚೌಕಾರದಲ್ಲಿ ನಾಲ್ಕು ದಿಕ್ಕುಗಳಲ್ಲಿ ದೊಡ್ಡದಾದ ಒಂದೊಂದು ಹುಡೆಗಳನ್ನು ನ, 8-9 ಅಡಿಗಳವರೆಗೆ ಎತ್ತರ, 5 ಅಡಿಗಳ ಅಗಲ, ಉತ್ತರ ದಿಕ್ಕಿ ಕೋಟೆಯ ಸಮೀಪ ಸಣ್ಣದಾದ ಮತ್ತೊಂದು ಕೋಟೆ ನಿರ್ಮಿಸಿ, ಅದರ ಸುತ್ತಲೂ ನಾಲ್ಕು ದಿಕ್ಕುಗಳ ಸಣ್ಣ ಸಣ್ಣ ಹುಡೆಗಳು, ಸುಮಾರು 50 ಅಡಿ ಉದ್ದ ಅಗಲ ಹೊಂದಿದ್ದು, ನಡುವೆ ತಗ್ಗಾಗಿದೆ, ಪೂರ್ವ ದಿಕ್ಕಿನಲ್ಲಿ ಸಣ್ಣದಾಗಿ ದಾರಿ ತರ ಬಿಡಲಾಗಿದೆ.
ಕೋಟೆ ಒಳಗಡೆ ಕೆಂಚಮ್ಮ, ನರಸಮ್ಮ ದೇವಾಲಯ, ಜೊತೆ ಇಸ್ಲಾಂಮಿಕ ಕುರುಹುಗಳು ಗುಡ್ಡದ ಇಳಿಜಾರು ಪ್ರದೇಶದಲ್ಲಿ ಹೊಂದಿಕೊಂಡು ಕೆಳಭಾಗದಲ್ಲಿ ಹನಮಂತ, ಸಂಗಮನಾಥ ದೇವಾಲಯ, ಹತ್ತಿರದಲ್ಲಿ ಆದಿಲ್ ಷಾಹಿಗಳ ಕಾಲದ ಕಮಾನು ಗ್ರಾಮದಲ್ಲಿ ಕಾಣಸಿಗುತ್ತವೆ.
ಮಧ್ಯಕಾಲೀನ ವಸ್ತುಗಳು ಪತ್ತೆ:
ಗುಡ್ಡದ 1 ಕಿಮೀ ದೂರದಲ್ಲಿ ಆಗಿನ ಕಾಲದ ಜನರ ಬಳಕೆಯ ಮಡಿಕೆ ಮತ್ತಿತರ ವಸ್ತುಗಳು ಪತ್ತೆಯಾಗಿದ್ದು, ಕಾವಲು ಕಾಯುವ ಸೈನಿಕರು ಮತ್ತು ಅವರ ಕುಟುಂಬ ಮಾತ್ರ ಇಲ್ಲಿ ವಾಸ ಇರಬಹುದು. ಅಮೀನಗಡ ವಿಜಯ ನಗರ ಸಾಮ್ರಾಜ್ಯದ ನಂತರ ಬಂದ ಆದಿಲ್ ಷಾಹಿಗಳು ಮತ್ತು ಮರಾಠರ ಆಳ್ವಿಕೆಗೆ ಒಳಪಟ್ಟಿರುವ ಜೊತೆಗೆ ಕೋಟೆಯ ಒಳಗೆ ಸುತ್ತ ಮುತ್ತ ಮರಾಠರ ಕಾಲದ ಕುರುಹುಗಳಿವೆ.
ಗುಡ್ಡದ ಕೆಳಗೆ ಜನವಸತಿ ಪ್ರದೇಶ:
ಅಮೀನಗಡ ಗುಡ್ಡದ ಕೆಳಗೆ ಜನವಸತಿ ಪ್ರದೇಶವಿದ್ದು ಆಗಿನ ಕಾಲದಲ್ಲಿ ಯುದ್ದದ ಅಪಾಯ ಎದುರಾದಾಗ ಇವರೆಲ್ಲ ಗುಡ್ಡದ ಮೇಲಿನ ಕೋಟೆಯಲ್ಲಿ ಆಶ್ರಯ ಪಡೆಯುತ್ತಿದ್ದರು. ಇದು ವ್ಯಾಪಾರ ಕೇಂದ್ರವಾಗಿದ್ದು, ವ್ಯಾಪಾರಿ ಕುಟುಂಬಗಳು, ನೇಕಾರ, ಗಾಣಿಗ, ಕುರುಬ, ವಾಲ್ಮೀಕಿ, ಭೋವಿ( ವಡ್ಡರ), ಮುಸ್ಲಿಂ, ಸಮಗಾರರು ವೃತ್ತಿ ಆಧಾರಿತ ಸಮುದಾಯಗಳು, ವಿಶೇಷವಾಗಿ ಮರಾಠ ಕುಟುಂಬಗಳು ಇಲ್ಲಿ ನಿವಾಸಿಗಳಾಗಿದ್ದಾರೆ.
ಆಗಿನ ಕಾಲದ ಅಮೀನಗಡ ಪ್ರಸಿದ್ದಿ ವ್ಯಾಪಾರಿ ಕೇಂದ್ರವಾಗಿತ್ತು ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಸಿಂಧೂರ ಲಕ್ಷ್ಮಣ ಅಮೀನಗಡ- ಶೂಲೇಭಾವಿ ಶ್ರೀಮಂತರ ಮನೆ ಲೂಟಿ ಮಾಡಿಕೊಂಡು, ಜೈಲಿನಿಂದ ತಪ್ಪಿಸಿಕೊಂಡು ಕಣ್ಣು ತಪ್ಪಸಿ ಗುಡ್ಡದ ಹನಮಪ್ಪ ದೇವಾಲಯದಲ್ಲಿ ತಲೆ ಮರಿಸಿಕೊಂಡು ಇದ್ದನಂತೆ.
ಸಂಗಮನಾಥ ದೇವಾಲಯ:
ಕೋಟೆಯ ಗೋಡೆಯ ಸಮೀಪದಲ್ಲಿ ಇರುವ ದೇವಾಲಯ ಗುಡ್ಡದ ಇಳಿಜಾರಿ ಮೇಲೆ ನಿರ್ಮಾಣವಾಗಿದ್ದು ಹಿಂದೂ ಇಸ್ಲಾಂಮಿಕ ಶೈಲಿ ಕಾಣಬಹುದು. ಉಮಾ ಮಹೇಶ್ವರ ಕಲ್ಯಾಣ, ಬದಾಮಿ ಚಾಲುಕ್ಯರ ಕಾಲದ ಲಾಂಛನ, ಕಂಬಗಳು ವಿವಿಧ ಉಬ್ಬು ಚಿತ್ರಗಳನ್ನು ಇವೆ.
ಭಕ್ತನೊಬ್ಬನಿಗೆ ಸಂಗಮನಾಥ ಕನಸಿನಲ್ಲಿ ಬಂದು ಈ ದೇವಾಲಯ ನಿರ್ಮಾಣ ಆಗಿದೆ ಎಂಬುದು ಸ್ಥಳೀಯ ಐತಿಹ್ಯವಾದರೂ, ವಿಜಯನಗರೋತ್ತರ ಕಾಲ ಘಟ್ಟದಲ್ಲಿ ಈ ದೇವಾಲಯ ನಿರ್ಮಾಣವಾಗಿರಬಹುದು. ಸಮೀಪದಲ್ಲಿ ಐತಿಹಾಸಿಕ ಚಾಲುಕ್ಯರ ಕಾಲದ ಐಹೊಳೆ ಇರುವುದರಿಂದ ಅಲ್ಲಿಯ ಅವಶೇಷಗಳನ್ನು ತಂದು ಕೂಡ ಇಲ್ಲಿ ದೇವಾಲಯ ಹತ್ತಿರ ಮುಖ್ಯದ್ವಾರ, ನಿರ್ಮಾಣ ಮಾಡಿರಲೂಬಹುದು.
ಮಹಿಷಾಸುರ ಮರ್ದಿನಿ ಮೂರ್ತಿ: ಈ ಮೂರ್ತಿ ಪತ್ತೆಯಾಗಿದ್ದು, ಈ ಶಿಲ್ಪಗಳು ಚಾಲುಕ್ಯರ ಕಾಲದಲ್ಲಿ ಕಾಣಸಿಗುತ್ತವೆ. ಆದರೆ ಈ ಶಿಲ್ಪ ವಿಶೇಷತೆಯಿಂದ ಕೂಡಿದೆ ನಿಂತ ಭಂಗಿ ಇದ್ದು ಕಾಲಲ್ಲಿ ಕೋಣ ತುಳಿದಿರುವುದು ಕಾಣುತ್ತದೆ.
ಅಮೀನಗಡ ವಿಜಯನಗರ ನಂತರದ್ದು( ಆದಿಲ್ ಷಾಹಿ, ಮರಾಠರ) ಕಾಲ ಘಟದ ಅವಶೇಷಗಳು ಕಂಡರು, ಚಾಲುಕ್ಯರ ಕಾಲದ ಕುರುಹುಗಳು ಇದ್ದು, ಕುತೂಹಲಕ್ಕೆ ಕಾರಣವಾಗಿವೆ. ಐಹೊಳೆ ಚಾಲುಕ್ಯಕರ ಪೂರ್ವದಲ್ಲಿ ಐನೂರು ವರ್ತಕ ಸಂಘ ಇದ್ದು ಅದರ 27 ಹಳ್ಳಿಗಳಲ್ಲಿ ಈಗಿನ ಅಮೀನಗಡ ಒಂದಾಗಿತ್ತಾ ಎಂಬ ಸಂಶಯಬಾರದೇ ಇರದು, ಕಾರಣ ಅಮೀನಗಡದಲ್ಲಿ 16 ಮಠಗಳು, 16 ಬಾವಿಗಳು ಹಾಗೂ ನೂರಾರು ವರ್ಷಗಳಿಂದ ಪ್ರಮುಖ ವ್ಯಾಪಾರ ಕೇಂದ್ರವಾಗಿರುವುದು ಇತಿಹಾಸಾಕ್ತರಿಗೆ ಕುತೂಹಲ ಮೂಡಿಸದೇ ಇರಲಾರದು. ಈ ಬಗ್ಗೆ ಇನ್ನಷ್ಟು ಸಂಶೋಧನೆ ಆಗಬೇಕಾಗಿದೆ.
-ಮಲ್ಲಿಕಾರ್ಜುನ ಎಂ ಸಜ್ಜನ.
ಅಧ್ಯಕ್ಷರು ಕ.ಸಾ.ಪ
ಹುನಗುಂದ.
6362298667
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ