ಹರಿ-ಹರರೊಳು ಇಲ್ಲದ ಭೇದ ನಮ್ಮಲ್ಲೇಕೆ ಇರಬೇಕು...?

Upayuktha
0


ಪಂಡರೀಪುರದಲ್ಲಿ ಪಂಡರೀನಾಥನೇ ಮುಖ್ಯದೈವ. ಪುಂಡರೀಕನ ಭಕ್ತಿಗೆ ಮೆಚ್ಚಿ, ಇಟ್ಟಿಗೆಯ ಮೇಲೆ ನಿಂತ ರುಕ್ಮಿಣೀ ಸಮೇತ. ಭಕ್ತ ಪರಾಧೀನ.


ಆ ಊರಿನಲ್ಲೊಂದು ಮಲ್ಲಿಕಾರ್ಜುನ ದೇವಸ್ಥಾನ. ಈಶ್ವರ ಸನ್ನಿಧಾನ. ಊರು ಎಂದ ಮೇಲೆ ಅನೇಕ ರೀತಿಯ ಗುಣಸ್ವಭಾವಗಳ ಜನರು ಇರುತ್ತಾರೆ. ಅನೇಕ ರೀತಿಯ ವೃತ್ತಿಪರರೂ ಸಿಗುತ್ತಾರೆ. ಅವರಲ್ಲೊಬ್ಬ ನರಸಿಂಹ ಸ್ವರ್ಣ. ಚಿನ್ನದ ಆಚಾರಿ. ಕಟ್ಟಾ ಶಿವಭಕ್ತ. ಶಿವನಾಮ ಸ್ಮರಣೆಯೇ ಸದಾ. ಶಿವನನ್ನು ಬಿಟ್ಟು, ಮತ್ತೊಂದು ದೇವರನ್ನು ಕನಸಿನಲ್ಲೂ ನೆನೆಯದವನು. ಪಾಂಡುರಂಗನ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳಾಗುವಾಗ, ಪಾಂಡುರಂಗನ ನಾಮ ಕಿವಿಗೆ ಬೀಳುವುದೆಂದು, ಆಗ ಊರನ್ನೆ ಬಿಟ್ಟು ಹೊರಹೋಗುವವ. ಪಾಂಡುರಂಗನಿಗಾಗಿ ಯಾವುದೇ ಸೇವೆಯನ್ನೂ ಮಾಡುತ್ತಿರಲಿಲ್ಲ. ಅವನಿಗಾಗಿ ಯಾವುದೇ ಆಭರಣಗಳನ್ನೂ, ಯಾರಿಗೂ ಮಾಡಿಕೊಡುತ್ತಿರಲಿಲ್ಲ.



ಈ ಮಧ್ಯೆ, ಒಂದು ದಂಪತಿಗಳಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ಪಾಂಡುರಂಗನಿಗೆ ಸೇವೆ ಮಾಡಿದರು. ಮಗುವಾದಲ್ಲಿ, ಅವನಿಗೆ ಚಿನ್ನದ ಉಡಿದಾರ ಮಾಡಿ ಹಾಕುವೆವೆಂದು ಹರಕೆ ಹೊತ್ತರು. ಫಲವೋ ಎಂಬಂತೆ, ಅವರಿಗೆ ಒಂದು ಮಗುವಾಯಿತು. ಹರಕೆ ತೀರಿಸಲು ಪಂಢರೀಪುರಕ್ಕೆ ಬರುತ್ತಾರೆ.


ಯಾವುದೋ ವಿಶೇಷ ಸಂದರ್ಭ.. ಊರಿನ ಎಲ್ಲಾ ಚಿನ್ನಗೆಲಸದವರೂ ರಜಾ ಮಾಡಿರುತ್ತಾರೆ. ದೇವಸ್ಥಾನದಲ್ಲಿ ವಿಚಾರಿಸಿದಾಗ, ಅಲ್ಲಿ ನರಸಿಂಹ ಸುವರ್ಣನ ಹೆಸರು ಹೇಳುತ್ತಾರೆ. ಆದರೆ ಅವನು ಪಾಂಡುರಂಗನ ಸೇವೆ ಮಾಡುವುದಿಲ್ಲ. ಅವನು ಉಡಿದಾರ ಮಾಡಿಕೊಡುವುದೂ ಅನುಮಾನ ಎಂದು ಹೇಳುತ್ತಾರೆ.


ಬೇರೆ ವಿಧಿಯಿಲ್ಲದೆ, ದಂಪತಿಗಳು ಒಂದು ಪ್ರಯತ್ನ ಮಾಡಿ ನೋಡೋಣವೆಂದು ಕೊಂಡು, ಅವನ ಬಳಿ ಬರುತ್ತಾರೆ. ಕಾರಣ ತಿಳಿಸಿ, ಚಿನ್ನದ ಉಡಿದಾರ ಮಾಡಿಕೊಡಲು ಕೇಳಿಕೊಳ್ಳುತ್ತಾರೆ.ಅವನು ಒಪ್ಪುವುದೇ ಇಲ್ಲ. ಏನೇನು ಹೇಳಿದರೂ ಆಗುವುದಿಲ್ಲವೆಂದು ಬಿಡುತ್ತಾನೆ.

ಆಗ ದಂಪತಿಗಳು, ನೀನು ಅವನಿಗೆಂದು ಮಾಡಿಕೊಡುವುದು ಬೇಡ. ನಿನ್ನ ವೃತ್ತಿಧರ್ಮವೆಂದು ಮಾಡಿಕೊಡು. ಅದಕ್ಕೆ ನೀನು ಹಣತೆಗೆದುಕೊ ಎಂದು ಹೇಳಿ, ಒಪ್ಪಿಸುತ್ತಾರೆ. ಆತ ಒಪ್ಪಿದ. ಆದರೆ ಸೊಂಟದ ಅಳತೆ ಬೇಕಲ್ಲ ಎಂದಾಗ, ದೇವಸ್ಥಾನದ ಅರ್ಚಕರು ಅಳತೆ ತೆಗೆದು ಕೊಡುತ್ತಾರೆ. ಅಂತೆಯೇ ಉಡಿದಾರ ಸಿದ್ಧವಾಯಿತು.


ದೇವರಿಗೆ ತೊಡಿಸಿದಾಗ, ಉಡಿದಾರ ಸಡಿಲವಾಯಿತು. ಮತ್ತೆ ರಿಪೇರಿ ಮಾಡಿ ತೊಡಿಸಿದಾಗಲೂ ಅದೇ ರೀತಿ. ಮೂರು ನಾಲ್ಕುಸಲ ಇದೇ ರೀತಿಯಾದಾಗ, ಅರ್ಚಕರು ಬೇಸತ್ತು, ಆಚಾರಿಯನ್ನೇ ಕರೆದು ಕೊಂಡು ಬಂದು, ಅಳತೆ ತೆಗೆದುಕೊಳ್ಳಲು ಹೇಳುತ್ತಾರೆ.

ಅಂತೆಯೇ, ಆಚಾರಿಗೆ ತಿಳಿಸಿದಾಗ, ಮೊದಮೊದಲು ಅವನು ಬರಲೊಪ್ಪುವುದಿಲ್ಲ. ಆಮೇಲೆ ಪತಿಯು, ನಿನ್ನ ಕಣ್ಣಿಗೆ ಬಟ್ಟೆ ಕಟ್ಟಿ, ದೇವರ ಬಳಿ ಕರೆದೊಯ್ಯುವ ಭಾರ ನನ್ನದು. ಕಣ್ಣಿಗೆ ಬಟ್ಟೆಕಟ್ಟಿಕೊಂಡೇ ಅಳತೆಯನ್ನು ತೆಗೆದುಕೊಂಡು, ಉಡಿದಾರ ಮಾಡಿಕೊಡುವ ಜವಾಬ್ದಾರಿ ನಿನ್ನದು ಎಂದು ಹೇಳಿ ಒಪ್ಪಿಸುತ್ತಾನೆ.



ದೇವರ ಬಳಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೋದ ಆಚಾರಿ, ದೇವರ ವಿಗ್ರಹದ ಮೇಲೆ ಕೈಯಾಡಿಸುತ್ತಾನೆ. ಕೈಗಳು ವಿಗ್ರಹದ. ತಲೆಯಮೇಲೆ ಸ್ಪರ್ಶಿಸುತ್ತವೆ. ಆಚಾರಿಗೆ ತಣ್ಣನೆಯ ನೀರನ್ನು ಮುಟ್ಟಿದ ಅನುಭವ. ಹೀಗೇ ಕೈ ಕೆಳಗೆ ಬಂದಾಗ, ಶಿವನ ಜಟೆಯನ್ನು ಮುಟ್ಟಿದ ಹಾಗೆ. ಅತ್ತಯಿತ್ತ ಕೈಯಾಡಿಸಿದರೆ, ಮುಖದ ಬಲಭಾಗದಲ್ಲಿ ಚಂದ್ರ, ಎಡಭಾಗದಲ್ಲಿ ಡಮರು. ಕೊರಳಲ್ಲಿ. ಹಾವು.

ಹಾಗೆಯೇ ಕೆಳಗೆ ಬಂದರೆ, ಹುಲಿ ಚರ್ಮ. ಆಚಾರಿಗೆ ಇದು ಭ್ರಮೆಯೋ ಎನಿಸಿ, ತಿಳಿದು, ಕಣ್ಣಿನ ಬಟ್ಟೆ ಬಿಚ್ಚಿ ನೋಡಿದರೆ, ಎದುರಿಗೆ ನಗುತ್ತಿರುವ, ಸೊಂಟದಮೇಲೆ ಕೈಯಿಟ್ಟ ಪಾಂಡುರಂಗ. ಹರಿಯ ರೂಪ. ಮತ್ತೆ ಕಣ್ಣಿಗೆ ಬಟ್ಟೆ. ಕಟ್ಟಿ, ವಿಗ್ರಹವನ್ನು ಮುಟ್ಟಲು, ಮತ್ತೆ ಶಿವನ ಸ್ಪರ್ಶ.



ಆಗ ಆಚಾರಿಗೆ ಜ್ಞಾನೋದಯವಾಗುತ್ತದೆ. ಹರಿ ಹರರು ಬೇರಲ್ಲ. ಹರಿಯಲ್ಲಿ ಹರನಿಹನು ಹರನಲ್ಲಿ ಹರಿಯು ಎಂದು ತಿಳಿಯುತ್ತದೆ. ಅಂತರಂಗದ ಕಣ್ಣು ತೆರೆಯುತ್ತದೆ. ಅದರೊಟ್ಟಿಗೇ ಹೊರಗಣ್ಣಿನ ಬಟ್ಟೆಯನ್ನೂ ಕಳಚಿ, ಪಂಡರೀನಾಥನ ಸೊಂಟದ ಅಳತೆಯನ್ನು ತೆಗೆದುಕೊಳ್ಳುತ್ತಾನೆ.


ಅಂದಿನರಾತ್ರಿ, ಆಚಾರಿಯ ಕನಸಲ್ಲಿ ಪಾಂಡುರಂಗ ತಾನೇ ಶಿವನೂ ಹೌದು. ತಾನೇ ಪಾಂಡುರಂಗನೂ ಹೌದು ಎಂದು ಹೇಳಿ ಅರಿವು ಮೂಡಿಸುತ್ತಾನೆ. ಆಮೇಲೆ ರಿಪೇರಿ ಮಾಡಿದ ಉಡಿದಾರ ಪಾಂಡುರಂಗನಿಗೆ ಸರಿಯಾಗುತ್ತದೆ.


- ಮೀನಾಕ್ಷಿ ಮನೋಹರ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top