ಮಂಗಳೂರು: 'ಯಾರೋ ಸಹಾಯ ಮಾಡುತ್ತಾರೆಂದು ಸಾಹಿತಿಗಳು ಬರೆಯುವುದಿಲ್ಲ. ತಮ್ಮೊಳಗಿನ ತುಡಿತಗಳನ್ನು ತಮ್ಮ ಸಾಹಿತ್ಯದ ಮೂಲಕ ಹೊರ ಹಾಕಲು ಬರೆಯುತ್ತಾರೆ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇರುವಂತಹ ಮಾಧ್ಯಮ ಸಾಹಿತ್ಯ' ಎಂದು ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯ ಪಟ್ಟರು.
ಅವರು ಮಂಗಳೂರಿನ ಉತ್ಸವ್ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ ಏರ್ಪಡಿಸಿದ್ದ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ, ಸನ್ಮಾನ ಹಾಗೂ ಚುಟುಕು ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
'ಒಂದೇ ಕೃತಿ ಭಿನ್ನ ಕಾಲಘಟ್ಟದಲ್ಲಿ ಬೇರೆ ಬೇರೆ ರೀತಿಯಲ್ಲಿ ಹೊಸ ಹೊಸ ಆಯಾಮಗಳಲ್ಲಿ ಅರ್ಥ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದವರು ಶಿವರಾಮ ಕಾರಂತರ 'ಮೂಕಜ್ಜಿನ ಕನಸುಗಳು' ಕಾದಂಬರಿಯ ದಶಕಗಳ ಹಿಂದಿನ ಓದು ಮತ್ತು ಮತ್ತು ತಾನು ಇತ್ತೀಚೆಗೆ ಅದನ್ನು ಮತ್ತೆ ಓದಿದಾಗ ಆದ ಭಾವನೆಗಳ ಬದಲಾವಣೆಗಳನ್ನು ಜ್ಞಾಪಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪನರೂರು ಅವರು ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಚುಸಾಪದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ವಹಿಸಲಿದ್ದರು.ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ ನಾಯಕ್, ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷರಾದ ಇರಾ ನೇಮು ಪೂಜಾರಿ ಹಾಗೂ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನಿರ್ಗಮನ ಅಧ್ಯಕ್ಷರು ಮತ್ತು ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿರುವ ಕಾ.ವೀ.ಕೃಷ್ಣದಾಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಿರ್ಗಮನ ಅಧ್ಯಕ್ಷರಾದ ಕಾ.ವೀ. ಕೃಷ್ಣದಾಸ್ ಅವರು ಚುಟುಕು ಸಾಹಿತ್ಯ ಪರಿಷತ್ತಿನ ಧ್ವಜ ಹಸ್ತಾಂತರ ಮಾಡುವ ಮೂಲಕ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಿದರು. ಪದ ಸ್ವೀಕಾರ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಶಾಸ್ತ್ರಿಯವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ 2023-24 ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಉಪಾಧ್ಯಕ್ಷರಾಗಿ ಹಿತೇಶ್ ಕುಮಾರ್ ಎ., ಕಾರ್ಯದರ್ಶಿಯಾಗಿ ರಶ್ಮಿ ಸನಿಲ್, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ವರಿ ಎಚ್. ಬಜ್ಪೆ ಹಾಗೂ ಕೋಶಾಧಿಕಾರಿಯಾಗಿ ಭಾಸ್ಕರ್ ಎ. ವರ್ಕಾಡಿ ಅವರು ಅಧಿಕಾರವನ್ನು ಸ್ವೀಕರಿಸಿದರು.
ನೂತನ ಪದಾಧಿಕಾರಿಗಳನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಭಿನಂದಿಸಲಾಯಿತು.
ಬಳಿಕ ಸಾಹಿತಿ ಇರಾ ನೇಮು ಪೂಜಾರಿ, ಮಂಗಳೂರು ತಾಲೂಕು ಚುಸಾಪದ ಮಾಜಿ ಅಧ್ಯಕ್ಷರುಗಳಾದ ಮಹೇಶ್ ಆರ್ ನಾಯಕ್, ಮೊಹಮ್ಮದ್ ಇಸ್ಮಾಯಿಲ್, ರಘು ಇಡ್ಕಿದು, ಪ್ರೊ. ಪಿ. ಕೃಷ್ಣಮೂರ್ತಿ, ಯಶವಂತ್ ಡಿ.ಎಸ್, ಎನ್. ಸುಬ್ರಾಯ ಭಟ್, ಮಾಲತಿ ಶೆಟ್ಟಿ ಮಾಣೂರು, ಡಾ. ಸುರೇಶ್ ನೆಗಳಗುಳಿ, ರೇಮಂಡ್ ಡಿಕುನಾ ತಾಕೊಡೆ, ಕಾ.ವೀ.ಕೃಷ್ಣದಾಸ್, ಚುಸಾಪ ಮಾಜಿ ಜಿಲ್ಲಾಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರುಣಾ ನಾಗರಾಜ್, ಸಾಹಿತಿ ಪಾರ್ವತಿ ಶಾಸ್ತ್ರಿ, ಸಂಘಟಕ ಕವಿ ನಾರಾಯಣ ಕುಂಬ್ರ ಹಾಗೂ ಹಿರಿಯ ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ ಪತ್ರಕರ್ತ ಶೇಖರ ಅಜೆಕಾರು ಅವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಳಿಕ ನಡೆದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜನಪ್ರಿಯ ಕವಿ, ಉಪನ್ಯಾಸಕರಾದ ರಘು ಇಡ್ಕಿದು ಅವರು ವಹಿಸಿದ್ದರು. ಹಿರಿಯ ಕವಿಗಳಾದ ಶ್ಯಾಮ್ ಪ್ರಸಾದ್ ಭಟ್ ಗೋಷ್ಠಿಗೆ ಚಾಲನೆ ನೀಡಿದರು. ಕವಿಗೋಷ್ಠಿಯಲ್ಲಿ 30ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ಚುಟುಕು ವಾಚನ ಮಾಡಿದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಚುಟುಕು ರಚನಾ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಕು. ದಿಶಾ ಸಿ.ಜಿ. ಪ್ರಾರ್ಥಿಸಿದರು. ಗೋಪಾಲಕೃಷ್ಣ ಶಾಸ್ತ್ರಿ ಯವರು ಸ್ವಾಗತಿಸಿದರು. ಹಿತೇಶ್ ಕುಮಾರ್ ವಂದಿಸಿದರು. ರಶ್ಮಿ ಸನಿಲ್ ಹಾಗೂ ರಾಜೇಶ್ವರಿ ಎಚ್. ಬಜ್ಪೆ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ವರ್ಕಾಡಿ ಹಾಗೂ ಸೌಮ್ಯಾ ಗೋಪಾಲ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಚುಟುಕಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು. ಬೇಕು. ಧಾವಂತದ ಜೀವನದಲ್ಲಿ ನಾಲ್ಕೇ ಸಾಲಿನಲ್ಲಿ ಪರಿಣಾಮಕಾರಿಯಾಗಿ ಸಂದೇಶ ಕೊಡುವ ಸಾಹಿತ್ಯ ಚುಟುಕು. ಚುಟುಕು ಸಾಹಿತ್ಯದ ಬೆಳವಣಿಗೆಗೆ ಸರಕಾರ ನೆರವು ನೀಡುವ ದೊಡ್ಡ ಮನಸ್ಸು ಮಾಡಬೇಕು'
- ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು,
ಮಾಜಿ ಅಧ್ಯಕ್ಷರು, ಕಸಾಪ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ