ಸಾಧನೆಯ ಹಾದಿಯಲ್ಲಿ ನಡೆಯುವುದು ಎಂದರೆ ಅದು ಸುಲಭದ ಮಾತಲ್ಲ. ಅದರಲ್ಲಿ ನಿಷ್ಟೆ, ಪ್ರಾಮಾಣಿಕತೆ, ತಾಳ್ಮೆ, ಪರಿಶ್ರಮ ಅತ್ಯಂತ ಮುಖ್ಯವಾಗಿದೆ. ತನ್ನಲ್ಲಿರುವ ಕಲೆಯನ್ನು ಪೋಷಿಸುತ್ತಾ ಸಿಕ್ಕ ಅವಕಾಶವನ್ನೆಲ್ಲ ಬಳಸಿ ಹೆತ್ತವರ ಮತ್ತು ಗುರುಗಳ ಪ್ರೋತ್ಸಾಹದಿಂದ ಸಾಧನೆಯ ಹಾದಿಯಲ್ಲಿ ಮಿಂಚುತ್ತಿರುವ ಕರಾವಳಿಯ ಪ್ರತಿಭೆ ಸಮೃದ್ಧಿ ಶೆಣೈ.
ಚಿಕ್ಕ ವಯಸ್ಸಿನಿಂದಲೇ ಸಾಧನೆಯನ್ನು ಮಾಡಿಕೊಂಡು ಬಂದಿರುವ ಇವರು ಪುತ್ತೂರಿನ ಕೆಮ್ಮಿಂಜೆಯ ಶಿವಾನಂದ ಶೆಣೈ ಮತ್ತು ಲತಾ ಶೆಣೈ ದಂಪತಿಯ ಪುತ್ರಿ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಥನಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಲಿಟ್ಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಇಲ್ಲಿ ಮುಗಿಸಿದ್ದು, ಪ್ರೌಢಶಾಲೆಯನ್ನು ಸಂತ ಫಿಲೋಮಿನಾ ಪ್ರೌಢಶಾಲೆ ದರ್ಬೆ ಪುತ್ತೂರು ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪುತ್ತೂರು ಇಲ್ಲಿ ಪೂರ್ಣಗೊಳಿಸಿದ್ದು, ಪ್ರಸ್ತುತ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಪದವಿ ಕಾಲೇಜಿನಲ್ಲಿ ಪಡೆಯುತ್ತಿದ್ದಾರೆ
ಬಹುಮುಖ ಪ್ರತಿಭೆ ಸಮೃದ್ಧಿ ಶೆಣೈ:
ಸಾಧಿಸಲು ಮುಖ್ಯವಾಗಿ ಬೇಕಾಗಿರುವುದು ಛಲ. ಪಣತೊಟ್ಟು ಸಾಧಿಸುತ್ತೇನೆ ಎಂದು ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ ಎಂದು ಇವರನ್ನು ನೋಡಿ ತಿಳಿಯಬೇಕು ಚಿಕ್ಕ ವಯಸ್ಸಿನಿಂದಲೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಹಾಡುಗಾರಿಕೆ, ನೃತ್ಯಗಾರಿಕೆ, ಏಕಪಾತ್ರಭಿನಯ, ನಾಟಕಗಳಲ್ಲಿ ನಟನೆ ಮಾಡುವುದು, ನಿರೂಪಣೆ, ಜನಪದ ಕಲೆಗಳಲ್ಲಿ ಹಾಗೂ ಎನ್.ಸಿ.ಸಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು. ಎನ್ಸಿಸಿಯಲ್ಲಿ ಪೈಲೆಟ್ ಆಗಿ, ಪರೇಡ್ ಕಮಾಂಡರ್ ಆಗಿ, ಎನ್ಸಿಸಿ ಜೂನಿಯರ್ ಅಂಡರ್ ಆಫೀಸರ್ ಆಗಿ, ಬೆಸ್ಟ್ ಕೆಡೆಟ್ ಮತ್ತು ಬೆಸ್ಟ್ ಪರ್ಫಾರ್ಮೆನ್ಸರ್ ಮತ್ತು ಬೆಸ್ಟ್ ಎನ್ಸಿಸಿ ಆರ್ಮಿ ಸೀನಿಯರ್ ವಿಂಗ್ ಕೆಡೆಟ್ ಆಗಿ ಪ್ರಶಸ್ತಿ ಮತ್ತು ಪದಕಗಳನ್ನು ತನ್ನದಾಗಿಸಿಕೊಂಡವರು. ಇವರು ಜನಪದ ಕಲಾವಿದೆಯಾಗಿ ಯುವಜನೋತ್ಸವ ಮತ್ತು ಯುವಜನ ಮೇಳಗಳಲ್ಲಿ ನೃತ್ಯದಲ್ಲಿ, ಗೀತೆಗಳಲ್ಲಿ ರಾಜ್ಯ ಮಟ್ಟದಲ್ಲಿ, ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಇಂಟರ್ ಕಾಲೇಜು ಫೆಸ್ಟ್ ನಲ್ಲಿ ಜನಪದ ನೃತ್ಯ ಮತ್ತು ಯೂನಿವರ್ಸಿಟಿ ಮಟ್ಟದ ಜನಪದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಮತ್ತು ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಯುವಜನ ಮೇಳ ಮತ್ತು ಯುವಜನೋತ್ಸವದಲ್ಲಿ ಏಕಪಾತ್ರ ಅಭಿನಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಸಂಗೀತದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ:
ಇವರ ತಂದೆ ವೃತ್ತಿಪರ ಗಾಯಕರಾಗಿದ್ದು, ಇವರು ತಮ್ಮ ತಂದೆಯ ಪ್ರೇರಣೆಯಿಂದಲೇ ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರಾಜ್ಯದಲ್ಲಿ ತಮ್ಮ ಸಂಗೀತದ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ಇವರ 'ಕೋಳಿಕೆ ರಂಗ' ಹಾಡು ಅತ್ಯಂತ ಪ್ರಸಿದ್ಧವಾಗಿದೆ.
ಮಾತ್ರವಲ್ಲದೆ ಇವರು ವೃತ್ತಿಪರ ಗಾಯಕಿಯಾಗಿ ಮತ್ತು ವೃತ್ತಿಪರ ನೃತ್ಯಗಾರ್ತಿಯಾಗಿ ಮತ್ತು ನೃತ್ಯ ಸಂಯೋಜಕರಾಗಿ ರಾಜ್ಯದ ಹಲವಾರು ಕಡೆಗಳಲ್ಲಿ ನೃತ್ಯ ಪ್ರದರ್ಶನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಇವರು "ಸಮೃದ್ಧಿ ಮ್ಯೂಸಿಕಲ್ಸ್" ತಂಡದ ಪ್ರಮುಖ ಹಾಡುಗಾರ್ತಿಯಾಗಿದ್ದಾರೆ. ಇವರ ಜೀವನದ ಗುರಿ ಮುಂದೆ ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬುದು.
ಇವರು ಜೀವನದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡುವಂತಾಗಲಿ, ಇವರ ಜೀವನ ಉಜ್ವಲವಾಗಲಿ ಹಾಗೇಯೇ ತನ್ನ ಹೆತ್ತವರಿಗೂ, ಕಾಲೇಜಿಗೂ ಕೀರ್ತಿ ತಂದುಕೊಡುವಂತಾಡಲಿ ಎಂದು ಆಶಿಸೋಣ.
- ವಿದ್ಯಾಪ್ರಸಾದ್
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ