ಹೊಂಬಣ್ಣದಲ್ಲಿ ಹೊಳೆಯುತ್ತ ಉದಯಿಸುವ ಸೂರ್ಯ ಸಕಲ ಜೀವ ಸಂಕುಲಕ್ಕೆ ಚೈತನ್ಯ ಕೊಡುತ್ತಾನೆ. ಆದರೆ ಮಾನವನಿಗೆ ತನ್ನ ದಿನದ ಆರಂಭ ಉಲ್ಲಾಸವನ್ನು ನೀಡಬೇಕಾದರೆ ಅವನ ಮನಸ್ಸು ಪ್ರಶಾಂತವಾಗಿರಬೇಕು, ಹಿಂದಿನ ದಿನದ ಕಷ್ಟ ನಷ್ಟ, ನೋವು ಬಾಧೆಗಳು ಯಾವುದು ಅವನ ನಿದ್ದೆಯನ್ನು ಬಾಧಿಸಬಾರದು. ಸುಖನಿದ್ದೆ ಮಾನವನ ಶರೀರಕ್ಕೆ ಶಕ್ತಿಯನ್ನು ತುಂಬುತ್ತದೆ, ನಂತರ ಬರುವ ಬೆಳಗು ಚೇತೋಹಾರಿಯಾಗಿರುತ್ತದೆ ಅದರೊಂದಿಗೆ ಸ್ವಲ್ಪ ಆಧ್ಯಾತ್ಮದ ಸ್ಪರ್ಶ ಸಿಕ್ಕರೇ....? ಕೆಲವೊಂದನ್ನು ನಾವು ಸ್ವತಃ ಅನುಭವಿಸಬೇಕಷ್ಟೆ... ಇಂದಿನ ಮುಂಜಾನೆ ವಿಶೇಷವಾಗಿತ್ತು. ಮಂಗಳೂರು ನಗರದ ಸಂಘನಿಕೇತನದಲ್ಲಿ ಉಷಃ ಪೂಜೆ. ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ ನಡೆಯುವ ವಿಶೇಷ ಧಾರ್ಮಿಕ ಕಾರ್ಯಕ್ರಮ ಇದು.
ಯಾವುದೇ ಕಾರ್ಯಕ್ರಮದ ಸಲುವಾಗಿ ಸಂಘನಿಕೇತನಕ್ಕೆ ಹೊರಟರೆ ಮೊದಲು ಕಣ್ಣು ಹಾಯುವುದು ಸರತಿ ಸಾಲಲ್ಲಿ ಜೋಡಿಸಿಟ್ಟ ಪಾದರಕ್ಷೆಗಳ ಮೇಲೆ. ಅದರಲ್ಲಿ ಎಷ್ಟೊಂದು ಶಿಸ್ತು. ನಿಜ ಅಲ್ವಾ...? ಜೀವನದಲ್ಲಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ದೊಡ್ಡ ದೊಡ್ಡದೇನು ಮಾಡಲೇಬೇಕು ಅಂತೇನು ಇಲ್ಲ. ನಮ್ಮ ಪುಟ್ಟ ಪುಟ್ಟ ಕೆಲಸಗಳು ಇನ್ನೊಬ್ಬರಿಗೆ ಮಾದರಿಯಾಗಬಹುದು, ಪ್ರೇರಣೆಯಾಗಬಹುದು. ಒಂದು ಪುಟ್ಟ ಮಗು ತನ್ನ ತಾಯಿಯಂತಾಗಲು ಬಯಸಿ ಸೀರೆಯುಟ್ಟು ಸಂಭ್ರಮಿಸುವಂತೆ, ಅಪ್ಪನ ಕನ್ನಡಕ್ಕ ಕಣ್ಣಿಗೇರಿಸಿ ಠೀವಿಯಿಂದ ನಡೆಯುವ ಪುಟ್ಟ ಪೋರನ ತೆರನಂತೆ ತನ್ನ ಹೆತ್ತವರಿಂದ ಪ್ರೇರಣೆ ಪಡೆದುಕೊಂಡು ಈ ರೀತಿಯ ಎಷ್ಟೋ ಕೆಲಸಗಳನ್ನು ಪುಟ್ಟ ಮಕ್ಕಳು ಸ್ವಪ್ರೇರಣೆಯಿಂದ ಮಾಡುತ್ತಾರೆ ಅದರಲ್ಲಿ ಬದುಕಿನ ಪಾಠವನ್ನು ಕಲಿಯುತ್ತಾ ಸಾಗುತ್ತಾರೆ. ಪಾದರಕ್ಷೆ ಒಪ್ಪವಾಗಿ ಜೋಡಿಸುವುದು ಒಂದು ಮಹಾನ್ ಕಾರ್ಯವಲ್ಲ ಆದರೆ ಅದನ್ನು ಯಾರು ನಿಷ್ಠೆಯಿಂದ ಮಾಡುತ್ತಾರೆ ಅನ್ನುವುದೇ ಪ್ರಶ್ನೆ. ಮನೆಯ ಒಳಗೆ ಹೊರಗೆ ಅಲ್ಲಲ್ಲಿ ಹೊರಲಾಡಿ ಬಿದ್ದುಕೊಳ್ಳುವ ಬೇರೆ ಬೇರೆ ಅಳತೆಯ ಚಪ್ಪಲಿಗಳು ಕೂಡ ನಮ್ಮ ಮನೆಯ ಸಂಸ್ಕಾರ, ಸಂಸ್ಕೃತಿಯ ನಿಜ ದರ್ಪಣಗಳೇ. ತಂದೆ ತಾಯಂದಿರು ತಮ್ಮ ಪಾದರಕ್ಷೆಗಳನ್ನು ಒಪ್ಪವಾಗಿ ಜೋಡಿಸಲು ರೂಢಿ ಮಾಡಿಕೊಂಡರೆ ಪುಟ್ಟ ಮಕ್ಕಳು ಅವರನ್ನು ಅನುಸರಿಸುತ್ತಾರೆ ಅದನ್ನು ಆಚರಣೆಗೆ ತರುತ್ತಾರೆ. ಎಷ್ಟೆಂದರೂ ಪುಟ್ಟ ಮಕ್ಕಳಿಗೆ ಹೆತ್ತವರೇ ರೋಲ್ ಮಾಡೆಲ್ ಅಲ್ವೇ....? ಇಲ್ಲಿ ಪ್ರಸ್ತಾಪಿಸಿದ ವಿಷಯ ಚಿಕ್ಕದೇ ಇರಬಹುದು ಆದರೆ ಮುಂದೆ ಜೀವನದಲ್ಲಿ ಅದೆಷ್ಟೋ ವಿಚಾರಗಳನ್ನು ಮಕ್ಕಳು ತಮ್ಮ ಹೆತ್ತವರಿಂದಲೇ ಕಲಿಯುತ್ತಾರೆ, ಅವರನ್ನೇ ನೋಡಿ ಅನುಸರಿಸುತ್ತಾ ಸಾಗುತ್ತಾರೆ ಅನ್ನುವುದೂ ತಪ್ಪಲ್ಲ. ಮಕ್ಕಳ ಸನ್ಮಾರ್ಗದ ಚಿಂತನೆಯಲ್ಲಿ ಹೆತ್ತವರಾದ ನಾವು ಕೂಡ ಪಾಲುದಾರರು. ನಮ್ಮ ನೆರಳು ನಮ್ಮನ್ನೇ ಅನುಸರಿಸುತ್ತದೆ ಅನ್ನುವ ವಿವೇಕ ಸದಾ ನಮ್ಮಲ್ಲಿ ಜಾಗೃತವಾಗಿರಬೇಕು.
ಹೀಗೆ ಒಂದಷ್ಟು ಧನಾತ್ಮಕ ಚಿಂತನೆಯೊಂದಿಗೆ ಒಳ ನಡೆದರೆ ಹಣತೆಯ ಬೆಳಕಲ್ಲಿ ಪ್ರಜ್ವಲಿಸುತ್ತಿತ್ತು ಭವ್ಯವೂ ದಿವ್ಯವೂ ಆದ ಗಣಪತಿಯ ಮೃಣ್ಮಯ ಮೂರ್ತಿ. ಆಹಾ... ಎಷ್ಟೊಂದು ಅಂದ ಎಷ್ಟೊಂದು ಚಂದ ಆ ಹಣತೆಯ ಮಂದ ಬೆಳಕಿನಲ್ಲಿ ಸಾತ್ವಿಕವಾಗಿ ಅಯಸ್ಕಾಂತದಂತೆ ಸೆಳೆಯುತ್ತಿದ್ದ ಆ ಪುಟ್ಟ ಕಂಗಳ ಸರ್ವಾಲಂಕಾರ ಭೂಷಿತ ದೇವನ ನೋಡಿದಷ್ಟು ಮತ್ತೆ ಮತ್ತೆ ನೋಡಬೇಕನಿಸುತ್ತಿತ್ತು. ಕಳೆದ ಬಾರಿಗಿಂತ ಈ ಬಾರಿ ಭಕ್ತರು ಅಧಿಕವಾಗಿದ್ದರು. ಸುಶ್ರಾವ್ಯವಾಗಿ ಭಕ್ತಿ ಸುಧೆ ಹರಿಯುತ್ತಿತ್ತು. ಬಂದ ಭಕ್ತರನ್ನೂ ಭಜನೆ ಹಾಡಿಸಿ ವಿಭಜನೆಯಿಲ್ಲದ ಭವದೊಳಗೆ ತೇಲಿಸಿಬಿಟ್ಟರು. ನಂತರ ಪೂಜ್ಯರಾದ ಹಿರೇಮಗಳೂರು ಕಣ್ಣನ್ ಅವರಿಂದ ಸತ್ಸಂಗ ನಡೆಯಿತು. ಅವರ ಪ್ರತಿ ಮಾತಿನಲ್ಲೂ ಭವ್ಯ ರಾಷ್ಟ್ರದ ಕನಸಿತ್ತು, ಬೋಧಿಸಿದ ಸಂಕಲ್ಪದಲ್ಲಿ ಹೊಸ ಹುಟ್ಟಿನ ಸಂಭ್ರಮವಿತ್ತು, ವಸುಧೈವ ಕುಟುಂಬಕಂ ಈ ಏಕ ಸೂತ್ರದಲ್ಲಿ ಜಗವ ಬೆಸೆಯುವ ಧೀಮಂತ ಸತ್ಚಿಂತನೆ ಇತ್ತು. ಭಾರತ ಎಂದೆಂದಿಗೂ ವಿಶ್ವಗುರುವೇ ಅನ್ನುವುದನ್ನು ಒತ್ತಿ ಒತ್ತಿ ಸಾರುವಂತಿತ್ತು. ಅವರ ಪ್ರತಿಯೊಂದು ಮಾತುಗಳು ಹೃದಯಸ್ಪರ್ಶಿಯಾಗಿತ್ತು.
ನಂತರ ಮಹಾಪೂಜೆ, ಧ್ವಜವಂದನೆ, ಸಂಘ ಪ್ರಾರ್ಥನಾ ಗೀತೆ ನಡೆದ ನಂತರ ತೀರ್ಥ ಪ್ರಸಾದ ವಿತರಣೆಯಾಯಿತು. ಅಚ್ಚುಕಟ್ಟಾದ ಲಘು ಉಪಹಾರದ ವ್ಯವಸ್ಥೆಯೊಂದಿಗೆ ಮುಂಜಾನೆಯ ಕಾರ್ಯಕ್ರಮ ಸಂಪನ್ನವಾಯಿತು. ಇದರೊಂದಿಗೆ ಮನಸ್ಸಿಗೆ ಒಂದಷ್ಟು ಸಾಂತ್ವಾನ ಸಂತಸ ನನ್ನ ಭಾಗ್ಯ ನನಗೆ ದೊರಕಿಸಿದ್ದು. ನಮ್ಮ ಜೀವನದ ಪ್ರತಿ ದಿನದ ಹುಟ್ಟು ಇದೇ ರೀತಿ ಇರುತ್ತಿದ್ದರೆ ಎಷ್ಟು ಚೆನ್ನಾಗಿರುತಿತ್ತು ಅಲ್ವಾ ...? ಹೀಗೆ ನಾವು ಅಂದು ಕೊಂಡರೂ ಅದು ಸಾಧ್ಯವಾಗಲಾರದು, ಪ್ರತಿ ದಿನ ಒಂದೇ ರೀತಿ ಇರಲ್ಲ. ಇಂತಹ ಒಂದು ಸುದಿನಕ್ಕಾಗಿ ಮತ್ತೆ ಒಂದು ವರ್ಷ ಕಾಯಬೇಕು, ನಮ್ಮ ಹರಸಲು ಗಣಪ ಮತ್ತೆ ಹರುಷದಿಂದ ಬರಬೇಕು. ಅಲ್ಲಿಯವರೆಗೆ ರಾಷ್ಟ್ರ ಕಟ್ಟುವ ಕಾಯಕದಲ್ಲಿ ಮನವಿರಿಸುವಂತೆ ಮುದ್ದು ಬೆನಕ ನಮ್ಮನ್ನು ಪ್ರೇರೇಪಿಸುತ್ತಿರಬೇಕು, ಅದಕ್ಕಾಗಿ ಶುದ್ಧ ಮನದ ಪ್ರಾರ್ಥನೆ ಅವನ ಚರಣದಲ್ಲಿಡಬೇಕು.
- ಗೀತಾ ಲಕ್ಷ್ಮೀಶ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ