ಯಜ್ಞವು ಸಾಂಗವಾಗಿ ನಡೆಯಲು ತನ್ನೊಂದಿಗೆ ರಾಮ ಲಕ್ಷ್ಮಣರನ್ನು ಕರೆತಂದ ವಿಶ್ವಾಮಿತ್ರರು ತಾಟಕಿಯ ಸಂಸಾರದಿಂದ ತುಂಬಾ ಸಂತೋಷಗೊಂಡರು.ಇರುಳಿನ ಸುಖ ನಿದ್ದೆಯ ಬಳಿಕ ಬ್ರಾಹ್ಮೀ ಮುಹೂರ್ತದಲ್ಲಿ ಅವರೀರ್ವರನ್ನು ಎಬ್ಬಿಸಿದ ವಿಶ್ವಾಮಿತ್ರರು ಸಂಧ್ಯಾವಂದನೆಯ ಬಳಿಕ ರಾಮನಲ್ಲಿ- ರಾಮ; ನಿನ್ನ ಕರ್ತವ್ಯ ನಿರ್ವಹಣೆಯಿಂದ ನಾನು ತುಂಬಾ ಸಂತೋಷ ಹೊಂದಿದ್ದೇನೆ.ಇದೀಗ ನಿನಗೆ ನನ್ನಲ್ಲಿರುವ ಎಲ್ಲಾ ಅಸ್ತ್ರಗಳನ್ನು ಉಪದೇಶಿಸಬೇಕೆಂದಿದ್ದೇನೆ.ಮೂರು ಲೋಕಗಳಲ್ಲಿ ಇಷ್ಟು ಅಧಿಕ ಪ್ರಮಾಣದಲ್ಲಿ ಅಸ್ತ್ರಗಳನ್ನು ಹೊಂದಿರುವವರು ಬೇರೆ ಯಾರೂ ಇನ್ನು ಮುಂದೆ ಇರಲಾರರು.ಇವನ್ನು ಹೊಂದಿದ ಬಳಿಕ ನಿನ್ನನ್ನು ದೇವ -ದಾನವ-ಮಾನವರೇ ಮೊದಲಾದ ಯಾರೂ ಸೋಲಿಸಲಾರರು- ಎನ್ನುತ್ತಾ ಸರ್ವಶ್ರೇಷ್ಠ ಬ್ರಹ್ಮಾಸ್ತ್ರವೂ ಸೇರಿದಂತೆ ನೂರಾರು ಅಸ್ತ್ರಗಳ ಮಹಾಮಂತ್ರಗಳನ್ನು ಮಮತೆಯಿಂದ ಉಪದೇಶಿಸಿದರು.ರಾಮನ ಪ್ರಾರ್ಥನೆಯ ಮೇರೆಗೆ ಪ್ರತ್ಯಸ್ತ್ರ ಸಂಹಾರಾಸ್ತ್ರಗಳ ಮಹಾಮಂತ್ರಗಳನ್ನೂ ಉಪದೇಶಿಸಿದರು.
ಎಲ್ಲಾ ಅಸ್ತ್ರಗಳ ಅಧಿದೇವತೆಗಳು ಬಂದು ರಾಮನಲ್ಲಿ- ಹೇ ನರಾಧಿಪ,ನಾವು ನಿನ್ನ ಕಿಂಕರರು . ನಾವೇನು ಮಾಡಬೇಕೆಂಬುದನ್ನು ಅಪ್ಪಣೆ ಮಾಡು-ಎಂದವು.ಆಗ ರಾಮನು ನೀವು ಅಗತ್ಯವಿದ್ದಾಗ ಬಂದು ನನ್ನ ಮನದಲ್ಲಿ ಸದಾ ನೆಲೆಸಿ ಸಹಕರಿಸಿರಿ.ಈಗ ನಿಮ್ಮ ಇಚ್ಛೆಯಿದ್ದಲ್ಲಿಗೆ ತೆರಳಬಹುದು ಎಂದು ಅವುಗಳನ್ನು ಬೀಳ್ಕೊಟ್ಟನು.ಬಳಿಕ ರಾಮನು ವಿಶ್ವಾಮಿತ್ರರ ಅನುಜ್ಞೆಯಂತೆ ತಾನು ಅವರಿಂದ ಪಡೆದ ಎಲ್ಲಾ ಅಸ್ತ್ರಗಳನ್ನೂ ಸಂಹಾರಾಸ್ತ್ರಗಳನ್ನೂ ತುಂಬಾ ಸಂತಸದಿಂದ ಲಕ್ಷ್ಮಣನಿಗೆ ಉಪದೇಶಿಸಿದನು.
ವಿಶ್ವಾಮಿತ್ರರ ಬಹುಮುಖ್ಯವಾದ ( ಈಗಿನ ಭಾಷೆಯಲ್ಲಿHidden agenda)ಆಶಯವೊಂದು ಈಡೇರಿತು ಅಲ್ಲವೇ?
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ