ಜಸ್ಟಿಸ್ ಕೆ ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ರಜತೋತ್ಸವ ಸಮಾರಂಭ
ನಿಟ್ಟೆ: ಭಾವೀ ಉದ್ಯಮಾಡಳಿತ ಮುಖಂಡರು ಮೌಲ್ಯ, ತತ್ವ ಕರ್ಮ ಸಿದ್ಧಾಂತಗಳನ್ನೊಳಗೊಂಡ ಕಾರ್ಯಶೈಲಿಯನ್ನು ಮೈಗೂಡಿಸಿಕೊಳ್ಳಬೇಕು. ತತ್ವಾಧಾರಿತ ನಾಯಕತ್ವ ಪ್ರಸ್ತುತ ಬಹಳಷ್ಟು ಮಹತ್ವಪಡೆಯುತ್ತಿದೆ. ಉದ್ಧಿಮೆಗಳು ನಂಬಿಕೆ, ತತ್ವ, ಮೌಲ್ಯಗಳಿಗೆ ಬಹಳಷ್ಟು ಮಹತ್ವನೀಡುತ್ತಿವೆ. ಈ ದಿಸೆಯಲ್ಲಿ ಜಸ್ಟಿಸ್ ಕೆ ಎಸ್ ಹೆಗ್ಡೆ ಅವರ ಆದರ್ಶ ನಮ್ಮೀ ಯುವಜನತೆಗೆ ಹೆಚ್ಚು ಪ್ರಸ್ತುತ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಲ್ಲಿಕೋಟೆಯ ನಿರ್ದೇಶಕರಾದ ಅಂತಾರಾಷ್ಟ್ರೀಯ ಖ್ಯಾತಿಯ ಮುಖಂಡತ್ವ ತಜ್ಞರೂ ಆದ ಡಾ| ದೆಬಾಶಿಸ್ ಚಟರ್ಜೀ ಅಭಿಪ್ರಾಯಪಟ್ಟರು.
ಅವರು ನಿಟ್ಟೆಯ ಪ್ರಸಿದ್ಧ ಜಸ್ಟಿಸ್ ಕೆ ಎಸ್ ಹೆಗ್ಡೆ ಉದ್ದಿಮಾಡಳಿತ (ಎಂಬಿಎ) ಸಂಸ್ಥೆಯ ರಜತೋತ್ವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು "ರಜತೋತ್ಸವದ ವಿಶೇಷ ಉಪನ್ಯಾಸವನ್ನು ಮುಖಂಡತ್ವ ಸವಾಲುಗಳಿಗೆ ಸಂಬಂಧಿಸಿ ನೀಡಿದರು. ನಿಟ್ಟೆ ವಿದ್ಯಾಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು. ಜಸ್ಟಿಸ್ ಕೆ ಎಸ್ ಹೆಗ್ಡೆ ಸಂಸ್ಥೆ ಉತ್ತಮ ಮಟ್ಟದ ಉದ್ಯಮಾಡಳಿತ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು. ನಿಟ್ಟೆ ವಿವಿ ಪರವಾಗಿ ಡಾ. ದೆಬಾಶಿಸ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ವಿವಿಯ ಸಹ ಕುಲಾಧಿಪತಿ ಡಾ. ಹೆಚ್ ಶಾಂತಾರಾಮ ಶೆಟ್ಟಿ ವಹಿಸಿದ್ದು ಉದ್ಯಮಾಡಳಿತ ವಿದ್ಯಾರ್ಥಿಗಳ ಶಿಸ್ತು ಯೋಚನೆ, ಯೋಜನೆ ಮತ್ತು ನಿಖರ ಕಾರ್ಯನಿರ್ವಹಣೆಗೆ ಹೆಚ್ಚು ಆದ್ಯತೆ ನೀಡಬೇಕೆಂದರು. ಪ್ರಾಕ್ತನ ಪ್ರಾಧ್ಯಾಪಕರನ್ನು, ಪ್ರಸ್ತುತ ಪ್ರಾಧ್ಯಾಪಕರನ್ನು, ಶಿಕ್ಷಕೇತರ ಸಿಬ್ಬಂದಿಗಳನ್ನು, ಪ್ರಾಕ್ತನ ನಿರ್ದೇಶಕರನ್ನು ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಲಾಯಿತು. ನಿಟ್ಟೆ(ಪರಿಗಣಿತ) ವಿವಿಯ ಕುಲಸಚಿವರಾದ ಡಾ. ಹರ್ಷ ಹಾಲಹಳ್ಳಿ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ನಿರಂಜನ್ ಚಿಪ್ಲುನ್ಕರ್, ಪ್ರೊಫೆಸರ್ ಎಮಿರೇಟ್ಸ್ ಡಾ. ಎನ್ ಎಸ್ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ಡಾ. ಗುರುರಾಜ್ ಹೆಚ್ ಕಿದಿಯೂರ್ ಪರಿಚಯಿಸಿದರು. ಡಾ. ರಾಧಾಕೃಷ್ಣ ಶರ್ಮ ಸ್ವಾಗತಿಸಿದರು. ಡಾ. ಸುಧೀರ್ ಎಂ ಸನ್ಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಆದಿತ್ಯರಮಣ ಪ್ರಾರ್ಥಿಸಿದರು. ಪ್ರೊ. ಕಾರ್ತಿಕ್ ವಂದಿಸಿದರು. ಡಾ. ಸುಧೀರ್ ರಾಜ್ ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಪ್ರಸ್ತುತ ಮತ್ತು ಪ್ರಾಕ್ತನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಘ 'ಸೃಜನ'ದ ವತಿಯಿಂದ "ಸಮಾಗಮ" ವಿಶಿಷ್ಠ ದೇಶೀಯ ಮೌಲ್ಯಯುಕ್ತ ಕಾರ್ಯಕ್ರಮವನ್ನು ಡಾ. ಸುಧೀರ್ ರಾಜ್ ಕೆ ಅವರ ನಿರ್ದೇಶನದಲ್ಲಿ ಎಂಬಿಎ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.
ಹಳೆ ವಿದ್ಯಾರ್ಥಿಗಳ ಮಿಲನ "ರಜತಾರುಷ್"
ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಮಿಲನ ಕಾರ್ಯಕ್ರಮ "ರಜತಾರುಷ್" ಸಂಪನ್ನಗೊಂಡಿತು. ಸುಮಾರು 200 ಹಳೆ ವ್ವಿದ್ಯಾರ್ಥಿಗಳು "ರಜತಾರುಷ್" ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ನಿರ್ದೇಶಕರಗಿ ನಿಟ್ಟೆ ವಿವಿಯ ಕುಲಪತಿಗಳೂ ಆದ ಡಾ| ಎಂ ಎಸ್ ಮೂಡಿತ್ತಾಯ ದೀಪಬೆಳಗಿಸಿ ಉದ್ಘಾಟಿಸಿ ಸಂಸ್ಥೆಯ ಇತಿಹಾಸ, ಪ್ರಗತಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಸಂಸ್ಥೆಯ ಹಿಂದಿನ ನಿರ್ದೇಶಕರಾದ ಪ್ರೊ. ಕೆ ರಮೇಶ್ ಕಾರ್ಣಿಕ್, ಡಾ. ಕೆ ಶಂಕರನ್ ಸಂದರ್ಬೋಚಿತವಾಗಿ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಸಂಚಾಲಕರಾದ ಶ್ರೀ ಗುರುಪ್ರಶಾಂತ್ ಭಟ್ ಸ್ವಾಗತಿಸಿ, ಪರಿಚಯಿಸಿದರು. ವಿದ್ಯಾರ್ಥಿ ಆದಿತ್ಯರಮಣ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಸುಶ್ರುತ್ ತೆಂಡುಲ್ಕರ್ ವಂದನಾರ್ಪಣೆಗೈದರು. ಡಾ. ಸುಧೀರ್ ಎಂ ಅವರು ನೂತನ ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ವಾರ್ಷಿಕ ಸಾಮಾನ್ಯ ಸಭೆ ನಡೆಸಿ ಪದಾಧಿಕಾರಿಗಳ ಆಯ್ಕೆ ಮಾಡಿದರು. ಬಳಿಕ ಸಮೂಹ ಫೋಟೋ, ಕ್ವಿಜ್, ಮನೋರಂಜನಾ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ನಿರ್ದೇಶಕರಾದ ಡಾ. ಗುರುರಾಜ್ ಹೆಚ್ ಕಿದಿಯೂರ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹಳೆ ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾರ್ಥಿಗಳಿಗೆ ಕಾರ್ಪರೇಟ್ ಜಗತ್ತಿನ ಕುರಿತು ಮಾಹಿತಿ ನೀಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ